ವಯನಾಡು ಭೂ ಕುಸಿತ: ಚಿರಂಜೀವಿ, ರಾಮ್ ಚರಣ್ರಿಂದ ₹1 ಕೋಟಿ, ಮೋಹನ್ಲಾಲ್ ₹3 ಕೋಟಿ ದೇಣಿಗೆ
ಅತಿಯಾದ ಮಳೆಯಿಂದ ಕೇರಳದ ಜನರು ತತ್ತರಿಸಿ ಹೋಗಿದ್ದಾರೆ. ಕೇರಳ ಹಲವು ಭಾಗಗಳಲ್ಲಿ ವಿಪರೀತ ಮಳೆಯಾಗುತ್ತಿದೆ. ಅದರಲ್ಲೂ ಕೇರಳ ವಯನಾಡಿನಲ್ಲಿ ಭೂ ಕುಸಿತವಾಗಿದ್ದು ಇದೂವರೆಗೂ 300ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಈ ದುರಂತದಲ್ಲಿ ಸಾವನ್ನಪ್ಪಿದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಅದೇ ಇನ್ನೊಂದು ಕಡೆ ಸೆಲೆಬ್ರಿಟಿಗಳು ಸಹಾಯ ಹಸ್ತ ಚಾಚುತ್ತಿದ್ದಾರೆ.
ವಯನಾಡಿನಲ್ಲಿ ಭೂ ಕುಸಿತ ಆಗಿರುವ ಪ್ರದೇಶದಲ್ಲಿ ದಕ್ಷಿಣ ಭಾರತದ ತಾರೆಯರು ಹಣಕಾಸಿನ ನೆರವು ಮಾಡುತ್ತಿದ್ದಾರೆ. ಸದ್ಯ ಮಲಯಾಳಂ ಚಿತ್ರರಂಗದ ಸೂಪರ್ಸ್ಟಾರ್ ಮೋಹನ್ಲಾಲ್ ಕೂಡ ಸಹಾಯಕ್ಕೆ ಮುಂದೆ ಬಂದಿದ್ದಾರೆ. ನಿನ್ನೆ (ಆಗಸ್ಟ್ 3) ಮೋಹನ್ಲಾಲ್ ಭೂ ಕುಸಿತವಾದ ಪ್ರದೇಶಕ್ಕೆ ತೆರಳಿ ವೀಕ್ಷಣೆ ಮಾಡಿದ್ದಾರೆ. ಭಾರತೀಯ ಟೆರಟೋರಿಯಲ್ ಆರ್ಮಿಯ ಲೆಫ್ಟನೆಂಟ್ ಕರ್ನಲ್ ಆಗಿರುವ ಮೋಹನ್ ಸೇನೆಯ ಸಮವಸ್ತ್ರದಲ್ಲಿ ತೆರಳಿದ್ದರು.

ಈ ವೇಳೆ ಮೋಹನ್ಲಾಲ್ ಹಾನಿಗೊಳಗಾದ ಪ್ರದೇಶಗಳ ಮರು ನಿರ್ಮಾಣಕ್ಕೆ ಸುಮಾರು 3 ಕೋಟಿ ರೂಪಾಯಿ ನೆರವನ್ನು ನೀಡುವುದಾಗಿ ಘೋಷಿಸಿದ್ದಾರೆ. ಭೂ ಕುಸಿತದಿಂದ ಹಾನಿಗೆ ಒಳಗಾದ ಪ್ರದೇಶಗಳಿಗೆ ಮೋಹನ್ಲಾಲ್ ರಕ್ಷಣಾ ತಂಡದೊಂದಿಗೆ ಭೇಟಿ ನೀಡಿ, ಅಲ್ಲಿನ ಸ್ಥಳೀಯರ ನೋವನ್ನು ಕೇಳಿಕೊಂಡಿದ್ದರು.
ಈ ವೇಳೆ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿರುವ ಭಾರತೀಯ ಸೇನೆ, ವಾಯುಸೇನೆ, ಎನ್ಡಿಆರ್ಎಫ್, ಬೇರೆ ಬೇರೆ ಸಂಘಗಳು, ಸ್ಥಳೀಯರು ಸೇರಿದಂತೆ ಯಾರೆಲ್ಲ ಭಾಗಿದ್ದಾರೋ ಅವರ ಕೆಲಸವನ್ನು ಮೆಚ್ಚಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ತಮ್ಮ ವಿಶ್ವಶಾಂತಿ ಫೌಂಡೇಷನ್ ವತಿಯಿಂದ 3 ಕೋಟಿ ರೂಪಾಯಿ ಹಣವನ್ನು ನೀಡುತ್ತಿರುವುದಾಗಿ ಮೋಹನ್ಲಾಲ್ ಹೇಳಿದ್ದಾರೆ. ಇನ್ನೂ ಅಗತ್ಯ ಬಿದ್ದರೆ ನೀಡುವುದಾಗಿ ಮೋಹನ್ಲಾಲ್ ಹೇಳಿಕೊಂಡಿದ್ದಾರೆ.
ಮೋಹನ್ಲಾಲ್ ಜೊತೆ ಹಲವು ತಾರೆಯರು ಈಗಾಗಲೇ ಅಗತ್ಯ ನೆರವು ನೀಡಿದ್ದಾರೆ. ನಯನತಾರಾ, ವಿಘ್ನೇಶ್ ಸಿವನ್, ಮೆಗಾಸ್ವಾರ್ ಚಿರಂಜೀವಿ, ರಾಮ್ ಚರಣ್, ಅಲ್ಲು ಅರ್ಜುನ್ ಸೇರಿದಂತೆ ರಶ್ಮಿಕಾ ಮಂದಣ್ಣ, ಜ್ಯೋತಿಕಾ ನೆರವು ನೀಡಿದ್ದಾರೆ. ಮೆಗಸ್ಟಾರ್ ಚಿರಂಜೀವಿ ಹಾಗೂ ಮೆಗಾ ಪವರ್ಸ್ಟಾರ್ ರಾಮ್ ಚರಣ್ ಇಬ್ಬರೂ ಸೇರಿ ಸುಮಾರು 1 ಕೋಟಿ ರೂಪಾಯಿ ಹಣವನ್ನು ಕೇರಳದ ಸಿಎಂಗೆ ನೀಡಿದ್ದಾರೆ.

ಇದೇ ಸಂದರ್ಭದಲ್ಲಿ 'ಪುಷ್ಪ' ಹೀರೊ ಅಲ್ಲು ಅರ್ಜುನ್ ಕೂಡ ಸುಮಾರು 25 ಲಕ್ಷ ರೂಪಾಯಿಯನ್ನು ದೇಣಿಯಾಗಿ ನೀಡಿದ್ದಾರೆ. ಇನ್ನು ತಮಿಳಿನ ಸ್ಟಾರ್ ಕುಟುಂಬ ಸೂರ್ಯ, ಪತ್ನಿ ಜ್ಯೋತಿಕಾ ಹಾಗೂ ಸಹೋದರ ಕಾರ್ತಿ ಕೇರಳ ರಿಲೀಫ್ ಫಂಡ್ಗೆ ಸುಮಾರು 50 ಲಕ್ಷ ರೂಪಾಯಿಯನ್ನು ದೇಣಿಗೆ ನೀಡಿದ್ದಾರೆ. ಬೇರೆ ಬೇರೆ ಭಾಷೆಯ ಕಲಾವಿದರು ವಯನಾಡು ಭೂ ಕುಸಿತದಿಂದ ಸೂರನ್ನು ಕಳೆದುಕೊಂಡವರಿಗೆ ಆರ್ಥಿಕ ನೆರವನ್ನು ನೀಡುತ್ತಿದ್ದಾರೆ.
ಇತ್ತ ಕರ್ನಾಟಕ ಸರ್ಕಾರ ಕೂಡ ವಯನಾಡು ಸಂಸ್ತಸ್ಥರಿಗಾಗಿ ಸುಮಾರು 100 ಮನೆಗಳನ್ನು ನಿರ್ಮಾಣ ಮಾಡಿಕೊಡಲಿದೆ. ಈ ವಿಷಯವನ್ನು ಕರ್ನಾಟಕ ಮುಖ್ಯಮಂತ್ರಿ ಸಿದ್ಧರಾಮಯ್ಯ ಎಕ್ಸ್ ಖಾತೆಯ ಮೂಲಕ ಘೋಷಣೆ ಮಾಡಿದ್ದಾರೆ. ಕೇರಳದ ಮುಖ್ಯ ಮಂತ್ರಿಗೆ ಈ ಮೂಲಕ ನೆರವು ನೀಡುವುದಾಗ ಭರವಸೆಯನ್ನು ನೀಡಿದ್ದಾರೆ.


Click it and Unblock the Notifications










