ಶಿವನಾಗಿ ನರ್ತನ ಮಾಡುತ್ತಿರುವ ತಾಂಡವ್; ಈ ನಟ ಜರ್ನಿ ಸಖತ್ ಇಂಟ್ರೆಸ್ಟಿಂಗ್
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪೌರಾಣಿಕ ಹಾಗೂ ಆಧ್ಯಾತ್ಮಕ್ಕೆ ಸಂಬಂಧಿಸಿದ ಧಾರಾವಾಹಿಗಳು ಪ್ರಸಾರ ಆಗುತ್ತಿವೆ. ಅದರಲ್ಲಿ 'ಶ್ರೀದೇವಿ ಮಹಾತ್ಮೆ' ಕೂಡ ಒಂದು. ಈ ಸೀರಿಯಲ್ ಅನ್ನು ಕನ್ನಡದ ವೀಕ್ಷಕರು ಕೂಡ ಮೆಚ್ಚಿಕೊಂಡಿದ್ದಾರೆ. ಕೆಲವು ತಿಂಗಳಿನಿಂದ ಸ್ಟಾರ್ ಸುವರ್ಣದಲ್ಲಿ 'ಶ್ರೀದೇವಿ ಮಹಾತ್ಮೆ'ಗೆ ಒಳ್ಳೆಯ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಕೆಲವು ದಿನಗಳ ಹಿಂದೆ ಶಿವನ ಪಾತ್ರದಲ್ಲಿ ನಟಿಸುತ್ತಿದ್ದ ಅರ್ಜುನ್ ರಮೇಶ್ ಈ ಧಾರಾವಾಹಿಯಿಂದ ಹೊರ ಹೋಗಿದ್ದರು. ಆ ಪಾತ್ರವನ್ನೀಗ 'ಜೋಡಿ ಹಕ್ಕಿ' ಖ್ಯಾತಿಯ ತಾಂಡವ್ ರಾಮ್ ನಿರ್ವಹಿಸುತ್ತಿದ್ದಾರೆ.
ಕನ್ನಡ ಕಿರುತೆರೆಯಲ್ಲಿ ಹಲವು ವರ್ಷಗಳಿಂದ ತಾಂಡವ್ ರಾಮ್ ಸಕ್ರಿಯರಾಗಿದ್ದಾರೆ. ಶಿರಡಿ ಸಾಯಿಬಾಬಾ, ಕೃಷ್ಣ ರುಕ್ಮಿಣಿ, ಜೋಡಿ ಹಕ್ಕಿ ಅಂತಹ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಕಿರುತೆರೆ ಜೊತೆಗೆ ಕೆಲವು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ತಾಂಡವ್ ರಾಮ್ ನಾಯಕನಾಗಿ ನಟಿಸುತ್ತಿರುವ 'ದೇವನಾಂಪ್ರಿಯ' ಶೂಟಿಂಗ್ ಹಂತದಲ್ಲಿದೆ. ಈ ಗ್ಯಾಪ್ನಲ್ಲಿ ಶ್ರೀದೇವಿ ಮಹಾತ್ಮೆಯಲ್ಲಿ ಶಿವನ ಅವತಾರವೆತ್ತಿದ್ದಾರೆ. ತಮ್ಮ ಜರ್ನಿಯ ಬಗ್ಗೆ ಫಿಲ್ಮಿಬೀಟ್ ಕನ್ನಡದ ಜೊತೆ ತಾಂಡವ್ ರಾಮ್ ಮನಬಿಚ್ಚಿ ಮಾತಾಡಿದ್ದಾರೆ.

ಕಿರುತೆರೆಗೆ ನೀವು ಎಂಟ್ರಿ ಕೊಟ್ಟಿದ್ದೇಗೆ?
"ನಾನು ಮೂಲತ: ಹಾಸನದವನು. ಓದಿದ್ದು, ಬೆಳೆದಿದ್ದು ಎಲ್ಲವೂ ಹಾಸನದಲ್ಲಿಯೇ. ಚಿತ್ರರಂಗದ ಆಸೆಯಿಂದ ಮೈಸೂರಿನ ರಂಗಾಯಣದಲ್ಲಿ ತರಬೇತಿ ಪಡೆದುಕೊಳ್ಳುತ್ತೇನೆ. ಅಲ್ಲಿ ಒಂದು ನಾಟಕಕ್ಕೆ ಕರೆದಿರುತ್ತಾರೆ. ಆ ನಾಟಕದ ಮೂಲಕ ರಂಗಭೂಮಿಗೆ ಪ್ರವೇಶ ಆಗುತ್ತೆ. ಅಲ್ಲಿ ಒಂದಿಷ್ಟು ನಾಟಕಗಳನ್ನು ಮಾಡುತ್ತೇನೆ. ಅಲ್ಲೇ ಇದ್ದ ಸ್ನೇಹಿತರೊಬ್ಬರಿಗೆ ಕಿರುತೆರೆ ಟಚ್ ಇತ್ತು. ಅವರು ಫೋರ್ಸ್ ಮಾಡಿ ಕರೆದುಕೊಂಡು ಬಂದರು."
ಸೀರಿಯಲ್ ಜರ್ನಿ ಶುರುವಾಗಿದ್ದು ಎಲ್ಲಿಂದ?
"ಕಸ್ತೂರಿಯಲ್ಲಿ ಶಿರಡಿ ಸಾಯಿಬಾಬಾ ಸೀರಿಯಲ್ ಮಾಡುತ್ತೇನೆ. ಅದನ್ನು ಸಾಯಿ ಗೋಲ್ಡ್ ಪ್ಯಾಲೇಸ್ ಶರವಣ ಅವರು ನಿರ್ಮಾಣ ಮಾಡಿದ್ದರು. ಅಲ್ಲಿಂದ ಸೀರಿಯಲ್ಗೆ ಎಂಟ್ರಿಯಾಗುತ್ತೇನೆ. ಆನಂತರ ಉದಯ ಟಿವಿಯಲ್ಲಿ ಧಾರಾವಾಹಿ ಮಾಡುತ್ತೇನೆ. ಆಮೇಲೆ ರವಿ ಗರಣಿಯವರು ಹೀರೋಗೆ ಹುಡುಕುತ್ತಿರುತ್ತಾರೆ. ಆಗ ಕೃಷ್ಣ ರುಕ್ಮಿಣಿ ಮಾಡುತ್ತೇನೆ. ಅದೂ ಸ್ವಲ್ಪ ದಿನ ಆದ್ಮೇಲೆ ನಿಲ್ಲುತ್ತೆ. ಆಗ ಜೀ ಕನ್ನಡದಲ್ಲಿ ಬಲು ಅಪರೂಪ ನಮ್ಮ ಜೋಡಿ ಸೀರಿಯಲ್ ಮಾಡುತ್ತೇನೆ. ಅದು ಬೇಗನೇ ನಿಂತು ಹೋಯ್ತು."

'ಕೃಷ್ಣ ರುಕ್ಮಿಣಿ' ನಿಮ್ಮ ಕರಿಯಬದಲಿಸಿದ್ದೇಗೆ?
"ಯಾರೇ ಒಂದು ಕ್ಯಾರೆಕ್ಟರ್ ಮಾಡಿ ಅದು ಹಿಟ್ ಆದ್ಮೇಲೆ ಜನರು ಅದನ್ನು ಒಪ್ಪಿಕೊಂಡಿರುತ್ತಾರೆ. ಆ ಪಾತ್ರಕ್ಕೆ ಅವರ ಮ್ಯಾನರಿಸಂ ಸೇರಿಕೊಂಡು ಬ್ಯೂಟಿಫುಲ್ ಆಗಿ ಬಂದಿರುತ್ತೆ. ಅದು ಜನರಕ್ಕೆ ಇಷ್ಟ ಆದರೆ, ರಿಪ್ಲೇಸ್ ಮಾಡುವುದಕ್ಕೆ ಬಂದಾಗ ತೆಗೆದುಕೊಳ್ಳುವುದಿಲ್ಲ. ಆಗ ನೆಗೆಟಿವ್ ಆಗಿ ಮಾತಾಡಿಯೇ ಮಾಡುತ್ತಾರೆ. ಅದನ್ನು ಚಾಲೆಂಜ್ ಆಗಿ ತೆಗೆದುಕೊಂಡೆ. ಅದರು ನನ್ನ ಮೊದಲ ಹೀರೋ ಪಾತ್ರ ಆಗಿತ್ತು. ಅಲ್ಲಿವರೆಗೂ ಎಷ್ಟು ಎಪಿಸೋಡ್ ಆಗಿತ್ತೋ ಅಷ್ಟೇ ನನ್ನ ಎಪಿಸೋಡ್ಗಳು ಹೋದವು. ಜನರು ನನ್ನನ್ನು ಗುರುತಿಸುವುದಕ್ಕೆ ಶುರು ಮಾಡಿದ್ದು ಕೃಷ್ಣ ರುಕ್ಮಿಣಿಯಿಂದಾನೇ. ಅದು ಪಾಪುಲರ್ ಸೀರಿಯಲ್ ಆಗಿತ್ತು."
ತೆಲುಗು ಸೀರಿಯಲ್ ಬಿಟ್ಟು ಬಂದಿದ್ದೇಕೆ?
"ಬಲು ಅಪರೂಪ ನಮ್ಮ ಜೋಡಿ ಸೀರಿಯಲ್ ಆದ್ಮೇಲೆ ಒಂದು ಸಿನಿಮಾ ಮಾಡುತ್ತೇನೆ. ಅದೂ ಓಪನಿಂಗ್ ಏನೂ ತೆಗೆದುಕೊಳ್ಳುವುದಿಲ್ಲ. ಆಮೇಲೆ ತೆಲುಗು ಸೀರಿಯಲ್ಗೆ ಹೋಗುತ್ತೇನೆ. ಅಲ್ಲಿಗೆ ಹೋಗುತ್ತೇನೆ. ಆದರೆ, ನನಗೆ ಕನ್ನಡದಲ್ಲಿಯೇ ಸಿನಿಮಾ ಮಾಡಬೇಕು ಎನ್ನುವ ಹುಚ್ಚು. ದುಡಿಮೆ ಮಾಡಬೇಕು ನಿಜ. ಆದರೆ ಅದಕ್ಕಾಗಿಯೇ ಅಲ್ಲಿಗೆ ಹೋಗುವುದಕ್ಕೆ ಮನಸ್ಸು ಬರಲಿಲ್ಲ. ಮೊದಲು ಕನ್ನಡದಲ್ಲಿಯೇ ಬೆಳೆಯಬೇಕು ಅನ್ನೋ ಆಸೆ. ಆಮೇಲೆ ಬೇರೆ ಕಡೆಗೆ ನೋಡೋಣ ಅಂತ ಅಂದುಕೊಂಡೆ. ಅದಕ್ಕೆ ಶುರುವಾಗುವುದಕ್ಕೂ ಮೊದಲೇ ತೆಲುಗು ಸೀರಿಯಲ್ ಮಾಡುವುದಕ್ಕೆ ಆಗಲ್ಲ ಎಂದು ಹೊರಟು ಬಂದೆ."
ಬದುಕು ಬದಲಿಸಿತೇ ಜೋಡಿ ಹಕ್ಕಿ?
"ಒಂದು ಒಳ್ಳೆಯ ಪಾತ್ರ ಮಾಡಬೇಕು ಎಂದು ಕಾಯುತ್ತಿದ್ದೆ. ಆಗ ಆರೂರು ಜಗದೀಶ್ ಅವರ ಜೋಡಿ ಎನ್ನುವ ಒಂದು ಸೀರಿಯಲ್ ಶುರುವಾಗುತ್ತಿತ್ತು. ಆಗ ಅವರು ನನಗೆ ಕರೆದರು. ಆ ಸೀರಿಯಲ್ಗೆ ತನು ಮನ ಅರ್ಪಿಸಿ ಜೋಡಿ ಹಕ್ಕಿ ಮಾಡುತ್ತೇನೆ. ಅದರಿಂದ ನನಗೆ ತುಂಬಾನೇ ದೊಡ್ಡ ಬ್ರೇಕ್ ಸಿಕ್ಕಿ ಬಿಡುತ್ತೆ. ಸೀರಿಯಲ್ಗೂ ಇಂತಹದ್ದೊಂದು ಫ್ಯಾನ್ ಬೇಸ್ ಸಿಗುತ್ತೆ ಎಂದು ಊಹಿಸಿರಲಿಲ್ಲ. ನನ್ನ ಟ್ಯಾಟುಗಳನ್ನು ಹಾಕಿಕೊಳ್ಳುತ್ತಾರೆ. ಕಾರ್ಮಿಕ ವರ್ಗದ ಹುಡುಗರು ಫ್ಯಾನ್ಸ್ ಆಗಿಟ್ಟಿದ್ದರು. ಇವತ್ತು ಜನ ತುಂಬಾ ಪ್ರೀತಿಯಿಂದ ಮಾತಾಡಿಸುತ್ತಾರೆಂದರೆ, ಅದು ಈ ಸೀರಿಯಲ್ನಿಂದಲೇ"
ನಿರ್ಮಾಣಕ್ಕೆ ಇಳಿದಿದ್ದು ಹೇಗೆ?
"ಇಷ್ಟೊಂದು ಹೆಸರು ಸಿಕ್ಕಿರುವಾಗಲೇ ಕೋವಿಡ್ ಬರುತ್ತೆ. ಅಲ್ಲಿಂದ ಮೂರು ನಾಲ್ಕು ವರ್ಷ ಹಾಳಾಗಿ ಹೋಗುತ್ತೆ. ಆಮೇಲೆ ನಾನು ಜೀ ಕನ್ನಡಕ್ಕೆ ಭೂಮಿಗೆ ಬಂದ ಭಗವಂತ ಎನ್ನುವ ಸೀರಿಯಲ್ ಅನ್ನು ನಿರ್ಮಾಣ ಮಾಡಿದೆ. ಇದರೊಂದಿಗೆ ದೇವನಾಂಪ್ರಿಯಾ ಎನ್ನುವ ಸಿನಿಮಾವನ್ನು ಮಾಡುತ್ತಿದ್ದೆ. ಅದು ಇನ್ನೂ ಚಿತ್ರೀಕರಣ ನಡೆಯುತ್ತಿದೆ. ಈ ಮಧ್ಯೆ ಅರವಿಂದ್ ಅವರು ಕರೆ ಮಾಡಿ ಶಿವನ ಪಾತ್ರಕ್ಕೆ ಬರಬೇಕು ಎಂದು ಹೇಳಿದಾಗ ಆ ಪಾತ್ರದಲ್ಲಿ ನಟಿಸುತ್ತೇನೆ."
ನಿಮಗೂ ಶಿವನಿಗೂ ಏನು ಲಿಂಕ್?
"ನನ್ನ ಹೆಸರೇ ತಾಂಡವ. ಯಾವುದೋ ಒಂದು ಶಕ್ತಿ ನಮ್ಮನ್ನು ಮುನ್ನೆಡೆಸುತ್ತೆ. ನಮಗೆ ಬೇಕೋ ಬೇಡವೋ ಇದ್ಯಾವುದನ್ನೂ ಕೇಳುವುದಿಲ್ಲ. ನಮ್ಮನ್ನು ಎಳೆದುಕೊಂಡು ಹೋಗುತ್ತೆ. ನಾನು ಶಿವನ ಪಾತ್ರವನ್ನು ಮಾಡಲೇಬೇಕು ಅಂತ ಕನಸು ಕಂಡಿರಲಿಲ್ಲ. ಈ ಹಿಂದೆ ನಾನು ಮಾಡಿದ್ದ ಭೂಮಿಗೆ ಬಂದ ಭಗವಂತ ಸೀರಿಯಲ್ ಅದೂ ಕೂಡ ಶಿವನದ್ದೇ. ಏನೋ ಅಂತಹದ್ದೊಂದು ಅಂಶ ನನ್ನಲ್ಲಿ ಇರಬಹುದೇನೋ. ಇದೆಲ್ಲ ನೋಡಿದಾಗ ನನಗೆ ಹಾಗೆ ಅನಿಸುತ್ತೆ."

ಶಿವನ ಅಂಶಗಳು ನಿಮಗೆ ಹೋಲಿಕೆ ಆಗುತ್ತಾ?
"ಶಿವನನ್ನು ಭಕ್ತಿಯಿಂದ ಖುಷಿ ಪಡಿಸಿ ಬಿಟ್ಟರೆ, ಅವನು ಏನು ಬೇಕಾದರೂ ವರ ಕೊಡುತ್ತಾನೆ. ನಮ್ಮ ಪರ್ಸನಲ್ ಕ್ಯಾರೆಕ್ಟರ್ ಹೇಗೆ ಅಂದರೆ, ಯಾರಾದರೂ ಕಷ್ಟ ಅಂತ ಬಂದರೆ, ನನಗೆ ತೊಂದರೆ ಆಗುತ್ತಾ ಅಂತ ನೋಡಲ್ಲ. ಕೊಟ್ಟು ಮೋಸ ಹೋಗುತ್ತೇನೆ. ಎಲ್ಲಾ ದೇವರುಗಳಿಗಿಂತ ಮೋಸ ಹೋಗುವುದರಲ್ಲಿ ಶಿವನೇ ಮೊದಲು. ಹಾಗೇ ಶಿವನ ಎಷ್ಟೋ ಅಂಶಗಳು ನನಗೆ ಹೋಲಿಕೆ ಆಗುತ್ತೆ. ಇದನ್ನು ಎಲ್ಲೂ ಹೇಳಿಲ್ಲ. ನೀವು ಕೇಳಿದ್ದಕ್ಕೆ ಹೇಳಿದ್ದೇನೆ."
ಮುಂದೇ ನಿಮ್ಮನ್ನು ಹೇಗೆ ನೋಡಬಹುದು?
"ದೇವಿ ಮಹಾತ್ಮೆಯಲ್ಲಿ ಪ್ರತಿ ತಿಂಗಳೂ ಒಂದೊಂದು ಕಥೆ ಬರುತ್ತೆ. ಇದರಲ್ಲಿ ಚಾಮುಂಡಿದೇವಿಯ ಕುರಿತಾದ ಕಥೆಯೇ ಹೆಚ್ಚಿರುತ್ತೆ. ಶಿವ ಅಲ್ಲಿ ಯಾವಾಗಲೂ ಇರುತ್ತಾನೆ. ಶಿವ ಅಂತ ಬಂದಾಗ, ಶೈವ ಪುರಾಣದಲ್ಲಿ ಕಥೆಗಳು ಇವೆಲ್ಲ, ಅದು ಒಂದೊಂದಾಗಿಯೇ ಬರುತ್ತವೆ. ಶಿವ ಶಿವನಾಗಿಯೇ ಇರುತ್ತಾನೆ. ಆದರೆ, ಬೇರೆ ಬೇರೆ ಅವತಾರಗಳಲ್ಲಿ ಬರುವ ಸಾಧ್ಯತೆಗಳು ಇರುತ್ತೆ."
ನಿಮಗೆ ಆಧ್ಯಾತ್ಮದ ಕಡೆಗೆ ಒಲವು ಇದೆಯೇ?
"ಆಧ್ಯಾತ್ಮದ ಕಡೆಗೆ ಒಲವು ಇದೆ. ಆದರೆ, ಸರಿಯಾದ ಗುರು ಸಿಕ್ಕಿಲ್ಲ ಅಷ್ಟೇ. ಶಿವ ಅಂದರೇ ಆಧ್ಯಾತ್ಮ. ಒಂದು ಸೆಲೆಯಿದ್ದರೆ ಸಾಕು ಅದು ನಮ್ಮನ್ನು ಎಳೆಯುತ್ತೆ. ಯಾವುದೋ ಒಂದು ಕನೆಕ್ಷನ್ ಇರಬಹುದೇನೋ. ಖಂಡಿಯಾ ಆಧ್ಯಾತ್ಮದ ಕಡೆಗೆ ಒಲವಿದೆ. ಆದರೆ, ಅದು ಸರಿಯಾಗಿ ಕಾಣುತ್ತಿಲ್ಲ ಅಷ್ಟೇ."
ನಟ-ನಿರ್ಮಾಪಕ ಯಾವುದು ಇಷ್ಟ?
"ನಾನು ನಟನಾಗಿ ಇರುವುದಕ್ಕೆ ಇಷ್ಟ ಪಡುತ್ತೇನೆ. ನಾನು ನಟನಾಗಬೇಕು ಅಂತಲೇ ಬಂದಿತ್ತು. ನಿರ್ಮಾಪಕನಾಗಬೇಕು ಎಂದುಕೊಂಡಿರಲಿಲ್ಲ. ಅದು ಕರೆದುಕೊಂಡು ಹೋಯ್ತು. ನಿರ್ಮಾಪಕ ಅನ್ನೋದು ತುಂಬಾನೇ ಜವಾಬ್ದಾರಿ ಇರುವಂತಹ ಜಾಗ. ನಿರ್ಮಾಪಕ ಆದರೆ, ಇಂಡಸ್ಟ್ರಿ ಅಂದರೆ ಏನು ಅನ್ನೋದು ಗೊತ್ತಾಗುತ್ತೆ. ನಾನೊಬ್ಬ ಕಲಾವಿದನಾಗಿ ನಾನೇನು ತಪ್ಪು ಮಾಡುತ್ತಿದ್ದೇನೆ ಅನ್ನೋದು ಗೊತ್ತಾಗುತ್ತೆ. ಅವಕಾಶ ಬಂದಾಗ ನಿರ್ಮಾಪಕನಾಗಿ ಕೆಲಸ ಮಾಡುತ್ತೇನೆ."


Click it and Unblock the Notifications











