"ಎಲ್ಲೋ ಜೋಗಪ್ಪ", "ಭಾಗ್ಯದ ಬಳೆಗಾರ" ಬಳಿಕ 'ಕೆಡಿ'ಗಾಗಿ ಮತ್ತೊಂದು ಜಾನಪದ ಹಾಡು ತಂದ 'ಜೋಗಿ' ಪ್ರೇಮ್!
ಜೋಗಿ ಪ್ರೇಮ್ ಸಿನಿಮಾಗಳಲ್ಲಿ ಏನೇ ಮೋಸ ಆದರೂ ಹಾಡುಗಳಿಗಂತೂ ಮೋಸ ಆಗಲ್ಲ. ಇದೂವರೆಗೂ ಪ್ರೇಮ್ ನಿರ್ದೇಶಿಸಿದ ಎಲ್ಲಾ ಸಿನಿಮಾಗಳ ಹಾಡುಗಳನ್ನು ಸಿನಿಪ್ರಿಯರ ಮೆಚ್ಚಿದ್ದಾರೆ. ಪ್ರೇಮ್ ಹಾಡುಗಳಿಂದಲೇ ಸಿನಿಮಾವನ್ನು ಗೆದ್ದು ಬಿಡುತ್ತಾರೆ. ಇಂತಹ ಸಾಕಷ್ಟು ಉದಾಹರಣೆಗಳು ಈ ಹಿಂದೇನೆ ಸಿಕ್ಕಿವೆ.
'ಕರಿಯ', 'ಎಕ್ಸ್ಕ್ಯೂಸ್ ಮಿ', 'ಜೋಗಿ', 'ಪ್ರೀತಿ ಏಕೆ ಭೂಮಿ ಮೇಲಿದೆ' ಇತ್ತೀಚೆಗೆ ಬಂದ 'ಏಕ್ ಲವ್ ಯಾ'ದಂತಹ ಸಿನಿಮಾಗಳ ಹಾಡುಗಳು ಸೂಪರ್ ಹಿಟ್ ಆಗಿವೆ. ಇಂದಿಗೂ ಪ್ರೇಕ್ಷಕರು ಈ ಸಿನಿಮಾಗಳ ಹಾಡುಗಳನ್ನು ಮರೆತಿಲ್ಲ. ಅದರಲ್ಲೂ ಜಾನಪದ ಹಾಡುಗಳನ್ನು ಪ್ರೇಮ್ ಸಿನಿಮಾದಲ್ಲಿ ಬಳಸಿಕೊಳ್ಳುವ ರೀತಿನೇ ಬೇರೆ. 'ಜೋಗಿ' ಚಿತ್ರದ "ಎಲ್ಲೋ ಜೋಗಪ್ಪ.." , 'ಈ ಪ್ರೀತಿ ಏಕೆ ಭೂಮಿ ಮೇಲಿದೆ' ಸಿನಿಮಾದ "ಭಾಗ್ಯದ ಬಳೆಗಾರ" ಹಾಡೇ ಸಾಕ್ಷಿ.

ಈಗ ಮತ್ತೆ ಇಂತಹದ್ದೇ ಒಂದು ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಜೊತೆಗೂಡಿ "ಶಿವ ಶಿವ" ಅನ್ನೋ ಹಾಡನ್ನು ರೆಡಿ ಮಾಡಿಟ್ಟುಕೊಂಡಿದ್ದಾರೆ. ಧ್ರುವ ಸರ್ಜಾ ನಟಿಸುತ್ತಿರುವ ಈ ಹಾಡು ಮತ್ತೊಂದು ಸೂಪರ್ ಹಿಟ್ ಸಾಂಗ್ ಆಗುತ್ತೆ ಅಂತ ಸಂಗೀತ ಲೋಕದ ದಿಗ್ಗಜರು ಭವಿಷ್ಯ ನುಡಿದಿದ್ದಾರೆ. ಅಷ್ಟಕ್ಕೂ ಈ ಬಾರಿ ಯಾವ ಜಾನಪದ ಹಾಡನ್ನು ಬಳಸಿಕೊಂಡಿದ್ದಾರೆ? ಹಾಡುಗಳ ಬಗ್ಗೆ ದಿಗ್ಗಜರೆಲ್ಲ ಏನು ಹೇಳಿದ್ದಾರೆ?
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ 'ಕೆಡಿ ದಿ ಡೆವಿಲ್ ಪ್ರಚಾರವನ್ನು ಆರಂಭಿಸಿದೆ. ಜೋಗಿ ಪ್ರೇಮ್ ಎಂದಿನಂತೆ ಹಾಡಿನ ಮೂಲಕವೇ ಸಿನಿಮಾದ ಪ್ರಚಾರ ಆರಂಭಿಸಿದ್ದಾರೆ. ಅದರಲ್ಲೂ "ಶಿವ ಶಿವ" ಅನ್ನೋ ಮೊದಲ ಹಾಡು ಈ ಬಾರಿ ಹೊಸ ವರ್ಷಕ್ಕೆ ಯುವಕರ ಫೇವರಿಟ್ ಹಾಡು ಆಗುತ್ತೆ ಅನ್ನುವ ಸೂಚನೆ ಕೊಟ್ಟಿದ್ದಾರೆ. ಸದ್ಯ ಈ ಹಾಡಿನ ಝಲಕ್ ಸಖತ್ ಕಿಕ್ ಕೊಟ್ಟಿದೆ.
"ಗುರುವೇ ನಿನ್ನ ಆಟ ಬಲ್ಲವರು ಯಾರ್ಯಾರ್ಯಾರೋ" ಅನ್ನುವ ಜಾನಪದ ಹಾಡಿನ ತುಣುಕನ್ನು 'ಕೆಡಿ'ಯಲ್ಲಿ ಬಳಸಿಕೊಳ್ಳಲಾಗಿದೆ. ಆದರೆ, ಈ ಹಾಡನ್ನು ಯಾವ ಪ್ರಮಾಣದಲ್ಲಿ? ಹೇಗೆ ಬಳಸಿಕೊಂಡಿದ್ದಾರೆ? ಅದರ ಎಫೆಕ್ಟ್ ಹೇಗಿರುತ್ತೆ? ಅನ್ನೋದು ಇನ್ನೇನು ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ. 'ಕೆಡಿ' ಚಿತ್ರದ ಈ ಹಾಡು ಇದೇ ಡಿಸೆಂಬರ್ 24ರಂದು ಬಿಡುಗಡೆಯಾಗುತ್ತಿದೆ. ಈ ಹಾಡಿನ ಒಂದು ಝಲಕ್ ನೋಡಿದರೇ, ಹೊಸ ವರ್ಷದ ಬೆಸ್ಟ್ ಸಾಂಗ್ ಆಗುತ್ತೆ ಅನ್ನುವ ಲಕ್ಷಣಗಳು ಕಾಣುತ್ತಿವೆ.

ಸ್ಯಾಂಡಲ್ವುಡ್ನ ಮ್ಯಾಜಿಕಲ್ ಮ್ಯೂಸಿಕ್ ಡೈರೆಕ್ಟರ್ ಅರ್ಜುನ್ ಜನ್ಯ ಹಾಡುಗಳನ್ನು ಕಂಪೋಸ್ ಮಾಡಿದ್ದಾರೆ. ಜೋಗಿ ಪ್ರೇಮ್ ಹಾಗೂ ಅರ್ಜುನ್ ಜನ್ಯ ಕಾಂಬಿನೇಷನ್ ಈ ಬಾರಿ ಎಂತಹ ಹಾಡನ್ನು ನೀಡಬಹುದು? ಅನ್ನೋ ಕುತೂಹಲವಿದೆ. ಸಿನಿಮಾ ಪ್ಯಾನ್ ಇಂಡಿಯಾ ರಿಲೀಸ್ ಆಗಿರುವುದರಿಂದ ಹಾಡುಗಳನ್ನು ಕೂಡ ಅಷ್ಟೇ ಗ್ರ್ಯಾಂಡ್ ಆಗಿ ಕಂಪೋಸ್ ಮಾಡಲಾಗುತ್ತಿದೆ.
'ಕೆಡಿ-ದಿ ಡೆವಿಲ್' ಸಿನಿಮಾದ "ಶಿವ ಶಿವ" ಹಾಡಿನ ಬಗ್ಗೆ ಸಿನಿಮಾರಂಗದ ದಿಗ್ಗಜರು ಕೂಡ ಮೆಚ್ಚುಗೆ ಸೂಚಿಸಿದ್ದಾರೆ. ಗಾಯಕ ಕೈಲಾಶ್ ಖೇರ್, ವಿಜಯ್ ಪ್ರಕಾಶ್, ಸಾಹಿತಿ ಮಂಜುನಾಥ್ ಬಿಎಸ್, ಕೊರಿಯೋಗ್ರಾಫರ್ ಭಜರಂಗಿ ಮೋಹನ್ ಹಾಗೇ ಉಳಿದ ನಾಲ್ಕು ಭಾಷೆಗಳ ಗಾಯಕರು ಹಾಗೂ ಸಾಹಿತಿಗಳು ಈ ಹಾಡಿನ ಗುಣಗಾನ ಮಾಡಿದ್ದಾರೆ. ಹೀಗಾಗಿ "ಶಿವ ಶಿವ" ಸಾಂಗ್ ಕೇಳುವುದಕ್ಕೆ ಸಿನಿಪ್ರಿಯರು ತುದಿಗಾಲಿನಲ್ಲಿ ನಿಂತಿದ್ದಾರೆ. ಮತ್ತೊಮ್ಮೆ ಜೋಗಿ ಪ್ರೇಮ್ ಹಾಗೂ ಅರ್ಜುನ್ ಜನ್ಯ ಕಾಂಬಿನೇಷನ್ ಮೋಡಿ ಮಾಡುತ್ತಾ? ಅನ್ನೋದು ಇನ್ನು ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ.


Click it and Unblock the Notifications











