"ನಮ್ಮದು ಅಂಕಲ್-ಆಂಟಿ ಲವ್ ಸ್ಟೋರಿ ಅನ್ನೋರು"; ಈ ಬಾರಿನೂ ನಮ್ಮಂತಹದ್ದೇ ಜೋಡಿ ಬರಬಹುದು
ಬಿಗ್ ಬಾಸ್ ಕನ್ನಡ ಸೀಸನ್ 12 ಅದ್ಧೂರಿಯಾಗಿ ಶುರುವಾಗಿತ್ತು. ಮೊದಲ ವಾರದ ಎಲಿಮಿನೇಷನ್ ಪ್ರಕ್ರಿಯೆ ನಡೆದು ಇಬ್ಬರ ಸ್ಪರ್ಧಿಗಳು ಮನೆಯಿಂದ ಹೊರಗೆ ಬಂದಿದ್ದಾರೆ. ಇದೇ ವೇಳೆ ಬಿಗ್ ಬಾಸ್ಗೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಶಾಕ್ ಕೊಟ್ಟಿದೆ. ಪರಿಸರ ನಿಯಮ ಉಲ್ಲಂಘನೆ ಮಾಡಿರುವ ಆರೋಪದ ಮೇಲೆ ಜಾಲಿವುಡ್ ಸ್ಟುಡಿಯೋವನ್ನು ಸೀಲ್ಡೌನ್ ಮಾಡಲಾಗಿದೆ. ಹೀಗಾಗಿ ಕೋವಿಡ್ ಬಿಟ್ಟರೆ, ಬಿಗ್ ಬಾಸ್ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಶೋ ನಿಂತಿದೆ.
ಹಾಗಂತ ಬಿಗ್ ಬಾಸ್ ಶೋ ಬಗ್ಗೆ ಕ್ರೇಜ್ ಏನೂ ಕಮ್ಮಿಯಾಗಿಲ್ಲ. ಬಹುಶ: ಆಗುವುದೂ ಇಲ್ಲ. ಬಿಗ್ಬಾಸ್ ಸೀಸನ್ 12 ಇನ್ನೂ ಆರಂಭದ ಹಂತದಲ್ಲಿದೆ. ಈ ವೇಳೆ ಬಿಗ್ ಬಾಸ್ ಕನ್ನಡ 11ರ ಸ್ಪರ್ಧಿ ಹಾಗೂ ನಟಿ ಹಂಸ ಪ್ರತಾಪ್ ಫಿಲ್ಮಬೀಟ್ ಕನ್ನಡ ಜೊತೆ ಬಿಗ್ ಬಾಸ್ ಶೋ, ಸೀಸನ್ 12, ಲಾಯರ್ ಜಗದೀಶ್ ಜೊತೆ ಸೇರಿ ಪ್ರೇಕ್ಷಕರನ್ನು ರಂಜಿಸಿದ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಹಾಗೇ ಜಗದೀಶ್ ಹಾಗೂ ಹಂಸ ಜೋಡಿಯಲ್ಲಿ ಅಂಕಲ್-ಆಂಟಿ ಲವ್ ಸ್ಟೋರಿ ಅಂತ ವೀಕ್ಷಕರು ಮೆಚ್ಚಿಕೊಂಡಿದ್ದನ್ನು ನೆನೆಪು ಮಾಡಿಕೊಂಡಿದ್ದಾರೆ. ಹಾಗಿದ್ದರೆ, ಬಿಗ್ ಬಾಸ್ ಬಗ್ಗೆ ಏನು ಮಾತಾಡಿದ್ದಾರೆ? ಇಲ್ಲಿದೆ ಒಂದು ಝಲಕ್.

ನಿಮ್ಮ ದೃಷ್ಠಿಯಲ್ಲಿ ಬಿಗ್ ಬಾಸ್ ಅಂದ್ರೇನು?
"ಬಿಗ್ ಬಾಸ್ ಶೋ ಅಂದರೆ ಜಗಳ ಆಡ್ಬೇಕು. ಇಲ್ಲಾ ಒಬ್ಬರಿಗೊಬ್ಬರು ಜೋಡಿಯಾಗಬೇಕು. ಲವ್ ಮಾಡಬೇಕು. ಅದು ನಿಜಾನೋ ಸುಳ್ಳೋ? ಒಟ್ನಲ್ಲಿ ಅದು ಜನರಿಗೆ ಲವ್ ತರ ಕಾಣಿಸಬೇಕು. ಫ್ಲರ್ಟ್ ಮಾಡಬೇಕು ಅಂತ ಎಕ್ಸ್ಪೆಕ್ಟೇಷನ್ ಇರುತ್ತೆ. ಅದನ್ನೇ ಸ್ಪರ್ಧಿಗಳು ಕೂಡ ಪ್ರೆಸೆಂಟ್ ಮಾಡುತ್ತಾರೆ. ಬಿಗ್ ಬಾಸ್ ಟೀಮ್ ಡೈರೆಕ್ಟ್ ಆಗಿ ಹೀಗೆ ಮಾಡಬೇಕು. ಹಾಗೇ ಮಾಡಬೇಕು ಅಂತೇನು ಹೇಳುವುದಿಲ್ಲ. ಎಲ್ಲಾ ಸೀಸನ್ ನೋಡ್ಕೊಂಡು ಬಂದಿದ್ದರಿಂದ ಫಿನಾಲೆಗೆ ಬಂದವರು ಏನು ಮಾಡಿದರು? ಅಂತ ಕೇಳಿದರೆ, ಜಗಳ ಮಾಡಿದರು ಅಂತಾನೇ ಹೇಳಬೇಕು."
ಬಿಗ್ ಬಾಸ್ ಮನೆಗೆ ಹೇಗೆ ಹೋಗ್ಬೇಕು?
"ನಾನು ಬಿಗ್ ಬಾಸ್ ಅನ್ನು ತುಂಬಾ ಏನೂ ಫಾಲೋ ಮಾಡಿರಲಿಲ್ಲ. ಕೆಲವರು ತೆಲುಗು, ತಮಿಳು, ಹಿಂದಿ ಎಲ್ಲವನ್ನೂ ನೋಡಿಕೊಂಡು ಬಂದಿದ್ದರು. ಅವರು ಮೆಂಟಲಿ ಪ್ರಿಪೇರ್ ಆಗಿ ಬಂದಿದ್ದರು. ಮನೆಯೊಳಗೆ ಹೇಗೆ ಇರಬೇಕು? ಹೇಗೆ ಸ್ಪರ್ಧೆ ಮಾಡಬೇಕು. ಸ್ಟ್ರಾಂಗ್ ಆಗಿರುವವರ ಜೊತೆ ಹೇಗೆ ಇರಬೇಕು ಅನ್ನೋದೆಲ್ಲ ನೋಡಿಕೊಂಡು ಬಂದಿರುವವರೂ ಇದ್ದರು. ನನ್ನ ಹಾಗೆ ಏನೋ ತಯಾರಿ ನಡೆಸದೆ ಹೋದವರೂ ಇದ್ದಾರೆ. ಆದರೆ, ಪ್ರಿಪೇರ್ ಆಗಿ ಹೋದರೇ ಉತ್ತಮ."
ಮನೆಯೊಳಗೆ ಹೋದಾಗ ನಿಮ್ಮ ಅನುಭವ
"ನಾನು ನೇರವಾಗಿ ಮಾತಾಡುತ್ತೇನೆ. ಆದರೆ, ನನಗೆ ಮನೆಯೊಳಗೆ ಹೋದಾಗ ಬೇರೆಯವರು ನೋವಾಗುವಂತೆ ಮಾತಾಡಿದಾಗ ಬೇಜಾರು ಆಗುತ್ತಿತ್ತು. ಹೀಗಾಗಿ ಮಾನಸಿಕವಾಗಿ ತಯಾರಿ ಮಾಡಿಕೊಂಡೇ ಹೋಗಬೇಕು. ಯಾಕಂದ್ರೆ, ಇಲ್ಲಿ ನಿಮ್ಮ ವೈಯಕ್ತಿಕ ವಿಚಾರಗಳ ಬಗ್ಗೆ ಮಾತಾಡುತ್ತಾರೆ. ನಿಮ್ಮ ವೃತ್ತಿ ಜೀವನದ ಬಗ್ಗೆ ಮಾತಾಡುತ್ತಾರೆ. ಅವರ ಉದ್ದೇಶ ಏನಾಗಿರುತ್ತೆ ಅಂದರೆ, ನಿಮ್ಮನ್ನು ವೀಕ್ ಮಾಡಿ ಹೊರಗೆ ಕಳಿಸಬೇಕು ಅಂತಿರುತ್ತೆ."

ನಿಮ್ಮ ಜಗದೀಶ್ ಕೆಮಿಸ್ಟ್ರಿ ವರ್ಕ್ ಆಗಿದ್ದೇಗೆ?
"ಒಳಗಡೆ ಇರುವಾಗ ನನಗಾಗಲಿ ಜಗದೀಶ್ ಅವರಿಗಾಗಲಿ, ಇಷ್ಟೊಂದು ಸದ್ದು ಮಾಡುತ್ತಿದ್ದೇವೆ ಅನ್ನೋ ಐಡಿಯಾನೇ ಇರಲಿಲ್ಲ. ಯಾರಾದರೂ ಸುಳಿವು ಕೊಟ್ಟಿದ್ದರೆ, ಬಹುಶ: ನಾವು ಮುಂದುವರೆಸುತ್ತಿದ್ದೇವು. ಅವರು ಎಲ್ಲರೊಂದಿಗೂ ಜಗಳಕ್ಕೆ ನಿಲ್ಲುತ್ತಿದ್ದರು. ಅದಕ್ಕಾಗಿ ಅವರನ್ನು ಕೂಲ್ ಮಾಡುವುದಕ್ಕೆ ಡ್ಯಾನ್ಸ್ ಮಾಡೋದು ಎಲ್ಲ ಮಾಡುತ್ತಿದ್ದೆ. ಅದು ಎಲ್ಲೋ ವರ್ಕ್ ಆಯ್ತೇನೋ. ಬೆಳಗ್ಗೆ ಜಗಳ ಆಡುತ್ತಿದ್ವಿ. ಆಮೇಲೆ ನೋಡಿದರೆ, ಅವರು ಹಂಸ್ ಅನ್ನೋರು. ನಾನು ಬೈಯ್ಯುತ್ತಿದ್ದೆ. ಬಹುಶ:ಅದು ವೀಕ್ಷಕರಿಗೆ ಇಷ್ಟ ಆಗಿತ್ತು. ಜಗದೀಶ್ ಅವರು ಗಲಾಟೆ ಮಾಡಿಕೊಂಡರು. ಒಂದು ವೇಳೆ ಅವರು ಅದನ್ನು ಮಾಡಿಕೊಂಡಿರದೇ ಹೋಗಿದ್ದರೆ, ಅವರು ಫಿನಾಲೆವರೆಗೂ ಬಂದಿರೋರು. ಹೊರಗಡೆ ಬಂದ್ಮೇಲೂ ಸರಿಯಾಗಿ ಬಳಸಿಕೊಳ್ಳಲಿಲ್ಲ. ಸರಿಯಾಗಿ ಇದ್ದಿದ್ದರೆ ಚಾನೆಲ್ನವರು ಸಿಕ್ಕಾಪಟ್ಟೆ ಸಪೋರ್ಟ್ ಮಾಡಿರೋರು. ಬೇರೆ ಶೋಗಳಿಂದ ಹಿಡಿದು ಎಲ್ಲವನ್ನೂ ಕೊಟ್ಟಿರೋರು. ಆಗ ಅವರಿಗೆ ಅಷ್ಟು ಫ್ಯಾನ್ ಫಾಲೋವಿಂಗ್ ಇದ್ದರು."
ಅಂಕಲ್ ಆಂಟಿ ಲವ್ ಸ್ಟೋರಿ ಬಗ್ಗೆ ಹೇಳಿ
"ಮನೆಯೊಳಗೆ ಇರುವಾಗ ಎಲ್ಲರೂ ಅಂಕಲ್ ಆಂಟಿ ಲವ್ ಸ್ಟೋರಿ ಅನ್ನೋರು. ನಾವು ಮನೆಯೊಳಗೆ ಇದ್ದಾಗ ಬೇರೆ ಯಾರ ಲವ್ ಸ್ಟೋರಿನೂ ನಮ್ಮಷ್ಟು ವರ್ಕ್ ಆಗಿರಲಿಲ್ಲ. ಬಿಗ್ ಬಾಸ್ನಲ್ಲಿ ಅದೇ ಮೊದಲು ಅನಿಸುತ್ತೆ. ನಮ್ಮ ವಯಸ್ಸಿನ ಜೋಡಿಯ ಲವ್ ಸ್ಟೋರಿ ವರ್ಕ್ ಆಗಿರೋದು. ನಾನು ನನ್ನ ಹಸ್ಬೆಂಡ್ಗೆ ಅದನ್ನೇ ಹೇಳುತ್ತಿದ್ದೆ. ನಮ್ಮ ಜೋಡಿ ವರ್ಕ್ಔಟ್ ಆಗಿದ್ದರಿಂದ ಈ ಬಾರಿನೂ ಅದನ್ನೇ ಮಾಡುತ್ತಾರೆ ಅಂತ. ಜಗದೀಶ್ ಅಂತವರನ್ನು ಹುಡುಕುತ್ತಾರೆ. ಚೈತ್ರಾ ಕುಂದಾಪುರದಂತಹವರನ್ನು ಹುಡುಕುತ್ತಾರೆ ಅಂತ ಹೇಳಿದ್ದೆ."
ಮತ್ತೆ ಬಿಗ್ ಬಾಸ್ ಮನೆಗೆ ಹೋಗ್ತೀರಾ?
"ಗೆಸ್ಟ್ ಆಗಿ ಕರೆದರೆ ಖಂಡಿತವಾಗಿಯೂ ಹೋಗುತ್ತೇನೆ. ನಾನು ಬಿಗ್ ಬಾಸ್ಗೆ ನೋ ಅಂತ ಹೇಳುವುದೇ ಇಲ್ಲ. ಅದು ಕೊಟ್ಟಿರುವಷ್ಟು ಜನಪ್ರಿಯತೆ ಬೇರೆ ಯಾವುದೇ ಶೋನೂ ನನಗೆ ಕೊಟ್ಟಿಲ್ಲ. ಬೇರೆ ಏನೇ ಇರಬಹುದು. ನನಗೆ ಹೆಸರನ್ನಂತೂ ಕೊಟ್ಟಿದೆ. ದುಡ್ಡು ನನಗೆ ಸೆಕೆಂಡರಿ. ಆದರೆ,ಈ ಶೋ ತುಂಬಾನೇ ಹೆಸರು ಕೊಟ್ಟಿದೆ." ಎನ್ನುತ್ತಾರೆ ಬಿಗ್ ಬಾಸ್ ಮಾಜಿ ಸ್ಪರ್ಧಿ ಹಾಗೂ ನಟಿ ಹಂಸ.


Click it and Unblock the Notifications











