ಪ್ರಜ್ವಲ್ ಸಿನಿಮಾದಲ್ಲಿ ಬಾಲನಟಿ.. ಇಂದು ಕಿರುತೆರೆಯ ಸ್ಟಾರ್: ತಮಿಳಿನಿಂದ ಕನ್ನಡಕ್ಕೆ ಬಂದ 'ಶಾರದೆ' ಹಿನ್ನೆಲೆಯೇನು?
ಕನ್ನಡ ಕಿರುತೆರೆಯಲ್ಲಿ ಇನ್ನೊಂದು ಹೊಸ ಸೀರಿಯಲ್ ಇಂದಿನಿಂದ ಪ್ರಸಾರ ಆಗುತ್ತಿದೆ. ಅದುವೇ 'ಶಾರದೆ'. ಸ್ಟಾರ್ ಸುವರ್ಣ ಈಗಾಗಲೇ ಈ ಸೀರಿಯಲ್ನ ಪ್ರೋಮೊಗಳನ್ನು ರಿಲೀಸ್ ಮಾಡಿದ್ದು, ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. 'ಶಾರದೆ' ಧಾರಾವಾಹಿಯಲ್ಲಿ ಶಾರದಾ ಪಾತ್ರದಲ್ಲಿ ಚೈತ್ರಾ ಸಕ್ಕರಿ ನಟಿಸುತ್ತಿದ್ದಾರೆ. ತಮಿಳಿ 'ತಮಿಳ್ ಸೆಲ್ವಿ' ಅನ್ನುವ ಧಾರಾವಾಹಿಯಿಂದ ವೃತ್ತಿ ಬದುಕು ಆರಂಭಿಸಿದ ನಟಿ, ತೆಲುಗು ಧಾರಾವಾಹಿಯಲ್ಲೂ ನಟಿಸಿದ್ದಾರೆ. ಈಗ ಕನ್ನಡದಲ್ಲಿ ಧಾರಾವಾಹಿಗಳಲ್ಲಿ ಬೇಡಿಕೆಯ ನಟಿಯಾಗಿದ್ದಾರೆ.
'ಶಾರದೆ' ಕಿರುತೆರೆ ವೀಕ್ಷಕರನ್ನು ರಂಜಿಸುವುದಕ್ಕೆ ಇಂದಿನಿಂದ (ಮಾರ್ಚ್ 17) ಸ್ಟಾರ್ ಸುವರ್ಣದಲ್ಲಿ ಸಂಜೆ 6.30ರಿಂದ ಪ್ರಸಾರ ಆಗುತ್ತಿದೆ. ಈ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಚೈತ್ರಾ ಸಕ್ಕರಿ ತಮ್ಮ ಕಿರುತೆರೆ ಜರ್ನಿಯನ್ನು ಫಿಲ್ಮಿಬೀಟ್ ಕನ್ನಡ ಜೊತೆ ಮೆಲುಕು ಹಾಕಿದ್ದಾರೆ. ಹೊಸ ಧಾರಾವಾಹಿಯರ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ನೀವು ಮೂಲತ: ಎಲ್ಲಿಯವರು? ಕಿರುತೆರೆಗೆ ಬಂದಿದ್ದೇಗೆ?
"ನಾನು ಹುಟ್ಟಿದ್ದು ಬೆಳೆದಿದ್ದು ಎಲ್ಲಾ ಬೆಂಗಳೂರೇ. ಆದರೆ, ಮೂಲತ: ವಿಜಾಪುರದವರು. ಒಂದನೇ ತರಗತಿಯಿಂದ 12ನೇ ತರಗತಿವರೆಗೂ ಕೇಂದ್ರಿಯ ವಿದ್ಯಾಲಯದಲ್ಲಿ ಓದಿದ್ದು. ಆಮೇಲೆ ಮಹಾರಾಣಿ ಕಾಲೇಜಿಗೆ ಶಿಫ್ಟ್ ಆದೆ. ನನಗೆ ಏಳು ವರ್ಷ ಇರುವಾಗಲೇ ಜೀ ಕನ್ನಡದ ಕುಣಿಯೋಣು ಬಾರ ಅನ್ನೋ ರಿಯಾಲಿಟಿ ಶೋ ಮಾಡಿದ್ದೆ. ಆರು ವರ್ಷಗಳ ಕಾಲ ಡ್ಯಾನ್ಸ್ ಮಾಡಿದೆ. ಆಮೇಲೆ ವಿದ್ಯಾಭ್ಯಾಸದ ಕಡೆಗೆ ಗಮನ ಕೊಡುವ ಹಿನ್ನೆಲೆಯಲ್ಲಿ ಬಿಟ್ಟಿದ್ದೆ. ಡಿಗ್ರಿಗೆ ಜಾಯಿನ್ ಆದೆ. ಅಲ್ಲಿ ನಾನು ನನ್ನ ಫ್ರೆಂಡ್ ಸೇರಿಕೊಂಡು ತಮಿಳಿನಲ್ಲೊಂದು ಕವರ್ ಸಾಂಗ್ ಮಾಡಿದ್ವಿ. ಆ ಸಾಂಗ್ ಅನ್ನು ಯೂಟ್ಯೂಬ್ನಲ್ಲಿ ಹಾಕಿದ್ವಿ. ಅದನ್ನು ನೋಡಿ ಕಾಸ್ಟಿಂಗ್ ಏಜೆನ್ಸಿಯಿಂದ ಕಾಲ್ ಮಾಡಿದ್ರು. ತಮಿಳು ಸೀರಿಯಲ್ ನಡೀತಾ ಇದೆ ಬರ್ತಾರಾ ಅಂತ. ಲುಕ್ ಟೆಸ್ಟ್ ಎಲ್ಲ ಬೆಂಗಳೂರಿನಲ್ಲೇ ಇತ್ತು. ಹೋಗಿ ಕೊಟ್ಟಿ ಬಂದಿದ್ದೆ. ಮರುದಿನವೇ ಕಾಲ್ ಮಾಡಿದ್ರು.
ತಮಿಳು ಸೀರಿಯಲ್ ಅನುಭವ ಹೇಗಿತ್ತು?
"ನನಗೆ ಇಂಡಸ್ಟ್ರಿ ಬಗ್ಗೆ ಐಡಿಯಾ ಇರಲಿಲ್ಲ. ಕಾಸ್ಟಿಂಗ್ ಏಜನ್ಸಿಯವರೇ ನೀಟ್ ಆಗಿ ಮಾತಾಡಿ, ಅವರೇ ನನ್ನನ್ನು ಚೆನ್ನೈಗೆ ಕಳಿಸಿಕೊಟ್ಟರು. ನನಗೆ ತಮಿಳು ಬರಲ್ಲ. ಅಲ್ಲಿ ಹೋಗಿ ಸಿಕ್ಕಾಪಟ್ಟೆ ಕಷ್ಟ ಆಯ್ತು. ಹೊಸಬಳಾಗಿದ್ದೆ, ಅವರೆಲ್ಲ ಒಂಥರಾ ಮಾತಾಡೋರು. ಮೂರು ತಿಂಗಳು ಮಾಡಿದೆ. ಅದಾದ್ಮೇಲೆ ಲಾಕ್ಡೌನ್ ಆಗಿ ಹೋಯ್ತು. ಅದಕ್ಕೆ ಆ ಸೀರಿಯಲ್ ಅನ್ನು ಮುಗಿಸಿದ್ರು. ಆನಂತ್ರ ಸಿಕ್ಕಿದ ಸೀರಿಯಲ್ ನಯನತಾರಾ."

ತಮಿಳಿನಿಂದ ಕನ್ನಡಕ್ಕೆ ಬಂದಿದ್ದೇಗೆ?
"ನನಗೆ ಕನ್ನಡ ಸೀರಿಯಲ್ ಮಾಡುತ್ತೇನೆ ಅಂತ ಐಡಿಯಾನೇ ಇರಲಿಲ್ಲ. ನಾನು ಲುಕ್ ಟೆಸ್ಟ್ಗೆ ತಮಿಳು ಸೀರಿಯಲ್ಗೆ ಹೋಗಿದ್ದೆ. ಒಂದು ಕಡೆ ತಮಿಳಿಗೆ ಲುಕ್ ಟೆಸ್ಟ್ ನಡೆಯುತ್ತಿತ್ತು. ಇನ್ನೊಂದು ಕಡೆ ನಯನತಾರಾಗೆ ನಡೆಯುತ್ತಿತ್ತು. ನಾನು ತಮಿಳಿಗೆ ರೆಡಿಯಾಗಿ ಹೋದಾಗ ನಯನತಾರಾ ಟೀಮ್ನವರು ಆ ಹುಡುಗಿ ಕನ್ನಡ ಸೀರಿಯಲ್ ಮಾಡಬಹುದಾ ಅಂತ ಕೇಳಿದ್ರಂತೆ. ಆಗ ನನಗೆ ಕನ್ನಡ ಅಷ್ಟು ಕಾನ್ಫಿಡೆಂಟ್ ಇಲ್ಲ ಅಂದೆ. ಆಗ ಅವರು ನೀನು ಟ್ರೈ ಮಾಡು ಅಂದರು. ನಾನು ಆಡಿಷನ್ ಕೊಟ್ಟು ಬಂದಿದ್ದೆ ಅಷ್ಟೇ. ಸೆಲೆಕ್ಟ್ ಮಾಡಿದ್ರು"
ಕನ್ನಡದವರಾಗಿ ಕನ್ನಡ ಯಾಕೆ ಕಷ್ಟ?
"ನಾನು ಓದಿರುವುದು ಕೇಂದ್ರಿಯ ವಿದ್ಯಾಲಯ ಆಗಿದ್ದರಿಂದ ನನಗೆ ಕನ್ನಡ ಅಷ್ಟಾಗಿ ಬರೋದಿಲ್ಲ. ಮಾತಾಡುತ್ತೀನಿ. ಓದುವುದಕ್ಕೆ, ಬರೆಯುವುದಕ್ಕೆ ಬರೋದಿಲ್ಲ. ಯಾಕಂದ್ರೆ ಅಲ್ಲಿ ಫಸ್ಟ್ ಲ್ಯಾಂಗ್ವೇಜ್ ಹಿಂದಿ. ಹೀಗಾಗಿ ಹೊಡೆತ ಬೀಳಬಹುದು ಅಂತ ನಾನು ಹಿಂಜರಿದೆ. ಕನ್ನಡ ಮಾಡುವುದಾ? ಬೇಡ್ವಾ? ಅಂತ. ಆದರೆ, ತಿಲಕ್ ಅಂತ ಡೈರೆಕ್ಟರ್. ಪ್ರತಿಯೊಂದು ಡೈಲಾಗ್ ಅನ್ನು ನೀಟಾಗಿ ಹೇಳಿಕೊಡುತ್ತಿದ್ದರು. ಲುಕ್ ಟೆಸ್ಟ್ ಕೊಟ್ಮೇಲೆ ಇಲ್ಲಾ ನೀವೇ ಸೆಲೆಕ್ಟ್ ಆಗಿದ್ದೀರ. ಚಾನೆಲ್ಗೆ ನೀವೆ ಬೇಕು ಅಂತ ಹೇಳಿದ್ರು. ಪೇಮೆಂಟ್ ಮಾತಾಡಿ ಫಿಕ್ಸ್ ಮಾಡಿದ್ರು. ನಾನು ಕಷ್ಟ ಆಗತ್ತೇನೋ ಅಂದ್ಕೊಂಡಿದ್ದೆ. ಆದರೆ, ಹಾಗಾಗಲಿಲ್ಲ."

ತಮಿಳು ಸೀರಿಯಲ್ ಬಿಟ್ಟಿದ್ದೇಕೆ?
"ನಯನತಾರಾ ಮೂರು ವರ್ಷ ಶೂಟ್ ಮಾಡಿದ್ವಿ. ಇದರ ಜೊತೆಗೆ ತೆಲುಗಿನಲ್ಲಿ ದೇವತಲಾರ ದೇವಿಂಚಂಡಿ ಒಂದು ಸೀರಿಯಲ್ ಮಾಡಿದೆ. ಎರಡೂ ಸೀರಿಯಲ್ ಒಟ್ಟಿಗೆ ಮಾಡುತ್ತಿದೆ. ಆದರೆ ನಯನತಾರಾ ಹಾಗೂ ದೇವತಲಾರ ದೇವಿಂಚಂಡಿ ಎರಡೂ ಸೀರಿಯಲ್ ಒಟ್ಟಿಗೆ ಮುಗೀತು. ಆದಾದ್ಮೇಲೆ ಮತ್ತೆ ತಮಿಳು ಇಂಡಸ್ಟ್ರಿಗೆ ಜಂಪ್ ಆದೆ. ಅಲ್ಲಿ ಸನ್ ಟಿವಿಗೆ ಪುನ್ನಗೈ ಪೂವೆ ಅಂತ ಮಾಡುತ್ತಿದ್ದೆ. ಆದರೆ, ಅಲ್ಲಿನ ವಾತಾವರಣ ಆಗುತ್ತಿರಲಿಲ್ಲ. ತುಂಬಾನೇ ಆರೋಗ್ಯ ಕೆಡುತ್ತಿತ್ತು. ಅದನ್ನು ಕ್ವಿಟ್ ಮಾಡಿದೆ. ಇಲ್ಲಿ ನನಗೆ ಶಾರದಾ ಸೀರಿಯಲ್ ಸಿಕ್ಕಿತು. ಮತ್ತೆ ಕನ್ನಡಕ್ಕೆ ಬಂದಿರೋದು ತುಂಬಾನೇ ಖುಷಿ ಇದೆ. ತುಂಬಾನೇ ಜೋರಾಗಿ ಶೂಟ್ ಮಾಡುತ್ತಿದ್ದಾರೆ. ಸಕ್ಸಸ್ ಆಗುತ್ತೆ ಅನ್ನುವ ನಂಬಿಕೆಯಿದೆ."
ಶಾರದೆ ಯಾಕೆ ಇಷ್ಟ ಆಯ್ತು?
"ನಾನು ಬೇರೆ ಸೀರಿಯಲ್ ಮಾಡಬೇಕಿತ್ತು. ಉತ್ತರ ಕರ್ನಾಟಕ ಭಾಗ ಸೀರಿಯಲ್. ಅದಕ್ಕೆ ನನಗೆ ಫೋನ್ ಮಾಡಿದ್ದರು. ಅದಕ್ಕೆ ಲುಕ್ ಟೆಸ್ಟ್ ಎಲ್ಲಾ ಕೊಟ್ಟಿದ್ದೆ ನಾನು. ಆ ಸೀರಿಯಲ್ ಟೇಕಾಫ್ ಆಗಲಿಲ್ಲ. ಆಮೇಲೆ ಅದೇ ಟೀಮ್ ಫೋನ್ ಮಾಡಿದ್ರು. ಅಮ್ಮನ ಪಾತ್ರವಿದೆ ಮಾಡುತ್ತೀರಾ? ಆರೇಳು ವರ್ಷದ ಮಗಳು ಇದ್ದಾಳೆ ಅಂದಿದ್ರು. ನನಗೆ ಅಕ್ಕನ ಮಗಳು ಕನೆಕ್ಟ್ ಆದಳು. ನನಗೆ ಆರಾಮವಾಗಿ ಇರುತ್ತೆ ಅನಿಸಿತ್ತು. ಹಾಗೆ ಪಾತ್ರದಲ್ಲಿ ಪ್ರಬುದ್ಧತೆ ಇರುತ್ತೆ ಅಂತ ಅನಿಸಿತ್ತು. ಅದಕ್ಕಾಗಿ ಈ ಸೀರಿಯಲ್ ಅನ್ನು ಆಯ್ಕೆ ಮಾಡಿದೆ."
ಸಣ್ಣ ವಯಸ್ಸಿನಲ್ಲಿ ದೊಡ್ಡ ಪಾತ್ರ ಸಿಕ್ಕಿತೇ?
"ನನಗೆ ಎಮೋಷನಲ್ ಸೀನ್ಸ್ ಅಂದರೆ ಇಷ್ಟ. ಅಳುವ ಸೀನ್ಗಳು ಅಂದರೆ ಸುಲಭವಾಗಿ ಮಾಡುತ್ತೇನೆ. ಈ ನಗೋದು, ಕ್ಯೂಟ್ ಬಬ್ಲಿ ಕ್ಯಾರೆಕ್ಟರ್ ಅಂದರೆ ಮಾಡೋಕೆ ಒಂಥರಾ ಅನಿಸುತ್ತೆ. ಹಾಗಂತ ಅಂತಹ ರೋಲ್ಸ್ ಬಂದರೆ ಮಾಡುತ್ತೇನೆ. ಇಲ್ಲಾ ಅಂತಲ್ಲ. ನಾನು ಮಾಡಿರುವುದೆಲ್ಲ ಒಂದೇ ತರಹದ ಪಾತ್ರ. ಸಣ್ಣ ವಯಸ್ಸಿನಲ್ಲಿ ದೊಡ್ಡ ಪಾತ್ರ ಅನ್ನೋದು ನಿಜ. ಆದರೆ, ಬದಲಾವಣೆ ಬೇಕಿತ್ತು. ಅದಕ್ಕೆ ಈ ಪಾತ್ರ ಒಪ್ಪಿಕೊಂಡೆ."
ಈ ಸೀರಿಯಲ್ ಮೂಲಕ ಏನು ನಿರೀಕ್ಷೆ ಮಾಡಬಹುದು?
"ಹೆಣ್ಣು ಮಕ್ಕಳು ಬೇಡ.. ಅವರು ಹುಟ್ಟಿದರೆ ಹಾಗೆ ಹೀಗೆ ಅಂತಾರಲ್ಲ. ಆತರ ಇರುವ ತಾಯಿಯಂದಿರಿಗೆ ಬೇಗನೆ ಕನೆಕ್ಟ್ ಆಗುವ ಸೀರಿಯಲ್ ಇದು. ಈ ಧಾರಾವಾಹಿಯಲ್ಲೂ ನನ್ನ ಗಂಡ ನನಗೆ ಹೆಣ್ಣು ಮಗು ಇದೆ ಅಂತಾನೇ ಬಿಟ್ಟು ಹೋಗಿರುತ್ತಾನೆ. ಆ ಮಗುನಾ ನಾನೇ ಸಾಕಿ ಬೆಳೆಸುತ್ತೇನೆ. ಅದು ಫ್ಯಾಮಿಲಿ ಆಡಿಯನ್ಸ್ಗೆ ಬೇಗನೇ ಕನೆಕ್ಟ್ ಆಗುತ್ತೆ. ಆ ಮಗುವನ್ನು ಬೆಳೆಸುವುದಕ್ಕೆ ಏನೆಲ್ಲ ಕಷ್ಟ ಪಡುತ್ತಾಳೆ ಅನ್ನೋದೇ ಈ ಸೀರಿಯಲ್ ಕಥೆ."
ತಮಿಳು, ತೆಲುಗಿನಲ್ಲಿ ಹಿಟ್ ಆಗಿದ್ರಿಂದ ಒತ್ತಡವಿದೆಯಾ?
"ಹೌದು, ತಮಿಳು ಹಾಗೂ ತೆಲುಗಿನಲ್ಲಿ ಸೂಪರ್ ಹಿಟ್ ಆಗಿದೆ. ಕನ್ನಡದಲ್ಲೂ ಗೆಲ್ಲಬೇಕು. ಒತ್ತಡ ಅಂತೂ ಇದೆ. ಸೀರಿಯಲ್ ಸೂಪರ್ ಆಗಿ ಬಂದಿದೆ ಅಂತ ನಮ್ಮ ನಿರ್ದೇಶಕರು ಹೇಳುತ್ತಿದ್ದರು. ಅಲ್ಲದೆ ಇದರಲ್ಲೂ ಸೀನಿಯರ್ ಆರ್ಟಿಸ್ಟ್ಗಳೇ ಇದ್ದಾರೆ. ಹೀಗಾಗಿ 100 ಪರ್ಸೆಂಟ್ ಇದು ಕೂಡ ಸಕ್ಸಸ್ಪುಲ್ ಪ್ರಾಜೆಕ್ಟ್ ಆಗುತ್ತೆ. ಅದರಲ್ಲಿ ಅನುಮಾನವೇ ಇಲ್ಲ."
ನಟನೆಗೆ ಬಾರದೆ ಇದ್ದಿದ್ದರೆ..?
"ನಾನು ಸೀರಿಯಲ್ಗೆ ಬಂದಿರಲಿಲ್ಲ ಅಂದಿದ್ರೆ, ನಾನು ಒಂದು ಡ್ಯಾನ್ಸ್ ಕ್ಲಾಸ್ ಓಪನ್ ಮಾಡಬೇಕು ಅಂತಿತ್ತು. ಡ್ಯಾನ್ಸ್ ಫೀಲ್ಡ್ ಕಡೆಗೆ ಹೋಗಬೇಕು ಅಂತ ಅಂದುಕೊಂಡಿದ್ದೆ. ನನಗೆ ಇಂಜಿನಿಯರಿಂಗ್ ಸೀಟ್ ಸಿಕ್ಕಿತ್ತು. ಆದರೆ, ನನಗೆ ಚಿಕ್ಕಂದಿನಿಂದಲೂ ಡ್ಯಾನ್ಸ್ ಬಗ್ಗೆ ಆಸಕ್ತಿ ಇದ್ದಿದ್ದರಿಂದ ಓದುವುದರ ಮೇಲೆ ಆಸಕ್ತಿ ಇರಲಿಲ್ಲ. 10ನೇ ತರಗತಿ ಆದ್ಮೇಲೆ ನಾನು ಮನೆಯಲ್ಲಿ ಓದಲ್ಲ ಅಂತ ಹೇಳಿದ್ದೆ. ಮನೆಯಲ್ಲಿ ಇಲ್ಲ 12ನೇ ತರಗತಿ ಮುಗಿಸು ಅಂದ್ರು. ಆಮೇಲೆ ಡಿಗ್ರಿ ಮಾಡಿಕೋ ಒಳ್ಳೆಯದಾಗುತ್ತೆ ಅಂದಿದ್ರು. ಡಿಗ್ರಿಗೆ ಸೇರಿಕೊಂಡೆ ಅಷ್ಟೊತ್ತಿಗಾಗಲೇ ನಾನು ಇಂಡಸ್ಟ್ರಿ ಕಡೆಗೆ ತಿರುಗಿದ್ದೆ. ನಮ್ಮ ಅಪ್ಪ ಅಮ್ಮ, ಇಬ್ಬರು ಅಕ್ಕಂದಿರು ನನಗೆ ತುಂಬಾ ಸಪೋರ್ಟ್ ಮಾಡಿದ್ದಾರೆ. ಅದರಲ್ಲೂ ನಮ್ಮ ಅಮ್ಮ ಯಾವಾಗಲೂ ನನ್ನ ಜೊತೆನೇ ಇರುತ್ತಾರೆ.
ಸಿನಿಮಾದಲ್ಲಿ ನಟಿಸಿದ್ದೀರಾ?
"ಕುಣಿಯೋಣು ಬಾರಾ ಅಂತ ರಿಯಾಲಿಟಿ ಶೋ ಮಾಡಿದ್ದೆ. ಅದಾದ್ಮೇಲೆ ಡಿ ಅಂತ ತೆಲುಗಿನಲ್ಲಿ ಬೇರೆಯವರೊಂದಿಗೆ ಸ್ಪರ್ಧೆ ಮಾಡಿದ್ದೆ. ಅಲ್ಲಿ ನಮ್ಮ ಕನ್ನಡ ಚಿತ್ರರಂಗದ ಕೊರಿಯೋಗ್ರಾಫರ್ ಧನು ಕುಮಾರ್ ಅಂತ. ಅವರೇ ನೋಡಿ, ಒಂದು ಸಿನಿಮಾಗೆ ಅವಕಾಶ ಕೊಟ್ಟಿದ್ದರು. ಪ್ರಜ್ವಲ್ ದೇವರಾಜ್ ನಟಿಸಿದ ಭದ್ರ ಅನ್ನೋ ಸಿನಿಮಾದಲ್ಲಿ ಬಾಲನಟಿಯಾಗಿ ನಟಿಸಿದ್ದೆ. ಅದೊಂದೇ ಸಿನಿಮಾ ಮಾಡಿದ್ದು ಆಮೇಲೆ ಮಾಡಿಲ್ಲ." ಎನ್ನುತ್ತಾರೆ ನಟಿ ಚೈತ್ರಾ ಸಕ್ಕರಿ.


Click it and Unblock the Notifications











