ಶ್ರೀಲೀಲಾಗೆ 'ಈ ಕ್ಷಣವನ್ನು ಮರೆತು ಬಿಡು' ಎಂದ ಜನಾರ್ಧನ ರೆಡ್ಡಿ ಪುತ್ರ 'ಜೂನಿಯರ್' ಕಿರೀಟಿ
ಗಾಲಿ ಜನಾರ್ಧನಾ ರೆಡ್ಡಿ ಪುತ್ರ ಕಿರೀಟಿ ಸಿನಿಮಾ ಜೂನಿಯರ್ ಬಿಡುಗಡೆಗೆ ಸಜ್ಜಾಗಿದೆ. ಸುಮಾರು ಎರಡೂವರೆ ಮೂರು ವರ್ಷಗಳಿಂದ ನಿರ್ಮಾಣ ಆಗುತ್ತಿದ್ದ ಈ ಸಿನಿಮಾ ಪ್ರಚಾರವನ್ನು ಆರಂಭ ಮಾಡಿದೆ. ಇದರ ಮೊದಲ ಹೆಜ್ಜೆಯಾಗಿ ಮೊದಲ ಹಾಡನ್ನು ರಿಲೀಸ್ ಮಾಡಲಾಗಿದೆ. ಕನ್ನಡ ಹಾಗೂ ತೆಲುಗು ಎರಡು ಭಾಷೆಯಲ್ಲೂ ಈ ಹಾಡು ರಿಲೀಸ್ ಆಗಿದೆ.
'ಜೂನಿಯರ್' ಸಿನಿಮಾದ ಟೈಟಲ್ ಯೂತ್ಸ್ಗೆ ಇಷ್ಟ ಆಗುತ್ತೆ. ಜನಾರ್ಧನ ರೆಡ್ಡಿ ಪುತ್ರ ಕಿರೀಟಿ ಕೂಡ ಈ ಶೀರ್ಷಿಕೆಗೆ ಸೂಟ್ ಆಗುತ್ತಾರೆ. ಇನ್ನು ಮೊದಲ ಹಾಡಿನಲ್ಲಿಯೇ ಗಮನ ಸೆಳೆದಿದ್ದಾರೆ. ಕಿರೀಟಿ ಹೆಜ್ಜೆ ಹಾಕಿದ ರೀತಿಗೆ ಸಿನಿಪ್ರಿಯರು ಫಿದಾ ಆಗಿದ್ದಾರೆ. ಕನ್ನಡಕ್ಕೆ ಮತ್ತೊಬ್ಬ ಡ್ಯಾನ್ಸ್ ಸಿಕ್ಕಾಯ್ತು ಎಂದು ಖುಷಿ ಪಟ್ಟಿದ್ದಾರೆ. ಅಷ್ಟಕ್ಕೂ ಈ ಮಟ್ಟಿಗೆ ಹೆಜ್ಜೆ ಹಾಕುವುದಕ್ಕೆ ಸ್ಪೂರ್ತಿ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್.

ಈ ಸಿನಿಮಾ ಆರಂಭ ಆಗುವಾಗಲೇ ಜನಾರ್ಧನ ರೆಡ್ಡಿಯ ಪುತ್ರ ಕಿರೀಟಿ ತಮಗೆ ಪುನೀತ್ ರಾಜ್ಕುಮಾರ್ ಅವರೇ ಸ್ಪೂರ್ತಿ ಎಂದಿದ್ದರು. ಅವರ ಡ್ಯಾನ್ಸ್, ಆಕ್ಷನ್, ಸ್ಕ್ರೀನ್ ಪ್ರೆಸೆನ್ಸ್ ನೋಡಿ ಅಚ್ಚರಿಗೊಂಡಿದ್ದೆ ಎಂದು ಹೇಳಿಕೊಂಡಿದ್ದರು. ಕೊನೆಗೂ ಅದನ್ನು ಪ್ರೂವ್ ಮಾಡಿದ್ದಾರೆ. ಮೊದಲ ಹಾಡಿನಲ್ಲಿ ಅಲ್ಲಲ್ಲಿ ಪುನೀತ್ ರಾಜ್ಕುಮಾರ್ ಅವರು ನೆನಪಾಗುತ್ತಾರೆ. ಜೂನಿಯರ್ ಚಿತ್ರದ "ಲೆಟ್ಸ್ ಲಿವ್ ದಿಸ್ ಮೊಮೆಂಟ್" ಎಂಬ ಮೊದಲ ಲಿರಿಕಲ್ ವಿಡಿಯೋ ಸಾಂಗ್ ಸದ್ದು ಮಾಡುತ್ತಿದೆ.
'ಜೂನಿಯರ್' ಸಿನಿಮಾಗೆ ದಿಗ್ಗಜರೇ ಕೆಲಸ ಮಾಡಿದ್ದಾರೆ. ಸುಮಾರು ಮೂರು ವರ್ಷ ಶೂಟಿಂಗ್ ನಡೆದ ಈ ಸಿನಿಮಾದ ಹಾಡಿನ ಮೂಲಕ ಪ್ರಚಾರ ಶುರುವಾಗಿದೆ. 'ಪುಷ್ಪ 2' ಅಂತಹ ಮೆಗಾ ಬ್ಲಾಕ್ಬಸ್ಟರ್ ಸಿನಿಮಾಗೆ ಟ್ಯೂನ್ ಹಾಕಿರುವ ದೇವಿಶ್ರೀ ಪ್ರಸಾದ್ ಈ ಸಿನಿಮಾಗೆ ಸಂಗೀತ ನೀಡಿದ್ದಾರೆ. ಟಿಪಿಕಲ್ ತೆಲುಗು ಸಿನಿಮಾಗಳ ಹಾಡನ್ನು ನೆನಪಿಸುವ 'ಜೂನಿಯರ್' ಸಾಂಗ್ ಸಂಗೀತ ಪ್ರಿಯರು ಮೆಲುಕು ಹಾಕುವಂತೆ ಮಾಡಿದೆ.
ಈ ಸಿನಿಮಾದಲ್ಲಿ ಕಿರೀಟಿ ಜೊತೆಗೆ ಕ್ರೇಜಿಸ್ಟಾರ್ ರವಿಚಂದ್ರನ್, ಜೆನಿಲಿಯಾ ಡಿಸೋಜಾ, ಶ್ರೀಲೀಲಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪುನೀತ್ ರಾಜ್ಕುಮಾರ್ ನಿರ್ಮಿಸಿದ್ದ 'ಮಾಯಾಬಜಾರ್' ಸಿನಿಮಾದ ನಿರ್ದೇಶಕ ರಾಧಾಕೃಷ್ಣ ರೆಡ್ಡಿ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಬಾಹುಬಲಿ, ಆರ್ಆರ್ಆರ್ ಅಂತಹ ಸಿನಿಮಾಗೆ ಕ್ಯಾಮರಾ ವರ್ಕ್ ಮಾಡಿರುವ ಕೆ.ಕೆ ಸೆಂಥಿಲ್ ಕುಮಾರ್ ಕೆಲಸ ಮಾಡಿದ್ದಾರೆ.
ಜೂನಿಯರ್ ಮೊದಲ ಹಾಡು ರಿಲೀಸ್ ಆದ ಬಳಿಕ ಕ್ರೇಜಿ ಸ್ಟಾರ್ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. "ರಾಧಾಕೃಷ್ಣ ಅವರು ಕಥೆ ಹೇಳುವಾಗ ಕಿವಿಯಲ್ಲಿ ಪಿಸುಗುಟ್ಟಿದ ಅನುಭವ ಆಗುತ್ತೆ. ಆ ಕಥೆ ಮನಸ್ಸು ತಟ್ಟುತ್ತೆ. ಇದು ನಿಮಗೆಲ್ಲಾ ಜೂನಿಯರ್. ನನಗೆ ಮಾತ್ರ ಲಾಂಗ್ ಜರ್ನಿ. ಡಬ್ ಮಾಡುವಾಗ ನೋಡಿದಾಗ ಇದು ಹ್ಯಾಪಿ ಜರ್ನಿ ಎನಿಸಿತು. ಒಂದು ಸಿನಿಮಾ ಎಷ್ಟು ಟೈಮ್ ತೆಗೆದುಕೊಳ್ಳುತ್ತದೆ ಎನ್ನುವುದು ಮುಖ್ಯವಲ್ಲ. ಬದಲಿಗೆ ಹೇಗೆ ಪ್ರೇಕ್ಷಕರನ್ನು ತಲುಪುತ್ತದೆ ಎನ್ನುವುದು ಮುಖ್ಯ. ಈ ಹುಡುಗನಿಗೆ ಕಥೆ ಆರಿಸಿಕೊಳ್ಳುವ ಧೈರ್ಯ ಇದೆ. ತಾನು ಹೀರೋ ಆಗಬೇಕು ಎನ್ನುವ ಹಂಬಲವಿದೆ. ಈ ರೀತಿಯ ಸ್ಟ್ರಿಪ್ಟ್ ಅನ್ನು ಹೊಸಬರು ಆಯ್ಕೆ ಮಾಡಿಕೊಳ್ಳುವುದು ತುಂಬಾ ಕಡಿಮೆ" ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇನ್ನು ಸಂಗೀತ ನಿರ್ದೇಶಕ ದೇವಿ ಶ್ರೀ ಪ್ರಸಾದ್ " ಈ ಸಿನಿಮಾದಲ್ಲಿ ಕೆಲಸ ಮಾಡಿದ್ದು ಖುಷಿ ಕೊಟ್ಟಿದೆ. ಕಿರೀಟಿ ಒಳ್ಳೆಯ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ" ಎಂದಿದ್ದಾರೆ. ನಿರ್ದೇಶಕ ರಾಧಾಕೃಷ್ಣ ರೆಡ್ಡಿ "ದೊಡ್ಡ ಲೆಜೆಂಡರಿ ಆಕ್ಟರ್ಗಳು ಕೆಲಸ ಮಾಡಿರುವುದರಿಂದ ಜೂನಿಯರ್ ಸೇಫ್ ಎಂದು ಅರ್ಥ" ಎಂದು ಹೇಳಿದರೆ, ಕಿರೀಟಿ ಸಿನಿಮಾ ತಡವಾಗಿದ್ದಕ್ಕೆ ಕಾರಣ ತಿಳಿಸಿದ್ದಾರೆ. ಫೈಟ್ ಮಾಡುವಾಗ ಬೆನ್ನಿಗೆ ಪೆಟ್ಟು ಬಿದ್ದಿದ್ದರಿಂದ ತಡವಾಯ್ತು ಎಂದಿದ್ದಾರೆ.


Click it and Unblock the Notifications











