ತಂದೆ ಸಾವಿನ ನೋವಲ್ಲೇ ಸುಂಟರಗಾಳಿಯಂತ ಕಮರ್ಶಿಯಲ್ ಸಾಂಗ್ ಬರೆದಿದ್ದೇಗೆ ಕೆ ಕಲ್ಯಾಣ್?
ಚಾಲೆಂಜಿಂಗ್ ಸ್ಟಾರ್ ದರ್ಶನ್ ವೃತ್ತಿ ಬದುಕಿನ ಸೂಪರ್ ಹಿಟ್ ಸಿನಿಮಾಗಳಲ್ಲಿ 'ಕಲಾಸಿಪಾಳ್ಯ' ಕೂಡ ಒಂದು. ದರ್ಶನ್ ಹಾಗೂ ರಕ್ಷಿತಾ ಪ್ರೇಮ್ ಜೋಡಿಯ ಸಿನಿಮಾಗೆ ಪ್ರೇಕ್ಷಕರು ಹುಚ್ಚೆದ್ದು ಕುಣಿದಿದ್ದರು. ಸಾಧು ಕೋಕಿಲಾ ಕಂಪೋಸ್ ಮಾಡಿದ್ದ ಹಾಡುಗಳು ಸೂಪರ್ ಹಿಟ್ ಆಗಿದ್ದವು. ಈ ಸಿನಿಮಾದ ಪ್ರತಿಯೊಂದು ಹಾಡು ಹಿಟ್ ಲಿಸ್ಟ್ ಸೇರಿದ್ದವು.
ಅದರಲ್ಲೂ "ಸುಂಟರಗಾಳಿ.. ಸುಂಟರಗಾಳಿ.." ಹಾಡು ಇಂದಿಗೂ ಹೆಜ್ಜೆ ಹಾಕುವವರಿಗೆ ಅಚ್ಚು ಮೆಚ್ಚಿನ ಸಾಂಗ್. ಈ ಕಮರ್ಷಿಯಲ್ ಸಾಂಗ್ಗೆ ಸಾಹಿತ್ಯ ರಚಿಸಿದ್ದು ಪ್ರೇಮಕವಿ ಕೆ ಕಲ್ಯಾಣ್. ಸುಮಧುರ ಪ್ರೇಮಗಳನ್ನು ಬರೆಯುತ್ತಿದ್ದ ಕೆ ಕಲ್ಯಾಣ್ ಅಪ್ಪಟ ಮಾಸ್ ಸಾಂಗ್ ಅನ್ನು ದರ್ಶನ್ ಅವರ 'ಕಲಾಸಿಪಾಳ್ಯ' ಸಿನಿಮಾಗೆ ಬರೆದಿದ್ದರು.

ಈ ಹಾಡು ಒಳ್ಳೆಯ ಸಂದರ್ಭದಲ್ಲಿ ಸೃಷ್ಟಿಯಾಗಿರಲಿಲ್ಲ. ನಿರ್ಮಾಪಕ ರಾಮು ಹಾಗೂ ನಿರ್ದೇಶಕ ಓಂ ಪ್ರಕಾಶ್ ರಾವ್ ಬಂದು ಸಾಹಿತ್ಯ ಬರೆದುಕೊಡುವಂತೆ ಕೇಳಿಕೊಂಡಾಗ, ಕೆ. ಕಲ್ಯಾಣ್ ದು:ಖದಲ್ಲಿದ್ದರು. ಅವರ ತಂದೆ ಅಗಲಿ ಕೇವಲ 9 ದಿನಗಳಾಗಿತ್ತಷ್ಟೇ. ನೋವಿನಲ್ಲಿದ್ದವರ ಬಳಿ ಬಂದು ಸಾಹಿತ್ಯ ಬರೆಯುವಂತೆ ಕೇಳಿಕೊಂಡಿದ್ದರು. ಆ ಸಂದರ್ಭವನ್ನು ಕೆ. ಕಲ್ಯಾಣ್ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ವಿವರಿಸಿದ್ದಾರೆ.
ರಾಮು ಹಾಗೂ ಓಂ ಪ್ರಕಾಶ್ ರಾವ್ ಇಬ್ಬರೂ ಮಾಸ್ ಸಾಂಗ್ ಅನ್ನು ಬರೆಯಲೇ ಬೇಕು ಎಂದು ಒತ್ತಡ ಹಾಕಿದ್ದರು. ಕೊನೆಗೂ ಕೆ.ಕಲ್ಯಾಣ್ ಹಾಡು ಬರೆಯಲು ಒಪ್ಪಿಕೊಂಡಿದ್ದರು. ಸುಂಟರಗಾಳಿ ಹಾಡಿಗೆ ಮುಹೂರ್ತ ಕೂಡಿ ಬಂದಿತ್ತು.
"ಅವರೊಂದಿಗೆ ಮಾತಾಡಿಕೊಂಡು ಎದ್ದೇಳುವಾಗ ಓಂ ಪ್ರಕಾಶ್ ರಾವ್ ಅವರು ಸರ್ ಹಾಡು ಗುಂಡಿಗೆ ಟಚ್ ಆಗ್ಬೇಕು ಅಂತ ಹೇಳಿದ್ರು. ಸರ್ ಒಂದು ನಿಮಿಷ ಅಂತ ಹೇಳಿ ಗುಂಡಿಯೊಳಗೆ ಒಂದು ವಸ್ತು.. ಅದು ಟಚ್ ಆದ ಕೂಡಲೇ ನಾ ಸುಸ್ತು ಅಂದೆ.. ಅವರು ಖುಷಿಯಾಗಿ ಹೋದರು. ಇದೇ ಸಾರ್.. ಇದೇ ಸಾರ್ ಬೇಕಿರೋದು. ಆಗೋಯ್ತು ಪಲ್ಲವಿ ಅಂದರು." ಎಂದು ಕೆ. ಕಲ್ಯಾಣ್ ನೆನಪಿಸಿಕೊಂಡಿದ್ದಾರೆ.
"ಈ ಹಾಡು ಬರೀಬೇಕು ಅಂತ ಕೂತುಕೊಂಡೆ, ಯಾವ ದೇವರ ಅನುಗ್ರಹವೋ ಗೊತ್ತಿಲ್ಲ. ಅರ್ಧ ಗಂಟೆಯೊಳಗೆ ಪೂರ್ತಿ ಹಾಡು ರೆಡಿಯಾಗಿ ಹೋಯ್ತು. ಡೈರೆಕ್ಟರ್, ಪ್ರೊಡ್ಯೂಸರ್ ಇಬ್ಬರಿಗೂ ಫೋನ್ ಮಾಡಿದೆ. ಅರ್ಧ ಗಂಟೆಯಲ್ಲಿ ಇಬ್ಬರೂ ಬಂದರು. ದರ್ಶನ್ ಸರ್ ಸಿನಿಮಾಗೆ ಹಾಡು ಬರೋದ್ರಲ್ಲಿ ಅದೊಂತರ ಕಿಕ್ಕು" ಎಂದು ಕೆ. ಕಲ್ಯಾಣ್ ಹೇಳುತ್ತಾರೆ.

ಆದರೆ, ಸುಂಟರಗಾಳಿ ಅನ್ನೋ ಪದ ಹುಟ್ಟಿಕೊಂಡಿದ್ದೇ ಒಂದು ವಿಚಿತ್ರ ಸಂದರ್ಭದಲ್ಲಿ. ಅದನ್ನೂ ತಮ್ಮ ಯೂಟ್ಯೂಬ್ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. "ಈ ಸಂದರ್ಭದಲ್ಲಿ ನಮ್ಮ ಚಿಕ್ಕಮ್ಮ ಬಂದ್ರು. ವತ್ಸಲ ಅಂತ ಅವರ ಹೆಸರು. ಅವರೆಲ್ಲ ಮನೆಯಲ್ಲಿ ಮಾತಾಡುತ್ತಿದ್ದರು. ಜೀವನದಲ್ಲಿ ಬಿರುಗಾಳಿ, ಸುಂಟರಗಾಳಿ ಎಲ್ಲಾ ಎದ್ದೇಳುತ್ತಿರುತ್ತೆ. ನಾವೇ ತಾಳ್ಮೆಯಿಂದ ಹ್ಯಾಂಡಲ್ ಮಾಡಿಕೊಂಡು ಹೋಗಬೇಕಾಗುತ್ತೆ. ಅದೇ ಜೀವನ ಅಂದರು. ಅರೇ ಏನೋ ಇದೆಯಲ್ಲಾ ಅಂದ್ಕೊಂಡು, ಬಿರುಗಾಳಿ ಅಂತ ಬರೆದೆ ಟ್ಯೂನ್ಗೆ ಹೊಂದುತ್ತಿಲ್ಲ. ಚಂಡಮಾರುತ ಹೊಂದುತ್ತಿಲ್ಲ. ಸುಂಟರಗಾಳಿ ಹೊಂದಿಕೊಳ್ತು. ಅಲ್ಲಿಂದ ಸುಂಟರಗಾಳಿ.. ಸುಂಟರಗಾಳಿ.. ಅಂತ ಬರೆದೆ" ಎನ್ನುತ್ತಾರೆ.
ಸುಂಟರಗಾಳಿ ಹಾಡು ಬರೆದ ಬಳಿಕ ಓಂ ಪ್ರಕಾಶ್ ರಾವ್ ಅವರನ್ನು ಕರೆದು ಸಾಹಿತ್ಯ ಕೊಟ್ಟಿದ್ದರು. ಇನ್ನು ಎರಡು ಸಾಲು ಬರೆಯಬೇಕು. ಸದ್ಯಕ್ಕೆ ಹೊಳೆಯುತ್ತಿಲ್ಲ. ಆಮೇಲೆ ಕೊಡುತ್ತೇನೆ ಎಂದಿದ್ದರು. ಅತ್ತ ಹಾಡಿನ ರೆಕಾರ್ಡಿಂಗ್ ಪ್ರಾರಂಭ ಆಗಿತ್ತು. ಇತ್ತ ಕೆ ಕಲ್ಯಾಣ್ ತಂದೆಯ ಶ್ರಾದ್ಧ ನಡೆಯುತ್ತಿತ್ತು. ಹೀಗಾಗಿ ಎರಡು ಸಾಲನ್ನು ಕೊಡುವುದನ್ನೇ ಮರೆತಿದ್ದರು. ಅದೇ ಸಂದರ್ಭದಲ್ಲಿ ಸಂಗೀತ ನಿರ್ದೇಶಕರಾಗಿದ್ದ ಸಾಧು ಕೋಕಿಲಾ ಫೋನ್ ಮಾಡಿ, ಆ ಎರಡು ಸಾಲನ್ನು ಕೇಳಿದ್ದರು. ಮುಂದೇನಾಯ್ತು..?
"ಕಲಾಸಿಪಾಳ್ಯದಲ್ಲಿ ಕೂತು ಸಾಧು ಕೋಕಿಲಾ ಮ್ಯೂಸಿಕ್ ಕಂಪೋಸ್ ಮಾಡೋರು. ಸಾಧು ಕೋಕಿಲಾ ಮ್ಯೂಸಿಕ್ ಕಂಪೋಸ್ ಮಾಡುತ್ತಿದ್ದಿದ್ದು ಕಲಾಸಿಪಾಳ್ಯದ ಒಂದು ಹೋಟೆಲ್ನಲ್ಲಿ.. ನಾನು ಹಾಡು ಬರೆಯುತ್ತಿರುವ ಸಿನಿಮಾ ಹೆಸರೂ ಕಲಾಸಿಪಾಳ್ಯ. ಆಗ ತಂದೆಯ ಶ್ರಾದ್ಧ ನಡೆಯುತ್ತಿತ್ತು. ವಸ್ತುಗಳನ್ನು ಎತ್ತಿಡುವಾಗ, ವಿಳ್ಯೆದೆಲೆ ಎತ್ತಿಕೊಂಡಿದ್ದೆ ಆಗ ಪುರೋಹಿತರು ಸ್ವರ್ಗ ಅಂತಿದ್ದರು. ಆಗ, ರಾತ್ರಿಯೆಲ್ಲ ಸ್ವರ್ಗದಲ್ಲಿ ತಿನಿಸಿದೆ ವೀಳ್ಯ. ನಾ ಬೆಳಗೆದ್ದು ಕಣ್ಬಿಟ್ಟರೆ ಕಲಾಸಿಪಾಳ್ಯ ಎಂದು ಬರೆದೆ. ಅದು ಹೇಗೆ ಕನೆಕ್ಟ್ ಆಗುತ್ತೋ ಗೊತ್ತಿಲ್ಲ. ಎಲ್ಲರೂ ಮೆಚ್ಚಿಕೊಂಡರು" ಎಂದು ಹಾಡು ಮುಗಿಸಿದ ಕ್ಷಣವನ್ನು ನೆನೆದಿದ್ದಾರೆ.
ಈ ಹಾಡು ರೆಕಾರ್ಡಿಂಗ್ ಆದ ದಿನ ರಾತ್ರಿ ಕೆ ಕಲ್ಯಾಣ ಅವರಿಗೆ ದರ್ಶನ್ ಫೋನ್ ಮಾಡಿ ಧನ್ಯವಾದಗಳನ್ನು ಹೇಳಿದ್ದರು. ನೀವು ಇದ್ದ ಸಂದರ್ಭದಲ್ಲಿ ನೀವು ಹಾಡು ಬರೆದಿದ್ದೀರ ಅದಕ್ಕೆ ಧನ್ಯವಾದಗಳು ಎಂದು ಹೇಳಿದ್ದರು.


Click it and Unblock the Notifications











