ಸಿಎಂ ಆದ್ರೆ ವಿಜಯ್ ದರ್ಬಾರ್ ಹೇಗಿರುತ್ತೆ? ಕೊನೆಯ ಸಿನಿಮಾ ತೋರಿಸ್ತಾರಾ ದಳಪತಿ?
ತಮಿಳು ನಾಡು ರಾಜಕೀಯಕ್ಕೂ ಸಿನಿಮಾ ಮಂದಿಗೂ ಬಿಡಲಾರದ ನಂಟು. ಈ ವಿಷಯ ಈಗ ಹೊಸದೇನು ಅಲ್ಲ. ಸಿನಿಮಾದಲ್ಲಿ ಹೆಸರು ಮಾಡಿದವರು ರಾಜಕೀಯ ಎಂಟ್ರಿ ಕೊಟ್ಟು ಗೆದ್ದವರೇ ಹೆಚ್ಚು. ಹಾಗೇ ನೋಡಿದರೆ, ಯುನಿವರ್ಸಲ್ ಸ್ಟಾರ್ ಕಮಲ್ ಹಾಸನ್ಗೆ ರಾಜಕೀಯದಲ್ಲಿ ಹಿನ್ನೆಡೆ ಆಗಿದೆ ಎನ್ನಬಹುದು. ಹೀಗಾಗಿ ಈಗ ಎಲ್ಲರ ಕಣ್ಣು ದಳಪತಿ ವಿಜಯ್ ಮೇಲೆ ನೆಟ್ಟಿದೆ.
ದಳಪತಿ ವಿಜಯ್ ರಾಜಕೀಯ ಪಕ್ಷ ಕಟ್ಟುತ್ತಾರೆ ಅನ್ನೋ ವಿಷಯ ಹಲವು ದಿನಗಳಿಂದ ಕೇಳಿ ಬರುತ್ತಲೇ ಇತ್ತು. ನಿರೀಕ್ಷೆ ಮಾಡಿದಂತೆ ಕೆಲವು ದಿನಗಳ ಹಿಂದಷ್ಟೇ ವಿಜಯ್ ಪಾಲಿಟಿಕ್ಸ್ಗೆ ಎಂಟ್ರಿ ಕೊಡುವುದಾಗಿ ಅನೌನ್ಸ್ ಕೂಡ ಮಾಡಿದ್ದಾರೆ. ತಮ್ಮ ಪಕ್ಷದ ಹೆಸರು 'ತಮಿಳಗ ವೆಟ್ರಿ ಕಳಗಂ' ಎಂದೂ ಅನೌನ್ಸ್ ಮಾಡಿದ್ದಾರೆ. ಸದ್ಯ ಆಯೋಗಕ್ಕೆ ನೋಂದಣಿಗೆ ಅರ್ಜಿ ಸಲ್ಲಿಸಿದ್ದು, 2026ರ ತಮಿಳು ನಾಡು ವಿಧಾನ ಸಭಾ ಚುನಾವಣೆಗೆ ಸ್ಪರ್ಧಿಸಲಿದ್ದಾರೆ.

ಹೀಗಾಗಿ ಇನ್ನೆರಡು ಸಿನಿಮಾಗಳಲ್ಲಷ್ಟೇ ನಟಿಸುವುದಾಗಿ ದಳಪತಿ ವಿಜಯ್ ಈಗಾಗಲೇ ಹೇಳಿಕೊಂಡಿದ್ದಾರೆ. ಸದ್ಯ ವೆಂಕಟ್ ಪ್ರಭು ನಿರ್ದೇಶಿಸುತ್ತಿರುವ ಸಿನಿಮಾದಲ್ಲಿ ವಿಜಯ್ ನಟಿಸುತ್ತಿದ್ದಾರೆ. ಇದು ಅವರ 68ನೇ ಸಿನಿಮಾ. 69ನೇಯದ್ದೇ ಕೊನೆಯ ಸಿನಿಮಾ ಆಗಲಿದ್ದು, ಆಕ್ಷನ್ ಕಟ್ ಹೇಳುವುದು ಯಾರು? ಅನ್ನೋದು ಅವರ ಅಭಿಮಾನಿಗಳಿಗೆ ಯಕ್ಷ ಪ್ರಶ್ನೆಯಾಗಿದೆ.
ಈಗಾಗಲೇ ದಳಪತಿ ವಿಜಯ್ ಕೊನೆಯ ಸಿನಿಮಾಗೆ ಆಕ್ಷನ್ ಹೇಳಲಿರುವ ನಿರ್ದೇಶಕ ದೊಡ್ಡ ಪಟ್ಟಿನೇ ಇದೆ. ಕಾರ್ತಿಕ್ ಸುಬ್ಬರಾಜು, ವೆಟ್ರಿಮಾರನ್, ಎಚ್ ವಿನೋದ್, ತ್ರಿವಿಕ್ರಮ್ ಶ್ರೀನಿವಾಸ್ ಹೆಸರು ಕೇಳಿ ಬರುತ್ತಿದೆ. ವಿಜಯ್ ಕೊನೆಯ ಸಿನಿಮಾ ಬಗ್ಗೆ ದಿನಕ್ಕೊಂದು ಸುದ್ದಿ ಓಡಾಡುತ್ತಿದ್ದು ಅಭಿಮಾನಿಗಳು ಕುತೂಹಲದಿಂದ ಎದುರು ನೋಡುತ್ತಿದ್ದಾರೆ. ಸದ್ಯಕ್ಕೆ RRR ಸಿನಿಮಾ ನಿರ್ಮಾಣ ಮಾಡಿದ್ದ ಡಿವಿವಿ ಎಂಟರ್ಟೈನ್ಮೆಂಟ್ ಹಾಗೂ ಸನ್ ಪಿಕ್ಚರ್ಸ್ ಹೆಸರು ಕೇಳಿ ಬರುತ್ತಿದೆ.

ಇಷ್ಟೆಲ್ಲ ಸುದ್ದಿ ಓಡಾಡುತ್ತಿರುವಾಗಲೇ ಮತ್ತೊಬ್ಬ ಸ್ಟಾರ್ ನಿರ್ದೇಶಕನ ಹೆಸರು ಕೇಳಿ ಬರುತ್ತಿದೆ. ಇತ್ತೀಚೆಗಷ್ಟೇ 'ಜವಾನ್' ಅಂತಹ ಮೆಗಾ ಹಿಟ್ ಸಿನಿಮಾ ನೀಡಿದ್ದ ಅಟ್ಲೀ ನಿರ್ದೇಶನ ಮಾಡುತ್ತಾರೆ ಅನ್ನೋದು ಸದ್ಯ ಗುಲ್ಲೆದ್ದಿರೋ ವಿಷಯ. ಈಗಾಗಲೇ ಕಾಲಿವುಡ್ನಲ್ಲಿ ಹರಿದಾಡುತ್ತಿರುವ ಸುದ್ದಿಯ ಪ್ರಕಾರ, ಅಟ್ಲೀ ಈಗಾಗಲೇ ದಳಪತಿ ವಿಜಯ್ ಕಥೆ ಹೇಳಿದ್ದಾರೆ. ಅದು ವಿಜಯ್ಗೆ ಒಪ್ಪಿಗೆ ಆಗಿದೆ ಅನ್ನೋ ಮಾತು ಕೇಳಿ ಬರುತ್ತಿದೆ.
ಆದರೆ, ಇದಕ್ಕಿಂತಲೂ ಇಂಟ್ರೆಸ್ಟಿಂಗ್ ವಿಷಯವೊಂದಿದೆ. ದಳಪತಿ ವಿಜಯ್ ತಮ್ಮ ಕೊನೆಯ ಸಿನಿಮಾದಲ್ಲಿ ಸಿ ಎಂ ಆಗಿಯೇ ಕಾಣಿಸಿಕೊಳ್ಳುತ್ತಿದ್ದಾರೆ ಅಂತ ಪುಕಾರು ಹಬ್ಬಿದೆ. ಈ ಹಿಂದೆ ನಿರ್ದೇಶಕ ಅಟ್ಲೀ ಮುಂದಿನ ಸಿನಿಮಾದಲ್ಲಿ ದಳಪತಿ ವಿಜಯ್ ಅನ್ನು ಮುಖ್ಯಮಂತ್ರಿಯಾಗಿ ತೋರಿಸುತೇನೆ ಎಂದಿದ್ದರು. ಅದನ್ನೇ ಒಟ್ಟುಕೊಂಡು ಕೊನೆಯ ಸಿನಿಮಾದಲ್ಲಿ ಸಿಎಂ ಪಾತ್ರದಲ್ಲಿ ನಟಿಸಲಿದ್ದಾರೆ ಅನ್ನು ಸುದ್ದಿ ಓಡಾಡುತ್ತಿದೆ.
ದಳಪತಿ ವಿಜಯ್ ಕೊನೆಯ ಸಿನಿಮಾ ಬಗ್ಗೆ ಇನ್ನೊ ಒಂದು ಸುದ್ದಿ ಸದ್ದು ಮಾಡುತ್ತಿದೆ. ಅದೇನಂದ್ರೆ, ವಿಜಯ್ ಕೊನೆಯ ಸಿನಿಮಾದಲ್ಲಿ ಸಮಂತಾ ನಾಯಕಿಯಾಗಿ ನಟಿಸುತ್ತಿದ್ದಾರೆ ಎನ್ನಲಾಗಿದೆ. ಬಹಳ ದಿನಗಳ ಬಳಿಕ ವಿಜಯ್ ಹಾಗೂ ಸಮಂತಾರನ್ನು ಮತ್ತೆ ತೆರೆಮೇಲೆ ನೋಡಬಹುದು. ಅನಿರುದ್ಧ್ ಮ್ಯೂಸಿಕ್ ಮಾಡುತ್ತಿದ್ದು, ಸನ್ ಪಿಕ್ಷರ್ಸ್ನ ಕಲಾನಿಧಿ ಮಾರನ್ ನಿರ್ಮಾಣ ಮಾಡುತ್ತಿದ್ದಾರೆ ಅನ್ನೋ ಸುದ್ದಿ ಹಬ್ಬಿದೆ. ಈ ಸುದ್ದಿ ಅದೆಷ್ಟು ನಿಜವೋ ಗೊತ್ತಿಲ್ಲ.


Click it and Unblock the Notifications











