ಕಮಲ್ ಹಾಸನ್ ಹೊಸ ಸಿನಿಮಾ ವಿರುದ್ಧ ಬಿಜೆಪಿಗರು ಗರಂ: ದೂರು ನೀಡಲು ಕಾರಣ?
ವಯಸ್ಸು 70 ರ ಸನಿಹಕ್ಕೆ ಬಂದರೂ ತೆರೆಯ ಮೇಲೆ ಕಮಲ್ ಹಾಸನ್ ಕಮಾಲ್ ಕಡಿಮೆ ಆಗಿಲ್ಲ. ಭಾರತದ ಅತ್ಯಂತ ಪ್ರಯೋಗಶೀಲ ನಾಯಕ ನಟರಾಗಿರುವ ಕಮಲ್ ಹಾಸನ್ ಸಿನಿಮಾಗಳ ಮೂಲಕ ವಿವಿಧ ಪ್ರಯೋಗಗಳನ್ನು ಮಾಡುತ್ತಿರುತ್ತಾರೆ. ಇದೇ ಕಾರಣಕ್ಕೆ ಆಗಾಗ್ಗೆ ವಿವಾದಕ್ಕೂ ಗುರಿಯಾಗಿದ್ದಾರೆ.
ಕಮಲ್ ಹಾಸನ್ರ ಸಿನಿಮಾಗಳು ಆಗಾಗ್ಗೆ ವಿವಾದಕ್ಕೆ ಸಹ ಕಾರಣವಾಗುತ್ತಿರುತ್ತವೆ. ವಿಶೇಷವಾಗಿ ಅವರ ನಿರ್ದೇಶನದ ಸಿನಿಮಾಗಳು ವಿವಾದಕ್ಕೆ ಸಿಲುಕುವುದು ಸಾಮಾನ್ಯ. ಆದರೆ ಈಗ ಕಮಲ್ ಹಾಸನ್ ನಟಿಸಿರುವ ಆದರೆ ಲೋಕೇಶ್ ಕನಕರಾಜ್ ನಿರ್ದೇಶನದ ಹೊಸ ಸಿನಿಮಾ ವಿವಾದಕ್ಕೆ ಕಾರಣವಾಗಿದೆ. ಅದರಲ್ಲೂ ಸಿನಿಮಾದ ಹಾಡೊಂದರ ಬಗ್ಗೆ ಬಿಜೆಪಿಯವರು ಕೆಂಡಾಮಂಡಲವಾಗಿದ್ದಾರೆ.
ಕಮಲ್ ಹಾಸನ್ ಮುಖ್ಯ ಪಾತ್ರದಲ್ಲಿ ನಟಿಸಿರುವ 'ವಿಕ್ರಂ' ಸಿನಿಮಾದ ಹಾಡೊಂದರ ಬಗ್ಗೆ ಬಿಜೆಪಿಯವರು ಗರಂ ಆಗಿದ್ದಾರೆ. ಇದಕ್ಕೆ ಕಾರಣ ಹಾಡಿನಲ್ಲಿ ಕೇಂದ್ರ ಸರ್ಕಾರವನ್ನು ಟೀಕಿಸುವ ಸಾಲುಗಳಿವೆಯಂತೆ.
ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿರುವ 'ವಿಕ್ರಂ' ಸಿನಿಮಾದ ಹಾಡೊಂದನ್ನು ಕೆಲ ದಿನಗಳ ಹಿಂದೆ ಚಿತ್ರತಂಡವು ಯೂಟ್ಯೂಬ್ನಲ್ಲಿ ಬಿಡುಗಡೆ ಮಾಡಿದೆ. 'ಪತಾಲ-ಪತಾಲ' ಎಂದಿರುವ ಈ ಹಾಡು ಸಖತ್ ಮಾಸ್ ಆಗಿದ್ದು, ಈಗಾಗಲೇ ಬಹಳ ವೈರಲ್ ಆಗಿದೆ. ಆದರೆ ಈ ಹಾಡಿನಲ್ಲಿರುವ ಕೆಲವು ಸಾಲುಗಳ ಬಗ್ಗೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದೆ.

ಕೇಂದ್ರ ಸರ್ಕಾರದ ವಿರುದ್ಧ ಟೀಕೆ
ಹಾಡಿನಲ್ಲಿ ಕೇಂದ್ರ ಸರ್ಕಾರವನ್ನು ಟೀಕಿಸುವ ಸಾಹಿತ್ಯ ಇದೆ. ''ಕಾಯಿಲೆಗಳು ಹೆಚ್ಚಾದಾಗಲೇ ಖಜಾನೆಯಲ್ಲಿ ಹಣ ಖಾಲಿಯಾಗಿದೆ. ಒಕ್ಕೂಟ ಸರ್ಕಾರ ತಪ್ಪುಗಳಿಂದಾಗಿ ಈಗ ಏನೂ ಉಳಿದೇ ಇಲ್ಲದಂತಾಗಿದೆ. ಖಜಾನೆಯ ಬೀಗ ಈಗ ಕಳ್ಳನ ಬಳಿಯೇ ಇದೆ'' ಎಂಬ ಸಾಲುಗಳು ಹಾಡಿನಲ್ಲಿದೆ. ಹಾಡಿಗೆ ಸಂಗೀತವನ್ನು ಅನಿರುದ್ಧ ರವಿಚಂದ್ರನ್ ನೀಡಿದ್ದಾರೆ. ಹಾಡಿನ ಸಾಹಿತ್ಯ ಬರೆದಿರುವುದು ಸ್ವತಃ ಕಮಲ್ ಹಾಸನ್, ಹಾಡು ಹಾಡಿರುವುದು ಸಹ ಅವರೇ.

ದೂರು ನೀಡಿರುವ ಸೆಲ್ವನ್
ಈ ಹಾಡಿನ ವಿರುದ್ಧ ಬಿಜೆಪಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಸಿನಿಮಾವನ್ನು ಬ್ಯಾನ್ ಮಾಡಬೇಕೆಂದು ಬಿಜೆಪಿ ಸದಸ್ಯ ಸೆಲ್ವನ್ ಎಂಬುವರು ದೂರು ನೀಡಿದ್ದಾರೆ. ಸಿನಿಮಾದಿಂದ ಹಾಡನ್ನು ತೆಗೆಯಬೇಕು ಅಥವಾ ಸಿನಿಮಾ ಬಿಡುಗಡೆಗೆ ತಡೆ ನೀಡಬೇಕು ಎಂದು ಅವರು ನ್ಯಾಯಾಲಯವನ್ನು ಒತ್ತಾಯಿಸಿದ್ದಾರೆ.

ಜೂನ್ 3 ರಂದು ಸಿನಿಮಾ ಬಿಡುಗಡೆ
'ವಿಕ್ರಂ' ಸಿನಿಮಾ ಪಕ್ಕಾ ಆಕ್ಷನ್ ಸಿನಿಮಾ ಆಗಿದ್ದು, ಸಿನಿಮಾದಲ್ಲಿ ಕಮಲ್ ಹಾಸನ್ ಜೊತೆಗೆ ಮಲಯಾಳಂನ ಸ್ಟಾರ್ ನಟ ಫಹಾದ್ ಫಾಸಿಲ್, ವಿಜಯ್ ಸೇತುಪತಿ ಸಹ ಇದ್ದಾರೆ. ಸಿನಿಮಾದ ಟ್ರೇಲರ್ ಈಗಾಗಲೇ ಬಿಡುಗಡೆ ಆಗಿದ್ದು, ಭಾರಿ ವೈರಲ್ ಆಗಿದೆ. ಕಮಲ್ ಹಾಸನ್ ತಮ್ಮ 67ನೇ ವಯಸ್ಸಿನಲ್ಲೂ ಆಕ್ಷನ್ ದೃಶ್ಯಗಳಲ್ಲಿ ಮಿಂಚಿದ್ದಾರೆ. ವಿಜಯ್ ಸೇತುಪತಿ, ಫಹಾದ್ ಫಾಸಿಲ್ ಹಾಗೂ ಕಮಲ್ ಹಾಸನ್ ನಡುವೆ ನಟನೆಯ ವಿಚಾರದಲ್ಲಿ ಪೈಪೋಟಿಯೇ ಏರ್ಪಟ್ಟಿದೆ. ಒಬ್ಬರಿಗಿಂತಲೂ ಒಬ್ಬರು ಚೆನ್ನಾಗಿ ನಟಿಸಿದ್ದಾರೆ. 'ವಿಕ್ರಂ' ಸಿನಿಮಾ ಜೂನ್ 3 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ.

ಸಕ್ರಿಯ ರಾಜಕಾರಣಿ ಕಮಲ್
ಕಮಲ್ ಹಾಸನ್ ನಟನಾಗಿರುವ ಜೊತೆಗೆ ಸಕ್ರಿಯ ರಾಜಕಾರಣಿಯೂ ಸಹ ಹೌದು. 'ಮಕ್ಕಳ್ ನಿಧಿ ಮಯಂ' ಹೆಸರಿನ ರಾಜಕೀಯ ಪಕ್ಷದ ಸಂಸ್ಥಾಪಕ ಅಧ್ಯಕ್ಷರಾಗಿರುವ ಕಮಲ್ ಹಾಸನ್ ಕಳೆದ ತಮಿಳುನಾಡು ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಸ್ವತಃ ಚುನಾವಣೆಗೆ ಸ್ಪರ್ಧಿಸಿದ್ದ ಕಮಲ್ ಹಾಸನ್ ಕಡಿಮೆ ಅಂತರದಲ್ಲಿ ಸೋಲನುಭವಿಸಿದರು. ಬಿಜೆಪಿ ಪಕ್ಷದ ಸಿದ್ಧಾಂತಗಳ ಬಗ್ಗೆ ಆಕ್ಷೇಪಣೆ ಹೊಂದಿರುವ ಕಮಲ್ ಅದನ್ನು ಆಗಾಗ್ಗೆ ಬಹಿರಂಗವಾಗಿ ವ್ಯಕ್ತಪಡಿಸುತ್ತಿರುತ್ತಾರೆ. ಆದರೆ ಈಗ ಅವರ ಸಿನಿಮಾದ ಹಾಡಿನಲ್ಲಿ ನೇರವಾಗಿ ಕೇಂದ್ರವನ್ನು ಟೀಕಿಸಿರುವುದು ವಿವಾದಕ್ಕೆ ಕಾರಣವಾಗಿದೆ.


Click it and Unblock the Notifications











