"ಕಾಂಗ್ರೆಸ್ ಸರ್ಕಾರದಂತೆ ನಾನೂ ಗ್ಯಾರಂಟಿ ಕೊಡ್ತೀನಿ": ಫಿಲ್ಮ್ ಚೇಂಬರ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಎನ್ಎಂ ಸುರೇಶ್
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆಗೆ ದಿನಗಳು ಸನಿಹವಾಗುತ್ತಿವೆ. ಈ ಬೆನ್ನಲ್ಲೇ ಅಧ್ಯಕ್ಷ ಸ್ಥಾನದ ಆಕ್ಷಾಂಕಿಗಳು ಪರೋಕ್ಷವಾಗಿ ತಮ್ಮ ಆಸೆಗಳನ್ನು ಹೊರ ಹಾಕುತ್ತಿದ್ದಾರೆ. ಮತ್ತೆ ಕೆಲವರು ತೆರೆಮರೆಯಲ್ಲಿಯೇ ಕಸರತ್ತು ನಡೆಸುತ್ತಿದ್ದಾರೆ. ಸದ್ಯ ನಿರ್ಮಾಪಕ ಎನ್ಎಂ ಸುರೇಶ್ ತಾನು ಫಿಲ್ಮ್ ಚೇಂಬರ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಎಂದು ಬಹಿರಂಗವೇ ಹೇಳಿಕೊಂಡಿದ್ದಾರೆ.
ಇತ್ತೀಚೆಗೆ ಕಿಚ್ಚ ಸುದೀಪ್ ಹಾಗೂ ನಿರ್ಮಾಪಕ ಎಂಎನ್ ಕುಮಾರ್ ವಿವಾದದಲ್ಲಿ ಎನ್ಎಂ ಸುರೇಶ್ ಹೆಸರು ಕೂಡ ಕೇಳಿ ಬಂದಿತ್ತು. ಕಿಚ್ಚ ಸುದೀಪ್ ಇವರಿಗೂ ಮಾನಹಾನಿ ನೊಟೀಸ್ ಅನ್ನು ಕಳುಹಿಸಿದ್ದರು. ಈ ಬೆನ್ನಲ್ಲೇ ಎನ್ಎಂ ಸುರೇಶ್ ಎರಡು ಬಾರಿ ಅಧ್ಯಕ್ಷ ಸ್ಥಾನವನ್ನು ಹಿರಿಯರಿಗಾಗಿ ತ್ಯಾಗ ಮಾಡಿದ್ದೇನೆ. ಈ ಬಾರಿ ಯಾವುದೇ ಒತ್ತಡಕ್ಕೆ ಮಣಿಯುವುದಿಲ್ಲ. ನಾನು ಪ್ರಬಲ ಆಕಾಂಕ್ಷಿ ಎಂದಿದ್ದಾರೆ.

ಸದ್ಯ ಫಿಲ್ಮ್ ಚೇಂಬರ್ ಅಧ್ಯಕ್ಷರಾಗಿರುವ ಭಾ ಮಾ ಹರೀಶ್ ಅವರ ಅಧಿಕಾರದ ಅವಧಿ ಸೆಪ್ಟೆಂಬರ್ಗೆ ಮುಗಿಯಲಿದೆ. ಹೀಗಾಗಿ ಸೆಪ್ಟೆಂಬರ್ 23ಕ್ಕೆ ಚುನಾವಣೆ ನಡೆಸಲು ತೀರ್ಮಾನಿಸಲಾಗಿದೆ. ಈ ಸಂಬಂಧ ಎನ್ಎಂ ಸುರೇಶ್ ಎರಡು ತಿಂಗಳಿಗೂ ಮುನ್ನ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದು, ಫಿಲ್ಮಿಬೀಟ್ ಜೊತೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
ಫಿಲ್ಮ್ ಚೇಂಬರ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡುತ್ತೀದ್ದೀರಾ?
"ನಾನು ಹಿರಿಯರಿಗೆ ಗೌರವ ಕೊಡುವ ವ್ಯಕ್ತಿ. ಎರಡು ಬಾರಿನೂ ನಾನು ತ್ಯಾಗ ಮಾಡಿದೆ. ಈ ಬಾರಿ ಯಾವುದೇ ಒತ್ತಡಕ್ಕೆ ಮಣಿಯದೆ ನಾನಂತೂ ವಾಣಿಜ್ಯ ಮಂಡಳಿಯ ವಿತರಕ ವಲಯದ ಅಧ್ಯಕ್ಷ ಸ್ಥಾನಕ್ಕೆ ನಾನು ಆಕಾಂಕ್ಷಿ ಹಾಗೂ ಸ್ಪರ್ಧೆ ಮಾಡುತ್ತಿದ್ದೇನೆ."
ಈ ಸ್ಥಾನಕ್ಕೆ ಸ್ಪರ್ಧಿಸಲು ನೀವು ಎಷ್ಟು ಅರ್ಹರು?
" ಸಿನಿಮಾರಂಗಕ್ಕೆ ವಾಣಿಜ್ಯ ಮಂಡಳಿ ಒಂದು ದೇವಸ್ಥಾನವಿದ್ದಂತೆ. ಆ ದೇವಸ್ಥಾನದಲ್ಲಿ ದುಡಿದ ಹಲವು ಮಂದಿ ಇದ್ದಾರೆ. ಆದರೆ, ಇತ್ತೀಚೆಗೆ ನಾನೂ ಸೇರಿ ಕೆಲವರ ಪಾತ್ರ ಏನೂ ಇಲ್ಲ. ಆದರೆ, 20 ವರ್ಷಗಳ ಅನುಭವಿದೆ. ದೊಡ್ಡ ದೊಡ್ಡ ಸಿನಿಮಾಗಳನ್ನು ಮಾಡಿದ್ದೇನೆ. ಹೊಸಬರಿಗೆ ಕೋಟಿ ಕೋಟಿ ಹಾಕಿ ಸಿನಿಮಾ ಮಾಡಿದ್ದೇನೆ. ಕೋಟಿ ಕಳೆದುಉಕೊಂಡಿದ್ದೇನೆ. ಕೋಟಿ ಗಳಿಸಿದ್ದೇನೆ. ವಾಣಿಜ್ಯ ಮಂಡಳಿಯಲ್ಲಿ ಮೂರು ಬಾರಿ ಕಾರ್ಯದರ್ಶಿಯಾಗಿ, ನಿರ್ಮಾಪಕರ ಸಂಘದ ಉಪಾಧ್ಯಕ್ಷನಾಗಿ ಅನುಭವವಿದೆ. ಎಲ್ಲಾ ವಲಯಗಳನ್ನು ಸಮತೋಲದಿಂದ ತೆಗೆದುಕೊಂಡು ಹೋಗುವ ಶಕ್ತಿ ಇದೆ ಅಂತ ಭಾವಿಸಿದ್ದೇನೆ."

ನಿಮ್ಮ ಬೆಂಬಲಕ್ಕೆ ಯಾರಿದ್ದಾರೆ?
"ಹೆಚ್ ಡಿ ಗಂಗರಾಜು ಅಂತಹ ವ್ಯಕ್ತಿ ವಾಣಿಜ್ಯ ಮಂಡಳಿ ಬಿಲ್ಡಿಂಗ್ ಕಟ್ಟೋಕೆ ತಮ್ಮ ಪ್ರಾಪರ್ಟಿಯನ್ನು ಅಡವಿಟ್ಟು ದುಡ್ಡು ತಂದು ಬಿಲ್ಡಿಂಗ್ ಕಟ್ಟಿದ್ರು. ಆರ್ಎಸ್ ಗೌಡ ಅಂತಹ ವ್ಯಕ್ತಿ ನಿರ್ಮಾಪಕ ಸಂಘಕ್ಕೆ ಒಂದು ಕೋಟಿ ಹಣವನ್ನು ಬಡ್ಡಿ ಇಲ್ಲದೆ ಒಂದು ವರ್ಷಕ್ಕೆ ಕೊಟ್ಟಿದ್ದಾರೆ. ಅಂತಹ ದಾನಿಗಳು ಇದ್ದಾರೆ. ಸಾರಾ ಗೋವಿಂದು ಎಲ್ಲಾ ಎಷ್ಟು ಕೆಲಸ ಮಾಡಿದ್ದಾರೆ. ಇವರನ್ನೆಲ್ಲಾ ಒಳಗೊಂಡು ಅವರ ಕಾನ್ಫಿಡೆನ್ಸ್ ತಗೊಂಡು ಕೆಲಸ ಮಾಡುತ್ತೇನೆ ಅನ್ನೋ ಭರವಸೆಯಿದೆ."
ನೀವು ಚುನಾವಣೆಯಲ್ಲಿ ಗೆಲ್ಲುತ್ತೀರಾ? ನಂಬಿಕೆ ಇದೆಯಾ?
" ಇದೂವರೆಗೂ ಎಲ್ಲೂ ಚುನಾವಣೆಯಲ್ಲಿ ನಾನು ಸೋತಿಲ್ಲ. 100 ಪರ್ಸೆಂಟ್ ಈ ಬಾರಿಗೂ ಗೆಲ್ಲುತ್ತೇನೆ ಅನ್ನೋ ನಂಬಿಕೆ ಇದೆ. ಹಾಗಂತ ಓವರ್ ಕಾನ್ಫಿಡೆನ್ಸ್ನಲ್ಲೂ ಹೇಳುತ್ತಿಲ್ಲ. ನನ್ನ ಜೊತೆ ಸ್ಪರ್ಧಿಸೋರು ಎಲ್ಲರೂ ಇದ್ದಾರೆ. ಯಾವುದೇ ಮನಸ್ತಾಪವಿಲ್ಲದೆ. ಒಂದೇ ಕುಟುಂಬ ಅಂತ ಚುನಾವಣೆ ಮಾಡಿ, ಒಗ್ಗಟ್ಟಾಗಿ ಚುನಾವಣೆ ಮಾಡೋಣ. ವಾಣಿಜ್ಯ ಮಂಡಳಿಯನ್ನು ಬೆಳೆಸೋಣ ಅಂತ ಕೇಳಿ ಕೊಳ್ಳುತ್ತೇನೆ."
ನಿಮ್ಮ ಪ್ರತಿಸ್ಪರ್ಧಿಗಳನ್ನು ಗುರುತಿಸಿದ್ದೀರಾ?
"ಸೆಪ್ಟೆಂಬರ್ 23 ಅಂತ ಹೇಳಿದ್ದಾರೆ. ನಮಗೆ ಕಾಂಪಿಟೇಟರ್ಸ್ ಇನ್ನೂ ಗೊತ್ತಿಲ್ಲ. ಯಾರು ಬರುತ್ತಾರೆ ಅಂತ ಯೋಚನೆ ಮಾಡಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಬೇಕಾದರೂ ನಿಲ್ಲಬಹುದು. ಯಾರು ಬೇಕಾದರೂ ಗೆಲ್ಲಬಹುದು. ಆದರೆ, ನಾನೂ ಕೂಡ ಸ್ಟ್ರಾಂಗ್ ಕಾಂಡಿಡೇಟ್ ಅಂತ ಹೇಳಬಹುದು."
ನೀವು ಏನು ಗ್ಯಾರಂಟಿ ಕೊಡ್ತೀರಾ?
"ಈ ಸರ್ಕಾರ ಕೊಟ್ಟಂತೆ ಆ ಗ್ಯಾರಂಟಿ ಕೊಡ್ತೀನಿ. ಈ ಗ್ಯಾರಂಟಿ ಕೊಡ್ತೀನಿ ಅಂತ ಹೇಳುತ್ತಿದೆ. ನಾನು ಕೆಲವು ಗ್ಯಾರಂಟಿಗಳನ್ನು ಕೊಡುತ್ತೇನೆ. ಅದನ್ನು ಚುನಾವಣೆ ಸಮಯದಲ್ಲಿ ಹೇಳುತ್ತೇನೆ." ಎಂದು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡೇ ಮಾಡುತ್ತೇನೆ ಎಂದಿದ್ದಾರೆ ಎನ್ಎಂ ಸುರೇಶ್.


Click it and Unblock the Notifications











