ಕಾರ್ ರೇಸರ್ ಆಗಿದ್ದವರು ಈಗ ಖಡಕ್ ನಟಿ; 'ಫಸ್ಟ್ ಗೇರ್'ನಿಂದ 'ಮಂಗಳಾ ದೇವಿ'ವರೆಗೆ ವೀಣಾ ಪೊನ್ನಪ್ಪ ಜರ್ನಿ ಬಲು ರೋಚಕ
ಸ್ಯಾಂಡಲ್ವುಡ್ ಹಾಗೂ ಕನ್ನಡ ಕಿರುತೆರೆಯಲ್ಲಿ ಮಿಂಚುತ್ತಿರುವ ನಟಿ ಕೊಡಗಿನ ಮೂಲಕದ ವೀಣಾ ಪೊನ್ನಪ್ಪ. ಖಡಕ್ ಪಾತ್ರಗಳಿಂದ ಹಿಡಿದು ಪೌರಾಣಿಕ ಪಾತ್ರಗಳವರೆಗೆ ಇವರ ನಟನಾ ಜರ್ನಿ ಅದ್ಭುತವಾಗಿದೆ. ಈಗ ಸ್ಟಾರ್ ಸುವರ್ಣದಲ್ಲಿ ಪ್ರಸಾರ ಆಗುತ್ತಿರುವ 'ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ' ಧಾರಾವಾಹಿಯಲ್ಲಿ ಮಂಗಳಾದೇವಿ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ವೀಣಾ ಪೊನ್ನಪ್ಪ ಅವರನ್ನು ನಟಿಯಾಗಿ ನೋಡಿದ್ದೀರಿ. ಆದರೆ, ಬಣ್ಣ ಹಚ್ಚಿ ನಟನೆಗೆ ಇಳಿಯುವುದಕ್ಕೂ ಮುನ್ನ ಇವರು ಕಾರ್ ರೇಸರ್ ಆಗಿದ್ದರು. ಹಾಗಂತ ಕೇವಲ ಕೊಡಗಿನಲ್ಲಷ್ಟೇ ಅಲ್ಲ ರಾಷ್ಟ್ರ ಮಟ್ಟದಲ್ಲಿ ರೇಸರ್ ಆಗಿ ಮಿಂಚಿದ್ದಾರೆ. ಹೀಗೊಮ್ಮೆ ಪಬ್ಲಿಕ್ ಟಿವಿಯ ಮುಖ್ಯಸ್ಥರಾದ ಎಚ್. ಆರ್. ರಂಗನಾಥ್ ಕಣ್ಣಿಗೆ ಬಿದ್ದಿದ್ದರು. ಇಲ್ಲಿಂದ ವೀಣಾ ಪೊನ್ನಪ್ಪ ಅವರ ವೃತ್ತಿ ಬದುಕು ಬೇರೆ ದಾರಿ ಹಿಡಿದಿತ್ತು. ಕಾರ್ ರೇಸರ್ ಆಗಿದ್ದವರು ನಟಿಯಾಗಿ ಬದಲಾಗಿದ್ದು ಹೇಗೆ? ಫಿಲ್ಮಿಬೀಟ್ ಕನ್ನಡಕ್ಕೆ ತಮ್ಮ ಅಡ್ವೆಂಚರ್ಸ್ ಜರ್ನಿ ಹೇಗಿತ್ತು? ಅನ್ನೋದನ್ನು ಹೇಳಿಕೊಂಡಿದ್ದಾರೆ.

ನೀವು ಕಾರ್ ರೇಸರ್ ಆಗಿದ್ದೇಗೆ?
"ನಾನು ಕೊಡಗಿನವಳು. ಅಲ್ಲಿ ಮಡಿಕೇರಿ. ಅಲ್ಲೇ ನನ್ನ ವಿದ್ಯಾಭ್ಯಾಸ ಆಯ್ತು. ಅಲ್ಲಿಂದ ಬೆಂಗಳೂರಿಗೆ ಎಂಟ್ರಿ ಕೊಟ್ಟೆ. ನಾನು ನ್ಯಾಷನಲ್ ಲೆವೆಲ್ ಟ್ರ್ಯಾಕ್ ರೇಸರ್. ನನಗೆ ಒಂದು ಟೈಮ್ನಲ್ಲಿ ಮಿಷನ್ಗಳ ಮೇಲೆ ಲವ್ ಆಗಿ ಹೋಯ್ತು. ನನ್ನ ತಮ್ಮ ಅದರ ಆಯೋಜಕನಾಗಿದ್ದರಿಂದ ಕಾರಿನ ಹಿಂಭಾಗದಲ್ಲಿ ಪೋಸ್ಟರ್ ನೋಡಿದೆ. ಆಗ ನಾನು ಹೋಗ್ತೀನಿ ಅಂದರೆ, ನಿನ್ನ ಕೈಯಲ್ಲಿ ಆಗಲ್ಲ ದೊಡ್ಡ ದೊಡ್ಡ ಹುಲಿಗಳು ಬರುತ್ತಾರೆ ಅಂದ. ಏನಕ್ಕೆ ಆಗಲ್ಲ ಟ್ರೈ ಮಾಡುತ್ತೇನೆ ಅಂತ ಸಂಬಂಧಿಯ ಕಾರು ತೆಗೆದುಕೊಂಡು ಹೋದೆ. ಇಡೀ ಫ್ಯಾಮಿಲಿಯೇ ನಿಂತು ನೋಡುತ್ತಿತ್ತು. ಆ ರೇಸ್ನಲ್ಲಿ ಎರಡನೇ ಸ್ಥಾನ ಸಿಕ್ತು. ಅಲ್ಲಿಂದ ಬೇರೆ ಬೇರೆ ಟೀಮ್ನವರು ಕರೆಯುವುದಕ್ಕೆ ಶುರು ಮಾಡಿದ್ದರು."
ಕಾರ್ ರೇಸ್ ನಿಲ್ಲಿಸಿದ್ದು ಯಾಕೆ?
"ಇಲ್ಲಿವರೆಗೂ 54 ಇವೆಂಟ್ನಲ್ಲಿ ಭಾಗವಹಿಸಿದ್ದೀನಿ. ಅದರಲ್ಲಿ 47 ಪ್ಲೇಸ್ಮೆಂಟ್ ಮಾಡಿದ್ದೀನಿ. ಕಾರು ಸ್ಪೋರ್ಟ್ಸ್ ಅನ್ನೋದು ಸಿಕ್ಕಾಪಟ್ಟೆ ದುಬಾರಿ. ಕಾರು ರೆಡಿ ಮಾಡಿಕೊಳ್ಳಬೇಕು. ಟಯರ್ ಬೇಕು. ಬಹುಮಾನ ಅಂತಹ ದೊಡ್ಡದೇನು ಇರಲಿಲ್ಲ. 2 ರಿಂದ 3 ಸಾವಿರ ಕೊಡುತ್ತಿದ್ದರು. ನಾನು ಕೊಡಗಿನಲ್ಲಿ ಇರುತ್ತಿದ್ದೆ. ನಾನು ಕರ್ನಾಟಕದ ಎಲ್ಲಾ ಕಡೆ ಟ್ರಾವೆಲ್ ಮಾಡಬೇಕಿತ್ತು. ಜೊತೆಗೆ ನಾನು ಓದುತ್ತಿದ್ದೆ. ಮತ್ತೆ ಯಾರೂ ಸಪೋರ್ಟ್ ಮಾಡುತ್ತಿರಲಿಲ್ಲ. ನಮ್ಮ ದುಡ್ಡು ಹಾಕೊಂಡು ನಾವು ಮಾಡುವಂತೆ ಇತ್ತು. ಎರಡು ಬಾರಿ ಕ್ರ್ಯಾಶ್ ಆಯ್ತು. ನ್ಯಾಷನಲ್ ಲೆವೆಲ್ಗೆ ಹೋಗಿದ್ದರಿಂದ ಸಾಕು ಅಂತ ನಿಲ್ಲಿಸಿಬಿಟ್ಟೆ"

ಪಬ್ಲಿಕ್ ಟಿವಿ ರಂಗನಾಥ್ ಕಣ್ಣಿಗೆ ಬಿದ್ದಿದ್ದೇಗೆ?
"ನಾನು 10ನೇ ತರಗತಿಯಲ್ಲಿ ಇರುವಾಗ ಕಾರ್ಗಿಲ್ ವಾರ್ ನಡೆಯುತ್ತಿತ್ತು. ನನಗೆ ಆಗಲೇ ವಾರ್ಗೆ ಹೋಗಬೇಕು ಅಂತಿತ್ತು. ಆಮೇಲೆ ಐಪಿಎಸ್ ಆಫೀಸರ್ ಆಗಬೇಕು ಅಂತಿತ್ತು. ಆ ವೇಳೆ ಪಬ್ಲಿಕ್ ಟಿವಿ ರಂಗಣ್ಣ ಫೋನ್ ಮಾಡಿದ್ರು. ಆಗ ಪಬ್ಲಿಕ್ ಟಿವಿ ಲಾಂಚ್ ಆಗುತ್ತಿತ್ತು. ಕಾರು ಬೈಕ್ ಶೋ ಮಾಡಬೇಕು ಅಂತಿದ್ದೀವಿ ಬನ್ನಿ ಬೆಂಗಳೂರಿಗೆ ಅಂದರು. ಅಲ್ಲಿ ಫಸ್ಟ್ ಗೇರ್ ಅಂತ ಶೋ ಮಾಡುತ್ತಿದ್ದೆ. ಆಮೇಲೆ ವಿಶ್ವೇಶ್ವರ ಭಟ್ಟರು ಸುವರ್ಣ ನ್ಯೂಸ್ಗೆ ಕರೆದರು. ಅಲ್ಲಿ ಜಾಲಿ ರೈಡ್ ಅಂತ ಮಾಡುತ್ತಿದ್ದೆ. ಅದರ ಜೊತೆಗೆ ಎಂಎ ಮಾಡುತ್ತಿದ್ದೆ. ಆಗ ಜೀ ಕನ್ನಡದಿಂದ ಸಿಐಡಿ ಕರ್ನಾಟಕ ಅಂತ ಮಾಡುತ್ತಿದ್ದೇವೆ ಬನ್ನಿ ಅಂತ ಕರೆ ಬಂತು. ಅದಕ್ಕೆ ಆಡಿಷನ್ ಕೊಟ್ಟೆ ಅದು ನನ್ನ ಮೊದಲ ಸೀರಿಯಲ್."
ಸಿನಿಮಾದಲ್ಲಿ ಪಾಸಿಟಿವ್-ಕಿರುತೆರೆಯಲ್ಲಿ ನೆಗೆಟಿವ್ ಯಾಕೆ ಹೀಗೆ?
"ನನ್ನ ಮೊದಲ ಸಿನಿಮಾ ಮಹಾಕಾಳಿ. ಮಾಲಾಶ್ರೀ ಅವರ ಜೊತೆ ಐಪಿಎಸ್ ಆಫೀಸರ್ ಆಗಿ ಕೆಲಸ ಮಾಡಿದೆ. ನಮ್ಮ ಇಂಡಸ್ಟ್ರೀಯಲ್ಲಿ ಒಂದು ಕ್ಯಾರೆಕ್ಟರ್ನಲ್ಲಿ ನೋಡಿದರೆ, ಅದೇ ಪಾತ್ರ ಕೊಡುತ್ತಾರೆ. ಬೇರೆನೂ ಕೊಡಬಹುದು ಅಂತ ನೋಡಲ್ಲ. ನಾನು ಹೈಟ್ ಇದ್ದೀನಿ. ಕ್ಯೂಟ್ ಕ್ಯಾರೆಕ್ಟರ್ಗಳಿಗೆ ಸೆಟ್ ಆಗುವುದಿಲ್ಲ. ನಾನು ಇದೂವರೆಗೂ ಸೀರಿಯಲ್ನಲ್ಲಿ ಮಾಡಿದ್ದೆಲ್ಲ ನೆಗೆಟಿವ್ ಕ್ಯಾರೆಕ್ಟರ್. ಸಿನಿಮಾದಲ್ಲಿ ಮಾಡಿದ್ದೆಲ್ಲ ಪಾಸಿಟಿವ್ ಕ್ಯಾರೆಕ್ಟರ್ ಸಿಕ್ಕಿದೆ."

ನಟನೆಗೆ ಬಂದಾಗ ಆದ ಅನುಭವವೇನು?
"ನಾನು ರೇಸ್ನಲ್ಲಿದ್ದಿದ್ದರಿಂದ ಹುಡುಗನ ತರ ಇರುತ್ತಿದ್ದೆ. ಸೀರೆ ಉಟ್ಟುಕೊಳ್ಳುವುದಕ್ಕೂ ಬರುತ್ತಿರಲಿಲ್ಲ. ಮತ್ತೆ ಬಿಸಿಲಲ್ಲಿ ಟೈಯರ್ ಚೇಂಜ್ ಮಾಡಿಕೊಂಡು ಕೂರುತ್ತಿದ್ದೆ. ಈ ಇಂಡಸ್ಟ್ರಿಯಲ್ಲಿ ಸೌಂದರ್ಯಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡಬೇಕು. ನನಗೆ ಹುಡುಗಿತರ ಕ್ಯೂಟ್ ಕ್ಯೂಟ್ ಆಗಿ ಇರುವುದಕ್ಕೆ ಬರುತ್ತಿರಲಿಲ್ಲ. ಆಡಿಷನ್ಗೆ ಹೋದಾಗ ಏನೋ ಇವಳು ಹೀಗಿದ್ದಾಳೆ ಎನ್ನುತ್ತಿದ್ದರು. ಆಮೇಲೆ ನಾನು ನನ್ನನ್ನು ಮೋಲ್ಡ್ ಮಾಡಿಕೊಂಡೆ."
ನೆಗೆಟಿವ್ ರೋಲ್ ಸಿಕ್ಕಿದ್ದರೆ ಬೇಸರವಿದೆಯೇ?
"ನನಗೆ ಇವತ್ತಿನವರೆಗೂ ನೆಗೆಟಿವ್ ಪಾತ್ರ ಮಾಡಿದ್ದಕ್ಕೆ ನನಗೆ ಬೇಜಾರಿಲ್ಲ. ಗ್ಲಿಸರಿನ್ ಹಾಕಿಕೊಂಡು ಯಾರು ಬೇಕಾದರೂ ಮಾಡಬಹುದು. ಆದರೆ, ನೆಗೆಟಿವ್ ಪಾತ್ರವನ್ನು ಸ್ವಲ್ಪ ಉಲ್ಟ ಪಲ್ಟ ಮಾಡಿದರೂ ಜೋಕರ್ ತರ ಕಾಣಿಸುತ್ತೆ. ಯಾವುದೇ ಸಿನಿಮಾ ಏನೇ ಇರಲಿ. ನೆಗೆಟಿವ್ ಇದ್ದರೇ ಪಾಸಿಟಿವ್ ಕಾಣುವುದು. ಹೀಗಾಗಿ ನೆಗೆಟಿವ್ ಪಾತ್ರ ಮಾಡಿದ್ದಕ್ಕೆ ನನಗೆ ಖುಷಿಯಿದೆ."

ನೆಗೆಟಿವ್ ಪಾತ್ರಗಳಿಗೆ ರೆಸ್ಪಾನ್ಸ್ ಹೇಗಿರುತ್ತೆ?
"ನಾನು ನೆಗೆಟಿವ್ ಪಾತ್ರ ಮಾಡಿದ್ದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಎಷ್ಟು ಕೆಟ್ಟದಾಗಿ ಕಾಮೆಂಟ್ ಮಾಡುವುದಕ್ಕೆ ಸಾಧ್ಯವೋ ಅಷ್ಟು ಮಾಡಿದ್ದಾರೆ. ಮುಂದೆ ಬಂದರೆ ಹೊಡೆದು ಸಾಯಿಸುತ್ತೇನೆ ಅಂತಾನೂ ಹೇಳಿದ್ದಾರೆ. ಅದನ್ನು ಬೇರೆಯವರೊಂದಿಗೆ ಚರ್ಚೆ ಮಾಡಿದಾಗ, ಹಾಗೆ ಚರ್ಚೆಯಾಗ್ತಿದೆ ಅಂದರೆ, ಚೆನ್ನಾಗಿ ನಟನೆ ಮಾಡುತ್ತಿದ್ದೀಯ ಅಂತಾರೆ. ಸುಮ್ಮನೆ ಕೂತು ನೋಡಿದಾಗ ಅರೇ ಇಷ್ಟೊಂದು ಬೈದು ಬಿಟ್ಟಿದ್ದಾರೆ ಅಂತ ಅನಿಸುತ್ತೆ."
ಪೌರಾಣಿಕ ಪಾತ್ರಗಳು ಸಿಕ್ಕಿದ್ದೇಗೆ?
"ನಾನು ಕಿನ್ನರಿ ಮಾಡುತ್ತಿದ್ದೆ. ಆಗ ಪ್ರಜ್ವಲ್ ಎನ್ನುವವರು ಬಾಂಬೆ ಪ್ರೊಡಕ್ಷನ್ ಅವರದ್ದು ಒಂದು ಸೀರಿಯಲ್ ಇದೆ. ನೀನು ಯಾಕೆ ಟ್ರೈ ಮಾಡಬಾರದು ಎಂದಿದ್ದರು. ಆಗ ಒಂದು ಆಡಿಷನ್ ತೆಗೆದುಕೊಂಡರು. ಅದರಲ್ಲಿ ಸತಿ ಅಮ್ಮನ ಪಾತ್ರವಿತ್ತು. ನನಗೆ ಅದು ಪ್ಲಸ್ ಕೂಡ ಆಯ್ತು. ಮೈನಸ್ ಕೂಡ ಆಯ್ತು. ಅಲ್ಲಿಂದ ಅಮ್ಮನ ರೋಲ್ಗಳೇ ಹೆಚ್ಚಾಗಿ ಬಂದವು. ಅದಾದ್ಮೇಲೆ ನನಗೆ ಕಮ್ ಬ್ಯಾಕ್ ಕೊಟ್ಟಿದ್ದು ರೇಣುಕಾ ಯಲ್ಲಮ್ಮ ಧಾರಾವಾಹಿಯ ಮಂಗಳಾದೇವಿ ಪಾತ್ರ. ಯಾಕಂದ್ರೆ ನಾನು ನಾಲ್ಕು ವರ್ಷ ಬರೀ ತೆಲುಗು ಸೀರಿಯಲ್ ಮಾಡುತ್ತಿದ್ದೆ."

'ರೇಣುಕಾ ಯಲ್ಲಮ್ಮ' ಪಾತ್ರದ ಬಗ್ಗೆ ಹೇಳಿ
"ರೇಣುಕಾ ಯಲ್ಲಮ್ಮಗೆ ಅವಕಾಶ ಬಂದಾಗ ಕನ್ಫ್ಯೂಸ್ ಆಗಿದ್ದೆ. ಮತ್ತೊಂದು ಪೌರಾಣಿಕ ಪಾತ್ರ ಆಡಿಷನ್ ಕೊಟ್ಟೆ ಸೆಲೆಕ್ಟ್ ಆದೆ. ಲುಕ್ ಬಗ್ಗೆ ಟೀಕೆಗಳು ಆಗುತ್ತಿದ್ದರಿಂದ ನಾನು ಜಾಗರೂಕಳಾಗಿದ್ದೇನೆ. ಈ ಪಾತ್ರಕ್ಕೆ ನಾನೇ ಕಾಸ್ಟ್ಯೂಮ್ ಹಾಗೂ ಮೇಕಪ್ ಮಾಡಿಕೊಳ್ಳುತ್ತೇನೆ. ಆ ಮಹಾರಾಣಿಗೆ ಹೇಗಿರಬೇಕೋ ಹಾಗೆ ರೆಡಿಯಾಗುತ್ತೇನೆ. ಆರಂಭದಲ್ಲಿ ಸ್ಲೋ ಇತ್ತು. ಆಮೇಲೆ ವೇಗ ಪಡೆದುಕೊಳ್ತು."
ನಟನೆ ಬಿಟ್ಟರೆ ಬೇರೆ ಪ್ಲ್ಯಾನ್ ಏನು?
"ಭವಿಷ್ಯದಲ್ಲಿ ತುಂಬಾ ಏನೇನೋ ಮಾಡಬೇಕು ಅಂತಿದೆ. ನಮ್ಮದೇ ಒಂದು ಕಾಫಿ ಬ್ರ್ಯಾಂಡ್ ಇದೆ. ಅದು ಚೆನ್ನಾಗಿ ಹೋಗುತ್ತಿದೆ. ಇನ್ನೂ ಅಲೋಚನೆಯಿದೆ. ಮುಂದೆ ನೋಡೋಣ." ಎನ್ನುತ್ತಾರೆ ನಟಿ ವೀಣಾ ಪೊನ್ನಪ್ಪ.


Click it and Unblock the Notifications











