"ನಿನ್ನದು ಸೀರಿಯಲ್ ಫೇಸ್ ಅಲ್ಲ" ಅಂದವರೇ ಹೆಚ್ಚು; ಆದರೂ ಅಲ್ಲೇ ಯಶಸ್ಸು ಕಂಡಿದ್ದೇಗೆ 'ಆಸೆ' ನಟಿ?
ಕಿರುತೆರೆ ಲೋಕದಲ್ಲಿ ಗುಂಗರೂ ಕೂದಲಿನ ಡ್ರಾಮ ಕ್ವೀನ್ ಅಮೃತಾ ರಾಮಮೂರ್ತಿ. ಕಳೆದ ಒಂದು ದಶಕಗಳಿಂದ ಕಿರುತೆರೆಯಲ್ಲಿ ಮಿಂಚುತ್ತಿರುವ ನಟಿ ಇಂದು 'ಆಸೆ' ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಪುಟ್ಟ ಪಾತ್ರದಿಂದ ನಟನೆ ಆರಂಭಿಸಿದ್ದ ಈ ನಟಿ ನಾಯಕಿ ನಟಿಸುವವರೆಗೂ ಬೆಳೆದು ನಿಂತರು.
ಅಮೃತಾ ರಾಮಮೂರ್ತಿಗೆ ಕಿರುತೆರೆಯ ಸಾಕಷ್ಟು ನಿರ್ದೇಶಕರು "ನಿನ್ನದು ಸೀರಿಯಲ್ ಫೇಸ್ ಅಲ್ಲ" ಅಲ್ಲ ಎಂದಿದ್ದರು. ಆದರೂ ಅದೇ ಕ್ಷೇತ್ರದಲ್ಲಿ ಒಂದು ದಶಕಗಳಿಗೂ ಅಧಿಕ ಕಾಲ ಬ್ಯುಸಿಯಾಗಿದ್ದ ನಟಿ ಫಿಲ್ಮಿಬೀಟ್ ಕನ್ನಡದ ಜೊತೆ ತಮ್ಮ ಜರ್ನಿಯನ್ನು ಹಂಚಿಕೊಂಡಿದ್ದಾರೆ.

ನಿಮ್ಮ ಹಿನ್ನೆಲೆ ಏನು?
"ನಾನು ಜರ್ನಲಿಸಂ ಸ್ಟುಡೆಂಟ್. ಫ್ಯಾಷನ್ ಡಿಸೈನಿಂಗ್ ಕೂಡ ಮಾಡಿದ್ದೀನಿ. ಒಂದಿಷ್ಟು ಕಡೆ ಕೆಲಸ ಮಾಡಿ. ಅದ್ಯಾವುದೂ ನನ್ನ ಆಸಕ್ತಿಯ ಕ್ಷೇತ್ರವಲ್ಲ ಅಂತ ಅನಿಸಿ, ಆಮೇಲೆ ಎಂಟರ್ಟೈನ್ಮೆಂಟ್ ಫೀಲ್ಡ್ಗೆ ಬರಬೇಕು ಅಂತ ಇಲ್ಲಿಗೆ ಬಂದೆ. ಇಲ್ಲಿ ಬಂದು 11 ವರ್ಷ ಆಗಿದೆ. ನಾನು ಬೆಳೆದಿದ್ದೆಲ್ಲ ಬೆಂಗಳೂರಿನಲ್ಲಿ. ಹುಟ್ಟಿದ್ದೆಲ್ಲ ಕುಂದಾಪುರದಲ್ಲಿ. ನಾನು ಮೂಲತ: ಉಡುಪಿಯವಳು."
ಜರ್ನಲಿಸಂಗೂ ಆಕ್ಟಿಂಗ್ಗೂ ಲಿಂಕ್ ಹೇಗೆ?
"ನಾನು ತುಂಬಾ ಇಷ್ಟು ಪಟ್ಟು ಜರ್ನಲಿಸಂ ಮಾಡಬೇಕು ಅಂತ ಹೋಗಿದ್ದಲ್ಲ. ನಾನು ಬ್ಯುಸಿನೆಸ್ ಮ್ಯಾನೇಜ್ಮೆಂಟ್ ಮಾಡಬೇಕು. ಇಲ್ಲ ಚಿತ್ರಕಲಾ ಪರಿಷತ್ ಸೇರಿಕೊಳ್ಳಬೇಕು ಅಂತಿದ್ದೆ. ನನ್ನ ತಂದೆ ತಾಯಿಗೆ ನಾನು ತುಂಬಾ ಚೆನ್ನಾಗಿ ಮಾತಾಡುತ್ತೇನೆ. ಜರ್ನಲಿಸಂಗೆ ಸೇರಿದರೆ ಒಳ್ಳೆಯ ಜರ್ನಿಲಿಸ್ಟ್ ಆಗಹುದು ಅಂತ ಅದಕ್ಕೆ ಸೇರಿದ್ದರು. ಆದರೆ, ನನಗೆ ಈ ಕಡೆ ಆಸಕ್ತಿಯಿರಲಿಲ್ಲ. ನನಗೆ ಚಿಕ್ಕವಳಿದ್ದಾಗ ಸಿನಿಮಾ ನೋಡುವ ಹುಚ್ಚಿತ್ತು. ನನ್ನ ರೂಮಿನ ಬಾಗಿಲು ಹಾಕಿಕೊಂಡು ಕನ್ನಡಿ ಮುಂದೆ ನಿಂತು ಆಕ್ಟಿಂಗ್ ಮಾಡುತ್ತಿದೆ. ಅದನ್ನು ಮಾಡುವಾಗ ಏನೋ ಒಂಥರಾ ಖುಷಿ. ಅದನ್ನು ನೋಡಿ ನನ್ನ ತಾಯಿ ಭರತನಾಟ್ಯಕ್ಕೆ ಹಾಕಿದ್ದರು. ಸಮಯ ಟಿವಿ ಅಂತ ಇತ್ತು. ಅದರಲ್ಲಿ ನಾಲ್ಕು ತಿಂಗಳು ಕೆಲಸ ಮಾಡಿದೆ. ಆ ಮೇಲೆ ಆಗಲಿಲ್ಲ. ಬಳಿಕ ಇದೇ ಸುವರ್ಣ ಎಂಟರ್ಟೈನ್ಮೆಂಟ್ ಚಾನೆಲ್ಗೆ ಕೆಲಸಕ್ಕೆ ಅರ್ಜಿ ಮಾಡಬೇಕು ಅಂತ ನಿರ್ಧಾರ ಮಾಡಿದೆ"

ನಿಮಗೆ ಸೀರಿಯಲ್ ಸಿಕ್ಕಿದ್ದು ಹೇಗೆ?
"ನಮ್ಮ ಮನೆಯ ಪಕ್ಕದವರು ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದರು. ಅವರು ಯಾವುದೋ ಒಂದು ಸೀರಿಯಲ್ ಇದೆಯಂತೆ. ಅದರ ಕಾಸ್ಟಿಂಗ್ ನಡೆಯುತ್ತಿದೆ. ನಿಮಗೆ ಆಸಕ್ತಿ ಇದೆಯೇ ಎಂದು ಕೇಳಿದರು. ನನಗೆ ಸೀರಿಯಲ್ ಮಾಡಬೇಕಾ ಅನ್ನೋ ಪ್ರಶ್ನೆ ಮೂಡಿತ್ತು. ಯಾಕಂದ್ರೆ ನಮ್ಮ ಅಪ್ಪ ಮಿಲಿಟರಿ ಆಫೀಸ್ ಇದ್ದಂತೆ. ನಮ್ಮ ಅಮ್ಮನಿಗೆ ಇಷ್ಟ ಇತ್ತು. ಅದಕ್ಕೆ ಫೋಟೊ ತೆಗೆಸಿ ಕಳಿಸಿದೆ. ಆಮೇಲೆ ಲುಕ್ ಟೆಸ್ಟ್ ಕೊಡಬೇಕು ಅಂತ ಹೇಳಿದರು. ಕೊಟ್ಮೇಲೆ ಆ ಸೀರಿಯಲ್ ಓಕೆ ಆಗುತ್ತೆ. ಅದು ನನ್ನ ಫಸ್ಟ್ ಸೀರಿಯಲ್ 'ಸರಸ್ವತಿ ಲಕ್ಷ್ಮಿ ಪ್ರಿಯೆ ಅಂತ ವನಿತಾ ವಾಸು ಅವರ ಜೊತೆ ನನ್ನ ನಟನಾ ಜರ್ನಿ ಶುರು ಅಂದುಕೊಳ್ಳುತ್ತೆ. ಅಷ್ಟೊತ್ತಿಗೆ ಆ ಸೀರಿಯಲ್ ಬಿಡುವಂತಹ ಪರಿಸ್ಥಿತಿ ಬರುತ್ತೆ."
ಕಿರುತೆರೆಯಲ್ಲಿ ನೀವು ಎದುರಿಸಿದ ಸವಾಲು ಏನು?
"ನಾನು ಮೊದಲ ಸೀರಿಯಲ್ ಮಾಡುವಾಗಲೇ ತೆಲುಗು ಧಾರಾವಾಹಿಯಲ್ಲೂ ನಟಿಸುತ್ತಿದ್ದೆ. ಆದರೆ, ಎರಡೂ ಸೀರಿಯಲ್ ಬಿಡುತ್ತೇನೆ. ಮತ್ತೆ ಕನ್ನಡದಲ್ಲಿಯೇ ಮಾಡೋಣ ಅಂದುಕೊಂಡು 10 ರಿಂದ 12 ಸೀರಿಯಲ್ ಕೊಟ್ಟರೂ ಸೆಲೆಕ್ಟ್ ಆಗುತ್ತಿಲ್ಲ. ಎಲ್ಲ ರಿಜೆಕ್ಟ್ ಮಾಡುತ್ತಿದ್ದರು. ತುಂಬಾ ಎನರ್ಜಿ ಇದೆ. ಆದರೆ ಹೈಟ್ ಕಮ್ಮಿ ಅನ್ನುತ್ತಾರೆ. ಇಂಡಸ್ಟ್ರಿ ಬಿಟ್ಟು ಬಿಡಬೇಕು ಅಂತಿದ್ದೆ. ಬೇರೆ ವೃತ್ತಿ ಆಯ್ಕೆ ಮಾಡೋಣ ಅಂತಿದ್ದೆ. ಆ ಮೇಲೆ ಜೀ ಕನ್ನಡದಲ್ಲಿ ಕರೆಯುತ್ತಾರೆ. ಆಗ ನಾನು 5.1 ಹೈಟ್ ಇದ್ದೀನಿ. ಕರೆಸಿ ರಿಜೆಕ್ಟ್ ಮಾಡುವ ಹಾಗಿದ್ದರೆ ಬರೋದೇ ಇಲ್ಲ ಅಂತೀನಿ. ಬಳಿಕ ಬನ್ನಿ ಅಂತ ಕರೆಸಿಕೊಂಡು 3 ಪೇಜ್ ಡೈಲಾಗ್ ಕೊಟ್ಟಿದ್ದರು. ಡ್ಯಾನ್ಸ್ ಬಿಟ್ಟು ಬೇರೆ ಏನೂ ಬರುತ್ತಿರಲಿಲ್ಲ. ಹೀಗೆ ಆ ಸೀರಿಯಲ್ಗೆ ಸೆಲೆಕ್ಟ್ ಆಗುತ್ತೇನೆ. ಅದುವೇ ಮೇಘ ಮಯೂರಿ. ಈ ಸೀರಿಯಲ್ನಿಂದ ಜನಪ್ರಿಯತೆ ಸಿಕ್ಕಿದ್ದು ಈ ಧಾರಾವಾಹಿಯಿಂದಲೇ."

ನಿಮಗೆ ಬ್ರೇಕ್ ಕೊಟ್ಟಿ ಸೀರಿಯಲ್ ಯಾವುದು?
"ಮಯೂರಿ ಬಳಿಕ ಜೀ ಕನ್ನಡಕ್ಕೆ 'ಮಿಸ್ಟರ್ ಅಂಡ್ ಮಿಸ್ಸಸ್ ರಂಗೇಗೌಡ' ಇನ್ನೊಂದು ಸೀರಿಯಲ್ ಮಾಡಿದೆ. ಅಲ್ಲಿಯೇ ನನಗೆ ನನ್ನ ಲೈಫ್ ಪಾರ್ಟ್ನರ್ ಸಿಕ್ಕಿರೋದು. ಆ ಸೀರಿಯಲ್ ಮಾಡುವಾಗ ಪ್ರೀತಿ ಹುಟ್ಟಿರಲಿಲ್ಲ. ಆ ಮೇಲೆ ನಮ್ಮ ಪ್ರೀತಿ ಶುರುವಾಗಿತ್ತು. ಆಮೇಲೆ ಕಲರ್ಸ್ಗೆ ಮಾಡಿದ ಸೀರಿಯಲ್ ಕುಲವಧು ದೊಡ್ಡ ಬ್ರೇಕ್ ಕೊಡ್ತು. ನಾಲ್ಕೂವರೆ ವರ್ಷ ಆ ಸೀರಿಯಲ್ ಮಾಡಿದೆ. ಇದರೊಂದಿಗೆ 'ಕುಟುಂಬ ಗೌರವಂ' ಅಂತ ತೆಲುಗು ಸೀರಿಯಲ್ ಕೂಡ ಮಾಡಿದೆ. ಅದು ತುಂಬಾ ದಿನ ಬರಲಿಲ್ಲ. ಬಳಿಕ ಕಸ್ತೂರಿ ನಿವಾಸ ಸೀರಿಯಲ್ ಮಾಡಿದೆ. ಆಗ ನಾನು ಕನ್ಸೀವ್ ಆಗಿದ್ದರಿಂದ ಕೆಲಸ ಮಾಡುವುದಕ್ಕೆ ಆಗುತ್ತಿರಲಿಲ್ಲ. ಹೀಗಾಗಿ ಆ ಧಾರಾವಾಹಿಯನ್ನು ಬಿಡಬೇಕಾಯ್ತು."
ಮದುವೆ ಬಳಿಕ ನಟನಾ ಜರ್ನಿ ಹೇಗಿದೆ?
"ನನಗೆ ಮಗುವಾಗಿ ಎರಡೂವರೆ ತಿಂಗಳು ಇರಬೇಕಾದರೆ ಇನ್ನೊಂದು ಸೀರಿಯಲ್ ಕೆಂಡ ಸಂಪಿಗೆ ಒಪ್ಪಿಕೊಳ್ಳುತ್ತೇನೆ. ದೇವರ ದಯೆಯಿಂದ ಎಂಟು ತಿಂಗಳು ಮುಂದಕ್ಕೆ ಹೋಗುತ್ತೆ. ನನಗೆ ಒಂದು ವರ್ಷ ಆದರೂ ನನ್ನ ಮಗಳಿಗೆ ಫೀಡ್ ಮಾಡಿ, ನೋಡಿಕೊಳ್ಳಬೇಕು ಅಂತಿತ್ತು. 11 ತಿಂಗಳು ಅವಳನ್ನು ನೋಡಿಕೊಂಡಿದ್ದೆ. ಅದು ಲಾಂಚ್ ಆಯ್ತು. ಅದು ನಾನು ಖಳನಾಯಕನಾಗಿ ನಟಿಸಿದ ಮೊದಲ ಸೀರಿಯಲ್."

'ಆಸೆ'ಯ ರೋಹಿಣಿ ಪಾತ್ರದ ಬಗ್ಗೆ ಏನಂತೀರಾ?
"ಈಗ ಆಸೆ ಸೀರಿಯಲ್ ಮಾಡುತ್ತಿದ್ದೇನಲ್ಲ. ಅದನ್ನು ನೆಗೆಟಿವ್ ಅಂತ ಹೇಳುವುದಿಲ್ಲ. ಇದು ಸಂದರ್ಭದಕ್ಕೆ ತಕ್ಕಂತೆ ರಿಯಾಕ್ಟ್ ಮಾಡುವಂತಹ ಪಾತ್ರ. ಈ ಸೀರಿಯಲ್ನಲ್ಲಿ ಯಾರೂ ಪಾಸಿಟಿವ್ ಇಲ್ಲ. ಯಾರೂ ನೆಗೆಟಿವ್ ಇಲ್ಲ. ಆ ಸಂದರ್ಭಕ್ಕೆ ಹೇಗೆ ಬರುತ್ತೋ ಹಾಗೆ ರಿಯಾಕ್ಟ್ ಮಾಡುತ್ತಿರುತ್ತಾರೆ. ಈ ರೋಹಿಣಿ ಪಾತ್ರಕ್ಕೆ ಒಂದು ಹಿನ್ನೆಲೆಯಿದೆ. ಈ ಪಾತ್ರ ಸಣ್ಣ ವಯಸ್ಸಿನಲ್ಲಿ ಮದುವೆ ಮಾಡಿಕೊಟ್ಟಿರುವ ಹೆಣ್ಣು ಮಕ್ಕಳನ್ನು ಪ್ರತಿನಿಧಿಸುತ್ತೇನೆ. ಈ ಸೀರಿಯಲ್ನಲ್ಲಿ ಗಂಡು ದಿಕ್ಕು ಇಲ್ಲ ಅಂತ ಯಾರೋ ಬಬ್ಬ ವೃದ್ಧನಿಗೆ ಮದುವೆ ಮಾಡಿಕೊಟ್ಟಿರುತ್ತಾರೆ. ಏನೂ ಮಾಡಲಾಗದೆ ಜೀವನ ಮಾಡುತ್ತಿರುತ್ತಾಳೆ. ಮಗುನ ತಾಯಿ ಬಳಿ ಬಿಟ್ಟು. ಬದುಕು ಕಟ್ಟಿಕೊಳ್ಳುವುದಕ್ಕೆ ಸಿಟಿಗೆ ಬಂದು ಬ್ಯುಟಿ ಪಾರ್ಲರ್ ನಡೆಸುತ್ತಿರುತ್ತಾಳೆ. ಈ ವೇಳೆ ಇನ್ನೊಂದು ಮದುವೆಗೆ ಒಪ್ಪಿಕೊಳ್ಳುತ್ತಾಳೆ. ಈ ವೇಳೆ ಆಗಲೇ ಒಂದು ಮದುವೆ ಆಗಿದೆ ಅನ್ನೋದನ್ನು ಹೇಳದೆ ಮದುವೆ ಆಗುತ್ತಾಳೆ. ಅದು ಅವಳ ತಪ್ಪು. ಅದು ಈಗ ನಡೆಯುತ್ತಿದೆ. ಈ ಆಸೆ ಸೀರಿಯಲ್ನಲ್ಲಿ ಎಲ್ಲಾ ಪಾತ್ರಗಳಿಗೂ ಒಂದು ಆಸೆ ಇರುತ್ತೆ. ರೋಹಿಣಿ ಪಾತ್ರ ಹೇಳಿರುವ ಸುಳ್ಳನಿಂದ ಸಾಕಷ್ಟು ಅನುಭವಿಸುತ್ತಿದ್ದಾಳೆ. ಈ ಪಾತ್ರ ಶುರು ಮಾಡಿದ ಮೇಲೆ ಇಂತಹ ಪರಿಸ್ಥಿತಿಯಲ್ಲಿರುವ ಹೆಣ್ಣು ಮಕ್ಕಳು ಇದ್ದಾರೆ ಅಂತ ಗೊತ್ತಾಯ್ತು. ಹಾಗಾಗಿ ನನಗೆ ಈ ಪಾತ್ರ ಮಾಡುತ್ತಿರುವುದಕ್ಕೆ ಖುಷಿ ಕೊಟ್ಟಿದೆ."
ಸಿನಿಮಾದಲ್ಲಿ ನಟಿಸಲಿಲ್ಲವೇ?
"ನನಗೆ ನಿನ್ನದು ಸೀರಿಯಲ್ ಫೇಸ್ ಅಲ್ಲ ಅಂತ ಹೇಳುತ್ತಿದ್ದರು. ನಿನ್ನ ಮುಖ ಸೀರಿಯಲ್ಗೆ ಸೂಟ್ ಆಗುವುದಿಲ್ಲ ಅಂತಿದ್ದರು. ಸಾಕಷ್ಟು ನಿರ್ದೇಶಕರು ಈ ಮಾತು ಹೇಳಿದ್ದರು. ಆದರೆ, ನನಗೆ ಮೊದಲು ಅವಕಾಶ ಬಂದಿದ್ದೇ ಸಿನಿಮಾದಿಂದ. ಪಲ್ಲವಿ ಟಾಕೀಸ್ ಅಂತ ಒಂದು ಸಿನಿಮಾ ಬರುತ್ತೆ. ಆ ಸಿನಿಮಾವನ್ನು ನಾನು ಮಾಡುತ್ತೇನೆ. ಆದರೆ, ಅದು ಥಿಯೇಟರ್ಗೆ ಬರಲಿಲ್ಲ. ಈಗ ಯೂಟ್ಯೂಬ್ನಲ್ಲಿ ಲಭ್ಯವಿದೆ."
ಸಿನಿಮಾ ಆಫರ್ ಬರುತ್ತಿದೆಯಾ?
"ಈಗ ಮತ್ತೆ ಹೀರೋಯಿನ್ ಆಗಿ ಆಫರ್ ಬರುತ್ತಿದೆ. ಅಂದರೆ, ಪಾತ್ರಕ್ಕೆ ತಕ್ಕಂತೆ ಬರುತ್ತಿದೆ. ಶೀಘ್ರದಲ್ಲಿಯೇ ಒಂದು ಸಿನಿಮಾವನ್ನು ಅನೌನ್ಸ್ ಮಾಡುತ್ತಿದ್ದೇನೆ. ಮುಂದೆ ಏನಾಗುತ್ತೆ ಅನ್ನೋದನ್ನು ನೋಡೋಣ. ಬೇರೆ ಬೇರೆ ಕಡೆಯಿಂದ ಆಫರ್ ಬರುತ್ತಿದೆ. ಆದರೆ ಕನ್ನಡದಲ್ಲಿಯೇ ಉಳಿದು ಕೊಳ್ಳಬೇಕು ಅಂತ ಇದ್ದೀನಿ. ನೋಡೋಣ ಅದು ನಿಮ್ಮ ಸಂದರ್ಶನದಿಂದಲೇ ಶುರುವಾಗಬಹುದೇನೋ.."


Click it and Unblock the Notifications











