ಮತ್ತೆ ಬಂದ್ರು 'ಭಾನುವಾರದ ಬಾಡೂಟ'ದ ರಂಗೇಗೌಡ್ರು; ನಾಟಿಯಿಂದ ಇಂಟರ್ನ್ಯಾಷನಲ್ವರೆಗೆ 'ಬೊಂಬಾಟ್ ಬಾಡೂಟ'
ನಾನ್ ವೆಜ್ ಪ್ರಿಯರ ಬಾಯಲ್ಲಿ 'ಭಾನುವಾರದ ಬಾಡೂಟ' ಅನ್ನೋ ಪದ ಆಗಾಗ ಬರ್ತಾನೇ ಇರುತ್ತೆ. ಇದೇ ಹೆಸರಿನ ಒಂದು ಕುಕ್ಕಿಂಗ್ ಶೋ ಸುಮಾರು 11 ವರ್ಷಗಳ ಕಾಲ ಪ್ರಸಾರ ಆಗಿತ್ತು. ಭಾನುವಾರ ನಾನ್ ವೆಜ್ ಇಷ್ಟ ಪಡುವವರು ಈ ಶೋಗಾಗಿ ಕಾದು ಕೂರುತ್ತಿದ್ದರು. ಈ ಶೋ ಪರಿಚಯ ಇರೋರಿಗೆ ರಂಗೇಗೌಡರು ಕೂಡ ಪರಿಚಯ ಇದ್ದೇ ಇರುತ್ತೆ. ಅವರ ನಾನ್ ವೆಜ್ ರೆಸಿಪಿಗಳು ನಿಮಗೆ ಇಷ್ಟ ಆಗಿರುತ್ತೆ.
ಅಂದ್ಹಾಗೆ ಈ ಶೆಫ್ ಕಿರುತೆರೆಯಲ್ಲಿ ಬಾಡೂಟದ ರಂಗೇಗೌಡ್ರು ಎಂದೇ ಫೇಮಸ್. ಅಸಲಿಗೆ ಇವರ ಹೆಸರು ರಂಗೇಗೌಡರು ಅಲ್ಲ. ಇವರ ಮೂಲ ಹೆಸರು ಆದರ್ಶ್ ತಟಪತಿ. ಬರೊಬ್ಬರಿ ನಾಲ್ಕು ವರ್ಷಗಳ ಬಳಿಕ ಮತ್ತೆ ಕಿರುತೆರೆಯಲ್ಲಿ ನಾನ್ ವೆಜ್ ಪ್ರಿಯರ ಬಾಯಲ್ಲಿ ನೀರು ತರಿಸುವುದಕ್ಕೆ ಮರಳಿದ್ದಾರೆ. ಸ್ಟಾರ್ ಸುವರ್ಣದಲ್ಲಿ 'ಬೊಂಬಾಟ್ ಬಾಡೂಟ' ಕಾರ್ಯಕ್ರಮ ಪ್ರತಿ ಶನಿವಾರ ಮಧ್ಯಾಹ್ನ 12 ಗಂಟೆಗೆ ಪ್ರಸಾರ ಆಗುತ್ತಿದೆ.

ಇವರು ಸಿದ್ದ ಪಡಿಸುವ ಅಡುಗೆಯಷ್ಟೇ ಇವರ ಲೈಫ್ ಕೂಡ ಅಷ್ಟೇ ಮಜವಾಗಿದೆ. ಐಐಟಿಯಿಂದ ಅಂತರಾಷ್ಟ್ರೀಯ ಮಟ್ಟದ ಶೆಫ್ ಆಗುವವರೆಗೆ ಇವರ ಜರ್ನಿ ಸಖತ್ ಇಂಟ್ರೆಸ್ಟಿಂಗ್. ತಮ್ಮ ಜರ್ನಿಯ ಬಗ್ಗೆ ಸ್ವತ: ಬಾಡೂಟದ ರಂಗೇಗೌಡ್ರು ಉರ್ಫ್ ಶೆಫ್ ಆದರ್ಶ್ ತಟಪತಿ ಫಿಲ್ಮಿಬೀಟ್ ಕನ್ನಡ ಜೊತೆ ಹಂಚಿಕೊಂಡಿದ್ದಾರೆ. ಅವರ ಬಾಡೂಟದ ಜರ್ನಿ ಹೇಗೆ ಶುರುವಾಯ್ತು ಅನ್ನೋದನ್ನು ಕೇಳೋಣ.
ರಂಗೇಗೌಡರು ಮೂಲತ: ಎಲ್ಲಿಯವರು?
"ನಾನು ಹುಟ್ಟಿದ್ದು ಗದಗ ಜಿಲ್ಲೆಯ ಲಕ್ಷ್ಮೇಶ್ವರ. ಬೆಳೆದಿದ್ದು ಹುಬ್ಬಳಿಯಲ್ಲಿ. ನನ್ನ ತಂದೆ ಎಂಜಿನಿಯರ್ ಆಗಿದ್ದರಿಂದ ಅವರಿಗೆ ಎಲ್ಲೆಲ್ಲಿ ವರ್ಗಾವಣೆ ಆಗುತ್ತಿತ್ತೋ ಅಲ್ಲಿಗೆ ಹೋಗುತ್ತಿದ್ದೆವು. ಶಿರಸಿ, ಮಂಗಳೂರಿನಲ್ಲೂ ನನ್ನ ವಿದ್ಯಾಭ್ಯಾಸ ಆಗಿದೆ''.
ಶೆಫ್ ಆಗಬೇಕು ಅಂತ ಅನಿಸಿದ್ದು ಯಾಕೆ?
"ಪಿಯುಸಿ ಬಳಿಕ ನಾನು ಐಐಟಿಗೆ ಹೋಗಬೇಕು ಅಂತ ಪ್ರಿಪೇರ್ ಆಗುತ್ತಿದ್ದೆ. ಅದಕ್ಕೆ ಅಭ್ಯಾಸ ನಡೆಸಿ ರಿಸಲ್ಟ್ ಬಂದಾಗ ನನಗೆ ಟೈಫಾಯ್ಡ್ ಆಗಿತ್ತು. ಹೀಗಾಗಿ ಆರು ತಿಂಗಳು ಎಲ್ಲೂ ಹೋಗುವುದಕ್ಕೆ ಆಗುತ್ತಿರಲಿಲ್ಲ. ಈ ವೇಳೆ ನನ್ನ ಫ್ರೆಂಡ್ ಅಣ್ಣ ಶೆಫ್ ಆಗಿದ್ದರು. ಅವರನ್ನು ಭೇಟಿ ಮಾಡಿದಾಗ, ಅವರು ಹಾಕುತ್ತಿದ್ದ ಶೆಫ್ ಕೋಟ್ ನೋಡಿ ನನಗೂ ಹಾಗೇ ಆಗಬೇಕು ಅಂತ ಅನಿಸಿತ್ತು. ಅವರಿಗೆ ಏನಾದರೂ ಅವಕಾಶವಿದೆಯಾ ಅಂತ ಕೇಳಿದೆ. ಆಗ ಜೋಧ್ಪುರದ ಐಟಿಸಿ ಪ್ಯಾಲೆಸ್ಗೆ ಸೇರಿಕೊಂಡೆ. ಮೊದಲು ನನಗೆ ಪಾತ್ರೆ ತೊಳೆಯುವ ಕೆಲಸ ಕೊಟ್ಟಿದ್ದರು. ಸುಮಾರು ಒಂದೂವರೆ ವರ್ಷ ಅದೇ ಕೆಲಸ ಮಾಡಿದೆ''

ನೀವು ವಿದೇಶಕ್ಕೆ ಹೋಗಿದ್ದು ಹೇಗೆ?
"ಶೆಫ್ಗಳು ಅವರ ರೆಸಿಪಿಗಳನ್ನು ಹೇಳಿಕೊಡಲ್ಲ. ನಾನು ನೋಡಿ ನೋಡಿ ಕಲಿತಿದ್ದೆ. ನನಗೆ ಗಲ್ಫ್ ದೇಶದ ಬಹರೇನ್ನಲ್ಲಿದ್ದ ಶೆರಟನ್ ಹೋಗುವ ಅವಕಾಶ ಬಂತು. ಅಲ್ಲಿ ಕೋಮಿ 3 ಲೆವೆಲ್ನಲ್ಲಿ ಕೆಲಸ ಸಿಕ್ತು. ಅಲ್ಲಿಂದ ಜರ್ಮನ್ ಎಂಬಸಿಯ ರಾಯಲ್ ಕಿಚನ್ಗೆ ಸಂದರ್ಶನ ನಡೀತಿತ್ತು. ಅಲ್ಲಿಗೆ ಬಂದಿದ್ದ ರಾಯಭಾರಿಗಳು ನನ್ನ ಅಡುಗೆಯನ್ನು ಇಷ್ಟ ಪಟ್ಟರು. ಅಲ್ಲಿಂದ ಜರ್ಮನಿಯ ಈಗಿನ ಬರ್ಲಿನ್ಗೆ ಹೋದೆ. ಅಲ್ಲಿ ಸುಮಾರು ವರ್ಷ ಕೆಲಸ ಮಾಡಿದೆ. ಆಮೇಲೆ ಕೋಸ್ಟಾ ಕೊಜ್ಲೈನ್ಸ್ ಇಟಲಿಗೆ ಹೋದೆ. ಇಲ್ಲಿ ಕೆಲಸ ಮಾಡಿದ ಬಳಿಕ ಒಂದು ವರ್ಷ ಬ್ರೇಕ್ ತೆಗೆದುಕೊಂಡೆ. ಆಮೇಲೆ ಮತ್ತೆ ಯುಕೆಗೆ ಹೋದೆ."
ಕಿರುತೆರೆಗೆ ಬರಬೇಕು ಅನಿಸಿದ್ದೇಕೆ?
"ತಂದೆ ತಾಯಿಯ ಜೊತೆಗೆ ಇರಬೇಕಿತ್ತು. ಹಾಗಾಗಿ ವಾಪಸ್ ಬಂದೆ. ಇಲ್ಲಿಗೆ ಬಂದ್ಮೇಲೆ ಟಿವಿಯಲ್ಲಿ ಕೈ ಚಳಕ ಯಾಕೆ ತೋರಿಸಬಾರದು ಅಂತ ದೂರದರ್ಶನಕ್ಕೆ ಹೋಗಿ ಕೇಳಿದೆ. ಅವರು ಅವಕಾಶ ಕೊಟ್ಟರು. ಅಲ್ಲಿ ಎರಡು ಎಪಿಸೋಡ್ ಮಾಡಿದೆ. ಅದಾದ್ಮೇಲೆ ಜೀ ಕನ್ನಡ ಅವಕಾಶ ಕೊಡ್ತು. 'ರುಚಿ ಅಭಿರುಚಿ' ಅನ್ನೋ ಕಾರ್ಯಕ್ರಮ ಮಾಡಿದೆ. ಅದೂ ಹಿಟ್ ಆಯ್ತು. ಅದಾದ್ಮೇಲೆ ಕಸ್ತೂರಿಯಲ್ಲಿ 'ಭಾನುವಾರದ ಬಾಡೂಟ'ಕ್ಕೆ ಅವಕಾಶ ಸಿಕ್ತು"
ನೀವು ರಂಗೇಗೌಡರು ಆಗಿದ್ದು ಹೇಗೆ?
"ಕಸ್ತೂರಿಯಲ್ಲಿ ಭಾನುವಾರದ ಬಾಡೂಟ ಮಾಡುವಾಗ ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿಯವರು ಚರ್ಚೆ ಮಾಡಿದ್ದರು. ಮಂಡ್ಯ, ಮೈಸೂರು ಭಾಗದಲ್ಲಿ ಗೌಡರು ಹೆಚ್ಚಿದ್ದರಿಂದ ಅವರಿಗೆ ಕನೆಕ್ಟ್ ಆಗುವ ಹಾಗೇ ಒಂದು ಹೆಸರು ಬೇಕು ಅಂತಿದ್ದರು. ಆಗ ಕಾರ್ಯಕ್ರಮಕ್ಕೆ ಅಂತ ರಂಗೇಗೌಡರು ಅಂತ ಪರಿಚಯ ಮಾಡಿದರು. ಬಳಿಕ ಅದೇ ಹೆಸರಿನಿಂದ ನನ್ನನ್ನು ಗುರುತಿಸುವುದಕ್ಕೆ ಆರಂಭಿಸಿದರು."

ಬಾಡೂಟ ನಿಮ್ಮಿಂದಲೇ ಫೇಮಸ್ ಆಗಿದ್ದಾ?
"ಭಾನುವಾರದ ಬಾಡೂಟ ಮಾಡುವಾಗ ಕಾರ್ಯಕ್ರಮದಲ್ಲಿ 'ತಟ್ಟೆಗೆ ಹಾಕೊಳ್ಳಿ ಬ್ಯಾಟಿಂಗ್ ಶುರು ಮಾಡಿಕೊಳ್ಳಿ' ಎಂದು ನಾನು ಹೇಳುತ್ತಿದ್ದೆ. ಅದು ಎಲ್ಲರಿಗೂ ಇಷ್ಟ ಆಯ್ತು. ಆ ನಂತರ ಈ ಕಾರ್ಯಕ್ರಮ ಫೇಮಸ್ ಆಗುತ್ತಿದ್ದಂತೆ ನಾನ್ ವೆಜ್ ರೆಸ್ಟೋರೆಂಟ್ಗಳು ಭೀಗರ ಮನೆ ಬಾಡೂಟ, ನಾನ್ ವೆಜ್ ಬಾಡೂಟ ಅಂತ ಇಡುವುದಕ್ಕೆ ಶುರು ಮಾಡಿದರು. ಈಗಲೂ ಅಂತಹದ್ದೇ ಸಾಕಷ್ಟು ಹೆಸರುಗಳನ್ನು ನೋಡಬಹುದು."
ನಾಲ್ಕು ವರ್ಷ ಗ್ಯಾಪ್ ಕೊಟ್ಟಿದ್ದು ಯಾಕೆ?
"2020ರಲ್ಲಿ ಭಾನುವಾರದ ಬಾಡೂಟ ಮುಗೀತು ಹೆಚ್ಚು ಕಡಿಮೆ 11 ವರ್ಷಗಳ ಕಾಲ ಈ ಕಾರ್ಯಕ್ರಮ ನಡೀತು. ಅದೇ ವೇಳೆ ನನ್ನ ತಂದೆ ಅನಾರೋಗ್ಯದಿಂದ ನಿಧನರಾದರು. ಅವರನ್ನು ನಾನು ತುಂಬಾನೇ ಹಚ್ಚಿಕೊಂಡಿದೆ. ಅವರ ನಿಧನದಿಂದ ಖಿನ್ನತೆಗೆ ಒಳಗಾಗಿದ್ದೆ. ಒಂದು ವರ್ಷ ಏನನ್ನೂ ಮಾಡುವುದಕ್ಕೆ ಹೋಗಲಿಲ್ಲ. ಈಗ ಅದೆಲ್ಲದರಿಂದ ಹೊರಬಂದು ಮತ್ತೆ ಏನಾದರೂ ಮಾಡೋಣ ಅಂದುಕೊಂಡ ಸ್ಟಾರ್ ಸುವರ್ಣದವರು ಬೊಂಬಾಟ್ ಬಾಡೂಟದ ಬಗ್ಗೆ ಆಫರ್ ಕೊಟ್ಟರು. ಕಾನ್ಸೆಪ್ಟ್ ವಿನೂತನವಾಗಿದ್ದರಿಂದ ಒಪ್ಪಿಕೊಂಡೆ."
ಬೊಂಬಾಟ್ ಬಾಡೂಟದಲ್ಲಿ ಏನು ಸ್ಪೆಷಲ್ ಇರುತ್ತೆ?
"ವೀಕ್ಷಕರಿಗೆ ಅಡುಗೆ ಮೂಲಕ ಮತ್ತೆ ಕನೆಕ್ಟ್ ಆಗಬೇಕು. ಸಿಂಪಲ್ ಆಗಿ ಮನೆಯಲ್ಲಿರುವ ಪದಾರ್ಥವನ್ನೇ ಬಳಸಿಕೊಂಡು ಅಡುಗೆ ಮಾಡುವುದು ನನ್ನ ಶೈಲಿ. ಹೀಗಾಗಿ ನಾಟಿ ಶೈಲಿಯ ನಾನ್ ರೆಸಿಪಿಗಳನ್ನು ಮಾಡಿ ತೋರಿಸಲಿದ್ದೇನೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಅಲ್ಲಿನ ಜನರು ಇಷ್ಟ ಪಡುವ ಜನಪ್ರಿಯ ನಾನ್ ಅಡುಗೆ ಬೊಂಬಾಟ್ ಭೋಜನದಲ್ಲಿ ಇರುತ್ತೆ."


Click it and Unblock the Notifications











