ಹೊಸ ಅವತರಣಿಕೆಯಲ್ಲಿ 'ಜೈ ಶ್ರೀರಾಮ್' ಹಾಡು: ಶಂಕರ್ ಮಹದೇವನ್ ಕಂಠಕ್ಕೆ ಉಘೇ ಎಂದ ಫ್ಯಾನ್ಸ್
ರಾಮನವಮಿ ಹಬ್ಬದ ಸಂಭ್ರಮಕ್ಕೆ 'ರಾಬರ್ಟ್' ಚಿತ್ರತಂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಿಗೆ 'ರಾಮನವಿ ಪಾನಕ' ನೀಡಿದೆ. ಚಿತ್ರದ ಜೈ ಶ್ರೀರಾಮ್ ಹಾಡು ಸಕತ್ ವೈರಲ್ ಆಗಿತ್ತು. ದರ್ಶನ್ ಅಭಿಮಾನಿಗಳು ಟಿಕ್ಟಾಕ್ನಲ್ಲಿಯೂ ಈ ಹಾಡಿಗೆ ದರ್ಶನ್ ಶೈಲಿಯಲ್ಲಿ ಬಿಲ್ಲು ಬಾಣ ಹಿಡಿದು ಖುಷಿಪಟ್ಟಿದ್ದರು.
ಈಗ ಚಿತ್ರತಂಡ ಈ ಸಂಭ್ರಮವನ್ನು ದುಪ್ಪಟ್ಟುಗೊಳಿಸಿದೆ. ಜನರಿಗೆ ಕಿಕ್ ಕೊಡುವ ಹಾಡುಗಳಿಂದಲೇ ಜನಪ್ರಿಯರಾದ ಖ್ಯಾತ ಗಾಯಕ ಶಂಕರ್ ಮಹದೇವನ್ ಈ ಹಾಡಿಗೆ ಧ್ವನಿಯಾಗಿದ್ದಾರೆ. ಈ ಮೊದಲು ಬಿಡುಗಡೆಯಾದ ಲಿರಿಕಲ್ ವಿಡಿಯೋದ ಹಾಡನ್ನು ದಿವ್ಯ ಕುಮಾರ್ ಹಾಡಿದ್ದರು. ಅದು ವೈರಲ್ ಆಗಿತ್ತು. ಈಗ ಶಂಕರ್ ಮಹದೇವನ್ ಕಂಠದಲ್ಲಿ ಹೊಸ ಅವತರಣಿಕೆಯಲ್ಲಿ ಹಾಡು ಮೂಡಿದೆ. ಮುಂದೆ ಓದಿ...

ಭರ್ಜರಿ ಹಿಟ್ ಆದ ಹಾಡು
ಶಂಕರ್ ಮಹದೇವನ್ ಹಾಡಿರುವ ಹಾಡು ಯೂಟ್ಯೂಬ್ನಲ್ಲಿ ಬಿಡುಗಡೆಯಾದ ಎರಡೇ ಗಂಟೆಯಲ್ಲಿ ಎರಡು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದೆ. 39 ಸಾವಿರಕ್ಕೂ ಹೆಚ್ಚು ಮಂದಿ ಹಾಡನ್ನು ಲೈಕ್ ಮಾಡಿದ್ದಾರೆ. ಈ ಹಾಡಿಗೆ ಮಿಲಿಯನ್ಗಟ್ಟಲೆ ವ್ಯೂವ್ಸ್ ತರುವುದು ಅಭಿಮಾನಿಗಳ ಉದ್ದೇಶ.

ಶಂಕರ್ ಮಹದೇವನ್ ಕಂಠದ ಗಮ್ಮತ್ತು
ಅರ್ಜುನ್ ಜನ್ಯ ಸಂಗೀತದಲ್ಲಿ ವಿ. ನಾಗೇಂದ್ರ ಪ್ರಸಾದ್ ಬರೆದ ಹಾಡು ಈಗಾಗಲೇ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿತ್ತು. ಅದಕ್ಕೆ ಶಂಕರ್ ಮಹದೇವನ್ ಗಾಯನ ಸೇರಿದ್ದು ಅವರಿಗೆ ಮತ್ತಷ್ಟು ಸಂತಸ ನೀಡಿದೆ. ಈಗ ಈ ಹಾಡಿಗೆ ಇನ್ನಷ್ಟು ಗತ್ತು ಸಿಕ್ಕಿದೆ ಎಂದು ಹೊಗಳಿದ್ದಾರೆ.

ದರ್ಶನ್ ರಾಮನವಮಿ ಸಂದೇಶ
ನಟ ದರ್ಶನ್ ಶ್ಲೋಕವೊಂದರ ಮೂಲಕ ಅಭಿಮಾನಿಗಳಿಗೆ ರಾಮನವಮಿಯ ಸಂದೇಶ ನೀಡಿದ್ದಾರೆ. ಜತೆಗೆ ಮನೆಯಲ್ಲಿಯೇ ಇರಿ, ಸುರಕ್ಷಿತರಾಗಿರಿ ಎಂದು ಹೇಳುವುದನ್ನು ಅವರು ಮರೆತಿಲ್ಲ.
ನಿಮಗಾಗಿ ಈ ಹಾಡು
ಕಪಿವರ ಸಂತತಿ ಸಂಸ್ತುತ ರಾಮ| ತದ್ಗತಿ ವಿಘ್ನಧ್ವಂಸಕ ರಾಮ|| ಲಂಕಾಖ್ಯಾರ್ಪಿತ ವೈಭವ ರಾಮ| ಸೀತಾಪ್ರಾಣಾಧಾರಕ ರಾಮ|| ಎಂಬ ಶ್ಲೋಕ ಹಂಚಿಕೊಂಡಿರುವ ದರ್ಶನ್, ರಾಬರ್ಟ್ ಚಿತ್ರದ ಹೊಸ ಅವತರಣಿಕೆಯ ಹಾಡು ನಿಮಗಾಗಿ ಎಂದು ಅದರ ಲಿಂಕ್ ಹಂಚಿಕೊಂಡಿದ್ದಾರೆ.


Click it and Unblock the Notifications











