ವಿಜಯ್ ಸಿನಿಮಾ ನಿರ್ಮಿಸಿ ಸಂಕಷ್ಟಕ್ಕೆ ಸಿಲುಕಿತೇ ಕೆವಿಎನ್ ಪ್ರೊಡಕ್ಷನ್ಸ್? 'ಜನ ನಾಯಗನ್' ಖರೀದಿಗೆ ವಿತರಕರು ಹಿಂದೇಟು?
ದಳಪತಿ ವಿಜಯ್ ಕೊನೆಯ ಸಿನಿಮಾ ಅಂದ್ಮೇಲೆ ಕ್ರೇಜ್ ಹೇಗಿರಬೇಡ? ಅವರ ಅಭಿಮಾನಿಗಳಿಗೆ ನಿರ್ದೇಶಕರು ಯಾರು? ನಿರ್ಮಾಪಕರು ಯಾರು? ಅನ್ನೋದೆಲ್ಲ ಲೆಕ್ಕವೇ ಅಲ್ಲ. ಮೊದಲು ಸಿನಿಮಾ ರಿಲೀಸ್ ಆಗಬೇಕು. ಥಿಯೇಟರ್ಗೆ ಹೋಗಿ ಸಿನಿಮಾ ನೋಡಬೇಕು. ವಿಜಯ್ ಮ್ಯಾನರಿಸಂ, ಡೈಲಾಗ್, ಆಕ್ಷನ್ ಅನ್ನು ಕಣ್ತುಂಬಿಕೊಳ್ಳಬೇಕು. ಇವಿಷ್ಟೇ ದಳಪತಿ ವಿಜಯ್ ಅಭಿಮಾನಿಗಳ ಟಾರ್ಗೆಟ್. ಅದಕ್ಕೆ ಜನ ನಾಯಗನ್ ಅತೀ ದೊಡ್ಡ ಓಪನಿಂಗ್ ಪಡೆಯುವ ಸಿನಿಮಾ ಆಗಬಹುದೆಂಬ ಲೆಕ್ಕಾಚಾರ ಈಗಿನಿಂದಲೇ ಹಾಕಲಾಗುತ್ತಿದೆ.
ವಿಜಯ್ ನಟಿಸುತ್ತಿರುವ ಕೊನೆಯ ಸಿನಿಮಾ 'ಜನ ನಾಯಗನ್' ಇನ್ನೇನು ಕೆಲವೇ ದಿನಗಳಲ್ಲಿ ರಿಲೀಸ್ ಆಗುತ್ತೆ. ಬಾಕ್ಸಾಫೀಸ್ ದಾಖಲೆಗಳನ್ನೆಲ್ಲ ಉಡೀಸ್ ಮಾಡುತ್ತೆ ಎಂದು ಲೆಕ್ಕ ಹಾಕುತ್ತಿರುವಾಗಲೇ ಸಮಸ್ಯೆಗಳು ಸುತ್ತುವರೆದಿವೆ. ತಮಿಳುನಾಡಿನಲ್ಲಿ ಈ ಸಿನಿಮಾ ರಿಲೀಸ್ ಆಗುತ್ತಾ? ಇಲ್ವಾ? ಅನ್ನೋ ಅನುಮಾನ ಶುರುವಾಗಿದೆ. ಇಂತಹದ್ದೊಂದು ಅನುಮಾನವನ್ನು ತಮಿಳು ಮಾಧ್ಯಮಗಳು ವ್ಯಕ್ತಪಡಿಸಿವೆ.

ತಮಿಳುನಾಡು ರಾಜಕೀಯಕ್ಕೆ ಗ್ರ್ಯಾಂಡ್ ಎಂಟ್ರಿ ಕೊಡುತ್ತಿರುವ ದಳಪತಿ ವಿಜಯ್ಗೆ 'ಜನ ನಾಯಗನ್' ಸಿನಿಮಾ ಅಂದುಕೊಂಡ ಸಮಯಕ್ಕೆ ರಿಲೀಸ್ ಆಗಲೇಬೇಕು. ಇದರಲ್ಲಿ ರಾಜಕೀಯ ಲಾಭ ಕೂಡ ಅಡಗಿದೆ. ಮುಂದಿನ ವರ್ಷ ತಮಿಳುನಾಡು ವಿಧಾನ ಸಭೆ ಚುನಾವಣೆ ನಡೆಯಲಿದೆ. ವಿಜಯ್ ಪಕ್ಷ ಕಣಕ್ಕೆ ಇಳಿದಿರುವುದರಿಂದ ಈ ಸಿನಿಮಾ ಬೂಸ್ಟರ್ ಆಗಿ ಕೆಲಸ ಮಾಡಲಿದೆ. ಹೀಗಾಗಿ ಜನವರಿ 9ಕ್ಕೆ ರಿಲೀಸ್ ಆಗಬೇಕು. ಆದ್ರೀಗ ತಮಿಳುನಾಡಿನಲ್ಲಿ ಈ ಸಿನಿಮಾ ಖರೀದಿ ಮಾಡೋಕೆ ಯಾರೂ ಮುಂದೆ ಬರುತ್ತಿಲ್ಲ ಎಂಬ ಸುದ್ದಿ ಜೋರಾಗಿ ಸದ್ದು ಮಾಡುತ್ತಿದೆ. ಹಾಗಿದ್ದರೆ, ದಳಪತಿ ಕೊನೆಗೆ ಸಿನಿಮಾ ಖರೀದಿ ಮಾಡೋಕೆ ಯಾಕೆ ಯಾರೂ ಮುಂದೆ ಬರುತ್ತಿಲ್ಲ? ಏನಿದರ ಮರ್ಮ ಅಂತ ನೋಡುವುದಾರೇ..
ವಿತರಕರು ಖರೀದಿಗೆ ಮುಂದೆ ಬರ್ತಿಲ್ಲ?
ಕನ್ನಡದ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ಸ್ ದಳಪತಿ ವಿಜಯ್ ಅವರ ಕೊನೆಯ ಸಿನಿಮಾ 'ಜನ ನಾಯಗನ್' ನಿರ್ಮಾಣ ಮಾಡಿದೆ. ಈಗಾಗಲೇ ಸಿನಿಮಾ ಮುಗಿಸಿ ಪ್ರಚಾರ ಆರಂಭಿಸಿರುವ ಕೆವಿಎನ್ ಸಿನಿಮಾದ ವ್ಯಾಪಾರಕ್ಕೆ ಮುಂದಾಗಿದೆ. ತಮಿಳುನಾಡಿನಲ್ಲಿ ಸಿನಿಮಾದ ವಿತರಣೆ ಹಕ್ಕುಗಳನ್ನು ನೀಡುವುದಕ್ಕೆ ಮುಂದಾಗಿದೆ ಎನ್ನಲಾಗಿದೆ. ಈ ಹಿಂದೆ 'ಜನ ನಾಯಗನ್' ಸಿನಿಮಾವನ್ನು ರೋಮಿಯೋ ಪಿಕ್ಚರ್ಸ್ನ ರಾಹುಲ್ ಎಂಬುವವರು ಖರೀದಿ ಮಾಡುತ್ತಿದ್ದಾರೆಂದು ವರದಿಯಾಗಿತ್ತು. ಆದರೆ, ಇನ್ನೂ ಅವರು ಥ್ರಿಯೇಟ್ರಿಕಲ್ ರೈಟ್ಸ್ ಅನ್ನು ಖರೀದಿ ಮಾಡಿಯೇ ಇಲ್ಲವೆಂದು ವರದಿಗಳಾಗಿವೆ.
ಸ್ಯಾಟಲೈಟ್ ಹಕ್ಕುಗಳೂ ಖರೀದಿಯಾಗಿಲ್ಲ?
ಇನ್ನು 'ಜನ ನಾಯಗನ್' ಸಿನಿಮಾದ ಸ್ಯಾಟಲೈಟ್ ಹಕ್ಕುಗಳನ್ನು ಸನ್ ಪಿಕ್ಚರ್ಸ್ ಖರೀದಿ ಮಾಡಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ಆದ್ರೀಗ ಅವರೂ ಹಿಂದೆ ಸರಿದಿದ್ದಾರೆಂಬ ಸುದ್ದಿಯೂ ಬರುತ್ತಿದೆ. ಹೀಗಾಗಿ ಕೆವಿಎನ್ ಸಂಸ್ಥೆ ವಿಜಯ್ ಟಿವಿ ಮತ್ತು ಜೀ ತಮಿಳು ವಾಹಿನಿಯೊಂದಿಗೆ ಮಾತುಕತೆ ನಡೆಸುತ್ತಿದೆಯೆಂಬ ಸುದ್ದಿ ಸದ್ದು ಮಾಡುತ್ತಿದೆ.

ಡಿಎಂಕೆ ಪಕ್ಷದಿಂದ ಟಾರ್ಗೆಟ್?
ದಳಪತಿ ವಿಜಯ್ ಕೊನೆಯ ಸಿನಿಮಾ 'ಜನ ನಾಯಗನ್' ಮೇಲೆ ಇಷ್ಟೆಲ್ಲ ಕ್ರೇಜ್ ಇದ್ದರೂ ಬ್ಯುಸಿನೆಸ್ ವಿಚಾರದಲ್ಲಿ ಅಡೆತಡೆಯಾಗುತ್ತಿದೆ ಎನ್ನಲಾಗಿದೆ. ತನ್ನ ರಾಜಕೀಯ ಪ್ರಚಾರದಲ್ಲಿ ವಿಜಯ್ ನೇರವಾಗಿ ಡಿಎಂಕೆ ಪಕ್ಷದ ವಿರುದ್ಧ ವಾಗ್ಧಾಳಿ ನಡೆಸುತ್ತಿದ್ದಾರೆ. ಈ ಕಾರಣಕ್ಕೆ ಅವರ ಸಿನಿಮಾ ಮೇಲೆ ಡಿಎಂಕೆ ಒತ್ತಡ ಹಾಕುತ್ತಿದೆ. ಹೀಗಾಗಿ ಥಿಯೇಟ್ರಿಕಲ್ ಹಾಗೂ ಸ್ಯಾಟಲೈಟ್ ಹಕ್ಕುಗಳ ಖರೀದಿಗೆ ವಿಳಂಬ ಆಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ವಿಜಯ್ ಹಾಡುಗಳ ಪ್ರಚಾರ ಸ್ಥಗಿತ
ತಮಿಳು ನಾಡಿನ ಜನಪ್ರಿಯ ಮನರಂಜನಾ ವಾಹಿನಿ ಸನ್ ಟಿವಿ, ಸನ್ ನೆಟ್ವರ್ಕ್ ಹಾಗೂ ಕಲೈನರ್ ಟಿವಿಗಳಲ್ಲಿ ವಿಜಯ್ ಹಾಡುಗಳು ಪ್ರಸಾರ ಆಗುತ್ತಿಲ್ಲ. ಈ ಮೂಲಕ ಜನರ ಮೇಲೆ ವಿಜಯ್ ಪ್ರಭಾವವನ್ನು ಕಡಿಮೆ ಮಾಡುವುದಕ್ಕೆ ಡಿಎಂಕೆ ಪಕ್ಷ ಮುಂದಾಗಿದೆಯೆಂಬ ಆರೋಪ ಕೂಡ ಕೇಳಿ ಬರುತ್ತಿದೆ. ಇದರಿಂದ 'ಜನ ನಾಯಗನ್' ವ್ಯಾಪಾರಕ್ಕೆ ಅಡ್ಡಿಯುಂಟಾಗಿದೆ ಎಂದು ತಮಿಳು ಮಾಧ್ಯಮಗಳು ವರದಿ ಮಾಡಿವೆ. ಅಸಲಿಗೆ ಈ ಬಗ್ಗೆ ದಳಪತಿ ವಿಜಯ್ ಆಗಲಿ, ಕೆವಿಎನ್ ಪ್ರೊಡಕ್ಷನ್ ಆಗಲಿ ಅಧಿಕೃತವಾಗಿ ಎಲ್ಲಿಯೂ ಹೇಳಿಕೊಂಡಿಲ್ಲ.


Click it and Unblock the Notifications











