ಕನ್ನಡದಲ್ಲೇ ಬರೆದುಕೊಂಡು ಹಾಡಿದ ಬಾಹುಬಲಿ ಸಂಗೀತ ನಿರ್ದೇಶಕ ಕೀರವಾಣಿ: ಹೇಗಿದೆ ಹಾಡು?
ರಾಜಮೌಳಿ, ಎಂಎಂ ಕೀರವಾಣಿ ಜೋಡಿ ಯಾರಿಗೆ ಗೊತ್ತಿಲ್ಲ. ಬಾಹುಬಲಿ, RRR ಸಿನಿಮಾದ ಹೆಸರು ಹೇಳಿದರೆ ಸಾಕು, ರಾಜಮೌಳಿ ಜೊತೆಗೆ ಸಂಗೀತ ನಿರ್ದೇಶಕ ಕೀರವಾಣಿ ಹೆಸರು ಕೂಡ ಕೇಳಿಬರುತ್ತೆ. RRR ಸಿನಿಮಾದ ನಾಟು ನಾಟು ಹಾಡಿಗೆ ಕೀರವಾಣಿಗೆ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಸಿಕ್ಕಿದ್ದು ಕೂಡ ಗೊತ್ತೇ ಇದೆ.
ವಿಶ್ವ ಮಟ್ಟದಲ್ಲಿ ಹೆಸರು ಮಾಡಿರೋ ಸಂಗೀತ ನಿರ್ದೇಶಕ ದಶಕಗಳ ಬಳಿಕ ಮತ್ತೆ ಕನ್ನಡದಲ್ಲೊಂದು ಹಾಡನ್ನು ಹಾಡಿದ್ದಾರೆ. ಕನ್ನಡದ ಹೊಸಬರ ತಂಡ ನಿರ್ಮಿಸಿರುವ 'ರಂಗಸಮುದ್ರ' ಸಿನಿಮಾದ ಒಂದು ಹಾಡನ್ನು ಎಂಎಂ ಕೀರವಾಣಿ ಹಾಡಿದ್ದಾರೆ. ಎಮೋಷನಲ್ ಸಾಂಗ್ಗೆ ಕೀರವಾಣಿ ಧ್ವನಿ ನೀಡಿದ್ದು ಸಂಗೀತ ಪ್ರಿಯರ ಮನಸ್ಸು ಗೆದ್ದಿದ್ದೆ.

ಇನ್ನೊಂದು ಕಡೆ ಎಂಎಂ ಕೀರವಾಣಿ ಕನ್ನಡಿಗರ ಮನಸ್ಸನ್ನೂ ಗೆದ್ದಿದ್ದಾರೆ. ಹೌದು, ಇತ್ತೀಚೆಗೆ ಕನ್ನಡಿಗರೇ ಕನ್ನಡದಲ್ಲಿ ಮಾತಾಡುವುದಕ್ಕೆ ಮುಜುಗರ ಪಡುತ್ತಾರೆ. ಅಂತಹದ್ರಲ್ಲಿ ತೆಲುಗಿನ ಸಂಗೀತ ನಿರ್ದೇಶಕ 'ರಂಗಸಮುದ್ರ' ಸಿನಿಮಾದ "ಹೆತ್ತೂರಿನ ದೀಪ.." ಅನ್ನೋ ಹಾಡನ್ನು ಕನ್ನಡದಲ್ಲಿಯೇ ಬರೆದುಕೊಂಡು ಹಾಡಿದ್ದಾರೆ. ಈ ಮೂಲಕ ಕನ್ನಡ ಭಾಷೆ ಮೇಲಿರುವ ಅಭಿಮಾನವನ್ನು ಸಾಬೀತುಪಡಿಸಿರುವುದು ಹೆಮ್ಮೆಯ ಸಂಗತಿ. ಇದು ಹಾಡಿನ ಮೇಕಿಂಗ್ ವಿಡಿಯೋದಲ್ಲಿ ಸೆರೆಯಾಗಿದೆ.
'ರಂಗಸಮುದ್ರ' ಸಿನಿಮಾದ ನಿರ್ದೇಶಕ ರಾಜ್ ಕುಮಾರ್ ಅಸ್ಕಿ, ಸಾಹಿತಿ ವಾಗೀಶ್ ಚನ್ನಗಿರಿ ಹಾಗೂ ಸಂಗೀತ ನಿರ್ದೇಶಕ ದೇಸಿ ಮೋಹನ್ ಪ್ಯಾಥೋ ಸಾಂಗ್ ಅನ್ನು ಕೀರವಾಣಿಯವರ ಬಳಿ ಹಾಡಿಸಬೇಕು ಎಂದು ಬಯಸಿದ್ದರು. ಇದು ನಿರ್ಮಾಪಕ ಹೊಯ್ಸಳ ಕೊಣನೂರು ಅವರ ಬಳಿಕ ಹೇಳಿಕೊಂಡಾಗ, ಕೀರವಾಣಿಯನ್ನು ಸಂಪರ್ಕ ಮಾಡಿದ್ದರು. ಆ ವೇಳೆ ಸಕರಾತ್ಮಕವಾಗಿ ಸ್ಪಂದಿಸಿದ ಕೀರವಾಣಿ ಹೈದರಾಬಾದ್ಗೆ ಬರುವಂತೆ ಆಹ್ವಾನ ನೀಡಿದ್ದನ್ನು ಚಿತ್ರತಂಡ ನೆನಪಿಸಿಕೊಂಡಿದೆ.
ಹಾಡಿನ ರೆಕಾರ್ಡಿಂಗ್ ಮುಗಿಸಿದ ಬಳಿಕ ಕೀರಾವಣಿ ಸುಮಾರು ಅರ್ಧ ದಿನ 'ರಂಗಸಮುದ್ರ' ಚಿತ್ರತಂಡದ ಜೊತೆ ಇದ್ದರು. ಈ ವೇಳೆ ತಮ್ಮ ಕನ್ನಡ ನಂಟು ಹಾಗೂ ಬೆಂಗಳೂರಿನಲ್ಲಿ ಒಂದು ಚಿಕ್ಕ ರೂಮಿನಲ್ಲಿ ವಾಸ ಮಾಡುತ್ತಿದ್ದ ದಿನವನ್ನು ನೆನೆದಿದ್ದಾರೆ. ಬೆಂಗಳೂರಿನಲ್ಲಿರುವ ಚಾಮುಂಡೇಶ್ವರಿ ಸ್ಟುಡಿಯೋದಿಂದ ತನ್ನ ಸಿನಿಪಯಣ ಶುರುವಾಗಿದ್ದ ಬಗ್ಗೆ ಹೇಳಿಕೊಂಡಿದ್ದಾರೆ. ಇದೇ ವೇಳೆ ತನ್ನ ಆಪ್ತ ಸ್ನೇಹಿತ ದೊಡ್ಡಣ್ಣ ಎಂದು ಚಿತ್ರತಂಡದ ಜೊತೆ ಹೇಳಿದ್ದಾರೆ.

ಇನ್ನು 'ರಂಗಸಮುದ್ರ' ಸಿನಿಮಾದಲ್ಲಿ ಪುನೀತ್ ರಾಜ್ಕುಮಾರ್ ನಟಿಸಬೇಕಿತ್ತು ಎಂದು ತಿಳಿದಾಗ ಭಾವುಕರಾಗಿದ್ದರು. ಅಪ್ಪು ಒಬ್ಬ ಅಜಾತಶತ್ರು. ಈಗ ನಕ್ಷತ್ರವಾಗಿ ಮಿನುಗುತ್ತಿದ್ದಾರೆ. ಒಬ್ಬರು ಸತ್ತರೆ ಶತ್ರುಗೂ ಕೂಡ ಕಣ್ಣಿರು ಬರಬೇಕು ಅದರಂತೆಯೆ ಈ ಸಾಂಗ್ ನೋಡಿದ ಮೇಲೆ ಎಂತಹ ಕಲ್ಲು ಮನಸ್ಸು ಕೂಡ ಕರಗುತ್ತೆ" ಎಂದು ಹಾಡಿನ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿದ್ದಾಗಿ ಹೇಳಿದ್ದಾರೆ.
'ರಂಗಸಮುದ್ರ' ಸಿನಿಮಾದಲ್ಲಿ ರಾಘವೇಂದ್ರ ರಾಜ್ ಕುಮಾರ್, ರಂಗಾಯಣ ರಘು, ಸಂಪತ್ ರಾಜ್, ದಿವಂಗತ ಮೋಹನ್ ಜುನೇಜಾ, ಮೂಗು ಸುರೇಶ್, ಗುರುರಾಜ್ ಹೊಸಕೋಟೆ, ಉಗ್ರಂ ಮಂಜು, ಕಾರ್ತಿಕ್ ರಾವ್, ದಿವ್ಯ ಗೌಡ, ಮಹೇಂದ್ರ, ಸ್ಕಂದ ಸೇರಿದಂತೆ ಹಲವು ನಟಿಸಿದ್ದಾರೆ. ಸಿನಿಮಾದಲ್ಲಿರುವ ನಾಲ್ಕು ಹಾಡುಗಳಿಗೆ ಕೀರವಾಣಿ, ಕೈಲಾಶ್ ಖೇರ್, ವಿಜಯ್ ಪ್ರಕಾಶ್, ಸಂಜಿತ್ ಹೆಗ್ಡೆ, ದೇಸಿ ಮೋಹನ್ ದ್ವನಿ ನೀಡಿದ್ದಾರೆ. ಇನ್ನು ಎರಡು ಬಿಟ್ಗಳಿಗೆ ನವೀನ್ ಸಜ್ಜು ಹಾಡಿದ್ದಾರೆ. ಹೊಸ ವರ್ಷದ ಆರಂಭದಲ್ಲಿ ಸಿನಿಮಾ ರಿಲೀಸ್ ಮಾಡುವುದಕ್ಕೆ ಚಿತ್ರತಂಡ ನಿರ್ಧರಿಸಿದೆ.


Click it and Unblock the Notifications











