ಶ್ರುತಿ ಹರಿಹರನ್ ಮೇಲೆ ಗುರುಪ್ರಸಾದ್ಗ್ಯಾಕೆ ಕೋಪ? 'ರಂಗನಾಯಕ'ನ ಹಾಡಿನಲ್ಲಿ ಮೀಟು ಶ್ರುತಿ ಎಂದಿದ್ದೇಕೆ?
'ಮಠ', 'ಎದ್ದೇಳು ಮಂಜುನಾಥ' ಜೋಡಿಯ ಹೊಸ ಸಿನಿಮಾ 'ರಂಗನಾಯಕ'. ನವರಸ ನಾಯಕ ಜಗ್ಗೇಶ್ ಹಾಗೂ ಗುರುಪ್ರಸಾದ್ ಜೋಡಿ ಒಂದಾದ್ಮೇಲೆ ಚೇಷ್ಠೆ, ಕುಚೆಷ್ಟೇ ಇರಲೇಬೇಕು. ಹಾಗೇ 'ರಂಗನಾಯಕ' ಸಿನಿಮಾದ ಕನ್ನಡ ಹಾಡು ಕೂಡ ಇಂತಹದ್ದೇ ಒಂದು ವಿವಾದವನ್ನು ಮೈ ಮೇಲೆ ಎಳೆದುಕೊಂಡಿದೆ.
'ರಂಗನಾಯಕ' ಸಿನಿಮಾದಲ್ಲಿ ಕನ್ನಡದ ಕಂಪಿನ ಬಗ್ಗೆ ಹೇಳುವ ಹಾಡಿನಲ್ಲಿ ಬಿಗ್ಬಾಸ್ ಶ್ರುತಿ ಹಾಗೂ ಮೀಟು ಶ್ರುತಿ ಅನ್ನೋ ಪದಗಳನ್ನು ಬಳಸಲಾಗಿದೆ. ಇಲ್ಲಿ ಬಿಗ್ಬಾಸ್ ಶ್ರುತಿ ಅಂದರೆ ಹಿರಿಯ ನಟಿ ಶ್ರುತಿ ಹಾಗೂ ಮೀಟು ಶ್ರುತಿ ಅಂದರೆ, ಶ್ರುತಿ ಹರಿಹರನ್. ಇವರಿಬ್ಬರ ಹೆಸರನ್ನು ಗುರುಪ್ರಸಾದ್ ಹಾಡಿನಲ್ಲಿ ಬಳಸಿದ್ದೇಕೆ? ಅನ್ನೋ ಪ್ರಶ್ನೆಗೀಗ ಉತ್ತರ ಸಿಕ್ಕಿದೆ.

ತಾನು ಏನು ಹೇಳಬೇಕೋ ಅದನ್ನು ಫಿಲ್ಟರ್ ಇಲ್ಲದೆ ಹೇಳುವ ಗುರುಪ್ರಸಾದ್, ಈ ಸಿನಿಮಾದಲ್ಲಿ ಏನೋ ಹೇಳುವುದಕ್ಕೆ ಹೊರಟಿದ್ದಾರೆ. ಅದೇನು ಅನ್ನೋದನ್ನು ಫಿಲ್ಮಿ ಫಸ್ಟ್ ಯೂಟ್ಯೂಬ್ ಚಾನೆಲ್ನಲ್ಲಿ ಹೇಳಿಕೊಂಡಿದ್ದಾರೆ. ಇಬ್ಬರು ನಟಿಯರ ಹೆಸರು ಬಳಸಿದ್ದೇಕೆ? ಅನ್ನೋದನ್ನು ರಿವೀಲ್ ಮಾಡಿದ್ದಾರೆ. ಅಷ್ಟಕ್ಕೂ ಅಂತಹದ್ದೇನು ಹೇಳಿದ್ರು? ಅನ್ನೋದನ್ನು ತಿಳಿಯಲು ಮುಂದೆ ಓದಿ..
'ರಂಗನಾಯಕ' ಸಿನಿಮಾ ತನ್ನ ಮಹತ್ವಾಕಾಂಕ್ಷೆಯ ಸಿನಿಮಾ ಅಂತ ಹೇಳಿಕೊಂಡಿದ್ದಾರೆ. ಮುಂದಿನ ವರ್ಷಕ್ಕೆ ಗುರುಪ್ರಸಾದ್ ಇಂಡಸ್ಟ್ರಿಗೆ ಬಂದು 25 ವರ್ಷಗಳು ಪೂರೈಸಲಿವೆ. ಹೀಗಾಗಿ ಕನ್ನಡದ ಹಾಡೊಂದನ್ನು ಕೊಡಬೇಕು ಅಂತ ನಿರ್ಧರಿಸಿದ್ದರು. ಹಾಗಾಗಿ ಕನ್ನಡಕ್ಕೊಂದು ಹಾಡು ಕೊಡಲೇಬೇಕು ಅಂತ ಮಾಡಿರೋ ಹಾಡು ಎಂದು ಗುರುಪ್ರಸಾದ್ ಹೇಳಿಕೊಂಡಿದ್ದಾರೆ.
ಇದೇ ವೇಳೆ ಕನ್ನಡಕ್ಕೆ ಮೀಟು ಅಭಿಯಾನವನ್ನು ತಂದಿದ್ದಕ್ಕೆ ಶ್ರುತಿ ಹರಿಹರನ್ ವಿರುದ್ಧ ಗುರುಪ್ರಸಾದ್ ಅಸಮಾಧಾನ ಹೊರ ಹಾಕಿದ್ದಾರೆ. "ಈ ಹಾಡಲ್ಲಿ ಶ್ರುತಿ ಹೆಸರು ಯಾಕೆ ಬಂತು ಅಂದ್ರೆ, ಕನ್ನಡಕ್ಕೆ ಮೀಟು ಹಗರಣ ತಂದಿದ್ದರಲ್ಲಿ ಆಕೆನೇ ಫಸ್ಟ್. ಅವರು ಕನ್ನಡದವರು ಅಲ್ಲ. ಅವರ ತಂದೆ ತಾಯಿ ಮಲಯಾಳಂ ಹಾಗೂ ತಮಿಳು ಚಿತ್ರರಂಗದವರು. ಅವರು ಅರ್ಜುನ್ ಸರ್ಜಾ ಬಗ್ಗೆ ಎಲ್ಲ ಮಾತಾಡಿದಾಗ ಹೊಸತೇನೋ ತಂದಿಟ್ಟು ಬಿಟ್ರಲ್ಲ ಇಲ್ಲಿ. ನಿನಗೇನಾದ್ರೂ ಸಮಸ್ಯೆಯಿದ್ರೆ ಅವತ್ತೇ ಅವರ ಹೆಂಡತಿ ಹತ್ರ ಹೋಗಿ ಹೇಳಿದ್ರೆ ಮುಗಿದು ಹೋಗ್ತಿತ್ತು. ನಿನಗೆ ಅವಕಾಶ ಬೇಕಿತ್ತು ಅಂತ ಸಿನಿಮಾದಲ್ಲಿ ಆಕ್ಟ್ ಮಾಡಿಕೊಂಡು ಮೂರು ನಾಲ್ಕು ವರ್ಷ ಆದ್ಮೇಲೆ ಎಳೆದುಕೊಂಡು ಬಂದು ಮಾತಾಡೋದು ತಪ್ಪು ಅನ್ನೋದು ನನ್ನ ವಾದ." ಎಂದು ಫಿಲ್ಮಿ ಫಸ್ಟ್ನಲ್ಲಿ ಹೇಳಿಕೊಂಡಿದ್ದಾರೆ.

ಹಾಗೇ ಈ ಹಾಡಿನಲ್ಲಿ ಶ್ರುತಿ ಹೆಸರು ಯಾಕೆ ಬಂತು? ಅದನ್ನು ಬಳಿಸಿದ ಉದ್ದೇಶ ವೇನು ಅನ್ನೋದನ್ನು ಹೇಳಿದ್ದಾರೆ. "ಈ ಹಾಡಲ್ಲಿ ಸಂಗೀತಕ್ಕೆ ಶ್ರುತಿ ಎಷ್ಟು ಮುಖ್ಯ? ಶ್ರುತಿಯಲ್ಲಿ ಹಾಡು ಅಂತ ಕತ್ತೆಗೆ ಹೇಳಿದಂತೆ ರಂಗನಾಯಕ ಜಗ್ಗೇಶ್ ಅವರ ಪಾತ್ರ. ನಮ್ಮ ಹಾಡನ್ನು ಕೆಡಿಸಬೇಡ ಅಂತ ಪ್ರಯೋಗದಲ್ಲಿ ತರಲಾಗಿದೆ. ಮೊದಲು ನೆನಪಿಗೆ ಬರೋದು ಬಿಗ್ಬಾಸ್ ಶ್ರುತಿ. ಅವರನ್ನು ತಂದಿದ್ದು ಯಾಕೆ ಅಂದ್ರೆ, ಶ್ರುತಿ ಅಂದಾಗ ಇಬ್ಬರೇ ನೆನಪಿಗೆ ಬಂದಿದ್ದು. ಒಬ್ಬರು ಬಿಗ್ಬಾಸ್ ಶ್ರುತಿ ಮತ್ತು ಮೀಟು ಶ್ರುತಿ. ಅದನ್ನು ಹಾಸ್ಯವಾಗಿ ರೀಚ್ ಮಾಡಿಸೋಣ ಅನ್ನೋದು ಉದ್ದೇಶವಾಗಿತ್ತು." ಎಂದಿದ್ದಾರೆ.
ಇನ್ನು ನಿರೀಕ್ಷೆ ಮಾಡಿದಂತೆ 'ರಂಗನಾಯಕ' ಸಿನಿಮಾದ ಕನ್ನಡ ಹಾಡು ವಿಭಿನ್ನವಾಗಿದೆ. ಕನ್ನಡದ ಪ್ರಾಮುಖ್ಯತೆಯನ್ನು ಗುರುಪ್ರಸಾದ್ ಶೈಲಿಯಲ್ಲಿ ಪವರ್ಫುಲ್ ಆಗಿ ಹೇಳಲಾಗಿದೆ. ಕನ್ನಡದ ಬಗ್ಗೆ ಬರೆದ ಕೆಲವು ಸಾಲುಗಳು ಮಜವಾಗಿವೆ. "ಕನ್ನಡಿಗರ ಕೆಣಕಿದರೆ.. ನೀನು ಮುಟ್ಠಾಳ.. ಅಂತಾನೆ ವಾಟಾಳ..", "ಕರುಣಾಮಯಿ ಸಜ್ಜನರ ಸಾಧನೆಯ ಪೀಠ.." ಕನ್ನಡಿಗರ ಕೆಣಕಿದರೆ ಕಲೀತಿರಿ ಪಾಠ.. ಬಿತ್ತು ಬಗಣಿ ಗೂಟ..", "ಕತ್ತೆಗೆ ಏನು ಗೊತ್ತು ಕಸ್ತೂರಿ ಅಣ್ಣ.." ಅನ್ನೋ ಪದಗಳು ಕಿಕ್ ಕೊಡುತ್ತಿವೆ.


Click it and Unblock the Notifications











