ಉದ್ಯಮಿಯ ಮಗನಾಗಿದ್ದರೂ, ನಟನೆ ಕಡೆಗೆ ಮುಖ ಮಾಡಿದ್ದೇಗೆ ಚಂದು ಗೌಡ? ಮೊದಲ ಧಾರಾವಾಹಿ ಯಾವುದು?
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಹೊಚ್ಚ ಹೊಸ ಧಾರಾವಾಹಿ ಆರಂಭ ಆಗಿದೆ. ವಿಭಿನ್ನ ಕಥಾ ಹಂದರವಿರುವ ಆ ಧಾರಾವಾಹಿಯೇ 'ಸ್ನೇಹದ ಕಡಲಲ್ಲಿ'. ಈ ಧಾರಾವಾಹಿಯ ಪ್ರಮುಖ ಪಾತ್ರದಲ್ಲಿ ಕಿರುತೆರೆಯ ಸ್ಟಾರ್ ನಟ ಚಂದು ಗೌಡ ಅಭಿನಯಿಸುತ್ತಿದ್ದಾರೆ. ಈ ಹಿಂದೆ ಇದೇ ಸ್ವಾರ್ ಸುವರ್ಣದಲ್ಲಿ ಪ್ರಸಾರ ಆಗುತ್ತಿದ್ದ 'ಕಥೆಯೊಂದು ಶುರುವಾಗಿದೆ' ಧಾರಾವಾಹಿಯಲ್ಲಿಯೂ ನಟಿಸಿದ್ದರು. ಈಗ ಮತ್ತದೇ ವಾಹಿನಿಯಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಚಂದು ಗೌಡ, ಕೇವಲ ಕನ್ನಡ ಅಷ್ಟೇ ಅಲ್ಲ. ತೆಲುಗು ಕಿರುತೆರೆಯಲ್ಲೂ ಚಿರಪರಿಚಿತ. ಕನ್ನಡ, ತೆಲುಗು ಅಂತ ಎರಡೂ ಭಾಷೆಯ ಧಾರಾವಾಹಿಗಳಲ್ಲೂ ಚಂದು ಗೌಡ ಬ್ಯುಸಿಯಾಗಿದ್ದಾರೆ. ಕನ್ನಡದಲ್ಲಿ ಎಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೋ ಅಷ್ಟೇ ಜನಪ್ರಿಯತೆ ತೆಲುಗು ಕಿರುತೆರೆಯಲ್ಲಿಯೂ ಸಿಕ್ಕಿದೆ. ಇವರ ನಟನಾ ಜರ್ನಿ ಸಖತ್ ಇಂಟ್ರೆಸ್ಟಿಂಗ್ ಆಗಿದೆ. ಅದನ್ನು ಫಿಲ್ಮಿಬೀಟ್ ಕನ್ನಡ ಜೊತೆ ಚಂದು ಗೌಡ ಶೇರ್ ಮಾಡಿದ್ದಾರೆ.

ನೀವು ಈ ಇಂಡಸ್ಟ್ರಿಗೆ ಬಂದಿದ್ದು ಹೇಗೆ?
"ನಾನು ಬ್ಯುಸಿನೆಸ್ ಬ್ಯಾಕ್ಗ್ರೌಂಡ್ನಿಂದ ಬಂದಿದ್ದು. ನಾನು ಕಾಲೇಜು ಮುಗಿಸಿ ಎರಡು ವರ್ಷ ಆಗಿರುತ್ತೆ. ನಾನು ಏನಾದರೂ ಮಾಡಬೇಕು ಅಂತ ಪ್ಲಾನ್ ಮಾಡುತ್ತಿದ್ದೆ. ನನಗೆ ಏನು ಮಾಡಬೇಕು ಎನ್ನುವ ಐಡಿಯಾ ಇರಲಿಲ್ಲ. ನಾನು ಸಪ್ತಗಿರಿ ಇಂಜಿನಿಯರಿಂಗ್ ಕಾಲೇಜ್ನಲ್ಲಿ ಓದಿದ್ದು. ಅಲ್ಲಿ ನಾನು ಮಿಸ್ಟರ್ ಸಪ್ತಗಿರಿ ಎಲ್ಲ ಗೆದ್ದಿದ್ದೆ. ಎಲ್ಲರೂ ನೀನು ಆಕ್ಟಿಂಗ್ನಲ್ಲಿ ಚೆನ್ನಾಗಿದ್ದೀಯಲ್ಲ. ಯಾಕೆ ಟ್ರೈ ಮಾಡಬಾರದು ಎಂದು ಹೇಳುತ್ತಿದ್ದರು. ಆದರೆ, ಎಲ್ಲಿ ಹೋಗಿ? ಹೇಗೆ ಟ್ರೈ ಮಾಡಬೇಕು ಎನ್ನುವುದು ನನಗೆ ಗೊತ್ತಿರಲಿಲ್ಲ. ಆಗ 2014. ಅಲ್ಲಿಂದಲೇ ಟ್ರೈ ಮಾಡುತ್ತಿದ್ದೆ. ನಾನು ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಿದ್ದು 2015ರಲ್ಲಿ."
ಅವಕಾಶ ಗಿಟ್ಟಿಸಿಕೊಳ್ಳುವುದಕ್ಕೆ ಸೈಕಲ್ ಹೊಡೆದಿದ್ದೀರಾ?
"ಗೂಗಲ್ನಲ್ಲಿ ಹುಡುಕುತ್ತಿದ್ದೆ. ಗಾಂಧಿನಗರದ ಪ್ರೊಡಕ್ಷನ್ ಹೌಸ್ ನಂಬರ್ಗಳನ್ನು ಇಟ್ಕೊಂಡು ಹೋಗಿ ಟ್ರೈ ಮಾಡೋಣ ಎನ್ನುವ ಆಸೆ. ಅಲ್ಲಿಗೆ ಹೋಗಿ ಸುಮಾರಷ್ಟು ಸೈಕಲ್ ಹೊಡೆದಿದ್ದೇನೆ. ಆರಂಭದ ದಿನಗಳಲ್ಲಿ ನನಗೆ ಅವಕಾಶವನ್ನು ಕೊಡುತ್ತಿರಲಿಲ್ಲ. ಏನಾಗುತ್ತಿತ್ತು, ನಾನು ಸ್ವಲ್ಪ ಬೆಳಗ್ಗೆ ಇದ್ದೀನಿ. ಅದಕ್ಕೆ ಸೌತ್ ಇಂಡಿಯನ್ ತರ ಕಾಣಿಸುವುದಿಲ್ಲ. ನಮ್ಮ ನೆಟಿವಿಟಿಗೆ ಸೂಟ್ ಆಗುವುದಿಲ್ಲ ಎನ್ನುವುದೇ ನನ್ನನ್ನು ರಿಜೆಕ್ಟ್ ಮಾಡುವುದಕ್ಕೆ ಕಾರಣ. ಆಗ ನನಗೆ ಇದು ಆಗಿ ಬರಲ್ಲ ಅಂತ ಅನಿಸುತ್ತೆ ಎಂದುಕೊಂಡಿದ್ದೆ. ನನ್ನ ಸ್ನೇಹಿತನ ಸ್ನೇಹಿತರು ಮಸ್ತ್ ಕಲಂದರ್ ಎನ್ನುವ ಒಂದು ಸಿನಿಮಾ ಮಾಡುತ್ತಿದ್ದರು. ಅದರಲ್ಲಿ ಒಬ್ಬ ಹುಡುಗ ಬಂದು ಹೀರೋಯಿನ್ ಅನ್ನು ಮದುವೆ ಆಗುತ್ತಾನೆ ಎನ್ನುವ ಕ್ಯಾರೆಕ್ಟರ್ ಸಿಕ್ಕಿತ್ತು. ಆಗ ನನಗೆ ಮುಂಗಾರು ಮಳೆಯಲ್ಲಿ ದಿಗಂತ್ ಅವರ ಕರಿಯರ್ ಬೂಸ್ಟ್ ಆದಂತೆ ನಂದೂ ಆಗುತ್ತೆ ಅನ್ನೋ ನಂಬಿಕೆ. ಅದಕ್ಕೆ ಆ ಪಾತ್ರ ಮಾಡಿದೆ. ಆ ಸಿನಿಮಾ ಹಿಟ್ ಆಗಲಿಲ್ಲ. ಪಾತ್ರವನ್ನೂ ಯಾರೂ ಗುರುತಿಸಲಿಲ್ಲ. ಆದರೆ, ಆ ಸಿನಿಮಾದಿಂದ ಒಂದು ಲಿಂಕ್ ಸಿಕ್ಕಿತು."
ನಿಮ್ಮ ಮೊದಲ ಸೀರಿಯಲ್ ಯಾವುದು?
"ನಮ್ಮ ತಂದೆ ನೀನು ಏನು ಮಾಡೋಕೆ ಆಗಲ್ಲ. ನನ್ನ ಕೆಳಗೆ ಬ್ಯುಸಿನೆಸ್ ಮಾಡಿಕೊಂಡು ಇರಬೇಕು ಅಂದಿದ್ದರು. ನನಗೆ ನಾನು ಏನಾದ್ರೂ ಪ್ರೂವ್ ಮಾಡಬೇಕು. ನನ್ನಿಂದ ನನ್ನ ತಂದೆ ಗುರುತಿಸಿಕೊಳ್ಳಬೇಕು ಎನ್ನುವುದಿತ್ತು. ಜೀ ಕನ್ನಡದ ಗೃಹಲಕ್ಷ್ಮಿ ಎನ್ನುವ ಸೀರಿಯಲ್ ಮಾಡುವುದಕ್ಕೆ ಲೀಡ್ ಸಿಕ್ಕಿತ್ತು. ಆ ಸೀರಿಯಲ್ ಮಾಡಿದ ಮೇಲೆ ಮತ್ತೆ ಹಿಂತಿರುಗಿ ನೋಡಲೇ ಇಲ್ಲ. ಎಲ್ಲಾ ಕಡೆ ಒಳ್ಳೊಳ್ಳೆ ಅವಕಾಶಗಳು ಹುಡುಕಿಕೊಂಡು ಬರುವುದಕ್ಕೆ ಶುರುವಾಗಿದ್ದವು"

ಟರ್ನಿಂಗ್ ಪಾಯಿಂಟ್ ಕೊಟ್ಟ ಸೀರಿಯಲ್?
"ಗೃಹಲಕ್ಷ್ಮಿ ಮುಗಿಯುತ್ತಿದ್ದಂತೆ ಲಕ್ಷ್ಮಿ ಬಾರಮ್ಮ ಸೀರಿಯಲ್ ಸಿಕ್ಕಿತ್ತು. ಗೃಹಲಕ್ಷ್ಮಿ ಸೀರಿಯಲ್ ಮುಗಿದ ಒಂದು ವಾರಕ್ಕೆ ಸಿಕ್ಕಿತ್ತು. ಅಷ್ಟರಲ್ಲಿ ನಾನು ಗುರುತಿಸಿಕೊಂಡಿದ್ದೆ. ಬಿಗ್ ಬಾಸ್ ವಿನ್ನರ್ ಶೈನ್ ಶೆಟ್ಟಿ ನನ್ನ ಫ್ರೆಂಡ್ ಆಗಿದ್ದ. ಆಗ ಅವನು ಸೀರಿಯಲ್ ಬಿಟ್ಟು, ಸಿನಿಮಾ ಕಡೆಗೆ ಫೋಕಸ್ ಮಾಡುವುದಕ್ಕೆ ಹೋಗುತ್ತಿದ್ದ. ಲಕ್ಷ್ಮಿಬಾರಮ್ಮ ಮಾಡುತ್ತಿದ್ದೇನೆ. ಅದನ್ನು ಬಿಡಬೇಕು ಅಂತಿದ್ದೇನೆ. ನೀನು ಮಾಡುತ್ತೀಯ ಅಂತ ಕೇಳಿದ. ಇಂತಹ ಅವಕಾಶ ಯಾಕೆ ಬಿಡಬಾರದು ಅಂತ ಮಾಡಿದೆ. ಚಂದು ಗೌಡ ಅಂತ ಒಬ್ಬ ನಟ ಇದ್ದಾನೆ ಅಂತ ತೋರಿಸಿದ್ದೇ ಲಕ್ಷ್ಮಿ ಬಾರಮ್ಮ."
ತೆಲುಗು ಕಿರುತೆರೆಗೆ ಕಾಲಿಟ್ಟಿದ್ದೇಗೆ?
"ಲಕ್ಷ್ಮಿ ಬಾರಮ್ಮ ಸಾವಿರಕ್ಕೂ ಹೆಚ್ಚು ಎಪಿಸೋಡ್ ಮುಗಿಸಿದ್ದೆ. ಅದು 2020ರಲ್ಲಿ ಮುಗಿದಿತ್ತು. ಆಗಲೇ ತೆಲುಗಿನಿಂದ ಒಂದು ಸೀರಿಯಲ್ಗೆ ಹೀರೋ ಆಗಿ ಮಾಡುತ್ತೀರ ಅಂತ ಕೇಳಿದರು. ಅಲ್ಲಿ ತ್ರಿನಯನಿ ಮಾಡಿದೆ. ನನ್ನ ಅದೃಷ್ಟವೋ ಏನೋ ಅದೇ ಕನ್ನಡದಲ್ಲೂ ಆಯ್ತು. ಆ ಸಿನಿಮಾ ಆರು ವರ್ಷ ಮಾಡಿದೆ. ಆ ಸೀರಿಯಲ್ ನಡೆಯುತ್ತಿರಬೇಕಾದರೇ, ಇನ್ನೊಂದು ಸೀರಿಯಲ್ ಆರಂಭ ಆಗಿದೆ."
'ಸ್ನೇಹದ ಕಡಲಲ್ಲಿ' ಸೀರಿಯಲ್ಗೆ ಎಂಟ್ರಿ ಹೇಗಾಯ್ತು?
"ಸ್ಟಾರ್ ಸುವರ್ಣಗೆ ಎಷ್ಟು ಥ್ಯಾಂಕ್ಸ್ ಹೇಳಿದರೂ ಸಾಲದು. ಯಾಕಂದ್ರೆ, ಚಾನೆಲ್ ನಿಮ್ಮನ್ನು ಕರೆದು ಬ್ಯಾಕ್ ಟು ಬ್ಯಾಕ್ ಕೆಲಸ ಕೊಡುತ್ತೆ ಅಂತ ಅಂದರೆ, ಒಬ್ಬ ಕಲಾವಿದನಿಗೆ ಅದೂ ದೊಡ್ಡ ಸಂಗತಿ. ಸ್ನೇಹದ ಕಡಲಲ್ಲಿ ನನಗೆ ಎರಡನೇ ಸೀರಿಯಲ್. ಅದಕ್ಕೂ ಮುನ್ನ ಕಥೆಯೊಂದು ಶುರುವಾಗಿದೆ ಸೀರಿಯಲ್ ಮಾಡಿದೆ. ಅದು ಮುಗಿದ ಎಂಟು ತಿಂಗಳಿಗೆ ಸ್ನೇಹದ ಕಡಲಲ್ಲಿ ಸೀರಿಯಲ್ ಕೊಟ್ಟಿದ್ದಾರೆ."
ಈ ಪಾತ್ರ ಒಪ್ಪುವುದಕ್ಕೆ ಕಾರಣ?
"ಈ ಪಾತ್ರವನ್ನು ಒಪ್ಪಿಕೊಳ್ಳುವುದಕ್ಕೆ ಪ್ರಮುಖ ಕಾರಣವಿದೆ. ಎಲ್ಲಾ ಸೀರಿಯಲ್ಗಳಲ್ಲೂ ಲವ್ ಸ್ಟೋರಿ ಇರುತ್ತೆ. ಈ ಸೀರಿಯಲ್ನಲ್ಲಿ ಅಡ್ವಾಂಟೇಜ್ ಏನು ಅಂದರೆ, ಎಲ್ಲದಕ್ಕೂ ಬುನಾದಿ ಸ್ನೇಹನೇ. ಈ ಸೀರಿಯಲ್ ಸ್ನೇಹಕ್ಕೆ ಯಾಕೆ ಒತ್ತು ಕೊಡಬೇಕು. ಒಬ್ಬ ವ್ಯಕ್ತಿ ಸ್ನೇಹಿತ ಅಂತ ಬಂದಾಗ ಯಾವ ಮಟ್ಟಕ್ಕೆ ರಿಯಾಕ್ಟ್ ಆಗುತ್ತಾನೆ. ಫ್ರೆಂಡ್ಶಿಪ್ ಮುಖ್ಯನಾ? ಸಂಬಂಧಗಳು ಮುಖ್ಯನಾ? ಇದೆಲ್ಲದರ ಮಧ್ಯೆ ಅವನು ಕಷ್ಟಪಡುತ್ತಿದ್ದಾನೆ. ಇದೆಲ್ಲದರ ಮೇಲೆ ಪೋಕಸ್ ಆಗುತ್ತಿದೆ. ಇಷ್ಟು ವರ್ಷ ಆದ್ಮೇಲೆ ವಿಭಿನ್ನವಾದ ಪಾತ್ರ ಮಾಡಬೇಕು ಅಂತಿರುತ್ತೆ. ಒಳ್ಳೆಯ ಪಾತ್ರ ಬಂದಿದೆಯಲ್ಲ. ಯಾಕೆ ಮಾಡಬಾರದು ಅಂತ ಮಾಡಿದ್ದು."
ಸುಮನ್ ಜೊತೆ ನಟಿಸುತ್ತಿರುವ ಅನುಭವ ಹೇಗಿದೆ?
"ಈ ಸೀರಿಯಲ್ನಲ್ಲಿ ದೊಡ್ಡ ಸ್ಟಾರ್ಕಾಸ್ಟ್ ಇದೆ. ಸುಮನ್ ಸರ್ ಅವರೆಲ್ಲ ದಿಗ್ಗಜರು. 800ಕ್ಕೂ ಅಧಿಕ ಸಿನಿಮಾಗಳನ್ನು ಮಾಡಿದ್ದಾರೆ. ಅವರಿಗೆ ಅಷ್ಟೊಂದು ಜನಪ್ರಿಯತೆ ಇದ್ದರೂ, ನಮ್ಮೊಂದಿಗೆ ಅಷ್ಟು ಅಚ್ಚು ಕಟ್ಟಾಗಿ ಕೆಲಸ ಮಾಡುತ್ತಾರೆ. ಅದಕ್ಕೆ ಅನಿಸುತ್ತೆ ಅವರು ಸ್ಟಾರ್ ಆಗಿದ್ದು. ಆಮೇಲೆ ಹೇಮಾ ಬೆಳ್ಳೂರು ಅವರ ಕನ್ನಡದಲ್ಲಿ ಸ್ಪಷ್ಟತೆ, ಪದಬಳಕೆ ಸಖತ್ ಆಗಿದೆ. ನನಗೆ ಇಂತಹವರೊಂದಿಗೆ ಕೆಲಸ ಮಾಡುವುಕ್ಕೆ ಸಿಕ್ಕಾಪಟ್ಟೆ ಖುಷಿ. ಇಂತಹ ದಿಗ್ಗಜರೊಂದಿಗೆ ಸ್ಕ್ರೀನ್ ಶೇರ್ ಮಾಡುವುದೇ ಹೆಮ್ಮೆ."

ತಂದೆ-ಮಗನ ಬಾಂಧವ್ಯ ಹೇಗಿರುತ್ತೆ?
"ಇಲ್ಲಿ ತಂದೆ ಮಗನ ಮಧ್ಯೆ ಸಮಸ್ಯೆಯಿದೆ. ಆಕೆ ಆ ಸಮಸ್ಯೆಯಿದೆ ಅಂದರೆ, ಪರಿಸ್ಥಿತಿ. ಒಬ್ಬ ವ್ಯಕ್ತಿಯನ್ನು ಎಲ್ಲಿಂದ ಎಲ್ಲೆಲ್ಲೋ ತೆಗೆದುಕೊಂಡು ನಿಲ್ಲಿಸಿಬಿಡುತ್ತೆ. ನಮಗೆ ಗೊತ್ತಿರಲಿಲ್ಲ. ಅಂತಹದ್ದೊಂದು ಪರಿಸ್ಥಿತಿಗೆ ಕಟ್ಟು ಬಿದ್ದು ವೈಮನಸ್ಸು ಬಂದುಬಿಡುತ್ತೆ. ಅದು ಎಲ್ಲೆಲ್ಲಿಗೆ ಹೋಗುತ್ತೆ ಅನ್ನೋದನ್ನು ಸೀರಿಯಲ್ನಲ್ಲಿ ನೋಡಬೇಕು. ಆದರೆ, ಸುಮನ್ ಅವರೊಂದಿಗೆ ಕೆಲಸ ಮಾಡಿದ್ದೇ ಒಂಥರಾ ಬೇರೆ ಫೀಲಿಂಗ್."
ಸಿನಿಮಾದಲ್ಲಿ ಯಾಕೆ ಹೆಚ್ಚಾಗಿ ನಟಿಸುತ್ತಿಲ್ಲ?
"ಈಗ ಸಿನಿಮಾಗಳನ್ನು ಮಾಡುತ್ತಿದ್ದೇನೆ ಇಲ್ಲಾ ಎಂದು ಹೇಳುತ್ತಿಲ್ಲ. ನನಗೆ ದೊಡ್ಡ ಮಟ್ಟದಲ್ಲಿ ಒಂದು ಬ್ರೇಕ್ ಸಿಗಲಿ. ಎರಡೂ ಕಡೆ ಗಮನ ಹರಿಸುವುದಕ್ಕೆ ಸಾಧ್ಯವಾಗುವುದಿಲ್ಲ ಎಂದು ಹೆಚ್ಚು ಸೀರಿಯಲ್ ಮಾಡುತ್ತಿದ್ದೇನೆ. ಇಲ್ಲಿವರೆಗೂ ಒಟ್ಟು ಆರು ಸಿನಿಮಾ ಮಾಡಿದ್ದೇನೆ. ಹೀರೋ ಆಗಿ ಐದು ಸಿನಿಮಾ ಮಾಡಿದ್ದೀನಿ. ದರ್ಶನ್ ಸರ್ ಜೊತೆ ಎರಡನೇ ಸಿನಿಮಾ ಡೆವಿಲ್ ಮಾಡುತ್ತಿದ್ದೇನೆ."
ಬೈಕ್ ಕಾರು ಕ್ರೇಜ್ ಹುಟ್ಟಿದ್ದೇಗೆ?
"ನನಗೆ ಚಿಕ್ಕ ವಯಸ್ಸಿನಿಂದಲೂ ಕಾರು ಬೈಕ್ ಅಂದರೆ, ಸಿಕ್ಕಾಪಟ್ಟೆ ಹುಚ್ಚು. ಈಗಾದರೂ ಕಾರು, ಬೈಕ್ ಓಡಿಸುವುದು ಅಂದರೆ, ಇಷ್ಟ. ಆದರೆ, ಈಗ ಓಡಿಸುವುದಕ್ಕೆ ಟೈಮ್ ಇಲ್ಲ ಅಷ್ಟೇ. ಬೈಕ್ ಅಂದರೆ ಇಷ್ಟ. ಬಾಲ್ಯದಿಂದಲೂ ನನಗೆ ಹವ್ಯಾಸ."


Click it and Unblock the Notifications











