"ಚಿತ್ರರಂಗವನ್ನು ನಾಶ ಮಾಡಬೇಡಿ"; ಹೇಮಾ ಕಮಿಟಿ ವರದಿ ಬಳಿಕ ಕೊನೆಗೂ ಪ್ರತಿಕ್ರಿಯಿಸಿದ ಮೋಹನ್ಲಾಲ್
ಕಳೆದೊಂದು ವಾರದಿಂದ ಮಲಯಾಳಂ ಚಿತ್ರರಂಗ ದೇಶಾದ್ಯಂತ ಸಂಚಲನ ಸೃಷ್ಟಿಸಿದೆ. ಜಸ್ಟಿಸ್ ಹೇಮಾ ಕಮಿಟಿ ವರದಿ ಬಹಿರಂಗಗೊಂಡ ಬಳಿಕ ಲೈಂಗಿಕ ಕಿರುಕುಳ ಪ್ರಕರಣಗಳು ಹೆಚ್ಚಾಗುತ್ತಿವೆ. ಮಲಯಾಲಂ ಚಿತ್ರರಂಗದ ದಿಗ್ಗಜರು ಕೂಡ ಲೈಂಗಿಕ ಕಿರುಕುಳದ ಆರೋಪವನ್ನು ಎದುರಿಸುತ್ತಿದ್ದಾರೆ.
ಮಲಯಾಳಂ ಚಿತ್ರರಂಗದ ಕಾಮಕಾಂಡದ ಪ್ರಕರಣಗಳು ಗಂಭೀರವಾಗಿ ಚರ್ಚೆಯಾಗುತ್ತಿದೆ. ಕೇರಳದಲ್ಲಿ ಪ್ರತಿಭಟನೆಗಳು ಕೂಡ ನಡೆಯುತ್ತಿವೆ. ಹೇಮಾ ಕಮಿಟಿ ವರದಿ ಇಷ್ಟೆಲ್ಲ ಹಲ್ಚಲ್ ಎಬ್ಬಿಸಿದ್ದರೂ, ಮಲಯಾಳಂ ಸೂಪರ್ಸ್ಟಾರ್ ಮೋಹನ್ಲಾಲ್ ಪ್ರತಿಕ್ರಿಯೆ ನೀಡುವುದಕ್ಕೆ ಹೋಗಿರಲಿಲ್ಲ. ಈ ಬಗ್ಗೆ ಕೆಲವು ನಟರು ವಿರೋಧವನ್ನು ವ್ಯಕ್ತಪಡಿಸಿದ್ದರು.

ಕೊನೆಗೂ ಮೋಹನ್ಲಾಲ್ ಈ ಪ್ರಕರಣದ ಬಗ್ಗೆ ಮೌನವನ್ನು ಮುರಿದಿದ್ದಾರೆ. ಮಲಯಾಳಂ ಚಿತ್ರರಂಗದ ದಿಗ್ಗಜರ ವಿರುದ್ಧ ಕೇಳಿ ಬಂದಿರುವ ಆರೋಪಗಳ ಬಗ್ಗೆ ಪ್ರಕ್ರಿಯಿಸಿದ್ದಾರೆ. ಹೇಮಾ ಕಮಿಟಿ ವರದಿ ಹೊರಬೀಳುತ್ತಿದ್ದು, ವಿವಾದ ಸೃಷ್ಟಿಯಾಗುತ್ತಿದ್ದಂತೆ ಮೋಹನ್ಲಾಲ್ ಕಲಾವಿದರ ಸಂಘ (AMMA) ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿದ್ದರು. ಇದಾದ ಹಲವು ದಿನಗಳ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಟ "ದಯವಿಟ್ಟು ಮಲಯಾಳಂ ಚಿತ್ರರಂಗವನ್ನು ನಾಶ ಮಾಡಬೇಡಿ" ಎಂದು ಮನವಿ ಮಾಡಿಕೊಂಡಿದ್ದಾರೆ.
ಮೋಹನ್ಲಾಲ್ ಮೌನವನ್ನು ಮಲಯಾಳಂ ಚಿತ್ರರಂಗದ ಸ್ಟಾರ್ ನಟರೇ ಪ್ರಶ್ನೆ ಮಾಡಿದ್ದರು. ಇಷ್ಟೆಲ್ಲ ಕೋಲಾಹಲ ಸೃಷ್ಟಿಯಾಗಿದ್ದರೂ ತಾನೇಕೆ ಸುಮ್ಮನಿದ್ದೆ ಅನ್ನುವುದಕ್ಕೆ ಮೋಹನ್ಲಾಲ್ ಕಾರಣ ಕೊಟ್ಟಿದ್ದಾರೆ. ವೈಯಕ್ತಿಕ ಕಾರಣಗಳಿಂದ ಗುಜರಾತ್, ಮುಂಬೈ ಹಾಗೂ ಚೆನ್ನೈ ಅಂತ ಓಡಾಡುತ್ತಿದ್ದರು. ಅಲ್ಲದೆ, ಅವರ ಪತ್ನಿ ಶಸ್ತ್ರ ಚಿಕಿತ್ಸೆ ಇದ್ದಿದ್ದರಿಂದ ಪ್ರತಿಕ್ರಿಯೆ ನೀಡುವುದಕ್ಕೆ ಸಮಯ ತೆಗೆದುಕೊಂಡಿದ್ದಾಗಿ ಹೇಳಿದ್ದಾರೆ.

ಹಾಗೆಯೇ ಲೈಂಗಿಕ ಕಿರುಕುಳ ಆರೋಪದ ಬಗ್ಗೆನೂ ಪ್ರತಿಕ್ರಿಯಿಸಿದ್ದಾರೆ. " ತಪ್ಪು ಮಾಡಿದವರ ವಿರುದ್ಧ ಸೂಕ್ತ ಸಾಕ್ಷ್ಮಿಗಳು ಸಿಕ್ಕಿದರೆ ಅವರಿಗೆ ಶಿಕ್ಷಯನ್ನು ನೀಡಬೇಕು" ಎಂದು ಮೋಹನ್ಲಾಲ್ ಕೇರಳ ಕ್ರಿಕೆಟ್ ಲೀಗ್ ಉದ್ಘಾಟನೆ ವೇಳೆ ಪ್ರತಿಕ್ರಿಯೆ ನೀಡಿದ್ದಾರೆ. ಹಾಗೇ ಕೇರಳ ಸರ್ಕಾರ ಹೇಮಾ ಕಮಿಟಿ ವರದಿಯನ್ನು ಬಹಿರಂಗಗೊಳಿಸಿದ ನಿರ್ಧಾರವನ್ನು ಮೋಹನ್ಲಾಲ್ ಸ್ವಾಗತಿಸಿದ್ದಾರೆ.
"ಮಲಯಾಳಂ ಕಲಾವಿದರ ಸಂಘ (AMMA) ಮೇಲೆ ಎಲ್ಲರೂ ಗಮನಕೊಡುವುದನ್ನು ನಿಲ್ಲಿಸಿ ಎಂದು ಮನವಿ ಮಾಡಿಕೊಳ್ಳುತ್ತೇನೆ. ಸದ್ಯ ತನಿಖೆ ಕೂಡ ಚಾಲನೆಯಲ್ಲಿದೆ. ಹೀಗಾಗಿ ದಯವಿಟ್ಟು ಮಲಯಾಳಂ ಚಿತ್ರರಂಗವನ್ನು ಹಾಳು ಮಾಡಬೇಡಿ. ನಾವು ಹೇಮಾ ಕಮಿಟಿ ವರದಿಯನ್ನು ಸ್ವಾಗತಿಸುತ್ತೇವೆ. ಈ ವರದಿಯನ್ನು ಬಿಡುಗಡೆ ಮಾಡುವ ಕೇರಳ ಸರ್ಕಾರದ ನಿರ್ಧಾರವನ್ನು ಸ್ವಾಗತಿಸುತ್ತೇವೆ" ಎಂದು ಮೋಹನ್ಲಾಲ್ ಮನವಿ ಮಾಡಿಕೊಂಡಿದ್ದಾರೆ.
"ಮಲಯಾಳಂ ಎಲ್ಲಾ ಪ್ರಶ್ನೆಗಳಿಗೂ ಕಲಾವಿದರ ಸಂಘವೇ ಉತ್ತರ ಕೊಡುವುದಕ್ಕೆ ಆಗುವುದಿಲ್ಲ. ಈ ಪ್ರಶ್ನೆಯನ್ನು ಎಲ್ಲರಿಗೂ ಕೇಳಬೇಕು. ಇದು ಹಾರ್ಟ್ ವರ್ಕ್ ಮಾಡುವಂತಹ ಚಿತ್ರರಂಗ. ಹಲವು ಮಂದಿ ಈ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ, ಎಲ್ಲರ ಮೇಲೂ ತಪ್ಪನ್ನು ಹೊರಿಸುವುದಕ್ಕೆ ಆಗುವುದಿಲ್ಲ. ಯಾರು ಇದಕ್ಕೆಲ್ಲ ಕಾರಣರಾಗಿದ್ದಾರೋ ಅವರಿಗೆ ಶಿಕ್ಷೆ ಆಗಬೇಕು." ಎಂದು ಮೋಹನ್ಲಾಲ್ ಹೇಳಿದ್ದಾರೆ.


Click it and Unblock the Notifications









