ಆಕ್ಟಿಂಗ್ ಮಾಡ್ಬೇಕು ಅಂತ ಮನೆ ಬಿಟ್ಟು ಓಡಿ ಬಂದ ನಟ; ಈಗ ಶಿವನಾಗಿ, ಜಮದಗ್ನಿಯಾಗಿ ಪ್ರತ್ಯಕ್ಷ
ಕಿರುತೆರೆಯಲ್ಲಿ ಪೌರಾಣಿಕ ಪಾತ್ರಗಳು ಇತ್ತಿಚೆಗೆ ಕಡಿಮೆಯಾಗಿವೆ. ಕೇವಲ ಸಾಂಸಾರಿಕ, ಸೋಶಿಯಲ್ ಸೀರಿಯಲ್ಗಳೇ ಹೆಚ್ಚಾಗಿ ಪ್ರಸಾರ ಆಗುತ್ತಿವೆ. ಇಂತಹದ್ರಲ್ಲಿ ಸ್ಟಾರ್ ಸುವರ್ಣದಲ್ಲಿ 'ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ' ಧಾರಾವಾಹಿ ಪ್ರಸಾರ ಆಗುತ್ತಿದೆ. ಈ ಪೌರಾಣಿಕ ಧಾರಾವಾಹಿಗೆ ಪ್ರೇಕ್ಷಕರಿಂದ ಮೆಚ್ಚುಗೆ ಕೂಡ ವ್ಯಕ್ತವಾಗುತ್ತಿದೆ.
'ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ' ಧಾರಾವಾಹಿಯಲ್ಲಿ ಸದ್ಯಕ್ಕೀಗ ಜಮಧಗ್ನಿ ಪಾತ್ರ ಗಮನ ಸೆಳೆಯುತ್ತಿದೆ. ಈ ಪಾತ್ರ ಈಗ ಪ್ರೌಢಾವಸ್ಥೆಯನ್ನು ದಾಟಿ ಯೌವ್ವನಾವಸ್ಥೆಗೆ ಬಂದು ತಲುಪಿದೆ. ಈ ಪಾತ್ರದಲ್ಲಿ ಕುಂದಾಪುರ ಮೂಲದ ನಟ ಶರತ್ ನಟಿಸುತ್ತಿದ್ದಾರೆ. ಇಂಡಸ್ಟ್ರಿಗೆ ಎಂಟ್ರಿ ಕೊಟ್ಟ ಮೊದಲ ಧಾರಾವಾಹಿ 'ಉಘೇ ಉಘೇ ಮಾದೇಶ್ವರ'ದಲ್ಲಿ ಶಿವನ ಪಾತ್ರ ಮಾಡಿದ್ದರು. ಇದೂ ಕೂಡ ಪೌರಾಣಿಕ ಪಾತ್ರವಾಗಿತ್ತು. ನಂತರ ರಾಧಿಕಾ ಸೀರಿಯಲ್ ನಲ್ಲಿ ನಾಯಕ ನಟ ಚಿರಂತಾಗಿ 900 ಎಪಿಸೋಡ್ ಪೂರ್ಣಗೊಳಿಸಿದ್ದರು. ಈಗ ರೇಣುಕಾ ಯಲ್ಲಮ್ಮ ಧಾರಾವಾಹಿಯಲ್ಲಿ ನಾಯಕ ಜಮದಗ್ಮಿಯಾಗಿ ನಟಿಸಿರುವ ಶರತ್, ಈ ಪಾತ್ರದ ಬಗ್ಗೆ, ತಮ್ಮ ಜರ್ನಿಯ ಬಗ್ಗೆ ಫಿಲ್ಮಿಬೀಟ್ ಕನ್ನಡಕ್ಕೆ ನೀಡಿದ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.

ನೀವು ಎಲ್ಲಿಯವರು? ನಟನೆಗೆ ಎಂಟ್ರಿ ಕೊಟ್ಟಿದ್ದೇಗೆ?
"ನಾನು ಮೂಲತ: ಉಡುಪಿ ಜಿಲ್ಲೆಯ ಕುಂದಾಪುರದವನು. ಇನ್ನು ಚಿತ್ರರಂಗಕ್ಕೆ ಹೇಗೆ ಬಂದೆ ಅಂದರೆ, ನಿನ್ನೆ ಮೊನ್ನೆ ಹತ್ತು ವರ್ಷದ ಹಿಂದಿನ ಕನಸು ಅಲ್ಲ. ನಾನು ಚಿಕ್ಕವನಿರುವಾಗ ಮ್ಯಾಗಜೀನ್ಗಳು ಬರೋದು. ಆ ಮ್ಯಾಗಜೀನ್ಗಳಲ್ಲಿ ದೊಡ್ಡವರಾದ್ಮೇಲೆ ಏನಾಗ್ಬೇಕು ಅಂತ ಆಸೆ ಅಂತ ಕೇಳೋರು. ನನಗೆ ಆರ್ಟಿಸ್ಟ್ ಅದು, ಇದೂ ಎಲ್ಲಾ ಗೊತ್ತಿರಲಿಲ್ಲ. ಹೀರೋ ಆಗ್ಬೇಕು ಅನ್ನೋದಷ್ಟೇ ಗೊತ್ತಿತ್ತು. ಹೀಗೆ ಚಿಕ್ಕ ವಯಸ್ಸಿನಿಂದಲೇ ನನಗೆ ನಟನೆ ಕಡೆಗೆ ಒಲವಿತ್ತು."
ಸಿನಿಮಾ ಮಾಡುವ ಕನಸು ಹೊತ್ತಿನೇ ಬೆಂಗಳೂರಿಗೆ ಬಂದ್ರಾ?
"ಚಿಕ್ಕಂದಿನಿಂದ ಸ್ಟೇಜ್ ಡಾನ್ಸ್ ಅಭ್ಯಾಸ ಇತ್ತು. ಆದರೆ, ಚಿತ್ರರಂಗಕ್ಕೆ ಹೇಗೆ ಬರಬೇಕು ಅನ್ನೋದು ಗೊತ್ತಿರ್ಲಿಲ್ಲ. ನಾ ಇಂಡಸ್ಟ್ರಿಗ್ ಬರ್ಬೇಕು, ಹೇಗೆ ಬರಬೇಕು ಅಂತ ಒಬ್ಬ ಕಲಾವಿದರಿಗೆ ಮೆಸೇಜ್ ಹಾಕಿದೆ. ಅವರು ಬೆಂಗಳೂರಿಗೆ ಬರಬೇಕು ಅಂದರು . ನಾನು ಬೆಂಗಳೂರಿಗೆ ಸಿನಿಮಾಗೋಸ್ಕರ ಹೋಗ್ತೀನಿ ಅಂದಾಗ ಮನೆಯಲ್ಲಿ ನಿರಾಕರಿಸಿದ್ರು. ಸಿನಿಮಾ ಫೀಲ್ಡಿಗೆ ಸಪ್ಪೋರ್ಟ್ ಇರಲಿಲ್ಲ. ನಾವು ಒಂದು ಮಧ್ಯಮ ವರ್ಗದ ಕುಟುಂಬ. ಆಮೇಲೆ ಒಂದಿನ ರಾತ್ರಿ ಮನೆಯಲ್ಲಿ ಮನ:ಸ್ತಾಪ ಆಗಿನೇ ಮನೆಯಿಂದ ಹಠ ಬಿದ್ದು ಆಚೆ ಬಂದಿದ್ದು. ಬಸ್ ಹತ್ತಿಕೊಂಡು ಬೆಂಗಳೂರಿಗೆ ಬಂದೆ ಬಿಟ್ಟೆ. ಇದು ಸಿನಿಮಾಗೋಸ್ಕರ ನನ್ನಲ್ಲಿದ್ದಿದ್ದ ಹಸಿವು ಹಾಗೂ ಪ್ರೀತಿ."

ಬೆಂಗಳೂರಿಗೆ ಕಾಲಿಟ್ಟಾಗ ಏನು ಅನಿಸ್ತು?
"ನಾನು ಅದೇ ಮೊದಲ ಬಾರಿಗೆ ಬೆಂಗಳೂರು ಬಂದಿದ್ದು. ಬೆಂಗಳೂರು ತುಂಬಾ ಫಾಸ್ಟ್ ಸಿಟಿ. ಇಲ್ಲಿ ನನ್ ಕನಸು ಹೇಗ್ ರೀಚ್ ಆಗುತ್ತೆ ಅಂತ ನಾನು ಫಸ್ಟ್ ಯೋಚನೆ ಮಾಡಿದೆ. ಬೆಂಗಳೂರು ಸಿಟಿನ ನೋಡಿ ಆಶ್ಚರ್ಯ ಆಗಿದ್ದಂತೂ ಸತ್ಯ. ಚಿಕ್ಕಂದಿನಿಂದ ಸ್ಟೇಜ್ ಗಳಲ್ಲಿ ಡ್ಯಾನ್ಸ್, ನಾಟಕ, ಸ್ಪೋರ್ಟ್ಸ್ ಈ ತರಹ ಚಟುವಟಿಕೆಗಳಲ್ಲಿ ಜಾಸ್ತಿ ಆಕ್ಟಿವ್ ಆಗಿದ್ದೆ . ಮೊದಲು ಥಿಯೇಟರ್ ಸೇರಿಕೊಂಡೆ. ನಾಟಕಗಳನ್ನ ಮಾಡೋದಕ್ಕೆ ಶುರು ಮಾಡಿದ. ನಾಲ್ಕು ತಂಡದಲ್ಲಿ ಕೆಲಸ ಮಾಡಿದ್ದೇನೆ. ಎಲ್ಲಾ ರೀತಿಯ ಕೆಲಸಗಳನ್ನು ಮಾಡಿದ್ದೇನೆ."
ಮೊದಲ ಸೀರಿಯಲ್ ಸಿಕ್ಕಿದ್ದೇಗೆ?
"ನಾನು ಮೊದಲು ಆಡಿಷನ್ಗಳನ್ನು ಕೊಡುವುದಕ್ಕೆ ಶುರು ಮಾಡಿದೆ. ಸುಮಾರು ಆಡಿಷನ್ ಕೊಟ್ಟಿದ್ದೀನಿ. ಅದನ್ನು ಮಾಡುತ್ತಾ? ನಾನು ಮಾಡಲಿಂಗ್ ಕೂಡ ಮಾಡುತ್ತಿದೆ. ಸಣ್ಣದಾಗಿ ಏನಾದರೂ ಹಣ ಸಿಗಲಿ ಅಂತ ಅಂದುಕೊಂಡೆ. ಹೀಗೆ ನನಗೆ ಆಡಿಷನ್ ಕೊಡುತ್ತಾ ಮೊದಲ ಸಿಕ್ಕಿದ್ದು ಜೀ ಕನ್ನಡದ ಉಘೇ ಉಘೇ ಮಾದೇಶ್ವರ. ಅದರಲ್ಲಿ ಎರಡು ಮೂರು ತಿಂಗಳಿಂದ ಮಹದೇವ ಅನ್ನುವ ಪಾತ್ರಕ್ಕೆ ಆಡಿಷನ್ ಮಾಡುತ್ತಿದ್ದರು. ನಾನು ಅಲ್ಲಿ ಹೋದಾಗ, ನನ್ನ ಭಾಷೆ ಹಾಗೂ ಲುಕ್ ನೋಡಿದ ಕೂಡಲೇ ಓಕೆ ಮಾಡಿಬಿಟ್ಟರು. ಒಂದು ವರ್ಷ ಆ ಪ್ರಾಜೆಕ್ಟ್ ಮಾಡಿದ್ವಿ."

ಮಾದೇಶ್ವರ ಬಳಿಕ ನಿಮ್ಮ ಜರ್ನಿ?
"ನನ್ನ ಎರಡನೇ ಸೀರಿಯಲ್ ಕೂಡ ಆಡಿಷನ್ ಮೂಲಕವೇ ಸೆಲೆಕ್ಟ್ ಆಯ್ತು. ಉದಯ ಟಿವಿಯಲ್ಲಿ ಪ್ರಸಾರ ಆಗುತ್ತಿದ್ದ ರಾಧಿಕಾ ಈ ಸೀರಿಯಲ್ನಲ್ಲಿ ನಾನು ನಾಯಕ ನಟನಾಗಿದ್ದೆ. ಅದಾದ್ಮೇಲೆ ಈಗ ನನ್ನ ಮೂರನೇ ಪ್ರಾಜೆಕ್ಟ್ ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ ಧಾರಾವಾಹಿ. ಇದರಲ್ಲಿ ನಾನು ನಾಯಕ ಜಮದಗ್ನಿ ಪಾತ್ರವನ್ನು ನಿರ್ವಹಿಸುತ್ತಿದ್ದೇನೆ."
ಮೊದಲ ಪ್ರಾಜೆಕ್ಟ್ ಅಲ್ಲೇ ಶಿವನ ಪಾತ್ರ ಸಿಕ್ಕಿದ್ದು ಹೇಗೆ ಅನ್ನಿಸ್ತು?
"ನನಗೆ ಸಿಕ್ಕಾಪಟ್ಟೆ ಖುಷಿಯಾಯಿತು. ಯಾಕೆ ಅಂದ್ರೆ, ನಾನು ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಾಗ ಮೊದಲ ಪ್ರಾಜೆಕ್ಟ್ ನಲ್ಲೆ ಮೊದಲ ದಿನವೇ ಶಿವನ ಪಾತ್ರಕ್ಕೆ ಬಣ್ಣ ಹಚ್ಚಿದ್ದು ನನಗೆ ತುಂಬಾ ಖುಷಿ ಇದೆ. ನನಗೆ ಗೊತ್ತಿರುವ ಹಾಗೆ ಮೊದಲ ಪ್ರಾಜೆಕ್ಟ್ ನಲ್ಲೆ ನಾನು ಶಿವನ ಪಾತ್ರ ಮಾಡಿದ್ದು ನನಗೆ ತುಂಬಾ ದೊಡ್ಡ ಹೆಮ್ಮೆ ಇದೆ. ಇದು ಯುಗಾದಿ ಸಮಯದಲ್ಲೇ ಶುರುವಾಗಿತ್ತು. ಹಾಗೆ ನನಗೆ ಮೂರು ಪ್ರಾಜೆಕ್ಟ್ ಸಿಕ್ಕಿದ್ದು ಕೂಡ ಯುಗಾದಿ ಟೈಮಲ್ಲಿ."
ರಾಧಿಕಾ ಸೀರಿಯಲ್ ನಿಮ್ಮ ವೃತ್ತಿ ಬದುಕು ಬದಲಿಸಿದ್ದೇಗೆ?
"ನಾನು ರಾಧಿಕಾ ಸೀರಿಯಲ್ನ 900 ಎಪಿಸೋಡ್ಗಳನ್ನು ಕಂಪ್ಲೀಟ್ ಮಾಡಿದೆ. ರಾಧಿಕಾ ಸೀರಿಯಲ್ನಲ್ಲಿ ನಾನು ತುಂಬಾ ವಿಚಾರಗಳನ್ನು ಕಲಿತಿದ್ದೇನೆ. ಗಣಪತಿ ಭಟ್ ಸರ್ ಗೆ, ದರ್ಶಿದ್ ಭಟ್ ಸರ್ ಗೆ ಹಾಗೂ ಉದಯ ಟಿವಿಗೆ ಧನ್ಯವಾದಗಳು. ಉಘೇ ಉಘೇ ಮಾದೇಶ್ವರ ಸೀರಿಯಲ್ನಲ್ಲೂ ಅದರ ಒಂದು ಕಂಪ್ಲೀಟ್ ಜರ್ನಿ ಕಥೆಯನ್ನು ನಾವು ತೋರಿಸಿದ್ದೇವೆ. ಇದಾದ ಮೇಲೆ ಸಿಕ್ಕಿದ್ದು ರಾಧಿಕಾ. ಇದು ನನ್ನ ವೃತ್ತಿ ಬದುಕಿಗೆ ಮೈಲಿಗಲ್ಲು ಇದ್ದ ಹಾಗೆ."
ಜಮದಗ್ನಿಯಾಗಲು ಸಿದ್ದತೆ ಹೇಗಿರುತ್ತೆ?
"ಜಮದಗ್ನಿ ಅನ್ನೋದು ಒಂದು ಪವರ್ಫುಲ್ ಪಾತ್ರ. ಅಂದರೆ, ಅವನು ಒಬ್ಬ ಮುನಿ ಅಲ್ಲ. ಅವನೊಬ್ಬ ವೀರ. ಅವನು ಯಾವ ರೀತಿ ಅಂದರೆ, ವಿಪರೀತ ಕೋಪ. ಪ್ರೀತಿ ಅಂತ ಬಂದರೆ, ಅದೇ ರೀತಿ ಮಗು ಮನಸ್ಸಿರುವ ಪ್ರೀತಿ. ನಾನು ಆ ಪಾತ್ರಕ್ಕೆ ಸೂಟ್ ಆಗುತ್ತೇನೆ ಅನ್ನೋದೆ ನನಗೆ ಒಂದು ಹೆಮ್ಮೆ. ಪಾತ್ರದೊಳಗೆ ಪರಕಾಯ ಪ್ರವೇಶ ಮಾಡಿದರೆ ಮಾತ್ರ ಪೌರಾಣಿಕ ರೋಲ್ಗಳನ್ನು ಮಾಡುವುದಕ್ಕೆ ಸಾಧ್ಯ ಇದನ್ನು ನಾನು ಅಂದುಕೊಂಡಿರೋದು."
ಜಮದಗ್ನಿ ಬಗ್ಗೆ ನಿಮಗೆಷ್ಟು ಗೊತ್ತು?
"ಜಮದಗ್ನಿ ಎಂದರೆ ಒಬ್ಬ ವೀರ. ಸಿಕ್ಕಾಪಟ್ಟೆ ಪವರ್ಫುಲ್. ಕ್ರೋಧಾ ದೇವಿ ಅಂತ ಒಬ್ಬರು ದೇವಿ ಇರ್ತಾರೆ. ಆ ದೇವಿಯನ್ನು ತನ್ನೊಳಗಡೆ ವಶಪಡಿಸಿಕೊಂಡಾಗ ಅವನು ಇನ್ನೂ ಶಕ್ತಿವಂತ ಆಗ್ತಾನೆ. ಇದೇ ರೀತಿ ಇನ್ನೂ ಕೆಲವು ದೇವತೆಗಳನ್ನ ಅವನು ಆಹ್ವಾಹನೆ ಮಾಡ್ಕೋತಾನೆ. ರೇಣುಕೆಯನ್ನು ತುಂಬಾನೇ ಪ್ರೀತಿ ಮಾಡುತ್ತಾನೆ. ಅವಳೊಬ್ಬಳು ದೈವಾಂಶ ಇರುವ ರಾಣಿ ಇವನೊಬ್ಬ ವೀರ. ಹೀಗಿದ್ದರೂ ಅವರ ಪ್ರೀತಿಯನ್ನು ಹೇಗೆ ಹೇಳುತ್ತಾರೆ? ಹಾಗೆಯೇ ಅವರು ರೇಣುಕಾ ಯಲ್ಲಮ್ಮ ಹೇಗೆ ಆಗುತ್ತಾರೆ ಅನ್ನೋದೇ ಕಥೆ."
ನಿಮ್ಮ ಮುಂದಿರುವ ಸವಾಲು ಏನು?
"ಈಗ ಪ್ರೌಢಾವಸ್ಥೆಯನ್ನು ದಾಟಿ ಬಂದಿರುವ ಜಮಾದಗ್ನಿ ಈ ಅವತಾರದಲ್ಲಿ ಆ ರಗಡ್ ಅಂಶ ಜಾಸ್ತಿ ಇರುತ್ತೆ ಕ್ರೋಧಾ ಜಾಸ್ತಿ ಇರುತ್ತೆ. ಪ್ರೀತಿ ಮಾಡುವ ವಿಧಾನ ಬೇರೆಯಾಗಿರುತ್ತೆ. ಗೌರವ ಕೊಡುವ ರೀತಿ ಬೇರೆ ಇರುತ್ತೆ. ಇಷ್ಟು ಕ್ರೋಧದಲ್ಲಿ ಇರುವ ಜಮದಗ್ನಿಯಲ್ಲಿ ಪ್ರೀತಿ ವಿಷಯ ಬಂದಾಗ ರೇಣುಕೆ ಜೊತೆ ಹೇಗಿರುತ್ತಾನೆ ಅನ್ನೋದು ಸವಾಲು. ಹಾಗೆ ನನ್ನನ್ನ ಜನರು ಪೌರಾಣಿಕ ಸೀರಿಯಲ್ ಅಲ್ಲೂ ಅಕ್ಸೆಪ್ಟ್ ಮಾಡಿದ್ದಾರೆ. ಹಾಗೆ ಸಾಮಾಜಿಕ ಸೀರಿಯಲ್ ಅಲ್ಲೂ ಅಕ್ಸೆಪ್ಟ್ ಮಾಡಿದ್ದಾರೆ. ಅದು ನನಗೆ ಖುಷಿಯ ವಿಷಯ."
ಸಿನಿಮಾ ನಿಮ್ಮ ಕನಸು ಅಲ್ಲವೇ?
"ಹೌದು, ನನ್ನ ಇಂಡಸ್ಟ್ರಿಗ್ ಬಂದಿದ್ದೇ ಸಿನಿಮಾ ಮಾಡಬೇಕು ಅಂತ. ನನಗೆ ಥಿಯೇಟರ್ನಲ್ಲಿ ನಾಟಕಗಳನ್ನ ಮಾಡಿ ಅನುಭವ ಇದೆ. ಹಾಗೆ ಈಗ ಪೌರಾಣಿಕ ಸೀರಿಯಲ್ ಹಾಗೂ ಸಾಮಾಜಿಕ ಸೀರಿಯಲ್ ಮಾಡಿ ಕೂಡ ನನಗೆ ಅನುಭವ ಇದೆ. ಸಿನಿಮಾಗೆ ಬೇಕಾಗಿರುವ ಎಲ್ಲಾ ಸಿದ್ಧತೆಗಳನ್ನು ನಾನು ಮಾಡ್ಕೋತಾ ಇದ್ದೀನಿ. ಡ್ಯಾನ್ಸ್ ಚಿಕ್ಕ ವಯಸ್ಸಿಂದನೂ ಮಾಡ್ಕೊಂಡ್ ಬಂದಿದ್ದೀನಿ. ಫೈಟ್, ಸ್ಟಂಟ್ಸ್ ನಾನು ಕಲಿತಾ ಇದೀನಿ. ಕಥೆಗೆ ತಕ್ಕಂತ ಪಾತ್ರ ಬಂದ್ರೆ ಹಾಗೇ ರೆಡಿಯಾಗೋದಿಕ್ಕೆ ನಾನು ಸಿದ್ದನಾಗಿದ್ದೇನೆ. ಹೀಗಾಗಿ ಒಂದು ಒಳ್ಳೆಯ ಪಾತ್ರಕ್ಕಾಗಿ, ಅವಕಾಶಕ್ಕಾಗಿ ಕಾಯ್ತಾ ಇದ್ದೀನಿ. ನನ್ನ ರೋಲ್ ಮಾಡೆಲ್ ಯಶ್ ಸರ್ ಹಾಗೂ ದರ್ಶನ್ ಸರ್."


Click it and Unblock the Notifications











