ದುಲ್ಕರ್ ಸಲ್ಮಾನ್ಗೆ ಸಂಕಷ್ಟ: ಲೀಗಲ್ ನೋಟಿಸ್ ಕಳುಹಿಸಿದ ಅಮ್ಮ, ಮಗ
ದುಲ್ಕರ್ ಸಲ್ಮಾನ್ ನಟನೆಯ ಮಲಯಾಳಂ ಚಿತ್ರ 'ಕುರುಪ್' ಸಂಕಷ್ಟಕ್ಕೆ ಸಿಲುಕಿದೆ. 1984ರಲ್ಲಿ ಅಳಪ್ಪುಳದಲ್ಲಿ ಚಾಕೋ ಅವರನ್ನು ಸುಕುಮಾರ ಕುರುಪ್ ಹತ್ಯೆ ಮಾಡಿದ ವಿವಾದಾತ್ಮಕ ಘಟನೆಯನ್ನು ಆಧರಿಸಿ ಮಾಡಿದ ಚಿತ್ರಕ್ಕೆ ಕಾನೂನು ತೊಡಕು ಎದುರಾಗಿದೆ.
Recommended Video
ಒಂದು ಕಾಲದಲ್ಲಿ ಕೇರಳವನ್ನು ನಡುಗಿಸಿದ್ದ ಚಾಕೋ ಹತ್ಯೆಯ ಈ ಘಟನೆಯನ್ನು ನಿರ್ದೇಶಕ ಶ್ರೀನಾಥ್ ರಾಜೇಂದ್ರನ್ ಸಿನಿಮಾ ಮಾಡಿದ್ದಾರೆ. ಸಿನಿಮಾ ಪ್ರತಿನಿಧಿಯಾಗಿದ್ದ ಚಾಕೋ ಅವರನ್ನು 1984ರ ಜನವರಿಯಲ್ಲಿ ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಸುಕುಮಾರ್ ಕುರುಪ್ ಈ ಪ್ರಕರಣದಿಂದ ಬೆಳಕಿಗೆ ಬಂದಿದ್ದ. ಈಗ ಚಾಕೋ ಪತ್ನಿ ಶಾಂತಮ್ಮ ಮತ್ತು ಮಗ ಈ ಚಿತ್ರದ ನಿರ್ಮಾಪಕರೂ ಆಗಿರುವ ದುಲ್ಕರ್ ಸಲ್ಮಾನ್ಗೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ.
ಈ ಚಿತ್ರವನ್ನು ಬಿಡುಗಡೆ ಮಾಡುವ ಮುನ್ನ ತಮಗೆ ಹಾಗೂ ತಮ್ಮ ಕುಟುಂಬದವರಿಗೆ ತೋರಿಸಬೇಕು. ಚಾಕೋ ಅವರ ಪಾತ್ರವನ್ನು ಕೆಟ್ಟದಾಗಿ ಬಿಂಬಿಸಲಾಗಿದೆಯೇ ಎಂಬುದನ್ನು ತಾವು ಪರಿಶೀಲಿಸಬೇಕು. ನಂತರವೇ ಸಿನಿಮಾ ಬಿಡುಗಡೆ ಮಾಡಬಹುದು ಎಂದು ಕುಟುಂಬ ಹೇಳಿದೆ. ಮುಂದೆ ಓದಿ.

ಕುರುಪ್ ಪಾತ್ರದಲ್ಲಿ ದುಲ್ಕರ್
ಹಾಗೆಯೇ ಅಪರಾಧಿ ಕುರುಪ್ ಪಾತ್ರವನ್ನು ವೈಭವೀಕರಿಸಲಾಗಿದೆಯೇ ಎಂಬುದನ್ನು ಕೂಡ ತಿಳಿಯಲು ಬಯಸಿರುವುದಾಗಿ ಚಾಕೋ ಪತ್ನಿ ಶಾಂತಮ್ಮ ಹೇಳಿದ್ದಾರೆ. ಈದ್ ಹಬ್ಬದ ವೇಳೆ 'ಕುರುಪ್' ಚಿತ್ರಮಂದಿರಕ್ಕೆ ಬರಬೇಕಿತ್ತು. ಆದರೆ ಕೊರೊನಾ ವೈರಸ್ ಪಿಡುಗಿನ ಕಾರಣ ಚಿತ್ರ ಬಿಡುಗಡೆ ಮುಂದಕ್ಕೆ ಹೋಗಿದೆ. ದುಲ್ಕರ್ ಸಲ್ಮಾನ್ 'ಕುರುಪ್' ಪಾತ್ರವನ್ನು ನಿಭಾಯಿಸಿದ್ದರೆ, ಟೊವಿನೊ ಥಾಮಸ್ 'ಚಾಕೋ' ಆಗಿ ನಟಿಸಿದ್ದಾರೆ.

ಕೊಲೆಗಾರನ ವಿಜೃಂಭಣೆ
ದುಲ್ಕರ್ ಸಲ್ಮಾನ್ಗೆ ಮಮ್ಮೂಟಿ ಇರುವಂತೆಯೇ ನನ್ನ ಪಾಲಿಗೆ ನನ್ನ ತಂದೆ. ಸಿನಿಮಾದ ಟೀಸರ್ನಲ್ಲಿ ದುಲ್ಕರ್ ಸಲ್ಮಾನ್, 'ನನ್ನನ್ನು ಯಾವಾಗ ಹಿಡಿಯಬಹುದು ಎಂದು ಇನ್ನು ನಾನೇ ನಿರ್ಧರಿಸಬಹುದು' ಎಂದು ಹೇಳುವ ಸಂಭಾಷಣೆಯಿದೆ. ಅಂದರೆ ಈ ಚಿತ್ರ ಕೊಲೆಗಾರನನ್ನು ವಿಜೃಂಭಿಸುವ ಸೂಚನೆ ಸಿಕ್ಕಿದೆ. ಇದನ್ನು ನಾವು ಸಹಿಸಲು ಸಾಧ್ಯವಿಲ್ಲ ಎಂದು ಚಾಕೋ ಮಗ ಜಿತಿನ್ ಹೇಳಿದ್ದಾರೆ.

ಕೊಲೆಗಾರನಿಗೆ ಹೀರೋ ಇಮೇಜ್
ಪ್ರತಿ ಮಲಯಾಳಿಯಂತೆ ನಾನು ಕೂಡ ಚಿಕ್ಕಂದಿನಿಂದಲೂ ಕುರುಪ್ ಹೆಸರು ಕೇಳಿದರೆ ನಡುಗುತ್ತಿದ್ದೆ. ಒಬ್ಬ ಕ್ರೂರ ಕೊಲೆಗಾರ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಂಡಿದ್ದ. ಹೀರೋನ ಮಾತುಗಳನ್ನು ಕೇಳಿದಾಗ ಸುಕುಮಾರ್ ಕುರುಪ್ಗೆ ಇಲ್ಲಿ ಹೀರೋ ಇಮೇಜ್ ನೀಡಿದಂತೆ ಅನಿಸುತ್ತದೆ ಎಂದು ಜಿತಿನ್ ಹೇಳಿದ್ದಾರೆ.

ತಾಯಿಯ ಗರ್ಭದಲ್ಲಿದ್ದ ಜಿತಿನ್
ಕುರುಪ್ನಿಂದ ತಂದೆ ಚಾಕೋ ಹತ್ಯೆಯಾದಾಗ ಜಿತಿನ್ ಇನ್ನೂ ತಾಯಿಯ ಗರ್ಭದಲ್ಲಿದ್ದರು. ಈಗ ಅವರಿಗೆ 36 ವರ್ಷ. ಕುರುಪ್ನನ್ನು ಹೀರೋ ಎಂಬಂತೆ ವೈಭವೀಕರಿಸುವ ಮೂಲಕ ಈ ಸಿನಿಮಾ ಇಂದಿನ ಯುವ ಪೀಳಿಗೆಗೆ ತಪ್ಪು ಸಂದೇಶ ನೀಡಲು ಹೊರಟಿದೆ. ಈ ಚಿತ್ರದಲ್ಲಿ ನನ್ನ ತಂದೆಯ ಪಾತ್ರವೇನು? ನಮ್ಮ ಎದುರು ಪ್ರದರ್ಶನ ಕಂಡ ಬಳಿಕವೇ ಚಿತ್ರ ಬಿಡುಗಡೆಯಾಗಬೇಕು. ಆಕ್ಷೇಪಾರ್ಹ ಅಂಶಗಳನ್ನು ತೆಗೆದುಹಾಕಬೇಕಾಗುತ್ತದೆ ಎಂದು ಜಿತಿನ್ ಹೇಳಿದ್ದಾರೆ.

ಚಾಕೋ ಹತ್ಯೆ ಘಟನೆ ವಿವರ
ಸಿನಿಮಾ ಪ್ರತಿನಿಧಿಯಾಗಿದ್ದ ಚಾಕೋ, 1984ರ ಜನವರಿ 21ರಂದು ಕೆಲಸ ಮುಗಿಸಿ ಕರುವಟ್ಟಾದ ಮನೆಗೆ ಮರಳುತ್ತಿದ್ದಾಗ ಗುಂಪೊಂದು ತಮ್ಮ ಕಾರ್ನಲ್ಲಿ ಲಿಫ್ಟ್ ಕೊಡುವುದಾಗಿ ಕರೆದಿತ್ತು. ಬಳಿಕ ಅವರ ಕತ್ತು ಹಿಸುಕಿ ಕೊಲೆ ಮಾಡಿತ್ತು. ಕೊಂದ ಬಳಿಕ ಚೆರಿಯಾನಾಡ್ನ ಕುರುಪ್ ಮನೆಯ ಕಾರ್ ಪಾರ್ಕಿಂಗ್ಸ್ಥಳದಲ್ಲಿ ಚಾಕೋ ಮುಖವನ್ನು ಸುಟ್ಟುಹಾಕಲಾಗಿತ್ತು. ಬಳಿಕ ಮಾವೆಳಿಕ್ಕರ ಸಮೀಪದ ಕುನ್ನಮ್ನ ಭತ್ತದ ಗದ್ದೆಯೊಂದಕ್ಕೆ ಕಾರನ್ನು ದೂಡಲಾಗಿತ್ತು. ಚಾಕೋನ ದೇಹವನ್ನು ಚಾಲಕನ ಸೀಟ್ನಲ್ಲಿ ಇರಿಸಿ ಕಾರಿಗೆ ಬೆಂಕಿ ಹಚ್ಚಲಾಗಿತ್ತು.

ಕೊಲೆ ನಡೆದಿದ್ದು ಏಕೆ?
ಅಬುದಾಬಿಯಲ್ಲಿ ಎಂಟು ಲಕ್ಷದ ವಿಮೆ ಮಾಡಿಸಿದ್ದ ಸುಕುಮಾರ್ ಕುರುಪ್, ತಾನೇ ಸತ್ತಿರುವಂತೆ ಬಿಂಬಿಸಿ ವಿಮೆ ಹಣ ಪಡೆದುಕೊಳ್ಳಲು ಈ ಸಂಚು ಮಾಡಿದ್ದ. ಚಾಕೋ ನೋಡಲು ತನ್ನ ಹೋಲಿಕೆಯೇ ಇದ್ದಿದ್ದರಿಂದ ಕುರುಪ್ ಈ ಸಂಚು ರೂಪಿಸಿದ್ದ. ಆತನ ಭಾವ ಭಾಸ್ಕರ ಪಿಳ್ಳೈ ಮತ್ತು ಚಾಲಕ ಪೊನ್ನಪ್ಪನ್ ಈ ಪ್ರಕರಣದಲ್ಲಿ ಆರೋಪಿಗಳಾಗಿದ್ದರು. ಆದರೆ ಕೊಲೆಯ ಬಳಿಕ ತಲೆಮರೆಸಿಕೊಂಡಿದ್ದ ಕುರುಪ್, ಕೊನೆಯವರೆಗೂ ಪೊಲೀಸರ ಕೈಗೆ ಸಿಕ್ಕಿಬೀಳಲೇ ಇಲ್ಲ. ಆತ ಬದುಕಿದ್ದಾನೆಯೋ ಅಥವಾ ಸತ್ತಿದ್ದಾನೆಯೋ ಎನ್ನುವುದು 36 ವರ್ಷ ಕಳೆದರೂ ಗೊತ್ತಾಗಿಲ್ಲ.


Click it and Unblock the Notifications











