ಶಿವಾಜಿ ಕೇಸ್ ತಗೊಂಡ್ರೆ "ಒಂದಾ ಜೈಲಿಗೆ.. ಇಲ್ಲಾ ಸ್ಮಶಾನಕ್ಕೆ".. ಆದರೂ ಈ ಹಾಡು ಅಮೃತವರ್ಷಿಣಿ ನೆನಪಿಸುತ್ತೆ
ರಮೇಶ್ ಅರವಿಂದ್ ನಟಿಸಿದ್ದ 'ಶಿವಾಜಿ ಸುರತ್ಕಲ್' ಸಿನಿಮಾ ಸಿನಿಪ್ರಿಯರಿಗೆ ಬಹಳ ಹಿಡಿಸಿತ್ತು. ಹೀಗಾಗಿಯೇ ಮತ್ತೆ ಪ್ರೇಕ್ಷಕರನ್ನು ರಂಜಿಸಲೆಂದೇ ಶಿವಾಜಿ ಮತ್ತೆ ಬರುತ್ತಿದ್ದಾನೆ. ಮತ್ತೊಂದು ಇಂಟ್ರೆಸ್ಟಿಂಗ್ ಕೇಸ್ನೊಂದಿಗೆ ಶಿವಾಜಿ ಸಿಕ್ಕಾಪಟ್ಟೆ ಸಜ್ಜಾಗಿ ನಿಂತಿದ್ದಾನೆ.
'ಶಿವಾಜಿ ಸುರತ್ಕಲ್' ಸಿನಿಮಾವನ್ನು ಆಕಾಶ್ ಶ್ರೀವತ್ಸ ನಿರ್ದೇಶಿಸಿದ್ದರು. ಮೊದಲ ಪ್ರಯತ್ನದಲ್ಲೇ ಗೆಲುವಿನ ನಗೆ ಬೀರಿರುವ ಆಕಾಶ್ 'ಶಿವಾಜಿ ಸುರತ್ಕಲ್ 2'ಗೂ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಸಿನಿಮಾವನ್ನು ರೇಖಾ ಕೆ.ಎನ್ ಹಾಗೂ ಅನೂಪ್ ಗೌಡ ನಿರ್ಮಾಣ ಮಾಡಿದ್ದಾರೆ.

ರಮೇಶ್ ಅರವಿಂದ್ ಪ್ರಮುಖ ಪಾತ್ರದಲ್ಲಿ ನಟಿಸಿರುವ 'ಶಿವಾಜಿ ಸುರತ್ಕಲ್ 2' ಸಿನಿಮಾ ಕುತೂಹಲವನ್ನು ಮೂಡಿಸಿದೆ. ಸದ್ಯಕ್ಕೀಗ ಈ ಸಿನಿಮಾದ 'ಟ್ವಿಂಕಲ್' ಅನ್ನೋ ಹಾಡನ್ನು ಚಿತ್ರತಂಡ ರಿಲೀಸ್ ಮಾಡಿದೆ. ನಿರ್ದೇಶಕ ಆಕಾಶ್ ಶ್ರೀವತ್ಸ ಅವರೇ ಬರೆದಿರುವ ಈ ಹಾಡಿಗೆ ಜೂಡಾ ಸ್ಯಾಂಡಿ ಸಂಗೀತ ನೀಡಿದ್ದಾರೆ. ಇಶಾ ಸುಚಿ ಹಾಗೂ ಜೂಡಾ ಸ್ಯಾಂಡಿ ಧ್ವನಿ ನೀಡಿದ್ದಾರೆ.
'ಶಿವಾಜಿ ಸುರತ್ಕಲ್ 2 ' ಸಿನಿಮಾ ಬಗ್ಗೆ ರಮೇಶ್ ಅರವಿಂದ್ ಫುಲ್ ಖುಷಿಯಾಗಿದ್ದಾರೆ. " ಶಿವಾಜಿ ಸುರತ್ಕಲ್ 1 ಅನ್ನು ನಾವು ಹಾಗೂ ರಾಹುಲ್ ದ್ರಾವಿಡ್ ಕುಟುಂಬದವರು ಇದೇ ಜಾಗದಲ್ಲಿ ಒಟ್ಟಿಗೆ ಕೂತು ವೀಕ್ಷಿಸಿದ್ದೆವು. ಈಗ 'ಶಿವಾಜಿ ಸುರತ್ಕಲ್ 2' ತೆರೆಗೆ ಬರಲು ಸಿದ್ದವಾಗಿದೆ. ಶಿವಾಜಿ ಯಾವುದಾದರೂ ಕೇಸ್ ತೆಗೆದುಕೊಂಡರೆ , ಒಂದಾ ಜೈಲಿಗೆ , ಇಲ್ಲವಾ ಸ್ಮಶಾನಕ್ಕೆ ಎಂದೇ ಪ್ರಸಿದ್ದಿ. 'ಶಿವಾಜಿ ಸುರತ್ಕಲ್ ೨' ಈ ಸಿನಿಮಾದದಲ್ಲಿ ಶಿವಾಜಿ ಯಾವ ಕೇಸ್? ತೆಗದುಕೊಳ್ಳುತ್ತಾನೆ ಎಂಬ ಕುತೂಹಲಕ್ಕೆ ಸದ್ಯದಲ್ಲೇ ಉತ್ತರ ಸಿಗಲಿದೆ." ಎಂದು ಹಾಡು ಬಿಡುಗಡೆಯ ಬಳಿಕ ನಟ ರಮೇಶ್ ಅರವಿಂದ್ ಅಭಿಪ್ರಾಯ ಪಟ್ಟಿದ್ದಾರೆ.
'ಶಿವಾಜಿ ಸುರತ್ಕಲ್ 2 ' ಸಿನಿಮಾದ ಮೊದಲ ಹಾಡು ರಿಲೀಸ್ ಆಗಿದೆ. ನಟಿ ಸಂಗೀತ ಶೃಂಗೇರಿ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಜೂಡ ಸ್ಯಾಂಡಿ ಅದ್ಭುತವಾಗಿ ಟ್ಯೂನ್ ಹಾಕಿದ್ದಾರೆ. "ಈ ಹಾಡಿನಲ್ಲಿ ಕಾಣಿಸಿಕೊಂಡಿರುವ ರಮೇಶ್ ಅವರು, ಜೀಪ್ನಲ್ಲೂ ಸಹ ಕಾಣಿಸಿಕೊಳ್ಳುತ್ತಾರೆ. ಈ ಕುತೂಹಲ ಸದ್ಯಕ್ಕೆ ಹಾಗೆ ಇರಲಿ. ಏಪ್ರಿಲ್ 14 ಚಿತ್ರ ಬಿಡುಗಡೆಯಾಗುತ್ತಿದೆ ಅಂದು ಆ ಕುತೂಹಲಕ್ಕೆ ಉತ್ತರ ಸಿಗಲಿದೆ." ಎನ್ನುತ್ತಾರೆ ನಿರ್ದೇಶಕ ಆಕಾಶ್ ಶ್ರೀವತ್ಸ.

'ಶಿವಾಜಿ ಸುರತ್ಕಲ್ 2 ' ಸಿನಿಮಾ ಬಗ್ಗೆ ಇಡೀ ಚಿತ್ರತಂಡಕ್ಕೆ ಸಿಕ್ಕಾಪಟ್ಟೆ ಭರವಸೆಯಿದೆ. ನಿರ್ಮಾಪಕ ಅನೂಪ್ ಗೌಡಗಂತೂ ಈ ಸಿನಿಮಾ 'ಅಮೃತ ವರ್ಷಿಣಿ' ನೋಡಿದಂತೆ ಭಾಸವಾಗುತ್ತಿದೆ ಎಂದಿದ್ದಾರೆ. ಹೀಗಾಗಿ ಸಿನಿಮಾ ಎಮೋಷನಲ್ ಕಮ್ ಥ್ರಿಲ್ಲಿಂಗ್ ಆಗಿರುತ್ತೆ ಎಂದು ನಿರೀಕ್ಷೆ ಮಾಡಬಹುದು.
ಅಂದ್ಹಾಗೆ 'ಶಿವಾಜಿ ಸುರತ್ಕಲ್ 2 ' ಸಿನಿಮಾದಲ್ಲಿ ಐದು ಹಾಡುಗಳಿವೆ. ಸದ್ಯಕ್ಕೀಗ ಮೊದಲ ಹಾಡು ಬಿಡುಗಡೆಯಾಗಿದೆ. ರಮೇಶ್ ಅರವಿಂದ್ ಜೊತೆ ಈ ಸಿನಿಮಾದಲ್ಲಿ ರಾಧಿಕಾ ನಾರಾಯಣ್, ಮೇಘನಾ ಗಾಂವ್ಕರ್, ಹಾಡಿನಲ್ಲಿ ನಟಿಸಿರುವ ಸಂಗೀತ ಶೃಂಗೇರಿ, ರಘು ರಮಣಕೊಪ್ಪ, ವಿನಾಯಕ್ ಜೋಶಿ ಸೇರಿದಂತೆ ಹಲವರು ನಟಿಸಿದ್ದಾರೆ.


Click it and Unblock the Notifications











