ಯೋಗರಾಜ್ ಭಟ್-ಸೂರಿಯ ಖಾಯಂ ಪಾತ್ರಧಾರಿಯೀಗ ಮ್ಯೂಸಿಕ್ ಡೈರೆಕ್ಟರ್; ಯಾವುದು ಆ ಸಿನಿಮಾ?
ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಪ್ರತಿಭಾವಂತರಿದ್ದಾರೆ. ಅವರು ಕೇವಲ ನಟನೆಯನ್ನಷ್ಟೇ ಅಲ್ಲ. ನಟನೆ ಜೊತೆ ಜೊತೆಗೇನೆ ಸಿನಿಮಾದ ಬೇರೆ ಬೇರೆ ವಿಭಾಗಗಳಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿರುತ್ತಾರೆ. ಇಂತಹ ಒಂದು ಪ್ರತಿಭೆಯೇ ಪ್ರಶಾಂತ್ ಸಿದ್ಧಿ.
ಇಷ್ಟು ದಿನ ಕನ್ನಡ ಸಿನಿಮಾಗಳಲ್ಲಿ ಹಾಸ್ಯದ ಮೂಲಕವೇ ರಂಜಿಸುತ್ತಿದ್ದ ಪ್ರಶಾಂತ್ ಸಿದ್ಧಿ, ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಸ್ಯಾಂಡಲ್ವುಡ್ನ ಜನಪ್ರಿಯ ನಿರ್ದೇಶಕ ಯೋಗರಾಜ್ ಭಟ್, ದುನಿಯಾ ಸೂರಿ ಸಿನಿಮಾಗಳ ಖಾಯಂ ಪಾತ್ರದಾರಿಯಾಗಿ ಪ್ರಶಾಂತ್ ಸಿದ್ಧಿ ಕಾಣಿಸಿಕೊಂಡಿದ್ದಾರೆ. ತಮ್ಮ ಹಾಸ್ಯ ಪ್ರಜ್ಞೆಯಿಂದಲೇ ಪ್ರೇಕ್ಷಕರನ್ನು ರಂಜಿಸಿದ್ದಾರೆ.

ರಂಗಭೂಮಿ ಹಿನ್ನೆಲೆಯುಳ್ಳ ಈ ಪ್ರತಿಭಾನ್ವಿತ ನಟ ಪ್ರಶಾಂತ್ ಸಿದ್ದಿ ತಮ್ಮ ಮತ್ತೊಂದು ಪ್ರತಿಭೆಯನ್ನು ಪರಿಚಯಿಸುವುದಕ್ಕೆ ಮುಂದಾಗಿದ್ದಾರೆ. ನಟನೆ ಜೊತೆ ಜೊತೆಗೆ ಸಿನಿಮಾಗೆ ಸಂಗೀತ ನೀಡುವುದಕ್ಕೂ ಮುಂದಾಗಿದ್ದಾರೆ. ಸದ್ಯಕ್ಕೀಗ ನಟ ಪೃಥ್ವಿ ಅಂಬರ್ ನಟಿಸುತ್ತಿರುವ 'ಮತ್ಸ್ಯಗಂಧ' ಸಿನಿಮಾಗೆ ಸಂಗೀತ ನಿರ್ದೇಶನ ಮಾಡುವ ಮೂಲಕ ಮ್ಯೂಸಿಕ್ ಡೈರೆಕ್ಟರ್ ಆಗಿ ಗುರುತಿಸಿಕೊಂಡಿದ್ದಾರೆ.
ಅಂದ್ಹಾಗೆ 'ಮತ್ಸ್ಯಗಂಧ' ಸಿನಿಮಾವನ್ನು ದೇವರಾಜ್ ಪೂಜಾರಿ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದ ಭಾಗೀರಥಿ ಅನ್ನೋ ಡ್ಯಾನ್ಸಿಂಗ್ ನಂಬರ್ ಅನ್ನು ಚಿತ್ರತಂಡ ರಿಲೀಸ್ ಮಾಡಿದ್ದು, ಪ್ರಶಾಂತ್ ಸಿದ್ದಿ ಹಾಕಿರೋ ಟ್ಯೂನ್ಗೆ ಸಂಗೀತ ಪ್ರೇಮಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಹಾಡು ರಿಲೀಸ್ ಆದ ಮೊದಲ ದಿನವೇ ಯೂಟ್ಯೂಬ್ನಲ್ಲಿ ಟ್ರೆಂಡಿಂಗ್ನಲ್ಲಿತ್ತು.

ಪ್ರಶಾಂತ್ ಸಿದ್ದಿ ಟ್ಯೂನ್ ಹಾಕಿರೋ ಭಾಗೀರಥಿ ಹಾಡು ರಿಲೀಸ್ ಆದ ಮೂರು ದಿನಗಳ ಬಳಿಕ ಸುಮಾರು ಏಳು ಲಕ್ಷಕ್ಕೂ ಅಧಿಕ ವೀವ್ಸ್ ಪಡೆದುಕೊಂಡು ಒಂದು ಮಿಲಿಯನ್ ವೀವ್ಸ್ ನತ್ತ ಸಾಗುತ್ತಿದೆ. ಇತ್ತೀಚೆಗೆ ಚಿತ್ರತಂಡ ಪ್ರಶಾಂತ್ ಸಿದ್ಧಿಯನ್ನು ಸಂಗೀತ ನಿರ್ದೇಶಕನನ್ನಾಗಿ ಪರಿಚಯಿಸಿತ್ತು. ಈ ವೇಳೆ "ತಮ್ಮ ಮನೆ ಪರಿಸರ ಬದುಕೇ ಸಂಗೀತ ನಾಟಕದಿಂದ ಕೂಡಿತ್ತು. ಹುಟ್ಟಿನಿಂದಲೇ ಮೈಯೊಳಗಿದ್ದ ರಿದಮ್ ಮತ್ತು ಅಮ್ಮನ ಹಾಡುಗಾರಿಕೆ ತಮ್ಮನ್ನ ಇಲ್ಲಿಯವರೆಗೂ ತಂದಿದೆ. ಮತ್ಸ್ಯಗಂಧ ಸಿನಿಮಾದ ಹಾಡುಗಳು ಹಾಗೂ ಹಿನ್ನೆಲೆ ಸಂಗೀತ, ತಮ್ಮ ವೃತ್ತಿ ಬದುಕಿಗೆ ಹೊಸ ಮೈಲಿಗಲ್ಲಾಗಿ ಹೊಸ ದಾರಿಯಾಗಲಿದೆ" ಎಂದು ಪ್ರಶಾಂತ್ ಸಿದ್ಧಿ ಹೇಳಿದ್ದಾರೆ.
'ಮತ್ಸ್ಯಗಂಧ' ಸಿನಿಮಾದ ಹಾಡನ್ನು ಪಕ್ಕಾ ದೇಸಿ ಪೆಪ್ಪಿ ಶೈಲಿಯಲ್ಲಿ ಕಂಪೋಸ್ ಮಾಡಲಾಗಿದೆ. ನಿರ್ದೇಶಕ ದೇವರಾಜ್ ಪೂಜಾರಿಯವರೇ ಈ ಸಿನಿಮಾ ಸಾಹಿತ್ಯ ಬರೆದಿದ್ದು, ಇಂದು ನಾಗರಾಜ್, ಪ್ರಶಾಂತ್ ಸಿದ್ಧಿ ಹಾಗೂ ಸಂಗಡಿಗರು ಈ ಹಾಡನ್ನು ಹಾಡಿದ್ದಾರೆ.
'ಮತ್ಸ್ಯಗಂಧ' ಸಿನಿಮಾದ ಭಾಗೀರಥಿ ಹಾಡಿನಲ್ಲಿ ನಟಿ ಅಂಜಲಿ ಪಾಂಡೆ ಮೈ ಬಳುಕಿಸಿ ಕುಣಿಸಿದ್ದಾರೆ. ಇನ್ನು ಇವರೊಂದಿಗೆ ಪೃಥ್ವಿ ಅಂಬಾರ್, ನಾಗರಾಜ್ ಬೈಂದೂರು ಹೆಜ್ಜೆ ಹಾಕಿದ್ದಾರೆ. ಧನಂಜಯ ಮಾಸ್ಟರ್ ನೃತ್ಯ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾವನ್ನು ಬಿ.ಎಸ್ ವಿಶ್ವನಾಥ್ ಬಂಡವಾಳ ಹೂಡಿದ್ದು, ಈ ಹಾಡಿನೊಂದಿಗೆ ಪ್ರಚಾರ ಕಾರ್ಯವನ್ನಾರಂಭಿಸಿರೋ ಚಿತ್ರತಂಡ, ಫೆಬ್ರವರಿಗೆ ಪ್ರೇಕ್ಷಕರೆದುರಿಗೆ ಬರೋ ಸನ್ನಾಹದಲ್ಲಿದೆ.


Click it and Unblock the Notifications











