'ಎಡೆಯೂರು ಶ್ರೀ ಸಿದ್ಧಲಿಂಗೇಶ್ವರ'ದ ಈ ರೇವತಿ ವೀಕ್ಷಕರ ಫೇವರಿಟ್; ತೆಲುಗಿನಲ್ಲೂ ಬ್ಯುಸಿ ಈ ನಟಿ
ಇವರು ಕನ್ನಡ ಕಿರುತೆರೆಯ ಜನಪ್ರಿಯ ನಟಿ. ಪದವಿ ಪಡೆಯುತ್ತಿರುವಾಗಲೇ ಸ್ನೇಹಿತರ ಒತ್ತಾಯಕ್ಕೆ ಆಡಿಷನ್ ಕೊಟ್ಟು ಕಿರುತೆರೆಗೆ ಎಂಟ್ರಿ ಕೊಟ್ಟವರು ಇವರು. ಈಗಾಗಲೇ ಸಾಕಷ್ಟು ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಕನ್ನಡ ಅಷ್ಟೇ ಅಲ್ಲ. ತೆಲುಗು ಧಾರಾವಾಹಿಯಲ್ಲಿಯೂ ಇವರು ನಟಿಸುತ್ತಿದ್ದಾರೆ. ತಿಂಗಳಲ್ಲಿ ಎರಡು ತೆಲುಗು ಧಾರಾವಾಹಿಯಲ್ಲಿ ಹಾಗೂ ಎರಡು ವಾರ ಕನ್ನಡ ಧಾರಾವಾಹಿಯಲ್ಲಿ ನಟಿಸುವಷ್ಟು ಬ್ಯುಸಿಯಾಗಿದ್ದಾರೆ.
ಕನ್ನಡದಲ್ಲಿ ಸದ್ಯಕ್ಕೀಗ ಸ್ಟಾರ್ ಸುವರ್ಣದಲ್ಲಿ ಪ್ರಸಾರ ಆಗುತ್ತಿರುವ 'ಎಡೆಯೂರು ಶ್ರೀ ಸಿದ್ಧಲಿಂಗೇಶ್ವರ' ಧಾರಾವಾಹಿಯಲ್ಲಿ ರೇವತಿ ಅನ್ನುವ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಕಳೆದ ಎರಡೂವರೆ ಮೂರು ವರ್ಷಗಳಿಂದ ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಪಾತ್ರ ಆಗಾಗ ಬೇರೆ ಬೇರೆ ಆಯಾಮಗಳನ್ನು ಪಡೆದುಕೊಳ್ಳುತ್ತಿದ್ದು, ಕಿರುತೆರೆ ವೀಕ್ಷಕರಿಗೆ ಮೆಚ್ಚುಗೆ ಪಡೆದುಕೊಂಡಿದೆ. ಈ ನಟಿ ತಮ್ಮ ಕಿರುತೆರೆಯ ಸುಧೀರ್ಘ ಜರ್ನಿಯನ್ನು ಫಿಲ್ಮಿಬೀಟ್ ಕನ್ನಡ ಜೊತೆ ಹಂಚಿಕೊಂಡಿದ್ದಾರೆ.

ನೀವು ಕಿರುತೆರೆಗೆ ಎಂಟ್ರಿ ಕೊಟ್ಟಿದ್ದೇಗೆ?
"ನಾನು ಕಾಲೇಜಿನಲ್ಲಿ ಇರುವಾಗಲೇ ನನ್ನ ಸ್ನೇಹಿತರು ನನಗೆ ಆಡಿಷನ್ಗೆ ರೆಫರ್ ಮಾಡುತ್ತಿದ್ದರು. ಕಾಲೇಜಿನಲ್ಲಿ ನಿರೂಪಣೆ ಮಾಡುತ್ತಿದ್ದರಿಂದ ಎಲ್ಲರೂ ಸಿನಿಮಾ, ಸೀರಿಯಲ್ಗೆ ಯಾಕೆ ಹೋಗಬಾರದು ಎಂದು ಹೇಳುತ್ತಿದ್ದರು. ಒಂದು ಆಡಿಷನ್ಗೆ ಕಾಲ್ ಬಂತು. ಹೋಗಿ ಅಟೆಂಡ್ ಮಾಡಿದೆ. ಅದಕ್ಕೆ ಆಯ್ಕೆನೂ ಆದೆ. ನನ್ನ ಗ್ರ್ಯಾಜ್ಯುವೆಷನ್ ದಿನವೇ ಆದು ಟೆಲಿಕಾಸ್ಟ್ ಕೂಡ ಆಯ್ತು. ಎಜ್ಯುಕೇಷನ್ ಮುಗಿದ ಬಳಿಕ ಉನ್ನತ ಶಿಕ್ಷಣಕ್ಕೆ ಬೇರೆ ಕಡೆಗೆ ಹೋಗುವುದಿತ್ತು. ಮೊದಲ ಪ್ರಯತ್ನಕ್ಕೆ ಹೊಗಳಿಕೆ ಸಿಕ್ಕಿತ್ತು. ನನ್ನ ಮೊದಲ ಸೀರಿಯಲ್ ಸರ್ವ ಮಂಗಳ ಮಾಂಗಲ್ಯೆ ಅಂತ. ಇದೇ ಸ್ಟಾರ್ ಸುವರ್ಣದಲ್ಲಿಯೇ ನಾನು ಮೊದಲು ಆನ್ ಸ್ಕ್ರೀನ್ ಬಂದಿದ್ದೆ. ಮೂರು ದಿನ ಶೂಟಿಂಗ್ ಮಾಡಿದ್ದೆ. ಅದು ಒಂದು ವಾರ ಪ್ರಸಾರ ಆಯ್ತು" ಎನ್ನುತ್ತಾರೆ ನಟಿ ಪ್ರತಿಭಾ
ನಟನೆ ಆಯ್ಕೆ ಮಾಡಿಕೊಳ್ಳುವಾಗ ಆತಂಕವಿತ್ತಾ?
"ನನಗೆ ಪ್ಲೇಸ್ಮೆಂಟ್ ಕೂಡ ಆಗಿತ್ತು. 15 ರಿಂದ 20 ದಿನ ಟ್ರೈನಿಂಗ್ನಲ್ಲೂ ಇದ್ದೆ. ಆ ಟೈಮ್ನಲ್ಲಿ ಸೀರಿಯಲ್ ಕೂಡ ಮಾಡುತ್ತಿದೆ. ನನಗೆ ಬ್ಯಾಕ್ ಟು ಬ್ಯಾಕ್ ಆಫರ್ ಬರುತ್ತಿದ್ದರಿಂದ ಆತಂಕ ಬರಲಿಲ್ಲ. ನಮ್ಮ ಮನೆಯಲ್ಲೂ ಆರ್ಟ್ ಬಗ್ಗೆ ಆಸಕ್ತಿಯಿತ್ತು. ನಮ್ಮ ಅಪ್ಪನಿಗೂ ಇಷ್ಟವಿತ್ತು. ನನ್ನ ಅಕ್ಕ ಕೂಡ ಟ್ರೈ ಮಾಡುತ್ತಿದ್ದಳು. ಅವರ ಆಸೆ ನನ್ನ ಮೂಲಕ ಈಡೇರುತ್ತಿತ್ತು. ನನ್ನ ಏಳಿಗೆ ನನಗೆ ಖುಷಿ ಕೊಡುತ್ತೆ. ತುಂಬಾ ದೊಡ್ಡ ಮಟ್ಟಕ್ಕೆ ಏನೂ ಹೋಗಿಲ್ಲ. ಆದರೆ, ಒಂದೇ ರೀತಿ ಮುಂದಕ್ಕೆ ಹೋಗುತ್ತಿದೆ. ಅದರ ಬಗ್ಗೆ ನಾನು ತುಂಬಾನೇ ಖುಷಿಯಾಗಿದ್ದೇನೆ. "

ಈ ಸೀರಿಯಲ್ ಒಪ್ಪಲು ನವೀನ್ ಕೃಷ್ಣ ಕಾರಣ ಅಂತೆ ಹೌದಾ?
"ಎಡೆಯೂರು ಶ್ರೀ ಸಿದ್ಧಲಿಂಗೇಶ್ವರ ಸೀರಿಯಲ್ಗೆ ಕರೆಯುತ್ತಿದ್ದಾರೆ ಅಂತ ಅಮ್ಮನಿಗೆ ಹೇಳಿದಾಗ, ನನ್ನ ಮದುವೆ ಆಗಿದ್ದು ಕೂಡ ಅಲ್ಲೇ ಅಂತ ಹೇಳುತ್ತಿದ್ದರು. ಅಲ್ಲಿವರೆಗೂ ನನಗೆ ಗೊತ್ತಿರಲಿಲ್ಲ. ಮತ್ತೆ ಅಲ್ಲೇನೋ ನನಗೆ ಕನೆಕ್ಷನ್ ಇತ್ತು. ನಾನು ಈ ಸೀರಿಯಲ್ ಒಪ್ಪಿಕೊಳ್ಳುವುದಕ್ಕೆ ಕಾರಣ ನವೀನ್ ಕೃಷ್ಣ ಅವರು. ಅವರ ನಿರ್ದೇಶನದಲ್ಲಿ ನಟಿಸಬೇಕು ಅಂತ ಆಸೆಯಿತ್ತು. ಹಾಗೇ ರೇವತಿ ಅನ್ನುವ ನನ್ನ ಪಾತ್ರ. ನಮ್ಮ ತಂದೆ ಪಾತ್ರದಲ್ಲಿ ಮಂಡ್ಯ ರಮೇಶ್ ಅವರು. ತಾಯಿಯಾಗಿ ಅಪರ್ಣ ಅವರು ನಟಿಸುತ್ತಿದ್ದರು. ಇವರನ್ನೆಲ್ಲ ಟಿವಿಯಲ್ಲಿ ನೋಡುತ್ತಿದ್ದೆ. ಅವರೊಂದಿಗೆ ನಟಿಸುತ್ತೇನೆ ಅನ್ನುವ ಕಾರಣಕ್ಕೆ ಒಪ್ಪಿಕೊಂಡೆ. ಸೋಶಿಯಲ್ ಸಬ್ಜೆಕ್ಟ್ ಅನ್ನು ಯಾವಾಗ ಬೇಕಾದರೂ ಮಾಡಬಹುದು. ಇಂತಹ ಪಾತ್ರಗಳು ಸಿಗುವುದು ಅಪರೂಪ. ಅದಕ್ಕೆ ಒಪ್ಪಿಕೊಂಡೆ."
ನಿಮ್ಮ ನಟನೆಗೆ ಸಿಕ್ಕ ಕಾಂಪ್ಲಿಮೆಂಟ್ ಏನು?
"ನವೀನ್ ಸರ್ಗೆ ಆರಂಭದಲ್ಲಿ ನನ್ನ ಬಗ್ಗೆ ಭರವಸೆ ಇರಲಿಲ್ಲ. ಒಂದು ಸಲ ಈ ಕ್ಯಾರೆಕ್ಟರ್ ಅನ್ನು ಹೇಗೆ ತೆಗೆದುಕೊಂಡು ಹೋಗಬೇಕು ಅಂತ ಚರ್ಚೆ ಆಗುತ್ತಿರುತ್ತೆ. ಆಗ ಈ ಹುಡುಗಿ ಯಾವುದೇ ರೀತಿ ಕ್ಯಾರೆಕ್ಟರ್ ಕೊಟ್ಟರೂ ಮಾಡಿಕೊಂಡು ಹೋಗುತ್ತಾಳೆ. ಅದನ್ನು ನನ್ನ ಕೋ ಆಕ್ಟರ್ಗಳು ಬಂದು ನನಗೆ ಹೇಳಿದರು. ಅದು ನನಗೆ ಖುಷಿಯಾಗಿದೆ."

ತೆಲುಗು ಸೀರಿಯಲ್ ಬಗ್ಗೆ ಹೇಳಿ?
"ನಾನು ಯಾವ ಆಕ್ಟಿಂಗ್ ಕ್ಲಾಸ್ಗೂ ಹೋಗಿಲ್ಲ. ನಾನು ಏನೂ ಕಲಿಯದೆ ಇಂಡಸ್ಟ್ರಿಗೆ ಬಂದೆ. ದಿನ ನಿತ್ಯ ನಡೆಯುವ ಚಟುವಟಿಕೆಗಳನ್ನು ನೋಡಿಕೊಂಡು ಕಲಿತೆ. ನಾನು ತೆಲುಗಿನಲ್ಲಿ ಕಂಪ್ಲೀಟ್ ಆಗಿ ನೆಗೆಟಿವ್ ರೋಲ್ ಮಾಡುತ್ತಿದ್ದೇನೆ. ಇಲ್ಲಿ ಪಾಸಿಟಿವ್ ಪಾತ್ರ. ಎರಡು ವಿಭಿನ್ನ ಪಾತ್ರ ಮಾಡುತ್ತಿದ್ದೇನೆ. ಅಲ್ಲಿ ಮುಗಿದ ಮೇಲೆ ಇಲ್ಲಿಗೆ ಬಂದು ಈ ಪಾತ್ರಕ್ಕೆ ಹೇಗೆ ಬೇಕೋ ಹಾಗೆ ಇರುತ್ತಿದ್ದೆ." ಎನ್ನುತ್ತಾರೆ.
ಅಪರ್ಣ ವಸ್ತಾರೆ ಅವರೊಂದಿಗೆ ನಟಿಸಿದ ಅನುಭವ ಹೇಗಿತ್ತು?
"ನಾನು ಶೂಟಿಂಗ್ ಸ್ಪಾಟ್ಗೆ ಬಂದಾಗ ಎಲ್ಲರೂ ದೊಡ್ಡ ಆರ್ಟಿಸ್ಟ್ ಇದ್ದರು. ಮಂಡ್ಯ ರಮೇಶ್, ಅಪರ್ಣ ಮೇಡಂ ಅಂತಹವರು ರಾತ್ರಿ 9 ಗಂಟೆ ಆದರೂ ಮಾತಾಡುತ್ತಿರಲಿಲ್ಲ. ಅಪರ್ಣ ಮೇಡಂ ಅವರು ಅವರ ಮನೆಯಿಂದ ಬರೀ ತರಕಾರಿನೇ ತರುತ್ತಿದ್ದರು. ನಮ್ಮ ಮನೆಯಿಂದ ತಿಂಡಿಗಳನ್ನು ಅವರು ತೆಗೆದುಕೊಳ್ಳೋರು. ಏನು ತಂದಿದ್ದೀಯ ಅಂತ ಹೇಳೋರು. ದಡ್ಡೋರು, ಚಿಕ್ಕರೋರು ಅನ್ನೋದು ಏನೂ ಇರಲಿಲ್ಲ. ಅವರೊಂದಿಗೆ ಒಳ್ಳೆಯ ಅನುಭವವಿದೆ."
ಅವರಿಗಿದ್ದ ಆರೋಗ್ಯ ಸಮಸ್ಯೆ ಬಗ್ಗೆ ಗೊತ್ತಿತ್ತಾ?
"ನನಗೆ ಅವರಿಗೆ ಆರೋಗ್ಯ ಸಮಸ್ಯೆಯಿತ್ತು ಅನ್ನೋದು ಗೊತ್ತಿರಲಿಲ್ಲ. ನಮ್ಮ ಸೀರಿಯಲ್ ಮಾಡುವಾಗಲೇ ಅವರಿಗೆ ಸಮಸ್ಯೆಯಿತ್ತು ಅಂತ ಈಗ ಗೊತ್ತಾಗುತ್ತಿದೆ. ನಮ್ಮ ಸೀರಿಯಲ್ನಲ್ಲಿ ಸ್ಮೋಕ್ ಹಾಕುತ್ತಿದ್ದರು. ಅವರಿಗೆ ಆ ಎಫೆಕ್ಟ್ ಬೇಕಿತ್ತು. ಅದು ನಮಗೆ ಆಗುತ್ತಿರಲಿಲ್ಲ. ಅದರಿಂದ ಅವರಿಗೆ ತುಂಬಾನೇ ತೊಂದರೆಯಾಗುತ್ತಿತ್ತು. ಅದರೆ, ಅವರು ತುಂಬಾನೇ ವೀಕ್ ಅಂತ ಅನಿಸುತ್ತಿತ್ತು. ಆರೋಗ್ಯ ಸಮಸ್ಯೆಯಿಂದ ಸೀರಿಯಲ್ ಬಿಡುತ್ತಿದ್ದೇನೆ. ಸ್ವಲ್ಪ ಸಮಯ ಕೊಡಿ ಮತ್ತೆ ಬರ್ತಿನಿ ಅಂದರು. ನಮ್ಮ ಡೈರೆಕ್ಟರ್ ಕಾದಿದ್ದೂ ಇದೆ. ಆದರೆ, ಇಲ್ಲ ಬರೋಕೆ ಆಗಲ್ಲ ರಿಪ್ಲೇಸ್ ಮಾಡಿಕೊಳ್ಳಿ ಅಂದರು."
ಅಪರ್ಣ ಅವರಿಂದ ಕಲಿತಿದ್ದೇನು?
"ನಮ್ಮ ಸೀರಿಯಲ್ ಮಾಡುವಾಗ ಅವರ ಅತ್ತೆ ತೀರಿ ಹೋಗಿದ್ದರು. ಆ ವಿಷಯ ಅವರಿಗೆ ಮುಟ್ಟಿತ್ತು. ಆ ಸಂದರ್ಭದಲ್ಲಿ ಎಲ್ಲಾ ಬಿಟ್ಟು ಹೋಗೋರು. ಆದರೆ, ಅವರು ಆಗಿದ್ದಕ್ಕೆ ಆ ಸೀನ್ ಅನ್ನು ಕಂಪ್ಲೀಟ್ ಮಾಡಿಕೊಟ್ಟು ಹೋದರು. ಇದೆಲ್ಲವನ್ನು ನಾನು ಅವರಿಂದ ಕಲಿತಿರುವ ವಿಷಯ."
ಸಿನಿಮಾದಲ್ಲಿ ಆಫರ್ ಸಿಕ್ಕಿತ್ತಾ?
"ನನಗೆ ಮೊದಲು ಆಫರ್ ಬಂದಿದ್ದೇ ಸಿನಿಮಾದಿಂದ. ನನಗೆ ಅದು ಸುಳ್ಳಾ ನಿಜನಾ ಅಂತ ಗೊತ್ತಿರಲಿಲ್ಲ. ನನ್ನನು ಸಿನಿಮಾಗೆ ಸೆಲೆಕ್ಟ್ ಕೂಡ ಮಾಡಿದ್ದರು. ಆದರೆ, ಹೆದರಿಕೆಯಿಂದ ಬಿಟ್ಟು ಬಿಟ್ಟಿದ್ದೆ. ಆಮೇಲೆ ಸೀರಿಯಲ್ ಸಿಕ್ಕಿದ್ದು. ಇಲ್ಲೇ ಚೆನ್ನಾಗಿ ಇದ್ದೇನೆ. ಬೇಕಾದಂತಹ ಪಾತ್ರಗಳು ಸಿಗುತ್ತಿವೆ. ಸಿನಿಮಾ ಅಂತ ನಾನು ಯಾವಾಗಲೂ ಟ್ರೈ ಮಾಡಿಲ್ಲ. ಅವಕಾಶ ಬಂದರೆ ಮಾಡುತ್ತೇನೆ."


Click it and Unblock the Notifications











