Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಲಾಕ್ಷೇತ್ರದ ಮೆಟ್ಟಿಲುಗಳ ಮೇಲೆ ಹುಟ್ಟಿಕೊಂಡ ಸಿನಿಮಾ 'ಉಲ್ಟಾ ಪಲ್ಟಾ': ನಿರ್ದೇಶಕ ಎನ್ ಎಸ್ ಶಂಕರ್!
'ಉಲ್ಟಾ ಪಲ್ಟಾ' ಕನ್ನಡ ಚಿತ್ರರಂಗದ ಎವರ್ಗ್ರೀನ್ ಕಾಮಿಡಿ ಸಿನಿಮಾ. ಇಂತಹದ್ದೊಂದು ಸದಭಿರುಚಿಯ ಕಾಮಿಡಿ ಸಿನಿಮಾ ಇತ್ತೀಚೆಗೆ ತೆರೆಕಂಡಿದ್ದಿಲ್ಲ. ಗೆದ್ದ ಉದಾಹರಣೆಗಳೂ ಇಲ್ಲ. ಏಳು ಮಂದಿ ಸ್ನೇಹಿತರೆಲ್ಲಾ ಸೇರಿಕೊಂಡು ನಿರ್ಮಾಣ ಮಾಡಿದ್ದ ಈ ಸಿನಿಮಾ ಸ್ಯಾಂಡಲ್ವುಡ್ನಲ್ಲಿ 'ಕ್ರಾಂತಿ' ಮಾಡಿತ್ತು.
ರಮೇಶ್ ಅರವಿಂದ್ ಹಾಗೂ ಕಾಶಿ ನಟಿಸಿದ್ದ ಈ ಸಿನಿಮಾ ಕನ್ನಡ ಚಿತ್ರರಂಗದ ಎವರ್ಗ್ರೀನ್ ಸಿನಿಮಾ. ಈ ಸಿನಿಮಾ ಮೇಕಿಂಗ್ ವೇಳೆ ಎದುರಾದ ಸವಾಲುಗಳೇನು? ಎಷ್ಟು ದಿನ ಸಿನಿಮಾ ಓಡ್ತು? ಬರೆದ ದಾಖಲೆಗಳೇನು? ರಾಕ್ಲೈನ್ ವೆಂಕಟೇಶ್ ಪ್ರೆಷರ್ ತಂದು ಸಿನಿಮಾ ತೆಗೆಸಿ ಯಾವ ಸಿನಿಮಾ ಹಾಕಿಸಿದ್ರು? ಅನ್ನೋದನ್ನು ಸಿನಿಮಾದ ನಿರ್ದೇಶಕ ಎನ್ ಎಸ್ ಶಂಕರ್ ಫಿಲ್ಮಿಬೀಟ್ ಜೊತೆ ಹಂಚಿಕೊಂಡಿದ್ದಾರೆ.
ಎವರ್ಗ್ರೀನ್ ಕಾಮಿಡಿ ಸಿನಿಮಾ 'ಉಲ್ಟಾ ಪಲ್ಟಾ'ಗೆ 25 ವರ್ಷ: ಇಲ್ಲಿವೆ ಇಂಟ್ರೆಸ್ಟಿಂಗ್ ವಿಷಯಗಳು!
'ಉಲ್ಟಾ ಪಲ್ಟಾ' ಶುರುವಾಗಿದ್ದೇಗೆ?
"ನಾವು ಸೀರಿಯಲ್, ಶಾರ್ಟ್ ಫಿಲ್ಮ್ಸ್ ಅನ್ನು ಮಾಡಿಕೊಂಡು ಬಂದಿದ್ದೆವು. ಈ ವೇಳೆ ಕ್ಯಾಮರಾಮ್ಯಾನ್, ಮ್ಯೂಸಿಕ್ ಡೈರೆಕ್ಟರ್, ಎಡಿಟರ್ ಎಲ್ಲಾ ಒಂದು ಟೀಮ್ ಆಗಿತ್ತು. ನಾವು ಏನೇ ಮಾಡುವುದಿದ್ದರೂ ಜೊತೆಯಲ್ಲಿಯೇ ಮಾಡುತ್ತಿದ್ದೆವು. ನಟ ಕಾಶಿ ನನಗೆ ಬಾರಿ ಒಳ್ಳೆಯ ಸ್ನೇಹಿತ. ಕಾಶಿ ನಾನು ಇಬ್ಬರೂ ವಾರದಲ್ಲಿ ಮೂರು ದಿನ ಸಿನಿಮಾ ನೋಡುವುದು. ಅದರ ಬಗ್ಗೆ ಚರ್ಚೆ ಮಾಡೋದು. ಕಲಾಕ್ಷೇತ್ರದಲ್ಲಿ ನಾಟಕ ನೋಡುವುದು. ಅವಾಗಿನಿಂದ ನಾವು ಒಂದು ಸಿನಿಮಾ ಮಾಡಬೇಕು. ನಮ್ಮನ್ನು ನೋಡಿ ಯಾರೂ ದುಡ್ಡು ಹಾಕಲ್ಲ. ನಾವೇ ದುಡ್ಡು ಹಾಕಿ ಸಿನಿಮಾ ಮಾಡೋಣ ಅಂತ ಸುಮಾರು ಎರಡು ವರ್ಷಗಳ ಕಾಲ ಚರ್ಚೆ ಮಾಡಿದ್ವಿ. ಆಗ ಕಲಾಕ್ಷೇತ್ರದ ಮೆಟ್ಟಿಲುಗಳ ಮೇಲೆ ಹುಟ್ಟಿಕೊಂಡ ಸಿನಿಮಾವಿದು."
ಈ ಎರಡು ರಾಜ್ಯಗಳಲ್ಲಿ ಡಬ್ ಆದ ಸಿನಿಮಾಗಳ ಬಾಕ್ಸಾಫೀಸ್ ದರ್ಬಾರ್ ಬಲು ಜೋರು!
ನಿಮ್ಮ ಮುಂದಿದ್ದ ಸವಾಲುಗಳೇನು?
"ಮೊದಲನೇ ಸವಾಲು ದುಡ್ಡಿರಲಿಲ್ಲ ನಮ್ಮ ಬಳಿ. ಅದು ಬಹಳಾ ದೊಡ್ಡ ಸವಾಲು. ಅಲ್ಲೆಲ್ಲೋ 5 ಸಾವಿರ ತಗೊಂಡು ಬರೋದು. ಇಲ್ಲೆಲ್ಲೋ 10 ಸಾವಿರ ತಗೊಂಡು ಬರೋದು ಮಾಡ್ತಿದ್ವಿ. ನಮ್ಮ ಜೊತೆಯಲ್ಲಿ ಇರೋರೇ ದುಡ್ಡು ಹಾಕ್ತೀನಿ ಅಂದೋರು ಕೊಡಲಿಲ್ಲ. ಅವರಿಗೆ ಇನ್ನೂ ಟೈಮ್ ಬೇಕಾಗಿತ್ತು. ಇನ್ನೊಂದು ಸಿನಿಮಾ ಮೇಕಿಂಗ್ ಸಮಯದಲ್ಲಿ ಈಗೋ ಕ್ಲ್ಯಾಶ್ಗಳೆಲ್ಲಾ ಬಂತು. ಹೀಗಾಗಿ ಒಂದು ಟೀಮ್ ಆಗಿ ಎರಡನೇ ಸಿನಿಮಾ ಮಾಡಲೇ ಇಲ್ಲ. ಮೊದಲ ಸಿನಿಮಾಗೆ ನಿಂತು ಹೋಯ್ತು."
25 ವರ್ಷ ಸೆಲೆಬ್ರೆಟ್ ಮಾಡುತ್ತೀರಾ?
"ಇಲ್ಲ.. ಸೆಲೆಬ್ರೆಷನ್ ಅಂತ ಏನಿಲ್ಲ. 'ಈಗ' ಸಿನಿಮಾ ಮಾಡುತ್ತಿರೋದೇ ಒಂದು ಸಂಭ್ರಮ. 'ಉಲ್ಟಪಲ್ಟಾ' 25 ವರ್ಷ ಆಗಿದೆ ಅಂತ ಫೇಸ್ ಬುಕ್ನಲ್ಲಿ ಒಂದು ಪೋಸ್ಟ್ ಹಾಕಿದ್ದೆ ಅಷ್ಟೇ. ಅದು ಬಿಟ್ಟರೆ ಬೇರೆ ಏನೂ ಇಲ್ಲ."
ಮರೆಯಬಾರದ ಸಿನಿಮಾ ಗಾರುಡಿಗ ಅಕಿರಾ ಕುರೊಸೋವಾ ನೆನಪು
ಓಪನಿಂಗ್ ಹೇಗಿತ್ತು?
"ನಾವು ಜಾಸ್ತಿ ಥಿಯೇಟರ್ ರಿಲೀಸ್ ಮಾಡಿಲ್ಲ. ಕಪಾಲಿ ಒಂದೆನೇ ಎರಡು ಥಿಯೇಟರ್ ಕ್ಯಾಪಾಸಿಟಿ. ನಮಗೆ ಎಲ್ಲರೂ ಉಗಿದರು. ಕಪಾಲಿಯಲ್ಲಿ ರಿಲೀಸ್ ಮಾಡುತ್ತೀರಾ ಅಂತ. ನಮಗೆ ಆಗ ಬೇರೆ ದಾರಿನೇ ಇರಲಿಲ್ಲ. ಚೇಂಬರ್ನಿಂದ ಸಹಕಾರ ಸಿಕ್ಕಿತ್ತು ಅನ್ನೋದಕ್ಕಿಂತ ತೊಂದರೆನೇ ಕೊಟ್ಟರು. ಪುಟ್ಟಣ್ಣ, ನವರಂಗ್, ಕಪಾಲಿ ಬೆಂಗಳೂರಿನಲ್ಲಿ ಮೂರೇ ಥಿಯೇಟರ್ನಲ್ಲಿ ಸಿನಿಮಾ ಹಾಕಿದ್ವಿ. ಹಿಂದಿನ ದಿನ ರಾತ್ರಿ ನವರಂಗ್ ಥಿಯೇಟರ್ನವರು ಫೋನ್ ಮಾಡಿ ಎರಡೇ ಶೋ ಕೊಡ್ತೀವಿ ಅಂದ್ರು. ಬೇಡಾ ಅಂತ ಪ್ರಿಂಟ್ ವಾಪಾಸ್ ತೆಗೆದುಕೊಂಡು ಬಂದೆವು. ಪುಟ್ಟಣ್ಣದಲ್ಲಿ ಮೂರು ವಾರ ಆಗುತ್ತಿದ್ದಂತೆ ರಾಕ್ಲೈನ್ ಅವರು ಪ್ರೆಷರ್ ತಂದು 'ಲಾಲಿ' ಸಿನಿಮಾ ರಿಲೀಸ್ ಮಾಡ್ಸಿದ್ರು. ಆಯ್ತು ಕಪಾಲಿಯಲ್ಲಿ ಒಂದರಲ್ಲೇ ಹೋಗಲಿ ಅಂತ ಸುಮ್ಮನಿದ್ದೆವು. ಆದರೆ, 50 ದಿನ ಆದ್ಮೇಲೆ ಬಹಳಷ್ಟು ಕಡೆ ಸಿನಿಮಾ ಹಾಕೊಂಡು ಬಂದ್ವಿ. ವೀರೇಶ್, ಉಮಾ, ಹೀಗೆ ಎಲ್ಲಾ ಕಡೆ 50 ದಿನ ಓಡ್ತು.
ಕಪಾಲಿಯಲ್ಲಿ ಹೆಚ್ಚು ದಿನ ಓಡಿದ ಸಿನಿಮಾ..ಹೌದೇ?
" ಕಪಾಲಿಯಲ್ಲಂತೂ ನಂಬೋಕೆ ಆಗೋಲ್ಲ. ಹಾಗೆ ಸಿನಿಮಾ ಓಡ್ತು. ಬೆಳಗ್ಗೆ ಸ್ವಲ್ಪ ಮುಂಚೆನೇ ಹೋಗಿ ಸೌಂಡ್ ಚೆಕ್ ಮಾಡುತ್ತಿದ್ದೆವು. ಬೆಳಗ್ಗೆ 9.30 ಹಾಗೇ ರೋಡ್ ನೋಡಿದ್ರೆ, ರಸ್ತೆನೇ ಕಾಣಿಸುತ್ತಿಲ್ಲ ಹಾಗೇ ಜನರು ತುಂಬಿಕೊಂಡಿದ್ದರು. ಬೆಳಗ್ಗೆ 9.45ಕ್ಕೆ ಫಸ್ಟ್ ಡೇ ಫಸ್ಟ್ ಶೋ ಹೌಸ್ಫುಲ್. ಇಂಟರ್ವಲ್ನಲ್ಲಿ ಬಂದು ನೋಡಿದ್ರೆ, ಎರಡು ಥಿಯೇಟರ್ ಜನ ಇದ್ರು. 55 ದಿನ , 225 ಶೋಗಳು ನಿರಂತರವಾಗಿ ಬಾಲ್ಕನಿ ಫುಲ್ ಆಗಿತ್ತು. ಕಪಾಲಿ ಥಿಯೇಟರ್ನಲ್ಲೇ 21 ವಾರ ಸಿನಿಮಾ ಓಡಿತ್ತು."
'ಉಲ್ಟಾಪಲ್ಟಾ' ಬಜೆಟ್ ಎಷ್ಟು ಹೇಳಬಹುದಾ?
" ಅದರಲ್ಲಿ ಗುಟ್ಟೇನಿದೆ? ನಾವು ಆಗ ಖರ್ಚು ಮಾಡಿದ್ದು 36 ಲಕ್ಷ ರೂ. ಅದರಲ್ಲಿ ಮೂರು ಏರಿಯಾಗಳನ್ನು ಸಿನಿಮಾ ರಿಲೀಸ್ಗೂ ಮುನ್ನವೇ ನಮ್ಮ ವಿತರಕರು ಮಾರಿಸಿಬಿಟ್ಟರು. ಮೈಸೂರು, ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ,ಬಳ್ಳಾರಿ. ಇಲ್ಲಿ ಮಾರಿದಾಗ ಏನು ದುಡ್ಡು ಬಂತೋ ಅದೇ. ಲಾಭ ಎಲ್ಲಾ ಅವರಿಗೆ ಹೋಯ್ತು. ನನಗೆ ನೆನಪಿದ್ದಂತೆ ಆಗ ಸುಮಾರು ಒಂದೂವರೆ ಕೋಟಿ ರೂ. ಬ್ಯುಸಿನೆಸ್ ಮಾಡಿತ್ತು. ಅಂದರೆ, ಈಗ ಸುಮಾರು 20 ರಿಂದ 25 ಕೋಟಿ ರೂ.ಗೆ ಸಮ ಅನ್ನಬಹುದು. ಆಗ ಬಾಲ್ಕನಿ 20 ರೂ. ಮಿಡಲ್ ಕ್ಲಾಸ್ 15 ರೂ. ಫ್ರಂಟ್ 10 ರೂ. ಟಿಕೆಟ್ ಬೆಲೆ ಇತ್ತು."
ಮತ್ತೆ ಜೊತೆಯಾಗಿ ಸಿನಿಮಾ ಮಾಡ್ತೀರಾ?
"ಮತ್ತೆ ಜೊತೆಯಲ್ಲಿ ಸೇರ್ಕೊಂಡು ಫ್ಯಾಷನೇಟ್ ಆಗಿ ಬಾರಪ್ಪ ಸಿನಿಮಾ ಮಾಡೋಣ ಅನ್ನೋದು ಏನಿಲ್ಲ. ಎದುರಿಗೆ ಸಿಕ್ಕಾಗ ಮಾತಾಡುತ್ತೇವೆ ಅಷ್ಟೇ. ಅವರೆಲ್ಲರಿಗೂ ಜೀವನ ಬೇರೆ ಬೇರೆ ಕಡೆ ಕರ್ಕೊಂಡು ಹೋಗಿದೆ. ನಮಗೂ ಕರ್ಕೊಂಡು ಹೋಗಿದೆ. ಈಗ 50 ಜನ ಸೇರ್ಕೊಂಡು ಕ್ರೌಂಡ್ ಫಂಡ್ ಮಾಡಿ ಸಿನಿಮಾ ಮಾಡುತ್ತಿದ್ದೇವೆ."
ಮತ್ಯಾಕೆ ಆ ಸಿನಿಮಾ ಮಾಡಿಲ್ಲ?
" ಆಗ ಬಹಳಷ್ಟು ಮಂದಿ ನಿರ್ಮಾಪಕರು ನನ್ನ ಕೇಳಿಕೊಂಡು ಬಂದಿದ್ದರು. ನಾನು ಒಂದು ಕಡೆ ಬರೆದಿಟ್ಟಿದ್ದೆ ಯಾರು ಬಂದಿದ್ದರು ಅಂತ. 23 ನಿರ್ಮಾಪಕರು ಬಂದಿದ್ದರು. ಅದರಲ್ಲಿ ಶೇ.90ರಷ್ಟು ಮಂದಿಗೆ ರಿಮೇಕ್ ಬೇಕಾಗಿತ್ತು. ನಾನು ಆಗ ರಿಮೇಕ್ ಮಾಡಲ್ಲ ಅಂತ ಹೇಳಿದ್ದೆ. ನಾನು ಹೇಳಿದ್ದು ಅವರಿಗೆ ಇಷ್ಟ ಆಗುತ್ತಿರಲಿಲ್ಲ. ಅವರು ಹೇಳಿದ್ದು ನನಗೆ ಇಷ್ಟ ಆಗುತ್ತಿರಲಿಲ್ಲ. ಆ ಮೇಲೆ ನಾನೇ 6 ವರ್ಷಗಳ ಬಳಿಕ ಒಂದು ಸಿನಿಮಾ ನಿರ್ಮಾಣ ಮಾಡಿದ್ದೆ. ಅದು ಗೆಲ್ಲಲಿಲ್ಲ. ಈಗ ನಾನು ಒಂದು ಸಿನಿಮಾ ಮಾಡುತ್ತಿದ್ದೇನೆ. ಅದರ ಹೆಸರು 'ಈಗ' ಇದು ತೆಲುಗು 'ಈಗ' ಅಲ್ಲ. ಈ ಸಿನಿಮಾ ಕ್ರೌಡ್ ಫಂಡೆಡ್ ಸಿನಿಮಾ."
ಕ್ರೌಡ್ ಫಂಡ್ ಹೇಗೆ?
"ಕನಿಷ್ಠ ಒಂದು ಲಕ್ಷ ಹಾಕಬೇಕು. ಗರಿಷ್ಠ 5 ಲಕ್ಷ ಹಾಕಬೇಕು. ಸ್ನೇಹಿತರ ಮಧ್ಯೆ ಚಾಲ್ತಿಯಲ್ಲಿ ಬಿಟ್ಟು. ಆಮೇಲೆ ಅವರ ಸರ್ಕಲ್ ಹೀಗೆ ಎಲ್ಲಾ ಸೇರಿ ಅರ್ಧ ಸಿನಿಮಾ ಮುಗಿದಿದೆ. ಮೂರು ಕಥೆಗಳು ಸೇರಿ ಒಂದು ಸಿನಿಮಾ ಮಾಡುತ್ತಿದ್ದೇವೆ. ಒಂದು ಕಥೆ ಕಂಪ್ಲೀಟ್ ಆಗಿದೆ. ಅದು ಮೊದಲಾರ್ಧ. ಇನ್ನು ಎರಡು ಕಥೆಗಳು ಮುಂದಿನ ತಿಂಗಳು ಶುರು ಮಾಡುತ್ತೇವೆ."
'ಈಗ' ಸಿನಿಮಾ ಪ್ರಯೋಗಾತ್ಮಕ ಸಿನಿಮಾವೇ?
" ಪ್ರಯೋಗಾತ್ಮಕ ಸಿನಿಮಾ ಅಂದರೆ ಏನು? ಇದು ರೆಗ್ಯೂಲರ್ ಸಿನಿಮಾ ಅಂತೂ ಅಲ್ಲ. ಜನ ಯಾವುದು ತೆಗೆದುಕೊಳ್ಳುತ್ತಾರೆ ಅನ್ನೋದು ಒಂದಾಗುತ್ತೆ. ಸದ್ಯ ಸಿನಿಮಾದ ಎಕಾನಮಿ ಪೂರ್ತಿ ಬದಲಾಗಿದೆ. ಈ ಸಿನಿಮಾದ ಎಕಾನಮಿಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ತೆಗೆದುಕೊಂಡು ಹೋಗಬೇಕು ಅನ್ನೋದು ನನ್ನಗುರಿ. ಇನ್ನು ಈ ಸಿನಿಮಾ ಇಡೀ ಪ್ರಪಂಚ ಸುತ್ತಬೇಕು ಅನ್ನೋದು ನನ್ನ ಆಶಯ. "
'ಈಗ'ದಲ್ಲಿ ಯಾರೆಲ್ಲಾ ಇದ್ದಾರೆ?
" ಮೊದಲ ಕಥೆ 'ಅರುಂಧತಿ'. ಪ್ರತಿಭಾ ನಂದಕುಮಾರ್ ಅವರ ಕಥೆ. ಶ್ರುತಿ ಹರಿಹರನ್ ಈ ಸಿನಿಮಾದಲ್ಲಿ ನಟಿಸಿದ್ದಾರೆ. 'ಮುಟ್ಟಿಸಿಕೊಂಡವರು'ನಲ್ಲಿ ಕವಲುದಾರಿ ಸಂಪತ್ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಇನ್ನು ಮೊಹಮ್ಮದ್ ಕಥೆಯಲ್ಲಿ ಸರ್ದಾರ್ ಸತ್ಯ ಪ್ರಮುಖ ಪಾತ್ರ ಮಾಡುತ್ತಿದ್ದಾರೆ." ಎನ್ನುತ್ತಾರೆ ಎನ್ ಎಸ್ ಶಂಕರ್.