ಶ್ರೀ ರಾಮನ ಮಂತ್ರ ಹೇಳಿ ಅಂತ ವಿಡಿಯೋ ಮಾಡಿದ ಗಾಯಕಿ ಚಿತ್ರಾ; ಕಿಡಿಕಾರಿದ ನೆಟ್ಟಿಗರು
ಉತ್ತರ ಪ್ರದೇಶದ ಅಯೋಧ್ಯೆಯ ಶ್ರೀರಾಮ ಜನ್ಮಭೂಮಿಯಲ್ಲಿ ಶ್ರೀರಾಮನ ಪ್ರಾಣಪ್ರತಿಷ್ಠಾಪನೆ ಜನವರಿ 22ರಂದು ನಡೆಯಲಿದೆ. ಇದಕ್ಕಾಗಿ ಹಲವು ದಿನಗಳಿಂದ ಸಿದ್ಧತೆಗಳು ಆರಂಭ ಆಗಿವೆ. ಸ್ವತ: ಪ್ರಧಾನಿ ನರೇಂದ್ರ ಮೋದಿ ಈ ವಿಶೇಷ ಕಾರ್ಯಕ್ರಮಕ್ಕೆ ಪಾಲ್ಗೊಳ್ಳುತ್ತಿದ್ದಾರೆ.
ಇನ್ನೇನು ಕೆಲವೇ ದಿನಗಳಲ್ಲಿ ಅಯೋಧ್ಯೆ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ. ಹೀಗಾಗಿ ಸೆಲೆಬ್ರೆಟಿಗಳು ಕೂಡ ಹರ್ಷದಿಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ರಾಷ್ಟ್ರ ಪ್ರಶಸ್ತಿ ಪಡೆದ ದಕ್ಷಿಣ ಭಾರತದ ಹಿರಿಯ ಗಾಯಕಿ ಚಿತ್ರಾ ಜನವರಿ 22ರಂದು ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ವೇಳೆ ಶ್ರೀರಾಮ ಜಪ ಮಾಡುವಂತೆ ವಿಡಿಯೋ ಮಾಡಿದ್ದರು.

ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಕೆಲವರು ಕಿಡಿಕಾರುತ್ತಿದ್ದಾರೆ. ಎರಡು ದಿನಗಳ ಹಿಂದೆ 60 ವರ್ಷದ ಗಾಯಕಿ ಚಿತ್ರಾ ಶ್ರೀರಾಮನ ಬಗ್ಗೆ ಮಾಡಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಚಿಕ್ಕ ವಿಡಿಯೋದಲ್ಲಿ ಗಾಯಕಿ ಚಿತ್ರಾ ಜನವರಿ 22ರಂದು "ಶ್ರೀ ರಾಮ, ಜಯ ರಾಮ, ಜಯ ಜಯ ರಾಮ" ಮಂತ್ರವನ್ನು ಹೇಳುವಂತೆ ಕೇಳಿಕೊಂಡಿದ್ದಾರೆ. ಇದು ಕೆಲವರ ಸಿಟ್ಟಿಗೆ ಕಾರಣವಾಗಿದೆ.
ಕೆಲವು ಗಾಯಕಿ ಚಿತ್ರಾ ಈ ಸಂದೇಶವನ್ನು ರವಾನಿಸುವ ಮೂಲಕ ರಾಜಕೀಯದ ಕಡೆಗೆ ವಾಲಿದ್ದಾರೆ ಎಂದು ಕಮೆಂಟ್ ಮಾಡುತ್ತಿದ್ದಾರೆ. ಮತ್ತೆ ಕೆಲವರು ಗಾಯಕಿ ಚಿತ್ರಾಗೆ ಬೆಂಬಲವನ್ನು ಸೂಚಿಸಿದ್ದಾರೆ. "ಗಾಯಕಿಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಹಕ್ಕು ಇದೆ" ಎಂದೂ ಹೇಳುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದ್ದಂತೆ ಗಾಯಕ ಜಿ ವೇಣು ಗೋಪಾಲ್ ಗಾಯಕಿಯ ಬೆಂಬಲ ಸೂಚಿಸಿದ್ದಾರೆ.
ಕೇರಳದ ನೈಟಿಂಗೇಲ್ ಅಂತಲೇ ಜನಪ್ರಿಯರಾಗಿರುವ ಚಿತ್ರಾ ಸಾವಿರಾರು ಹಾಡುಗಳು ಧ್ವನಿ ನೀಡಿದ್ದಾರೆ. ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲೂ ಹಾಡಿ ಮೆಚ್ಚುಗೆ ಗಳಿಸಿದ್ದಾರೆ. ದಕ್ಷಿಣ ಭಾರತದ ಅಷ್ಟೇ ಅಲ್ಲದೆ, ಹಿಂದಿ ಸೇರಿದಂತೆ ಇನ್ನು ಹಲವು ಭಾಷೆಗಳಲ್ಲಿ ಹಾಡಿದ್ದಾರೆ. ಇವರ ಗಾಯನಕ್ಕೆ ರಾಷ್ಟ್ರ ಪ್ರಶಸ್ತಿ ಹಾಗೂ ರಾಜ್ಯ ಪ್ರಶಸ್ತಿಗಳು ಕೂಡ ಲಭಿಸಿದೆ. ಆದ್ರೀಗ ಶ್ರೀ ರಾಮನ ಬಗ್ಗೆ ವಿಡಿಯೋ ಮಾಡಿದ್ದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಟೀಕೆಗೆ ಗುರಿಯಾಗಿದ್ದಾರೆ.

ಅಂದ್ಹಾಗೆ, ಜನವರಿ 22ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಉತ್ತರ ಪ್ರದೇಶದ ಶ್ರೀರಾಮ ಜನ್ಮಭೂಮಿಯಲ್ಲಿ ಶ್ರೀರಾಮನ ಪ್ರತಿಷ್ಠಾಪನೆ ನಡೆಯಲಿದೆ. ಇನ್ನು ಏಳು ದಿನ ಬಾಕಿ ಇರುವಂತೆಯೇ ಅಯೋಧ್ಯೆಯಲ್ಲಿ ವಿಧಿ ವಿಧಾನಗಳು ಜರುಗಲು ಆರಂಭ ಆಗಿವೆ.


Click it and Unblock the Notifications











