ಮಲಯಾಳಂ ನಟರ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ ನಟಿ ಅರೆಸ್ಟ್; ಸಂಬಂಧಿಯನ್ನೇ ದಂಧೆಗೆ ದೂಡಲು ಯತ್ನ
ಹೇಮಾ ಕಮಿಟಿ ವರದಿಯ ವೇಳೆ ಮಲಯಾಳಂನ ಪ್ರಮುಖ ನಟರ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದ ನಟಿ ಮೀನು ಮುನೀರ್ ಅವರನ್ನು ಬಂಧಿಸಲಾಗಿದೆ. ತಮಿಳುನಾಡು ಪೊಲೀಸರು ಬುಧವಾರ ರಾತ್ರಿ ಇವರನ್ನು ಬಂಧಿಸಿದ್ದು ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಮಲಯಾಳಂ ಹಾಗೂ ತಮಿಳು ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಈ ನಟಿಯ ವಿರುದ್ಧ ಈ ಹಿಂದೆ ಬೇರೊಂದು ಪ್ರಕರಣದಲ್ಲಿ ದೂರು ದಾಖಲಾಗಿತ್ತು.
ಮಲಯಾಳಂನಲ್ಲಿ ಹೇಮಾ ಕಮಿಟಿ ವರದಿ ಹೊರಬಿದ್ದ ವೇಳೆ ಸಾಲು ಸಾಲಾಗಿ ನಟರ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದರು. ಈಗ ಇದೇ ನಟಿ ತನ್ನ ಸಂಬಂಧಿಯೊಬ್ಬರನ್ನು ಲೈಂಗಿಕ ದಂಧೆಗೆ ಸೇರಿಸಲು ಯತ್ನಿಸಿದ ಆರೋಪದ ಮೇಲೆ ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ. ಈ ವಿಷಯ ತಮಿಳು ಹಾಗೂ ಮಲಯಾಳಂ ಎರಡೂ ಚಿತ್ರರಂಗದಲ್ಲಿ ಚರ್ಚೆಗೆ ಎಡೆ ಮಾಡಿಕೊಟ್ಟಿದೆ.

2014ರಲ್ಲಿ ಯುವತಿಯೊಬ್ಬರು ಮೀನು ಮುನೀರ್ ವಿರುದ್ಧ ದೂರನ್ನು ದಾಖಲಿಸಿದ್ದರು. ತನ್ನನ್ನು ಚಿತ್ರರಂಗದಲ್ಲಿ ಅವಕಾಶ ಕೊಡಿಸುವುದಾಗಿ ನಂಬಿಸಿ, ತಮಿಳುನಾಡಿಗೆ ಬರುವಂತೆ ಮನವೊಲಿಸಿದ್ದರು. ಆದರೆ, ಅವರ ನಿಜವಾದ ಉದ್ದೇಶ ಸಿನಿಮಾಗೆ ಅವಕಾಶ ಕೊಡಿಸುವುದು ಆಗಿರಲಿಲ್ಲ. ಬದಲಾಗಿ ತನ್ನನ್ನು ಲೈಂಗಿಕ ದಂಧೆಗೆ ಸೇರಿಸುವುದಾಗಿತ್ತು ಎಂದು ದೂರಿದ್ದರು. ತಮಿಳುನಾಡು ಪೊಲೀಸರ ಪ್ರಕಾರ, ಈ ಘಟನೆ 2014ರಲ್ಲಿ ನಡೆದಿದ್ದು, ಚೆನ್ನೈನ ತಿರುಮಂಗಲಂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿ ತನಿಖೆ ನಡೆಸುತ್ತಿದ್ದರು ಎಂದು ವರದಿಯಾಗಿವೆ.
ಈ ಸಂಬಂಧ ವಿವಾದಾತ್ಮಕ ನಟಿ ಮೀನು ಮುನೀರ್ ಅವರನ್ನು ಎರ್ನಾಕುಲಂ ಜಿಲ್ಲೆಯ ಆಲುವಾದಲ್ಲಿ ಬಂಧಿಸಿ, ಚೆನ್ನೈಗೆ ಕರೆದುಕೊಂಡು ಬರಲಾಗಿದೆ. ಈ ನಟಿ ಜೈಲು ಸೇರಿದ್ದು ಇದೇ ಮೊದಲೇನಲ್ಲ. ಈ ಹಿಂದೆ ನಟ ಬಾಲಚಂದ್ರ ಮೆನನ್ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದರು. ಆದರೆ, ಈ ಪ್ರಕರಣವನ್ನು ಸಾಕ್ಷ್ಯಾಧಾರಗಳ ಕೊರತೆಯಿಂದ ಕ್ಲೋಸ್ ಮಾಡಲಾಗಿತ್ತು. ಬಳಿಕ ಈ ನಟಿಯ ವಿರುದ್ಧ ಮಲಯಾಳಂ ನಟ ಬಾಲಚಂದ್ರ ಮೆನನ್ ಮಾನನಷ್ಟ ಮೊಕದ್ಧಮೆಯನ್ನು ದಾಖಲಿಸಿದ್ದರು. ಈ ಸಂಬಂಧ ಮೀನು ಮುನೀರ್ ಅವರನ್ನು ಬಂಧಿಸಲಾಗಿತ್ತು. ಬಳಿಕ ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿತ್ತು. ಈಗ ಯುವತಿಯನ್ನು ಲೈಂಗಿಕ ದಂಧೆಗೆ ತಳ್ಳಲು ಯತ್ನಿಸಿದ ಆರೋಪದ ಮೇಲೆ ಮತ್ತೆ ಬಂಧಿಸಲಾಗಿದೆ.
ಹೇಮಾ ಸಮಿತಿ ವರದಿ ಮಲಯಾಳಂ ಚಿತ್ರರಂಗದಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿತ್ತು. ಈ ವರದಿ ಬಳಿಕ ಮಲಯಾಳಂ ಚಿತ್ರರಂಗದ ಜನಪ್ರಿಯ ನಟರ ವಿರುದ್ಧವೇ ಕೆಲವು ನಟಿಯರು ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದರು. ಆ ವೇಳೆ ಮೀನು ಮುನೀರ್ ಕೂಡ ಹಲವು ಜನಪ್ರಿಯ ನಟರ ಹೆಸರನ್ನು ಎತ್ತಿ ವಿವಾದವನ್ನು ಸೃಷ್ಟಿಸಿದ್ದರು. ಅವರಲ್ಲಿ ಮಲಯಾಳಂ ನಟರಾದ ಜಯಸೂರ್ಯ, ಬಾಲಚಂದ್ರ ಮೆನನ್, ಮುಕೇಶ್, ಎಡವೇಲ ಬಾಬು ಮತ್ತು ಮಣಿಯನ್ಪಿಳ್ಳ ರಾಜು ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು.
ಮಲಯಾಳಂ ಕಲಾವಿದರ ಸಂಘ 'ಅಮ್ಮ'ದ (ಅಸೋಸಿಯೇಷನ್ ಆಫ್ ಮಲಯಾಳಂ ಮೂವಿ ಆರ್ಟಿಸ್ಟ್ಸ್) ಸದಸ್ಯತ್ವ ಪಡೆಯುವುದಕ್ಕೆ ಮಲಯಾಳಂ ನಟರೊಬ್ಬರು 'ಒಪ್ಪಂದ'ಕ್ಕೆ ಬೇಡಿಕೆ ಇಟ್ಟಿದ್ದಾಗಿ ನಟಿ ಮೀನು ಮುನೀರ್ ಆರೋಪ ಮಾಡಿದ್ದರು.ಕೇರಳ ಸರ್ಕಾರದ ಮನವಿಯ ಮೇರೆಗೆ ತಾವು ಈ ವಿಷಯಗಳನ್ನು ಬಹಿರಂಗಪಡಿಸಲು ಮುಂದೆ ಬಂದಿರುವುದಾಗಿ ಕಳೆದ ವರ್ಷ ಹೇಳಿಕೊಂಡಿದ್ದರು.

ಹಾಗೇ ಒಂದು ಸಿನಿಮಾದ ಚಿತ್ರೀಕರಣದ ವೇಳೆ ನಟ ಜಯಸೂರ್ಯ ತಮ್ಮನ್ನು ಹಿಂಬದಿಯಿಂದ ಅಪ್ಪಿಕೊಂಡು ಮುತ್ತಿಟ್ಟಿದ್ದರು. ಅಲ್ಲದೆ ತಮ್ಮನ್ನು ಅಪಾರ್ಟ್ಮೆಂಟ್ಗೆ ಆಹ್ವಾನಿಸಿದ್ದರು ಎಂದು ಮೀನು ಆರೋಪ ಮಾಡಿದ್ದರು. ಈ ಘಟನೆ 2008ರಲ್ಲಿ ನಡೆದಿತ್ತು ಎಂದು ಆರೋಪ ಮಾಡಿದ್ದರು. ಇದೇ ವೇಳೆ ಆಗಿನ ಅಮ್ಮದ ಸಂಘಟನೆಯ ಪದಾಧಿಕಾರಿ ಎಡವೇಲ ಬಾಬು ಅವರೂ ಫಾರ್ಮ್ ಭರ್ತಿ ಮಾಡಲು ತನ್ನನ್ನು ಅಪಾರ್ಟ್ಮೆಂಟ್ಗೆ ಕರೆಸಿಕೊಂಡಿದ್ದರು. ಫಾರ್ಮ್ ಭರ್ತಿ ಮಾಡುವ ಸಂದರ್ಭದಲ್ಲಿ ಅವರು ತಮ್ಮ ಕತ್ತಗೆ ಮುತ್ತಿಟ್ಟರು. ತಕ್ಷಣವೇ ಆ ಸ್ಥಳದಿಂದ ತಾನು ಹೊರಬಂದಿದ್ದಾಗಿ ಮೀನು ಮುನೀರ್ ಆರೋಪ ಮಾಡಿದ್ದು.
ಮಲಯಾಳಂನ ಮತ್ತೊಬ್ಬ ನಟ ಮುಕೇಶ್ ಕೂಡ ತಮ್ಮ ಜೊತೆ ಫೋನ್ನಲ್ಲಿ ಕೆಟ್ಟದಾಗಿ ನಡೆದುಕೊಂಡರು. ಅಷ್ಟೇ ಅಲ್ಲದೆ ತಮ್ಮ ವಿಲ್ಲಾಗೆ ಆಹ್ವಾನಿಸಿದ್ದರು. ನಟ ಮಣಿಯನ್ಪಿಳ್ಳ ರಾಜು ಅವರು ಕೂಡ ಪ್ರಯಾಣ ಮಾಡುವಾಗ ತಮ್ಮೊಂದಿಗೆ ಕೆಟ್ಟದಾಗಿ ನಡೆದುಕೊಂಡರು ಎಂದು ಆರೋಪಿಸಿದ್ದರು.ಈ ಎಲ್ಲಾ ಅನುಭವಗಳಿಂದ ಬೇಸರಗೊಂಡು ಚೆನ್ನೈಗೆ ತೆರಳಿದ್ದಾಗಿ ಅವರು ಹೇಳಿದ್ದರು.


Click it and Unblock the Notifications











