ಶಿವಗಂಗೆಯಲ್ಲಿ "ರಾಮ ಈಸ್ ಜೆಂಟಲ್ ಮ್ಯಾನ್" ಕುಣ್ಕೊಂಡು ಬಂದ ರಿಷಿ: 'ರಾಮನ ಅವತಾರ'ಕ್ಕೆ ಶುಭ್ರ ಬೋಲ್ಡ್
ರಿಷಿ ಸ್ಯಾಂಡಲ್ವುಡ್ನ ಉದಯೋನ್ಮುಖ ನಟ. ಎಲ್ಲರೂ ಒಂದು ದಾರಿ ಹಿಡಿದರೆ, ಇವರದ್ದೇ ಬೇರೆ ದಾರಿ. ಅದರ ಪರಿಣಾಮದಿಂದಲೇ 'ಕವಲುದಾರಿ' ಹುಟ್ಟಿತ್ತು. 'ಆಪರೇಷನ್ ಅಲಮೇಲಮ್ಮ' ಮಾಡಿದ್ದು. ಈಗ 'ರಾಮನ ಅವತಾರ'ದಲ್ಲಿ ಸಿನಿಪ್ರಿಯರನ್ನು ರಂಜಿಸುವುದಕ್ಕೆ ಸಜ್ಜಾಗಿದ್ದಾರೆ.
ರಿಷಿ ಆಯ್ಕೆ ಮಾಡಿಕೊಳ್ಳುವ ಕಥೆಯೇ ಡಿಫ್ರೆಂಟ್. ಸೀರಿಯಸ್ ಸ್ಟೋರಿ, ಕಾಮಿಡಿ, ಇಲ್ಲ ಸಸ್ಪೆನ್ಸ್ ಸಿನಿಮಾನೇ ಇರಲಿ ಆ ಕಥೆಗೆ ಹೊಂದಿಕೊಳ್ಳುವ ನಟ. ಕನ್ನಡದ ಈ ಪ್ರತಿಭಾವಂತ ನಟನ ಹೊಸ ಸಿನಿಮಾ 'ರಾಮನ ಅವತಾರ' ಕೂಡ ಈಗ ಕುತೂಹಲ ಕೆರಳಿಸುತ್ತಿದೆ.

ಇತ್ತೀಚೆಗಷ್ಟೇ ಈ ಸಿನಿಮಾದ ಹೊಸ ಪೋಸ್ಟರ್ ಕುತೂಹಲ ಕೆರಳಿಸಿತ್ತು. ಶ್ರೀರಾಮನ ಅವತಾರ ತಾಳಿದ್ದ ರಿಷಿಯ ಪೋಸ್ಟರ್ ಶ್ರೀರಾಮ ನವಮಿಯಂದೇ ರಿಲೀಸ್ ಆಗಿತ್ತು. ಈಗ ಅದೇ ಹೊಚ್ಚ ಹೊಸ ಹಾಡನ್ನು ರಿಲೀಸ್ ಮಾಡಿದೆ. ಈ ಹಾಡು ಸಿನಿಪ್ರಿಯರಿಗೆ ಮಸ್ತ್ ಮಜಾ ಕೊಡುತ್ತಿದೆ.
ನಾಗಾರ್ಜುನ್ ಶರ್ಮಾ ಸಾಹಿತ್ಯ ಬರೆದಿರೋ "ರಾಮ ಈಸ್ ಜೆಂಟಲ್ಮ್ಯಾನ್.." ಹಾಡಿಗೆ ಅಭಿನಂದನ್ ಮಹಿಶಾಲೆ ಧ್ವನಿ ನೀಡಿದ್ದಾರೆ. ಕನ್ನಡಕ್ಕೆ ಸೂಪರ್ ಹಿಟ್ ಹಾಡುಗಳನ್ನು ನೀಡಿರುವ ಜೂಡಾ ಸ್ಯಾಂಡಿ ಈ ಸಿನಿಮಾಗೆ ಟ್ಯೂನ್ ಹಾಕಿದ್ದಾರೆ.

ಅಂದ್ಹಾಗೆ "ರಾಮ ಈಸ್ ಜೆಂಟಲ್ಮ್ಯಾನ್.." ಹಾಡು ಟೈಟಲ್ ಕಮ್ ರೋಮ್ಯಾಂಟಿಕ್ ಸಾಂಗ್. ಇದರಲ್ಲಿ ರಿಷಿ ತನ್ನ ಪ್ರೀತಿಯನ್ನು ನಾಯಕಿ ಶುಭ್ರಗೆ ವ್ಯಕ್ತಪಡಿಸುತ್ತಾ ಹೆಜ್ಜೆ ಹಾಕಿದ್ದಾರೆ. ಹುಡುಗ ತನ್ನ ಹುಡುಗಿಗೆ ಪ್ರಪೋಸ್ ಮಾಡುವ ಹಾಡೇ ಆಗಿದ್ದರೂ, ಇಲ್ಲೊಂದು ಕಿಕ್ ಇದೆ. ಯುವ ಪ್ರೇಮಿಗಳಿಗೆ ಈ ಹಾಡು ಮಸ್ತ್ ಮಜಾ ಕೊಡುತ್ತೆ.
ಇನ್ನು ಈ ಹಾಡನ್ನು ಸಾವನದುರ್ಗ ಮತ್ತು ಶಿವಗಂಗೆಯಲ್ಲಿ ಚಿತ್ರೀಕರಣ ಮಾಡಲಾಗಿದೆ. ಮ್ಯೂಸಿಕ್ ವೆಸ್ಟೆರ್ನ್ ಶೈಲಿಯಲ್ಲಿ ಇದ್ದರೂ ಹಾಡು ಮಾತ್ರ ಪಕ್ಕಾ ದೇಸಿಯದ್ದು. ಸಾಹಿತ್ಯ ಕೂಡ ಮಜವಾಗಿದ್ದು, ಪ್ರೇಕ್ಷಕರಿಗೆ ಖುಷಿ ಕೊಡುವುದರಲ್ಲಿ ಯಾವುದೇ ಅನುಮಾನವಿಲ್ಲ. ತಮ್ಮದೇ ವಿಭಿನ್ನ ಶೈಲಿಯ ನಟನೆಯಿಂದ ಜನರ ಮನಸ್ಸನ್ನು ಗೆದ್ದಿರುವ ರಿಷಿ, "ರಾಮ ಈಸ್ ಜೆಂಟಲ್ಮ್ಯಾನ್" ಹಾಡಿನಲ್ಲಿ ಕುಣಿದು ಜನರನ್ನು ರಂಜಿಸಿದ್ದಾರೆ.
ಇತ್ತೀಚೆಗೆ ಇದೇ 'ರಾಮನ ಅವತಾರ' ಸಿನಿಮಾದ ಟೀಸರ್ ಕೂಡ ರಿಲೀಸ್ ಆಗಿತ್ತು. ಈ ಟೀಸರ್ ಸಿನಿಪ್ರಿಯರಿಗೆ ಭರಪೂರ ಕಾಮಿಡಿ ನೀಡಿತ್ತು. ಇನ್ನು 'ರಾಮನ ಅವಾತರ' ಸಿನಿಮಾದಲ್ಲಿ ರಿಷಿ ಹಾಗೂ ಶುಭ್ರ ಅಯ್ಯಪ್ಪನ ಜೊತೆ ನಟಿ ಪ್ರಣಿತಾ ಸುಭಾಷ್ ಕೂಡ ಇದ್ದಾರೆ. ಹಾಗೇ ಅರುಣ್ ಸಾಗರ್ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ.
ತಮ್ಮದೇ ನಾಟಿ ಫ್ಯಾಕ್ಟರಿ ಅನ್ನೋ ಯೂಟ್ಯೂಬ್ ಚಾನೆಲ್ ಮೂಲಕ ಹೆಸರು ಮಾಡಿರೋ ವಿಕಾಸ್ ಪಂಪಾಪತಿ 'ರಾಮನ ಅವತಾರ'ಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಅಂದ್ಹಾಗೆ, 'ರಾಮನ ಅವತಾರ' ಇವರ ಚೊಚ್ಚಲ ಸಿನಿಮಾ ಕೂಡ ಹೌದು. ಈ ಚಿತ್ರದ ಮೂಲಕ ವಿಕಾಸ್ ನಿರ್ದೇಶಕರಾಗಿ ಸ್ಯಾಂಡಲ್ವುಡ್ನಲ್ಲಿ ಬಡ್ತಿ ಪಡೆದಿದ್ದಾರೆ.
'ಆಪರೇಷನ್ ಅಲಮೇಲಮ್ಮ' ಸಿನಿಮಾ ನಿರ್ಮಾಣ ಮಾಡಿದ್ದ ಅಮರೇಜ್ ಸೂರ್ಯವಂಶಿಯವರೇ ಈ ಸಿನಿಮಾವನ್ನೂ ನಿರ್ಮಾಣ ಮಾಡುತ್ತಿದ್ದಾರೆ. ರೋಮ್ಯಾಂಟಿಕ್ ಕಾಮಿಡಿ ಕಥೆಯುಳ್ಳ ಈ ಸಿನಿಮಾ ಪ್ರೇಕ್ಷಕರನ್ನು ರಂಜಿಸುವುದರಲ್ಲಿ ಡೌಟೇ ಇಲ್ಲ. ವಿಷ್ಣುಪ್ರಸಾದ್ ಹಾಗೂ ಸಮೀರ್ ದೇಶ್ಪಾಂಡೆ ಕ್ಯಾಮೆರಾ ವರ್ಕ್ ಇದೆ. ಉಡುಪಿ, ಬೆಂಗಳೂರು ಸುತ್ತುಮುತ್ತ 'ರಾಮನ ಅವತಾರ'ದ ಶೂಟಿಂಗ್ ನಡೆದಿದೆ. ಶೀಘ್ರದಲ್ಲೇ 'ರಾಮನ ಅವತಾರ'ವನ್ನು ತೆರೆಮೇಲೆ ನೋಡಬಹುದು.


Click it and Unblock the Notifications











