"ಬೆಡ್ ರೂಮ್ಗೆ ಕರೆದು ಕೆಟ್ಟದಾಗಿ ನಡೆದುಕೊಂಡ"; ಮಲಯಾಳಂ ನಿರ್ದೇಶಕ ಮೇಲೆ ಮೀಟೂ ಆರೋಪ
ಇತ್ತೀಚೆಗೆ ಹೇಮಾ ಕಮಿಟಿ ವರದಿ ಮಲಯಾಳಂ ಚಿತ್ರರಂಗ ಮರ್ಯಾದೆಯನ್ನು ಬುಡಮೇಲು ಮಾಡಿತ್ತು. ಮಾಲಿವುಡ್ನ ದಿಗ್ಗಜರ ವಿರುದ್ಧವೇ ನಟಿಯರು ಆರೋಪ ಮಾಡಿದ್ದರು. ನಟಿಯರಿಗೆ ಮಲಯಾಳಂ ಚಿತ್ರರಂಗದ ಸ್ಟಾರ್ ನಟರು ಹಾಗೂ ನಿರ್ದೇಶಕರಿಂದ ಲೈಂಗಿಕ ಕಿರುಕುಳ ಆಗಿದೆ ಎಂದು ಹೇಮಾ ಕಮಿಟಿ ವರದಿ ಮಾಡಿದ ಬೆನ್ನಲ್ಲೆ ಸಾಕಷ್ಟ ನಟಿಯರು ತಮಗಾದ ಕಹಿ ಅನುಭವಗಳನ್ನು ಹೇಳಿಕೊಂಡಿದ್ದರು.
ಹೇಮಾ ಕಮಿಟಿ ವರದಿ ಬಳಿಕ ಮಲಯಾಳಂ ಚಿತ್ರರಂಗಕ್ಕೆ ಸಿಕ್ಕಾಪಟ್ಟೆ ಮುಜುಗರವನ್ನು ಎದುರಿಸುವಂತಾಗಿದೆ. ಈ ಪ್ರಕರಣಗಳು ಇನ್ನೇನು ತಣ್ಣಗಾಗುತ್ತಿವೆ ಅನ್ನುವಾಗಲೇ ಮತ್ತೊಬ್ಬ ನಟಿ ಮಲಯಾಳಂ ಖ್ಯಾತ ನಿರ್ದೇಶಕನಿಂದ ತನಗಾದ ಕಹಿ ಅನುಭವವನ್ನು ತಮಿಳು ಯೂಟ್ಯೂಬ್ ಚಾನೆಲ್ನಲ್ಲಿ ಹಂಚಿಕೊಂಡಿದ್ದಾರೆ. ತನಗಿಂತ ದುಪ್ಪಟ್ಟು ವಯಸ್ಸಿನ ನಿರ್ದೇಶಕ ಹೇಗೆ ನಡೆದುಕೊಂಡ ಅನ್ನೋದನ್ನು ವಿವರಿದ್ದಾರೆ.

ಮಲಯಾಳಂ ನಿರ್ದೇಶಕನ ವಿರುದ್ಧ ಆರೋಪ ಮಾಡಿರುವ ನಟಿ ಅಶ್ವಿನಿ ನಂಬಿಯಾರ್. ಈಕೆ ಮಲಯಾಳಂನ ಕ್ಲಾಸಿಕ್ ಸಿನಿಮಾ 'ಮಣಿಚಿತ್ರತಾಳ್' ಮೂಲಕ ದಕ್ಷಿಣ ಭಾರತ ಚಿತ್ರರಂಗದಲ್ಲಿ ಜನಪ್ರಿಯರಾಗಿದ್ದರು. ಒಮ್ಮೆ ನಿರ್ದೇಶಕರೊಬ್ಬರು ಸಿನಿಮಾ ಬಗ್ಗೆ ಮಾತಾಡುವುದಕ್ಕೆ ಆಫೀಸ್ಗೆ ಬರುವಂತೆ ಆಹ್ವಾನ ನೀಡಿದ್ದರು. ಅಲ್ಲಿಗೆ ಹೋದಾಗ ಬೆಡ್ ರೂಮ್ಗೆ ಕರೆದು ಕೆಟ್ಟದಾಗಿ ವರ್ತಿಸಿದ್ದರೆಂದು ಅಶ್ವಿನಿ ನಂಬಿಯಾರ್ ಹೇಳಿದ್ದಾರೆ. ಇದು ಮಲಯಾಳಂ ಚಿತ್ರರಂಗದಲ್ಲಿ ಮತ್ತೆ ಸಂಚನ ಸೃಷ್ಟಿಸಿದೆ.
ಅಶ್ವಿನಿ ನಂಬಿಯಾರ್ ಕೇವಲ 16ನೇ ವಯಸ್ಸಿನಲ್ಲಿಯೇ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ದಕ್ಷಿಣ ಭಾರತದ ಪ್ರಮುಖ ಸ್ಟಾರ್ ನಟರೊಂದಿಗೆ ಇವರು ನಟಿಸಿದ್ದಾರೆ. ವಿಜಯಕುಮಾರ್, ರಾಧಿಕಾ, ನೆಪೋಲಿಯನ್ ಸೇರಿದಂತೆ ಹಲವು ಸ್ಟಾರ್ ನಟರೊಂದಿಗೆ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಮಲಯಾಳಂನ ಮಾತೃಭೂಮಿ ವರದಿ ಮಾಡಿದಂತೆ ಅಶ್ವಿನಿ ನಂಬಿಯಾರ್ ನಿರ್ದೇಶಕರೊಬ್ಬರಿಂದ ಆದ ಕಹಿ ಅನುಭವವನ್ನು ತಮಿಳು ಯೂಟ್ಯೂಬ್ನ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

"ನಾನು ಈ ಬಗ್ಗೆ ಎಲ್ಲೂ ಹೇಳಿಕೊಂಡಿಲ್ಲ. ಕಳೆದ ವರ್ಷ ನಾನು ಟಿವಿ ಶೋನಲ್ಲಿ ಈ ಬಗ್ಗೆ ಚರ್ಚೆ ಮಾಡಿದ್ದೆ. ನಾನು ಇದನ್ನು ಕಾಸ್ಟಿಂಗ್ ಕೌಚ್ ಅಂತ ಕರೆಯುವುದಿಲ್ಲ. ಆದರೆ, ನಾನು ದೊಡ್ಡ ಟ್ರ್ಯಾಪ್ನಲ್ಲಿ ಸಿಕ್ಕಿಕೊಂಡಿದ್ದೆ. ನಾನು ಆ ವ್ಯಕ್ತಿಯ ಹೆಸರನ್ನು ಹೇಳುವುದಿಲ್ಲ. ನಾನು ಯಾರಿಗೂ ನೋವು ಕೊಡುವುದಕ್ಕೆ ಇಷ್ಟ ಪಡುವುದಿಲ್ಲ. ನಾನು ಆತನನ್ನು ಕ್ಷಮಿಸಿದ್ದೇನೆ. ಆ ಘಟನೆಯಿಂದ ಹೊರ ಬಂದಿದ್ದೇನೆ. ಅವರು ಜನಪ್ರಿಯರ ನಿರ್ದೇಶಕರು. ಸಿನಿಮಾಗೆ ಸಂಬಂಧಪಟ್ಟಂತೆ ಚರ್ಚೆ ಮಾಡುವುದಕ್ಕೆ ಅವರ ಆಫೀಸ್ಗೆ ಬರುವಂತೆ ಹೇಳಿದ್ದರು. ಯಾವಾಗಲೂ ನನ್ನ ತಾಯಿ ನನ್ನ ಜೊತೆಗೆ ಬರುತ್ತಿದ್ದರು. ಅಂದು ಅವರಿಗೆ ಆರೋಗ್ಯ ಸರಿಯಿಲ್ಲದ ಕಾರಣ, ನನ್ನ ಸಹಾಯಕಿಯನ್ನು ಕರೆದುಕೊಂಡು ಹೋಗಿದ್ದೆ." ಎಂದು ಆ ಘಟನೆಯನ್ನು ವಿವರಿಸಿದ್ದಾರೆ.
ಆ ನಿರ್ದೇಶಕನ ಆಫೀಸ್ ಚೆನ್ನೈನಲ್ಲಿರುವ ಅವರ ಮನೆಯ ಒಳಗೆ ಇತ್ತು. ಹೀಗಾಗಿ ಆಫೀಸ್ಗೆ ಹೋಗಿದ್ದ ಅಶ್ವಿನಿ ನಂಬಿಯಾರ್ ಕೆಳ ಮಹಡಿಯಲ್ಲಿ ಕಾಯುತ್ತಾ ಕೂತಿದ್ದರು. ಆಗ ನಿರ್ದೇಶಕನ ಸಹಾಯಕನೊಬ್ಬ ನಟಿಯನ್ನು ಮನೆಯ ಮೇಲೆ ಇರುವ ರೂಮ್ ಹೋಗುವಂತೆ ಹೇಳಿದ್ದ. ಈ ಹಿಂದೆ ಅದೇ ನಿರ್ದೇಶನನೊಂದಿಗೆ ಅಶ್ವಿನಿ ಕೆಲಸ ಮಾಡಿದ್ದರಿಂದ ಅಳುಕಿಲ್ಲದೆ ಹೋಗಿದ್ದರು. ಆದರೆ, ಅಲ್ಲಿ ನಡೆದಿದ್ದೇ ಬೇರೆ.
"ಮೇಲಿನ ಮಹಡಿಗೆ ಹೋಗುತ್ತಿದ್ದಂತೆ ಬೆಡ್ ರೂಮ್ನಿಂದ ಒಳಗೆ ಬಾ ಅನ್ನೋ ಧ್ವನಿ ಕೇಳಿಸಿತ್ತು. ನಾನು ಯಾವುದೇ ಅಳುಕಿಲ್ಲ ರೂಮ್ ಒಳಗೆ ಹೋಗಿದ್ದೆ. ಯಾಕಂದ್ರೆ ಈ ಹಿಂದೆ ಮಲಯಾಳಂ ಸಿನಿಮಾದಲ್ಲಿ ಅವರೊಂದಿಗೆ ಕೆಲಸ ಮಾಡಿದ್ದೆ. ನನಗೆ ಅವರು ಗೊತ್ತಿದ್ದರಿಂದ ನಾನು ಹೆಚ್ಚಾಗಿ ಏನೂ ಯೋಚನೆ ಮಾಡುವುದಕ್ಕೆ ಹೋಗಲಿಲ್ಲ. ಆಗ ನನಗೆ ಅಷ್ಟೊಂದು ಯೋಚನೆ ಮಾಡುವ ಪ್ರಬುದ್ಧತೆ ಕೂಡ ಇರಲಿಲ್ಲ." ಎಂದು ತಮಿಳು ಯೂಟ್ಯೂಬ್ ಚಾನೆಲ್ಗೆ ಹೇಳಿಕೊಂಡಿದ್ದಾರೆ.
ಅಶ್ವಿನಿ ನಂಬಿಯಾರ್ ರೂಮಿನೊಳಗೆ ಹೋಗುತ್ತಿದ್ದಂತೆ ಆ ಜನಪ್ರಿಯರ ನಿರ್ದೇಶಕ ತನ್ನ ಅಸಲಿ ಆಟವನ್ನು ಶುರು ಮಾಡಿದ್ದ. " ಬೆಡ್ ರೂಮ್ ಒಳಗೆ ಹೋಗುತ್ತಿದ್ದಂತೆ ಆ ನಿರ್ದೇಶಕ ಅನುಚಿತವಾಗಿ ವರ್ತಿಸುವುದಕ್ಕೆ ಶುರು ಮಾಡಿದ್ದ. ಖುಷಿಯಿಂದ ಮೇಲಿನ ಮಹಡಿಗೆ ಹೋಗಿದ್ದ ಹುಡುಗಿ ಅದೇ ಖುಷಿಯಲ್ಲಿ ಹಿಂತಿರುಗಲಿಲ್ಲ. ನನಗೆ ಅಲ್ಲಿ ಏನಾಯ್ತು ಎಂದು ನಂಬುವುದಕ್ಕೂ ಆಗುತ್ತಿರಲಿಲ್ಲ. ತಕ್ಷಣವೇ ಅಲ್ಲಿಂದ ಮನೆಗೆ ಹೊರಟು ಬಂದೆ. ಆದರೆ, ನನ್ನ ಅಮ್ಮನಿಗೆ ಏನೋ ಆಗಿದೆ ಅನ್ನೋದು ಗೊತ್ತಾಗಿತ್ತು" ಎಂದಿದ್ದಾರೆ.
ಅಲ್ಲಿ ನಡೆದ ಘಟನೆಯನ್ನು ಕೇಳಿ ಅಶ್ವಿನಿ ನಂಬಿಯಾರ್ ಅಮ್ಮ ಕಣ್ಣೀರು ಹಾಕಿದ್ದರು. ಇದು ನಟಿಯ ಮೇಲೆ ದೊಡ್ಡ ಪರಿಣಾಮವನ್ನು ಬೀರಿತ್ತು. ಇದೆಲ್ಲಕ್ಕೂ ತಾನೇ ಕಾರಣವೆಂದು ನಿದ್ದೆ ಮಾತ್ರಗಳನ್ನು ಸೇವಿಸಿದ್ದೆ ಎಂದು ಹೇಳಿಕೊಂಡಿದ್ದಾರೆ. ಬಳಿಕ ಅವರ ಅಮ್ಮ ಇದರಲ್ಲಿ ನಿನ್ನದೇನು ತಪ್ಪಿಲ್ಲ. ಎಲ್ಲವೂ ಆ ನಿರ್ದೇಶಕನದ್ದೇ ತಪ್ಪು ಎಂದು ಹೇಳಿದ ಮೇಲೆ ಅಮ್ಮ ಸಹಾಯವಿಲ್ಲದೆ ಬದುಕ ಬೇಕು ಎಂದು ನಿರ್ಧರಿಸಿದ್ದಾಗಿ ಹೇಳಿಕೊಂಡಿದ್ದಾರೆ.


Click it and Unblock the Notifications











