ತಮಿಳು ನಿರ್ದೇಶಕರಿಗೆ ಕನ್ನಡ ನಟನ ಹೆಸರು ಸೂಚಿಸಿದ ರಜನಿ
ತಮಿಳು ಚಿತ್ರೋದ್ಯಮದ ಖ್ಯಾತ ನಿರ್ದೇಶಕರ ಪಟ್ಟಿಯಲ್ಲಿ ಮಂಚೂಣಿಯಲ್ಲಿ ಬರುವ ಹೆಸರು ಕೆ ಎಸ್ ರವಿಕುಮಾರ್. ಭಾರತಿ ರಾಜಾ ಗರಡಿಯಲ್ಲಿ ಪಳಗಿ ಸ್ವತಂತ್ರ ನಿರ್ದೇಶಕರಾದ ರವಿಕುಮಾರ್ ತಮಿಳು, ತೆಲುಗು ಮತ್ತು ಹಿಂದಿ ಭಾಷೆಯಲ್ಲಿ ಚಿತ್ರ ನಿರ್ದೇಶಿಸಿದ್ದಾರೆ.
ಸಿನಿಮಾ ವೃತ್ತಿ ಜೀವನದಲ್ಲಿ ಬಹುಪಾಲು ಯಶಸ್ಸನ್ನೇ ಕಂಡಿರುವ ರವಿಕುಮಾರ್ ಅವರ ಸೂಪರ್ ಹಿಟ್ ಚಿತ್ರಗಳಲ್ಲಿ ಕೆಲವೊಂದನ್ನು ಪಟ್ಟಿ ಮಾಡುವುದಾದರೆ ಮುತ್ತು, ವರಲಾರು, ಪಡೆಯಪ್ಪ, ತೆನಾಲಿ, ಸರವಣ ಮತ್ತು ಚಿತ್ರೀಕರಣದ ಹಂತದಲ್ಲಿರುವ ಸೂಪರ್ ಸ್ಟಾರ್ ರಜನೀಕಾಂತ್ ಅಭಿನಯದ ಕೊಚಾಡಿಯನ್.
ರವಿಕುಮಾರ್ ಕನ್ನಡ ಮತ್ತು ತಮಿಳಿನಲ್ಲಿ ದ್ವಿಭಾಷಾ ಚಿತ್ರವೊಂದನ್ನು ನಿರ್ಮಿಸುತ್ತಿರುವ ವಿಚಾರ ಈಗಾಗಲೇ ಭಾರೀ ಸದ್ದನ್ನು ಮಾಡಿದೆ. ಕನ್ನಡದ ನಟನೊಬ್ಬನನ್ನು ರವಿಕುಮಾರ್ ಆಯ್ಕೆ ಮಾಡಿಕೊಂಡ ಸುದ್ದಿ ತಮಿಳು ಚಿತ್ರರಂಗದಲ್ಲೂ ಭಾರೀ ಹವಾ ಸೃಷ್ಟಿಸಿತ್ತು.
ಸೂರಪ್ಪ ಬಾಬು ನಿರ್ಮಿಸುತ್ತಿರುವ ಈ ದ್ವಿಭಾಷಾ ಚಿತ್ರಕ್ಕೆ ನಾಯಕನಾಗಿ ಯಾರನ್ನು ಆಯ್ಕೆ ಮಾಡಿಕೊಳ್ಳ ಬೇಕೆಂದು ರವಿಕುಮಾರ್ ತಲೆ ಕೆಡಿಸಿ ಕೊಂಡಿದ್ದಾಗ ಕಿಚ್ಚ ಸುದೀಪ್ ಹೆಸರು ಸೂಚಿಸಿದ್ದು ಬೇರೆ ಯಾರೂ ಅಲ್ಲ 'ರಜನೀಕಾಂತ್'.
ಕೊಚಾಡಿಯನ್ ಸೆಟ್ ನಲ್ಲಿ ರಜನಿ ಮತ್ತು ರವಿಕುಮಾರ್ ನಡುವೆ ಈ ಬಗ್ಗೆ ಸುದೀರ್ಘ ಚರ್ಚೆ ನಡೆಯಿತಂತೆ. ಇಂಟರೆಸ್ಟಿಂಗ್ ಡಿಟೇಲ್ಸ್ ಸ್ಲೈಡಿನಲ್ಲಿದೆ ನೋಡಿ...

ಕೊಚಾಡಿಯನ್ ಸೆಟ್
ಕೊಚಾಡಿಯನ್ ಚಿತ್ರೀಕರಣದ ವಿರಾಮದ ವೇಳೆ, ರವಿಕುಮಾರ್ ತಲೆ ಕೆಡಿಸಿಕೊಂಡು ಕೂತಿದ್ದರಂತೆ. ಅಲ್ಲಿಗೆ ಬಂದ ರಜನಿ ರವಿಕುಮಾರ್ ಅವರನ್ನು ವಿಚಾರಿಸಿದಾಗ ನನ್ನ ಮುಂದಿನ ಚಿತ್ರಕ್ಕೆ ನಾಯಕನ ಆಯ್ಕೆಯ ಬಗ್ಗೆ ಆಲೋಚಿಸುತ್ತಿದ್ದೇನೆ ಅಂದರಂತೆ.

ರಜನೀಕಾಂತ್
ನಿರ್ದೇಶಕ ರವಿಕುಮಾರ್ ಅವರ ಬಳಿ ಚಿತ್ರದ ಕಥೆಯನ್ನು ವಿವರಿಸಲು ಹೇಳಿದರಂತೆ. ಚಿತ್ರದ ಕಥೆ ಕೇಳಿ ರವಿಕುಮಾರ್ ಬೆನ್ನು ತಟ್ಟಿದ ರಜನೀಕಾಂತ್ ಈ ಪಾತ್ರಕ್ಕೆ ಸಮರ್ಥವಾದ ನನ್ನ ಆಯ್ಕೆಯೆಂದರೆ ನಮ್ಮ ಕನ್ನಡದ ಸುದೀಪ್ ಎಂದು ಕಿಚ್ಚನ ಹೆಸರನ್ನು ಸೂಚಿಸಿದರಂತೆ.

ವಿಲನ್ ರೋಲ್
ರವಿಕುಮಾರ್ ಅವರ ಮುಂದಿನ ದ್ವಿಭಾಷಾ ಚಿತ್ರದಲ್ಲಿ ಎರಡು ಶೇಡ್ ಹೊಂದಿರುವ ನಾಯಕನ ಪಾತ್ರ. ಪ್ರಮುಖವಾಗಿ ನೆಗೆಟಿವ್ ರೋಲಿಗೆ ಸುದೀಪ್ ಅತ್ಯುತ್ತಮ ಆಯ್ಕೆ. ನಾನು ಅವನ 'ನಾನ್ ಈ' (ತೆಲುಗಿನ ಈಗ) ಚಿತ್ರದಲ್ಲಿನ ನಟನೆಗೆ ಮಾರು ಹೋಗಿದ್ದೇನೆ ಎಂದು ರಜನಿ, ರವಿಕುಮಾರಿಗೆ ವಿವರಿಸಿದರಂತೆ.

ನಾನ್ ಈ
ನಾನ್ ಈ ಚಿತ್ರದ ಸ್ಪೆಷಲ್ ಸ್ಕ್ರೀನಿಂಗ್ ನಲ್ಲಿ ಭಾಗವಹಿಸಿ ಚಿತ್ರ ವೀಕ್ಷಿಸಿದ್ದೆ. ಎಸ್ ಎಸ್ ರಾಜಮೌಳಿ ನಿರ್ದೇಶನ ಮತ್ತು ಸುದೀಪ್ ನಟನೆ ನನಗೆ ಇಷ್ಟವಾಗಿತ್ತು. ಅಲ್ಲೇ ಇದ್ದ ರಾಜಮೌಳಿಯನ್ನು ಅಭಿನಂದಿಸಿದ್ದೆ. ಸುದೀಪ್ ಅಲ್ಲಿ ಇರಲಿಲ್ಲ, ಬೆಂಗಳೂರಿನ ನನ್ನ ಸ್ನೇಹಿತರಿಗೆ ಕರೆ ಮಾಡಿ ಸುದೀಪ್ ನಂಬರ್ ಪಡೆದು ಅವನನ್ನು ಅಭಿನಂದಿಸಿದ್ದೆ ಎಂದು ರಜನಿ, ರವಿಕುಮಾರ್ ಅವರಿಗೆ ವಿವರಿಸಿದ್ದಾರೆ ಎನ್ನುವುದು ಕಾಲಿವುಡ್ ನಿಂದ ಬಂದ ಸುದ್ದಿ.

ಕಿಚ್ಚ ಸುದೀಪ್
ಚಿತ್ರ ವೀಕ್ಷಿಸಿ ರಜನಿ ಫೋನ್ ಮಾಡಿದ್ದು ಸುದೀಪ್ ಗೆ ಬಹಳ ಸಂತೋಷ ತಂದಿತ್ತಂತೆ. ನೀವು ಆಡುವ ಈ ಮಾತು, ನನ್ನಂತಃ ಕಲಾವಿದರಿಗೆ ಇನ್ನಷ್ಟು ಸ್ಪೂರ್ಥಿ ನೀಡುತ್ತದೆ. ನೀವು ನೀಡುವ ಶಹಬ್ಬಾಸ್ ಗಿರಿ ಆಸ್ಕರ್ ಪ್ರಶಸ್ತಿಗಿಂತ ದೊಡ್ಡದು ಎಂದು ಸುದೀಪ್ ಹೇಳಿದ್ದರಂತೆ.


Click it and Unblock the Notifications











