ಅಪ್ಪು ನಿಜವಾಗಲೂ 'ತಂದೆಗೆ ತಕ್ಕ ಮಗ'
101 ಡಿಗ್ರಿ ಜ್ವರದಿಂದ ಬಳಲುತ್ತಿದ್ದರೂ ಅಪ್ಪಾಜಿ ನಿರ್ಮಾಪಕರಿಗೆ ತೊಂದರೆ ಆಗ ಬಾರದೆಂದು ಶೂಟಿಂಗ್ ನಲ್ಲಿ ಭಾಗವಹಿಸುತ್ತಿದ್ದರು. ಯಾವುದೇ ಒಂದು ಕಲಾವಿದರಿಗೆ ನಿರ್ಮಾಪಕರು ಬೆನ್ನೆಲುಬು ಎನ್ನುವುದನ್ನು ಅಪ್ಪಾಜಿ ಪಾಲಿಸಿ ಕೊಂಡು ಬಂದವರು. ಅವರ ಮಗ ಅಪ್ಪು ಕೂಡ ಅದೇ ದಾರಿಯಲ್ಲಿ ಸಾಗುತ್ತಿದ್ದಾರೆ. ಅವರು ತಂದೆಗೆ ತಕ್ಕ ಮಗ ಮತ್ತು ಅವರಿಗೆ ಒಳ್ಳೆದಾಗಲಿ ಎಂದು ರಂಗಾಯಣ ರಘು ಹಾರೈಸಿದ್ದಾರೆ.
ಪರಮಾತ್ಮ ಚಿತ್ರದ ಶೂಟಿಂಗ್ ಸಮಯದಲ್ಲಿ ಮುಂಜಾನೆ ಅಪ್ಪು ವಾಕಿಂಗ್ ತೆರಳಿದ್ದರು. ಒಂದೇ ಸಮಯ 20ಕ್ಕೂ ಹೆಚ್ಚು ಜೇನುನೊಣಗಳು ಅವರ ಮೇಲೆ ದಾಳಿ ನಡೆಸಿದವು. ಕೆಲವೇ ಸಮಯದಲ್ಲಿ ಅಪ್ಪು ಮುಖ ಪೂರಿ ತರ ಉಬ್ಬಿತ್ತು. ಆದರೆ ಈ ಘಟನೆ ನಡೆದ ಒಂದೇ ಗಂಟೆಯಲ್ಲಿ ಸ್ಯಾನ್ ಗ್ಲಾಸ್ ಹಾಕಿಕೊಂಡು ಶೂಟಿಂಗ್ ನಲ್ಲಿ ಭಾಗವಹಿಸಿದರು ಎಂದು ತನ್ನ ಹಾಸ್ಯಭರಿತ ದಾಟಿಯಲ್ಲಿ ರಂಗಾಯಣ ರಘು ಹೇಳಿದ್ದಾರೆ.
ಯೋಗರಾಜ್ ಭಟ್ ಚಿತ್ರದ ಸ್ಟೈಲೇ ಬೇರೆ. ನಮ್ಮ ನಾಡಿನ ಸಂಸ್ಕೃತಿ, ಸಂಪ್ರದಾಯ, ಪರಂಪರೆಗಳನ್ನು ವಿಶಿಷ್ಟ ರೀತಿಯಲ್ಲಿ ತೆರೆಗೆ ತರುತ್ತಾರೆ. ಅವರ ಚಿತ್ರವೆಂದರೆ ಜನರಿಗೆ ನಿರೀಕ್ಷೆ ಸಹಜ. ಪರಮಾತ್ಮ ಚಿತ್ರ ಸಿಹಿಯಾಗಿರುವ ಹೋಳಿಗೆಯ ಮೇಲೆ ಮತ್ತೆ ಸಕ್ಕರೆ ಹಾಕಿದಷ್ಟು ಸಿಹಿಯಾಗಿರುತ್ತೆ. ಜನರ ನಿರೀಕ್ಷೆ ಮೀರಿ ಚಿತ್ರ ನಿರ್ಮಾಣವಾಗಿದೆ ಎಂದು ರಂಗಾಯಣ ರಘು ತಿಳಿಸಿದ್ದಾರೆ.


Click it and Unblock the Notifications












