ಸಮಂತಾ ನಾಗಚೈತನ್ಯ ವಿಚ್ಛೇದನ: ಅಪ್ಪ-ಮಗ ಮಾಧ್ಯಮಗಳಿಂದ ತಪ್ಪಿಸಿಕೊಂಡು ಓಡಾಡುತ್ತಿರುವುದೇಕೆ?
2021ರಲ್ಲಿ ಅತೀ ಹೆಚ್ಚು ಸೌಂಡ್ ಮಾಡಿದ ಸುದ್ದಿ, ಸಮಂತಾ ಹಾಗೂ ನಾಗಚೈತನ್ಯ ವಿಚ್ಛೇದನ. ಕಳೆದ ವರ್ಷ ನಾಗಚೈತನ್ಯ ಹಾಗೂ ಸಮಂತಾ ಜಂಟಿಯಾಗಿ ವಿಚ್ಛೇದನದ ಬಗ್ಗೆ ಘೋಷಣೆ ಮಾಡುತ್ತಿದ್ದಂತೆ ಇಬ್ಬರ ಅಭಿಮಾನಿಗಳಿಗೂ ಆಚ್ಚರಿ, ಬೇಸರ ಎರಡೂ ಆಗಿತ್ತು. 7 ವರ್ಷ ಪ್ರೀತಿ ಮಾಡಿ ದಾಂಪತ್ಯಕ್ಕೆ ಕಾಲಿಟ್ಟಿದ್ದ ಜೋಡಿ ದಿಢೀರನೇ ಇಂತಹದ್ದೊಂದು ನಿರ್ಧಾರಕ್ಕೆ ಬಂದಿದ್ದು ಸಹಜವಾಗಿಯೇ ಅಭಿಮಾನಿಗಳ ಆತಂಕಕ್ಕೂ ಕಾರಣವಾಗಿತ್ತು.
Recommended Video
ವಿವಾಹ ಹಾಗೂ ವಿಚ್ಛೇದನದ ಬಗ್ಗೆ ಸಮಂತಾ ಮನಬಿಚ್ಚಿ ಮಾತಾಡಿದ್ದಾರೆ. ವಿಚ್ಛೇದನಕ್ಕೆ ಕಾರಣವಾಗಿ ಸೂಕ್ಷ್ಮತೆಗಳು, ಸೋಶಿಯಲ್ ಮೀಡಿಯಾದಲ್ಲಿ ಮಾಡಿದ ಕಮೆಂಟ್ಗಳ ಬಗ್ಗೆ ಬಹಿರಂಗವಾಗಿಯೇ ಮಾತಾಡಿದ್ದರು. ಆದರೆ, ನಾಗಚೈತನ್ಯ ಹಾಗೂ ತಂದೆ ನಾಗಾರ್ಜುನ ಮಾತ್ರ ಈ ವಿಷಯದ ಬಗ್ಗೆ ಮಾತಾಡುತ್ತಿಲ್ಲ. ಅದರಲ್ಲೂ ತೆಲುಗು ಮಾಧ್ಯಮಗಳಿಗೆ ಮಾತಾಡುತ್ತಿಲ್ಲ ಅನ್ನುವ ಅನುಮಾನ ಮೂಡಿದೆ.

ವಿಚ್ಛೇದನದ ಬಗ್ಗೆ ಮಾತಾಡಲ್ಲ ನಾಗಾರ್ಜುನ ಹಾಗೂ ನಾಗಚೈತನ್ಯ
ಹೌದು.. ನಾಗಚೈತನ್ಯ ಹಾಗೂ ನಾಗಾರ್ಜುನ ಇಬ್ಬರೂ ವಿಚ್ಛೇದನದ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ತಪ್ಪಿಸಿಕೊಳ್ಳುತ್ತಿದ್ದಾರಂತೆ. ಇಲ್ಲಾ ಮಾಧ್ಯಮಗಳು ಪ್ರಶ್ನೆ ಕೇಳಲು ಮುಂದಾದರೆ, ಆ ಪ್ರಶ್ನೆಗಳಿಗೆ ಉತ್ತರ ನೀಡುತ್ತಿಲ್ಲವಂತೆ. ಇನ್ನೊಂದು ಕಡೆ ಪತ್ರಿಕಾಗೋಷ್ಟಿಗೂ ಮುನ್ನವೇ ಡಿವೋರ್ಸ್ ಬಗ್ಗೆ ಪ್ರಶ್ನೆಗಳು ಕೇಳದೆ ಇರುವಂತೆ ಷರತ್ತುಗಳನ್ನು ಹಾಕುತ್ತಿದ್ದಾರಂತೆ. ಪುತ್ರ ನಾಗಚೈತನ್ಯ ಹಾಗೂ ತಂದೆ ನಾಗಾರ್ಜುನಾ ಬಗ್ಗೆ ತೆಲುಗು ಮಾಧ್ಯಮಗಳು ಗರಂ ಆಗಿವೆ ಅನ್ನುವ ಮಾತುಗಳು ಕೇಳಿಬರುತ್ತಿವೆ.

ಬಾಲಿವುಡ್ ಮಾಧ್ಯಮಗಳಿಗೆ ಮಾತ್ರ ಪ್ರತಿಕ್ರಿಯೆ
ನಾಗಚೈತನ್ಯ ಹಾಗೂ ನಾಗಾರ್ಜುನ ಇಬ್ಬರೂ ವಿಚ್ಛೇದನದ ಬಗ್ಗೆ ಎಲ್ಲೂ ಬಾಯಿ ಬಿಡುತ್ತಿಲ್ಲ. ಸಮಂತಾ ಹಾಗೂ ನಾಗಚೈತನ್ಯ ನಡುವೆ ಏನಾಗಿದೆ ಎಂಬುದನ್ನು ಹೇಳಲು ಮುಂದೆ ಬರುತ್ತಿಲ್ಲ ಎನ್ನಲಾಗಿದೆ. ಆದರೆ, ಇದೇ ವಿಷಯದ ಬಗ್ಗೆ ಬಾಲಿವುಡ್ ಮಾಧ್ಯಮಗಳಿಗೆ ಪುತ್ರ ನಾಗಚೈತನ್ಯ ಹಾಗೂ ನಾಗಾರ್ಜುನ ಇಬ್ಬರೂ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಈ ಬಗ್ಗೆ ಟಾಲಿವುಡ್ನಲ್ಲಿ ಬೇಸರ ವ್ಯಕ್ತವಾಗುತ್ತಿದೆ ಅನ್ನುವ ಮಾತುಗಳು ಕೇಳಿಬರುತ್ತಿವೆ.

ಆಂಧ್ರದಲ್ಲಿ ವಿಚ್ಛೇದನದ ಸೂಕ್ಷ್ಮತೆ ಗೊತ್ತಿಲ್ಲ
ತೆಲುಗಿನಲ್ಲಿ ವಿಚ್ಛೇದನದಂತಹ ಸೂಕ್ಷ್ಮ ವಿಚಾರಗಳನ್ನು ಹ್ಯಾಂಡಲ್ ಮಾಡಲು ಬರುವುದಿಲ್ಲ. ಅದೇ ಬಾಲಿವುಡ್ನಲ್ಲಿ ಇಂತಹ ಗಂಭೀರ ವಿಷಯಗಳನ್ನು ಪ್ರಬುದ್ಧವಾಗಿ ನಿಭಾಯಿಸುತ್ತವೆ ಎನ್ನುವ ಕಾರಣಕ್ಕೆ ತಂದೆ ಹಾಗೂ ಮಗ ಇಬ್ಬರೂ ಅಲ್ಲಿನ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುತ್ತಿದ್ದಾರೆ ಎನ್ನಲಾಗಿದೆ. 'ಬಂಗಾರ್ರಾಜು' ಸಿನಿಮಾ ಪ್ರಚಾರದ ವೇಳೆ ತೆಲುಗು ಮಾಧ್ಯಮಗಳು ನಾಗಚೈತನ್ಯಗೆ ವಿಚ್ಛೇದನದ ಬಗ್ಗೆ ಪ್ರಶ್ನೆ ಮಾಡಿದ್ದರು. ಆ ವೇಳೆ ನಾಗಚೈತನ್ಯ ತನ್ನ ಸಿಬ್ಬಂದಿಯ ಮೇಲೆ ಗರಂ ಆಗಿದ್ದರಂತೆ. ಮೊದಲೇ ಮಾಧ್ಯಮದವರಿಗೆ ವಿಚ್ಛೇದನದ ಬಗ್ಗೆ ಪ್ರಶ್ನೆ ಕೇಳದೆ ಇರುವಂತೆ ಯಾಕಿ ಸೂಚಿಸಿಲ್ಲವೆಂದು ತರಾಟೆಗೆ ತೆಗೆದುಕೊಂಡಿದ್ದರಂತೆ.

ವಿಚ್ಛೇದನ ಒಂದು ನೋವಿನ ಪ್ರಕ್ರಿಯೆ
ಸಮಂತಾ ಹಾಗೂ ನಾಗಚೈತನ್ಯ ವಿಚ್ಛೇದನ ಅಭಿಮಾನಿಗಳಿಗೆ ಹೇಗೆ ಶಾಕ್ ಆಗಿತ್ತೋ, ಹಾಗೇ ಸ್ವತ: ಸಮಂತಾಗೂ ಕೂಡ ನೋವಾಗಿತ್ತು. ಹೀಗಾಗಿ "ವಿಚ್ಛೇದನ ಅನ್ನುವುದೇ ಒಂದು ನೋವಿನ ಪ್ರಕ್ರಿಯೆ. ಒಂಟಿತನವೇ ಈ ನೋವಿನಿಂದ ಹೊರಬರಲು ಸಹಾಯ ಮಾಡುತ್ತದೆ. ವೈಯಕ್ತಿಕವಾಗಿ ಮಾಡುತ್ತಿರುವ ದಾಳಿ ನಿರಂತರವಾಗಿ ನಡೆಯುತ್ತಿದೆ. ಆದರೆ, ನಿಮಗೆ ಭಾಷೆ ನೀಡುತ್ತೇನೆ. ಇದೆಲ್ಲವೂ ನನ್ನನ್ನು ಬ್ರೇಕ್ ಮಾಡಲು ಬಿಡುವುದಿಲ್ಲ." ಎಂದು ಸಮಂತಾ ಸಂದರ್ಶನವೊಂದರಲ್ಲಿ ನೋವು ಹೊರ ಹಾಕಿದ್ದರು.


Click it and Unblock the Notifications











