ಸುವರ್ಣ ಗೃಹಮಂತ್ರಿ 500ರ ಸಂಭ್ರಮ; ರವಿಶಂಕರ್ ಗೌಡ 'ಡಬಲ್' ರೋಲ್
ಕನ್ನಡ ಕಿರುತೆರೆಯ ಜನಪ್ರಿಯ ಶೋಗಳಲ್ಲಿ ಒಂದಾಗಿರುವ 'ಸುವರ್ಣ ಗೃಹಮಂತ್ರಿ' ಅಪ್ಪಣ ಗೃಹಿಣಿಯರಿಗಾಗಿಯೇ ಮಾಡಿರುವ ಕಾರ್ಯಕ್ರಮ. ಈ ಕಾರ್ಯಕ್ರಮವನ್ನು ನಟ ರವಿಶಂಕರ್ ಗೌಡ ನಡೆಸಿಕೊಡುತ್ತಿದ್ದಾರೆ. ಒಂದು ಅರ್ಥದಲ್ಲಿ ಇದು ಕನ್ನಡ ಕಿರುತೆರೆಯಲ್ಲಿ ಪ್ರಸಾರ ಆಗುತ್ತಿರುವ ಸಾಮಾನ್ಯ ಜನರ ರಿಯಾಲಿಟಿ ಶೋ ಎಂದೇ ಹೇಳಬಹುದು.
ಕರ್ನಾಟಕದ ಮನೆ ಮನೆಗೆ ಹೋಗಿ ದಿನಕ್ಕೊಂದು ಕುಟುಂಬವನ್ನು ಭೇಟಿ ಮಾಡಿ, ತನಗಾಗಿ ಏನನ್ನೂ ಬಯಸದೇ ತನ್ನವರ ಖುಷಿಗಾಗಿ ನಿರಂತರವಾಗಿ ಹಂಬಲಿಸುವ ಗೃಹಿಣಿಯರನ್ನು ಗೌರವಿಸುವ ಕಾರ್ಯಕ್ರಮವಿದು. ಗಂಡ-ಹೆಂಡತಿಯನ್ನು ಮಾತನಾಡಿಸಿ, ಗೇಮ್ಸ್ ಆಡಿಸಿ, ಆಕೆಯ ಕುಟುಂಬದವರ ಪರಿಚಯ ಮಾಡಿಕೊಂಡು, ರಾಣಿ ಸೀಟ್ನಲ್ಲಿ ಅವರನ್ನ ಕೂರಿಸಿ ಗೌರವಿಸುತ್ತಾ ಥ್ಯಾಂಕ್ಸ್ ಹೇಳುವುದು 'ಸುವರ್ಣ ಗೃಹಮಂತ್ರಿ' ಕಾರ್ಯಕ್ರಮದ ಉದ್ದೇಶ.

ನಟ ರವಿ ಶಂಕರ್ ಗೌಡ ಮನೆ ಬೆಳಗೋ ಗೃಹಿಣಿಯರನ್ನು ಭೇಟಿ ಮಾಡಿ, ಅಣ್ಣನ ಸ್ಥಾನದಲ್ಲಿ ನಿಂತು ತವರು ಮನೆಯ ಉಡುಗೊರೆಯಾಗಿ ಬಾಗಿನ ನೀಡಿ ಗೌರವಿಸಿ ಇಡೀ ಕುಟುಂಬವನ್ನು ಒಗ್ಗೂಡಿಸಿ ಸಂಭ್ರಮಿಸಲಾಗುತ್ತದೆ. ಈ ವಿಭಿನ್ನ ಕಾರ್ಯಕ್ರಮಕ್ಕೀಗ 500ರ ಸಂಭ್ರಮ. ಈ ಖುಷಿಯನ್ನು ಸಂಭ್ರಮಿಸುವುದಕ್ಕೆ ಇದೇ ಮೊದಲ ಬಾರಿಗೆ ನಟ ರವಿ ಶಂಕರ್ ಗೌಡ ಕುಟುಂಬ ಜೊತೆಯಾಗಲಿದೆ. ಈ ಸ್ಪೆಷಲ್ ಎಪಿಸೋಡಿನಲ್ಲಿ ನಟ ರವಿ ಶಂಕರ್ ತಮ್ಮದೇ ಮನೆಗೆ ಹೋಗಿ ತನ್ನ ಕುಟುಂಬದ ಜೊತೆ ಮಾತುಕತೆ ನಡೆಸಲಿದ್ದಾರೆ. ಈ ಬಗ್ಗೆ ರವಿಶಂಕರ್ ಗೌಡ ಫಿಲ್ಮಿಬೀಟ್ ಜೊತೆ ಇಂಟ್ರೆಸ್ಟಿಂಗ್ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಅದರ ಝಲಕ್ ಇಲ್ಲಿದೆ.
ಸುವರ್ಣ ಗೃಹಮಂತ್ರಿಯಲ್ಲಿ ಡಬಲ್ ರೋಲ್ ಯಾಕೆ?
"ನಾನು ಬಹಳಷ್ಟು ಮನೆಗೆ ಹೋಗುವಾಗ ಗೃಹಮಂತ್ರಿ ನಿಮ್ಮ ಮನೆಯದ್ದು ಮಾಡಿ ಅಂತ ಹೇಳುತ್ತಿದ್ದರು. ನಿಮ್ಮ ಮನೆಯನ್ನು ನೋಡಬೇಕು. ನಿಮ್ಮ ಹೆಂಡತಿ, ಮಕ್ಕಳು, ಕುಟುಂಬವನ್ನು ನೋಡಬೇಕು ಎಂದು ಆಸೆಪಡುತ್ತಿದ್ದರು. ನಮ್ಮ ಡೈರೆಕ್ಟರ್ ಕೂತು ಅಚ್ಚು ಕಟ್ಟಾಗಿ ಪ್ಲ್ಯಾನ್ ಮಾಡಿದರು. ನಮ್ಮ ಅಮ್ಮ, ಹೆಂಡ್ತಿಗೆ ಬಾಗಿನ ಕೊಡುವುದೆಲ್ಲ ಆಗಬೇಕು. ಸೆಲೆಬ್ರೆಟಿಗಳು ಯಾರಾದರೂ ನಿರೂಪಣೆ ಮಾಡಬೇಕು ಅಂದುಕೊಂಡರು. ಆಮೇಲೆ ಬೇಡ, ರವಿಶಂಕರ್ ಗೌಡ ಕುಟುಂಬದ ಜೊತೆ ರವಿಶಂಕರ್ ಗೌಡ ಸಂದರ್ಶನ ಮಾಡಲಿ ಅಂತ ನನ್ನ ಡೈರೆಕ್ಟರ್ ಪ್ಯಾನ್ ಮಾಡಿದರು. ಹೀಗಾಗಿ 500ನೇ ಎಪಿಸೋಡ್ನಲ್ಲಿ ನನ್ನ ಡಬಲ್ ರೋಲ್ ಮಾಡಿಸಿದ್ದಾರೆ"
ಯಾವುದಾದರೂ ಭಾವನಾತ್ಮಕ ಸನ್ನಿವೇಶ ನೆನಪಿದೆಯಾ?
"ಒಂದು ಊರಿಗೆ ಹೋದಾಗ ಆ ಮನೆಯ ಹೆಣ್ಣು ಮಕ್ಕಳು ತಂದೆ ಬಗ್ಗೆ ತುಂಬಾನೇ ಪ್ರೀತಿ ಇಟ್ಟುಕೊಂಡಿದ್ದರು. ಅವರು ತಂದೆ ಬಗ್ಗೆ ಮಾತಾಡಿದಾಗ ನನಗೆ ನನ್ನ ಅಪ್ಪನ ನೆನಪಾಯ್ತು. ನನ್ನ ಮುಂದೆ ಇಬ್ಬರು ಪುಟ್ಟ ಹೆಣ್ಣು ಮಕ್ಕಳು ಇದ್ದರು. ಅವರು ತಂದೆಯನ್ನು ನೆನಪಿಸಿಕೊಂಡು ಜೋರಾಗಿ ಅಳುವುದಕ್ಕೆ ಶುರು ಮಾಡಿದರು. ನಾನು ಯಾಕೆ ಅಂತ ಕೇಳಿದಾಗ ಇಲ್ಲಿ ಮೂರು ದಿನ ಆಯ್ತಷ್ಟೇ. ತಂದೆ ತೀರಿಕೊಂಡರು. ಆ ಹೆಣ್ಣು ಮಕ್ಕಳು ಅಳುವುದನ್ನು ನೋಡಿ ನನಗೆ ಕಣ್ಣಲ್ಲಿ ನೀರು ಬಂದು ಬಿಡ್ತು."

ಸುವರ್ಣ ಗೃಹಮಂತ್ರಿಯ ಉದ್ದೇಶವೇನು?
"ಕನ್ನಡ ಕಿರುತೆರೆಯಲ್ಲಿ ಹೆಣ್ಣು ಮಕ್ಕಳ ತ್ಯಾಗವನ್ನು ಗುರುತಿಸುವ ಕಾರ್ಯಕ್ರಮ ಇದೂವರೆಗೂ ಬಂದಿಲ್ಲ. ನಾವು ಈ ಕಾರ್ಯಕ್ರಮ ಮೂಲಕ ಹೆಣ್ಣು ಮಕ್ಕಳನ್ನ ಗುರುತಿಸಿ, ಅವರನ್ನು ಮಾತಾಡಿಸಿ, ಅವರ ಕುಟುಂಬವನ್ನು ಮಾತಾಡಿಸಿ, ಅವರನ್ನು ಸಿಂಹಾಸನದ ಮೇಲೆ ಕೂರಿಸಿ, ಇವತ್ತು ನಿಮ್ಮನ್ನು ರಾಣಿಯಾಗಿ ಮೆರೆಸುತ್ತೇವೆ ಅಂತ ಆ ಸಂಚಿಕೆಯಲ್ಲಿ ರಾಣಿ ಮಾಡುತ್ತೇವೆ. ಅವರು ಎಷ್ಟು ಖುಷಿ ಪಡುತ್ತಾರೆ ಅಂದರೆ, ಒಂದು ದಿನ ಮಟ್ಟಿಗೆ ರಾಣಿಯಾಗಿದ್ದೇವೆ. ತುಂಬಾ ಸಂತೋಷ ಅಂತ ಹೇಳುತ್ತಾರೆ."
ಮತ್ತೆ ಸಿಲ್ಲಿ ಲಲ್ಲಿ ಹಾಗೇ ಯಾವಾಗ ಕಾಮಿಡಿ ಮಾಡ್ತೀರಾ?
"ಕಿರುತೆರೆಯಲ್ಲಿ ಪ್ರೇಕ್ಷಕರನ್ನು ನಗಿಸಬೇಕು ಅನ್ನೋ ಆಸೆ ಖಂಡಿತಾ ಇದೆ. ನನಗೆ ಆ ರೀತಿಯ ಸ್ಕ್ರಿಪ್ಟ್ ಬೇಕು. ಆತರ ಒಂದು ಟೀಮ್ ಬೇಕು. ಸಿಕ್ಕರೆ ನಾನು ಇವತ್ತೂ ರೆಡಿಯಿದ್ದೇನೆ. ನನ್ನನ್ನು ಪ್ರಮುಖವಾಗಿ ಇಟ್ಟುಕೊಂಡು ಕಾಮಿಡಿ ಸೃಷ್ಟಿ ಮಾಡಿದರೆ, ನಾನು ಅದರ ಜೊತೆ ಹೊಂದಿಕೊಂಡು ಇಡೀ ಕರ್ನಾಟಕದ ಜನರನ್ನು ನಗಿಸುವುದಕ್ಕೆ ರೆಡಿಯಾಗಿದ್ದೇನೆ." ಎಂದು ರವಿಶಂಕರ್ ಗೌಡ ಫಿಲ್ಮಿಬೀಟ್ ಕನ್ನಡಕ್ಕೆ ರಿವೀಲ್ ಮಾಡಿದ್ದಾರೆ.
ಆಟ, ತುಂಟಾಟದ ಜೊತೆ ಮಸ್ತ್ ಮನರಂಜನೆಯ'ಸುವರ್ಣ ಗೃಹಮಂತ್ರಿ'ಯ 500ನೇ ಸಂಚಿಕೆಲ್ಲಿದೆ. ಇಂದು (ಅಕ್ಟೋಬರ್ 27) ಸಂಜೆ 5 ಗಂಟೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಿದ್ದು, ಕಿರುತೆರೆ ವೀಕ್ಷಕರು ಈ ವಿಶೇಷ ಸಂಚಿಕೆಯನ್ನು ಇಷ್ಟ ಪಟ್ಟಿದ್ದಾರೆ.


Click it and Unblock the Notifications











