ಎರಡು ದಶಕಗಳಿಂದ ಕಿರುತೆರೆಯಲ್ಲಿ ಮಿಂಚುತ್ತಿರುವ ಹೇಮಾ ಬೆಳ್ಳೂರು ಬಗ್ಗೆ ನಿಮಗೆಷ್ಟು ಗೊತ್ತು?
ಇವರು ಕನ್ನಡ ಕಿರುತೆರೆಯ ಜನಪ್ರಿಯ ನಟಿ. ಎರಡೂವರೆ ದಶಕಗಳಿಂದ ಧಾರಾವಾಹಿ ಹಾಗೂ ಸಿನಿಮಾ ಎರಡರಲ್ಲೂ ನಟಿಸುತ್ತಿದ್ದಾರೆ. ಈಗ ಸ್ಟಾರ್ ಸುವರ್ಣದಲ್ಲಿ ಪ್ರಸಾರ ಆಗುತ್ತಿರುವ ಹೊಚ್ಚ ಹೊಸ ಧಾರಾವಾಹಿ 'ಸ್ನೇಹದ ಕಡಲಲ್ಲಿ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಬಹುಭಾಷಾ ನಟ ಸುಮನ್ ಇದೇ ಮೊದಲ ಬಾರಿಗೆ ಕಿರುತೆರೆಯಲ್ಲಿ ನಟಿಸುತ್ತಿದ್ದು, ಅವರ ಎರಡನೇ ಪತ್ನಿಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.
ಹೇಮಾ ಬೆಳ್ಳೂರು ಸುಮಾರು 25 ವರ್ಷಗಳಿಂದ ಕಿರುತೆರೆಯಲ್ಲಿ ನಟಿಸುತ್ತಿದ್ದಾರೆ. 'ಮಾಯಾಮೃಗ', 'ಮನ್ವಂತರ', ಇತ್ತೀಚೆಗೆ 'ಗಂಗೆ-ಗೌರಿ', 'ನನ್ನರಸಿ ರಾಧೆ', 'ಮರಳಿ ಬಂದಳು ಸೀತೆ','ಸುಪ್ನಾತಿ ಸುಬ್ಬಿ', 'ಅಕ್ಕ', ಮಳೆಬಿಲ್ಲು','ಸೀತಾ ವಲ್ಲಭ'ದಂತಹ ಧಾರಾವಾಹಿಗಳಲ್ಲಿ ನಟಿಸಿ, ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿದ್ದಾರೆ. ಹಾಗಂತ ಕೇವಲ ನಟನೆಯಷ್ಟೇ ಅಲ್ಲ. ಕೇಕ್ ಮಾಡುವುದರಲ್ಲಿಯೂ ಎಕ್ಸ್ಪರ್ಟ್. ಇತ್ತೀಚೆಗೆ ಕೇಕ್ ಮಾಡುವುದನ್ನೂ ಹೇಳಿಕೊಡುತ್ತಿದ್ದಾರೆ. ಈ ಸಂದರ್ಭದಲ್ಲಿ ಹೇಮಾ ಬೆಳ್ಳೂರು ಅವರು ಫಿಲ್ಮಿಬೀಟ್ ಕನ್ನಡಕ್ಕೆ ನೀಡಿದ ಸಂದರ್ಶನದಲ್ಲಿ ತನ್ನ ಜರ್ನಿಯನ್ನು ಮೆಲುಕು ಹಾಕಿದ್ದಾರೆ.

ನಿಮ್ಮ ಹುಟ್ಟೂರು ಯಾವುದು? ನಟನೆ ಕಡೆ ಆಸಕ್ತಿ ಬೆಳೆದಿದ್ದೇಗೆ?
"ನಾನು ಹುಟ್ಟಿದ್ದು ಇಲ್ಲೇ ಮೈಸೂರು. ಆದರೆ, ನನ್ನ ಶಿಕ್ಷಣವೆಲ್ಲ ಪೂನಾದಲ್ಲಿ ಆಗಿದ್ದು. ಅಲ್ಲಿ ನನ್ನ ತಂದೆ ಪೂನಾದಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿ ನಾನು 14 ವರ್ಷ ಇದ್ದೆ. ಅಲ್ಲಿಂದ ನಾನು ಮತ್ತೆ ಇಲ್ಲಿಗೆ ಬಂದು ಕಾಲೇಜು ಶಿಕ್ಷಣ ಎಲ್ಲಾ ಆಯ್ತು. ಮುಂಚೆಯಿಂದಲೂ ಆಕ್ಟಿಂಗ್ ಮಾಡಬೇಕು ಅಂತ ಆಸೆಯಿತ್ತು. ಡ್ಯಾನ್ಸ್, ಡ್ರಾಮಾ ಎಲ್ಲದರಲ್ಲೂ ಭಾಗವಹಿಸುತ್ತಿದ್ದೆ. ಆಮೇಲೆ ನನ್ನ ತಂದೆಗೆ ಆಕ್ಟಿಂಗ್ನಲ್ಲಿ ಇಂಟ್ರೆಸ್ಟ್ ಇದೆ ಅಂತ ಹೇಳಿದೆ. ಅವರ ಸಂಬಂಧಿಯೊಬ್ಬರು ಇದ್ದರು. ಅವರು ಬಿ.ಸುರೇಶ್ ಸರ್ ಅವರ ಫ್ಯಾಮಿಲಿಗೆ ಪರಿಚಯ ಮಾಡಿಕೊಟ್ಟರು. ಅವರದ್ದೊಂದು ಚಿಗುರು ಎನ್ನುವ ಸೀರಿಯಲ್ನಲ್ಲಿ ಚಿಕ್ಕದೊಂದು ಪಾತ್ರ ಮಾಡಿದ್ದೆ. ಅದಾದ್ಮೇಲೆ ಹೀಗೆ ಸಂಪರ್ಕ ಬೆಳೀತಾ ಹೋಯ್ತು. ನಾನು ಸಿನಿಮಾಗಳನ್ನು ನೋಡಿದ ಬಳಿಕ ಕನ್ನಡಿ ಮುಂದೆ ನಿಂತು ಡ್ಯಾನ್ಸ್ ಮಾಡುವುದು, ಡೈಲಾಗ್ಗಳನ್ನು ಹೇಳುವುದನ್ನು ಮಾಡುತ್ತಿದ್ದೆ. ಹಾಗೇ ಆಸಕ್ತಿ ಬೆಳೆಯುತ್ತಾ ಹೋಯ್ತು. ಮತ್ತೆ ಹಾಡು ಕೇಳುವುದು ಎಲ್ಲವೂ ಇಷ್ಟ ಆಗುತ್ತಿತ್ತು. ಸ್ಕೂಲ್ನಲ್ಲಿ ನಡೆಯುವ ಡ್ಯಾನ್ಸ್, ಡ್ರಾಮಾ ಎಲ್ಲದರಲ್ಲೂ ನನ್ನನ್ನೇ ತೆಗೆದುಕೊಳ್ಳುತ್ತಿದ್ದರು. ಆಗ ಖುಷಿಯಾಗಿ ಭಾಗವಹಿಸುತ್ತಿದ್ದೆ. ಹಾಗೇ ಆಸಕ್ತಿ ಬೆಳೀತು."
ನಿಮ್ಮ ಮೊದಲ ಸಿನಿಮಾ ಬಗ್ಗೆ ಹೇಳಿ?
"ಸೀರಿಯಲ್ನಲ್ಲಿ ಮಾಡುತ್ತಿದ್ದಂತೆ ನನಗೆ ಸೂರ್ಯವಂಶ ಸಿನಿಮಾ ಸಿಕ್ಕಿತು. ಅದರಲ್ಲಿ ವಿಷ್ಣುವರ್ಧನ್ ಸರ್ ಅವರ ತಂಗಿ ಪಾತ್ರ ಮಾಡಿದ್ದೆ. ಅದೇ ಮೊದಲ ಸಿನಿಮಾ. ಹಾಗೇ ಶುರುವಾಯ್ತಾ ಹೋಯ್ತು. ಆಗ ನಾನು ತುಂಬಾ ಚಿಕ್ಕವಳಿದ್ದೆ. ಈಗ ಇಂಡಸ್ಟ್ರಿಗೆ ಬಂದು 26, 27 ವರ್ಷ ಆಯ್ತು."
ನಟನೆಗೆ ನಿಮ್ಮ ಮನೆಯಲ್ಲಿ ವಿರೋಧವಿತ್ತಾ?
"ನಮ್ಮ ತಂದೆ ಇಂಜಿನಿಯರ್. ಹಾಗಾಗಿ ಮಗಳು ಚೆನ್ನಾಗಿ ಓದಬೇಕು ಅಂತಿತ್ತು. ಅವರಿಗೆ ಸ್ವಲ್ಪ ಇಷ್ಟವಿರಲಿಲ್ಲ. ಅಮ್ಮ ನಟನೆ ಮಾಡಲಿ ಅಂತ ಬೆಂಬಲ ಕೊಟ್ಟರು. ಆಮೇಲೆ ಅವರಿಗೆ ಖುಷಿ ಆಯ್ತು. ಇದೇ ಫೀಲ್ಡ್ನಲ್ಲಿ ಹೆಸರು, ದುಡ್ಡು ಸಂಪಾದನೆ ಮಾಡುತ್ತಿದ್ದಾಳೆ ಅಂತ ಅವರಿಗೂ ಖುಷಿ ಆಯ್ತು."

2 ದಶಕಗಳ ಹಿಂದಿನ ಸೀರಿಯಲ್ ಹೇಗಿತ್ತು?
"ಆಗ ಸೀರಿಯಲ್ ತುಂಬಾನೇ ಸಿಂಪಲ್ ಇತ್ತು. ಕತೆ ಮೇಲೆ ಜಾಸ್ತಿ ಫೋಕಸ್ ಇರುತ್ತಿತ್ತು. ಮೇಕಿಂಗ್ ಕೂಡ ಅಷ್ಟೇ ಸಿಂಪಲ್ ಆಗಿ ಮಾಡುತ್ತಿದ್ದರು. ಮಧ್ಯಮ ವರ್ಗದ ಮನೆ. ಸ್ವಲ್ಪ ಶ್ರೀಮಂತರಿದ್ದರೆ, ಸ್ವಲ್ಪ ಚೆನ್ನಾಗಿರುತ್ತೆ. ಆತರ ಇರುತ್ತಿತ್ತು. ಈಗ ಎಲ್ಲರೂ ಅದ್ಧೂರಿಯಾಗಿ ಮೇಕಿಂಗ್ ಮಾಡುತ್ತಾರೆ. ಜನರು ಕೂಡ ಅದನ್ನೇ ನೋಡುವುದಕ್ಕೆ ಇಷ್ಟ ಪಡುತ್ತಾರೆ. ಈಗ ಹೀರೋ ಹೀರೋಯಿನ್ಗಳನ್ನು ಗ್ಲಾಮರಸ್ ಆಗಿ ತೋರಿಸುತ್ತಾರೆ. ಮೇಕಪ್, ಡ್ರೆಸ್, ಕಾಸ್ಟ್ಯೂಮ್, ಮನೆಗಳು, ಕಾರುಗಳು ಎಲ್ಲವನ್ನೂ ಅದ್ಧೂರಿಯಾಗಿ ತೋರಿಸುತ್ತಾರೆ. ಟ್ರೆಂಡ್ ಚೇಂಜ್ ಆದಾಗ ಸೀರಿಯಲ್ ಕೂಡ ಅದೇ ಆಗುತ್ತೆ."
ಹೆಚ್ಚಾಗಿ ಸಿನಿಮಾಗಳಲ್ಯಾಕೆ ನಟಿಸಲಿಲ್ಲ?
"ನನಗೆ ಸಿನಿಮಾದಲ್ಲಿ ತಂಗಿ, ಸ್ನೇಹಿತೆಯ ಪಾತ್ರಗಳು ಸಿಗುತ್ತಿತ್ತು. ನನಗೆ ಆಕ್ಟಿಂಗ್ ತೋರಿಸಬೇಕು ಎನ್ನುವಂತಹ ಅವಕಾಶ ಬರಲಿಲ್ಲ. ಹಾಗಾಗಿ ಸೀರಿಯಲ್ನಲ್ಲಿ ನನಗೆ ಹೆಚ್ಚು ಅವಕಾಶವಿತ್ತು. ಈ ಕಾರಣಕ್ಕೆ ನಾನು ಧಾರಾವಾಹಿಗಳ ಕಡೆಗೆ ಹೆಚ್ಚು ಗಮನ ಕೊಟ್ಟೆ ಅಷ್ಟೇ. ಆಮೇಲೆ ಮದುವೆ ಆಯ್ತು. ಫ್ಯಾಮಿಲಿ ಕಡೆ ಗಮನ ಕೊಡುವುದು ಅಂತಾಯ್ತು. ಮತ್ತೆ ನಮಗೆ ನಾವು ಬೌಂಡರಿ ಹಾಕಿಕೊಂಡ್ವಿ. ಹಾಗಾಗಿ ಹೆಚ್ಚಾಗಿ ಸೀರಿಯಲ್ನಲ್ಲಿ ನಟಿಸುವುದಕ್ಕೆ ಶುರು ಮಾಡಿದೆ."
ನಿಮ್ಮ ಲವ್ ಸ್ಟೋರಿ ಬಗ್ಗೆ ಹೇಳಿ
"ನಾನು ಮನ್ವಂತರ ಎನ್ನುವ ಒಂದು ಸೀರಿಯಲ್ ಮಾಡುತ್ತಿದ್ದೆ. ಅವರು ಅದೇ ಸೀರಿಯಲ್ನಲ್ಲಿ ಸೀತರಾಂ ಸರ್ ಜೊತೆ ಕೆಲಸ ಮಾಡುತ್ತಿದ್ದರು. ಆ ವೇಳೆ ಮಾತುಕತೆ ಆಗಿ ಪ್ರೀತಿ ಹುಟ್ಟಿತು. ಆ ಸೀರಿಯಲ್ 2002ನಲ್ಲಿ ಮುಗೀತು. 2004ನಲ್ಲಿ ನಾವು ಮದುವೆ ಆಗೋಣ ಅಂತ ನಿರ್ಧರಿಸಿದ್ವಿ. ನಮಗೆ ಒಬ್ಬಳು ಮಗಳು ಇದ್ದಾಳೆ. 2012ಕ್ಕೆ ನಮ್ಮ ಮನೆಯವರೇ ಪ್ರೊಡಕ್ಷನ್ ಶುರು ಮಾಡಿದರು. ಇದೂವರೆಗೂ ಸುಮಾರು 20 ಸೀರಿಯಲ್ ಆಗಿವೆ. ಈಗ ಸಿನಿಮಾ ಕೂಡ ಮಾಡುತ್ತಿದ್ದಾರೆ. ಅದು 'ರೈಸ್ ಆಫ್ ಅಶೋಕ' ಸಿನಿಮಾ."
ಕೇಕ್ ಮಾಡುವುದರಲ್ಲೂ ಎಕ್ಸ್ಪರ್ಟ್ ಅಂತೆ
"ನಾನು ಕೇಕ್ ಮಾಡುವುದನ್ನು ಬ್ಯುಸಿನೆಸ್ ಅನ್ನುವುದಕ್ಕಿಂತ ಟೀಚಿಂಗ್ ಆಗಿ ನೀಡುತ್ತಿದ್ದೇನೆ. ನಾನು ಕೋವಿಡ್ ಟೈಮ್ನಲ್ಲಿ ತುಂಬಾ ಟೈಮ್ ಇತ್ತು. ಆಗ ನಾನು ಡಿಫ್ರೆಂಡ್ ಆಗಿ ಕಲಿಯೋಣ ಅಂತ ಕೇಕ್ ಮಾಡುವುದನ್ನು ಕಲಿತುಕೊಂಡೆ. ಕೋವಿಡ್ ಸಮಯದಲ್ಲಿ ಸೀರಿಯಲ್ ನಡೆಯುತ್ತಿದ್ದರೂ, ಒಂದಿಷ್ಟು ಕೋರ್ಸ್ಗಳನ್ನು ತೆಗೆದುಕೊಂಡೆ. ನ್ಯೂಟ್ರಿಷಿಯಲ್, ಪರ್ಸನಲ್ ಯೋಗಾ ಕೋರ್ಸ್ ಮಾಡಿಕೊಂಡೆ. ಆಗ ಬೇಕಿಂಗ್ ಕೋರ್ಸ್ ಕೂಡ ಮಾಡಿಕೊಂಡೆ. ಇನ್ಸ್ಟಾಗ್ರಾಂ ಪೇಜ್ ಶುರು ಮಾಡಿದೆ. ಸುಮಾರು ಮೂರು ವರ್ಷದಲ್ಲಿ ಒಂದು ಸಾವಿರ ಕೇಕ್ ಆರ್ಡರ್ ತೆಗೆದುಕೊಂಡಿದ್ದೇನೆ. ಈಗ ಕೇಕ್ ಮಾಡುವುದು ಹೇಗೆ ಅಂತ ಟೀಚಿಂಗ್ ಮಾಡುತ್ತಿದ್ದೇನೆ."
ಸ್ನೇಹದ ಕಡಲಲ್ಲಿ ಧಾರಾವಾಹಿ ಒಪ್ಪಿದ್ದೇಕೆ?
"ಈ ಪಾತ್ರ ತುಂಬಾನೆ ಚೆನ್ನಾಗಿದೆ. ಅದು ಹೇಗೆ ಅಂದರೆ, ನಾನು ಎರಡನೇ ಪತ್ನಿ. ಸಾಮಾನ್ಯವಾಗಿ ಮಲತಾಯಿ ಅಂದರೆ, ಕ್ರೂರಿಯಾಗಿರುತ್ತಾಳೆ ಅಂತಿದೆ. ಆದರೆ, ಈ ಪಾತ್ರ ತುಂಬಾನೇ ಡಿಂಪ್ರೆಂಟ್ ಆಗಿದೆ. ತನ್ನ ಗಂಡನನ್ನು ತುಂಬಾನೇ ಪ್ರೀಸುತ್ತಿರುತ್ತಾಳೆ. ಗಂಡನ ಮೊದಲನೇ ಹೆಂಡತಿ ಮಗ ಅವರನ್ನೂ ತನ್ನ ಮಗನ ಹಾಗೆ ನೋಡುತ್ತಿರುತ್ತಾಳೆ. ಆದರೆ, ಮಗನಿಗೆ ತಂದೆಯಿಂದ ದೂರ ಆಗುವುದಕ್ಕೆ ನಾನೇ ಕಾರಣ ಎಂದುಕೊಂಡಿದ್ದಾರೆ. ಆದರೆ, ಅದು ಹಾಗಾಗಿರಲ್ಲ."
ಸುಮನ್ ಜೊತೆ ನಟಿಸಿದ ಅನುಭವ ಹೇಗಿತ್ತು?
"ಸುಮನ್ ಅವರೊಂದಿಗೆ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದು ನಿಜಕ್ಕೂ ನನಗೆ ತುಂಬಾನೇ ಖುಷಿ ಆಯ್ತು. ಎಷ್ಟು ದೊಡ್ಡ ಆರ್ಟಿಸ್ಟ್? ಎಷ್ಟೊಂದು ಸಿನಿಮಾಗಳಲ್ಲಿ ಮಾಡಿದ್ದಾರೆ. ನನ್ನ ಹಾಗೂ ಅವರ ಬಾಂಡಿಂಗ್ ಮೊದಲ ಸೀನ್ನಿಂದಾನೂ ಕೆಮಿಸ್ಟ್ರಿ ಒಂಥರಾ ನಿಜವಾಗಲೂ ಗಂಡ ಹೆಂಡತಿಯೇನೋ ಎನ್ನುವಂತೆ ಇತ್ತು. ಅವರು ಅಷ್ಟೇ ಮತಾಡಿಸಿದಾಗ ಎಲ್ಲೂ ದೊಡ್ಡ ಆರ್ಟಿಸ್ಟ್ ಎನ್ನುವುದು ಕಾಣಿಸಲಿಲ್ಲ. ನನಗೆ ನಟನೆ ಮಾಡುವುದು ತುಂಬಾನೇ ಇಷ್ಟ ಆಯ್ತು. ನಮ್ಮಿಬ್ಬರ ಸೀನ್ಸ್ ಅಂತೂ ತುಂಬಾನೇ ಕ್ಯೂಟ್ ಆಗಿದೆ. ಆಕ್ಟಿಂಗ್ ಮಾಡುತ್ತಿರಬೇಕಾದರೇನೆ, ಡೈರೆಕ್ಟರ್ ಪ್ರೀತಂ ಶೆಟ್ಟಿ ಸರ್ ಈ ಜೋಡಿನೇ ತುಂಬಾ ಕ್ಯೂಟ್ ಆಗಿದೆ ಎಂದು ಹೇಳುತ್ತಿದ್ದರು. ಮುಂದೇನೂ ಅಷ್ಟೇ ಚೆನ್ನಾಗಿದೆ. ಇದೊಂದು ಒಳ್ಳೆ ಫ್ಯಾಮಿಲಿ ಸ್ಟೋರಿ."


Click it and Unblock the Notifications











