ಗಾಯಕಿ ಶ್ರೇಯಾ ಘೋಷಾಲ್ಗೆ ಕನ್ನಡ ಹಾಡುಗಳಂದ್ರೆ ಅಸಡ್ಡೆನಾ?; 'ಸಂಜು ವೆಡ್ಸ್ ಗೀತಾ 2' ತಂಡದ ಆರೋಪವೇನು?
ಬಾಲಿವುಡ್ ಗಾಯಕಿಯಾಗಿದ್ದರೂ ದಕ್ಷಿಣ ಭಾರತದಲ್ಲಿ ಇವರಿಗೆ ಸಿಕ್ಕಷ್ಟು ಜನಪ್ರಿಯತೆ ಬೇರೆ ಯಾರಿಗೂ ಸಿಕ್ಕಿಲ್ಲ. ಸೋನು ನಿಂಗಂ ಹಾಗೂ ಶ್ರೇಯಾ ಘೋಷಾಲ್ ಇಬ್ಬರಿಗೂ ಕನ್ನಡದಲ್ಲಿ ವಿಶೇಷವಾದ ಸ್ಥಾನ ಮಾನವಿದೆ. ಆದರೆ, ಇತ್ತೀಚೆಗೆ ಗಾಯಕಿ ಶ್ರೇಯಾ ಘೋಷಾಲ್ ವಿರುದ್ಧ ಕನ್ನಡದ ಫಿಲ್ಮ್ ಮೇಕರ್ಸ್ ಗಂಭೀರ ಆರೋಪಗಳನ್ನು ಮಾಡುತ್ತಿದ್ದಾರೆ.
ಕನ್ನಡದಲ್ಲಿ ಶ್ರೇಯಾ ಘೋಷಾಲ್ ಹಾಡಿದ ಬಹುತೇಕ ಸಿನಿಮಾ ಹಾಡುಗಳು ಹಿಟ್ ಲಿಸ್ಟ್ ಸೇರಿವೆ. ಕನ್ನಡದ ಸಂಗೀತ ನಿರ್ದೇಶಕರು ಶ್ರೇಯಾ ಘೋಷಾಲ್ ಅವರನ್ನು ಗಮನದಲ್ಲಿಟ್ಟುಕೊಂಡೇ ಕೆಲವು ಹಾಡುಗಳನ್ನು ಕಂಪೋಸ್ ಮಾಡುತ್ತಿದ್ದಾರೆ. ಮೆಲೋಡಿ ಹಾಡುಗಳು ಅಂತ ಬಂದಾಗ ಇವತ್ತಿಗೂ ಸಂಗೀತ ನಿರ್ದೇಶಕರ ಮೊದಲ ಆಯ್ಕೆ ಶ್ರೇಯಾ ಘೋಷಾಲ್.

ಆದರೆ, ಈ ಗಾಯಕಿ ಕನ್ನಡದ ಹಾಡುಗಳನ್ನು ಹಾಡುವುದಕ್ಕೆ ಇತ್ತೀಚೆಗೆ ನಿರ್ಲಕ್ಷ್ಯ ತೋರುತ್ತಿದ್ದಾರೆಂದು 'ಸಂಜು ವೆಡ್ಸ್ ಗೀತಾ 2' ತಂಡ ಆರೋಪ ಮಾಡಿದೆ. ಈ ಸಿನಿಮಾ ಒಂದು ಹಾಡನ್ನು ಶ್ರೇಯಾ ಘೋಷಾಲ್ ಹಾಡಬೇಕಿತ್ತು. ಆದರೆ, ಅವರಿಗಾಗಿ ಆರು ತಿಂಗಳು ಕಾದರೂ ಹಾಡುವುದಕ್ಕೆ ಮನಸ್ಸು ಮಾಡಿಲ್ಲ. ಅವರ ಮ್ಯಾನೇಜರ್ ಕನ್ನಡ ಹಾಡುಗಳನ್ನು ಹಾಡುವುದಕ್ಕೆ ಅವರು ಆಸಕ್ತಿ ತೋರುತ್ತಿಲ್ಲ ಅಂದರು ಎಂದು ಇತ್ತೀಚೆಗೆ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಗಂಭೀರ ಆರೋಪ ಮಾಡಿದ್ದಾರೆ.
'ಸಂಜು ವೆಡ್ಸ್ ಗೀತಾ 2' ಸಿನಿಮಾ ಸಂಗೀತ ನಿರ್ದೇಶಕ ಶ್ರೀಧರ್ ವಿ. ಸಂಭ್ರಮ್ ಹಾಗೂ ನಿರ್ದೇಶಕ ನಾಗಶೇಖರ್ ಇಬ್ಬರೂ ಶ್ರೇಯಾ ಘೋಷಾಲ್ ವಿರುದ್ಧ ತಿರುಗಿಬಿದ್ದಿದ್ದಾರೆ. ಅವರಿಂದ ಹಾಡು ಹಾಡಿಸುವುದಕ್ಕೆ ಪ್ರಯತ್ನ ಪಟ್ಟೆವು. ಆದರೆ ನಮ್ಮಿಂದ ಅದು ಸಾಧ್ಯವಾಗಿಲ್ಲ ಎಂದು ಸಂಗೀತ ನಿರ್ದೇಶಕ ಶ್ರೀಧರ್ ವಿ.ಸಂಭ್ರಮ್ ಹೇಳಿದ್ದಾರೆ.
"ಶ್ರೇಯಾ ಘೋಷಾಲ್ ಅನ್ನುವ ಹೆಸರಾಂತ ಗಾಯಕಿ ಸಾಕಷ್ಟು ಕನ್ನಡದ ಹಾಡುಗಳನ್ನು ವೇಟಿಂಗ್ ಲಿಸ್ಟ್ನಲ್ಲಿ ಇಟ್ಟಿದ್ದರು. ಅಂದರೆ, ಹಾಡೋದಿಲ್ಲ ಅಂತಾನೂ ಹೇಳುತ್ತಿಲ್ಲ. ಹಾಡುತ್ತೇನೆ ಅಂತಾನೂ ಹೇಳುತ್ತಿಲ್ಲ. ಒಂದು ವರ್ಷ ವೇಟಿಂಗ್ ಲಿಸ್ಟ್ನಲ್ಲಿ ಇಟ್ಟರೆ ಇನ್ನೇನು ಅಂದುಕೊಳ್ಳಬೇಕು. ಸಂಗೀತ ನಿರ್ದೇಶಕರಾಗಿ ನಮಗೆ ಸ್ವಲ್ಪ ಬೇಸರನೇ ಆಗಿದೆ. ಅವರು ಯಾವುದೇ ಕನ್ನಡದ ಸಂಗೀತ ನಿರ್ದೇಶಕರಿಗಾಗಿ ಹಾಡುತ್ತಿಲ್ಲ." ಎಂದು ಸಂಗೀತ ನಿರ್ದೇಶಕ ಶ್ರೀಧರ್ ವಿ. ಸಂಭ್ರಮ್ ಬೇಸರ ಹೊರ ಹಾಕಿದ್ದಾರೆ.

ದಕ್ಷಿಣ ಭಾರತದಲ್ಲಿ ಶ್ರೇಯಾ ಘೋಷಾಲ್ ಮೊದಲ ಹಾಡಿದ್ದೇ ಕನ್ನಡದಲ್ಲಿ. ಅಲ್ಲಿಂದ ತಮಿಳು, ತೆಲುಗು, ಮಲಯಾಳಂ ಸಿನಿಮಾಗಳಿಗೆ ಹಾಡುತ್ತಿದ್ದಾರೆ. "ಯಾಕೆ ಈ ಮಾತು ಬರುತ್ತಿದೆ ಅಂದರೆ, ಕನ್ನಡದಲ್ಲಿ ಸಾಕಷ್ಟು ಕನ್ನಡ ಹಾಡುಗಳನ್ನು ಹಾಡಿ ಜನಪ್ರಿಯತೆ ಪಡೆದುಕೊಂಡಿದ್ದಾರೆ. ನಂತರ, ತಮಿಳು, ತೆಲುಗು ಹಾಡಿದ್ದಾರೆ. ಈಗ ಮಲಯಾಳಂನ ಬಹಳ ಸಿನಿಮಾಗಳಿಗೆ ಹಾಡುತ್ತಿದ್ದಾರೆ. ಆದರೆ, ಕನ್ನಡ ಸಿನಿಮಾಗೆ ಯಾಕೆ? " ಎಂದು ಸಂಗೀತ ನಿರ್ದೇಶಕ ಶ್ರೀಧರ್ ವಿ. ಸಂಭ್ರಮ್ ಹೇಳಿದ್ದಾರೆ.
ಇದೇ ವಿಶೇಷಕ್ಕೆ ಸಂಬಂಧಿಸಿದಂತೆ 'ಸಂಜು ವೆಡ್ಸ್ ಗೀತಾ 2' ಸಿನಿಮಾದ ನಿರ್ದೇಶಕ ನಾಗಶೇಖರ್ ಕೂಡ ಇದೇ ಆರೋಪ ಮಾಡುತ್ತಿದ್ದಾರೆ. "ನಾವು ಆಡಿಯೋ ಸೇಲ್ ಮಾಡಬೇಕಾದರೆ, ಅಗ್ರಿಮೆಂಟ್ ಮಾಡಿಕೊಂಡಿರುತ್ತೇವೆ. ಯಾವ ಹಾಡನ್ನು ಯಾರು ಬರೆಯುತ್ತಾರೆ? ಆ ಹಾಡಿನ ಹೆಸರೇನು? ಯಾವ ಹಾಡಿಗೆ ಯಾರು ಧ್ವನಿಯಾಗುತ್ತಾರೆ? ಅಂತ ಅಗ್ರಿಮೆಂಟ್ ಮಾಡಿ ಸಹಿ ಮಾಡಿರುತ್ತೇವೆ. ಒಂದು ಹಾಡನ್ನು ಶ್ರೇಯಾ ಘೊಷಾಲ್ ಹಾಡುತ್ತಾರೆ ಅಂತ ಹೇಳಿ ಸಹಿ ಹಾಕಿ ಬಂದಿದ್ದೆ. ಆ ಕಾರಣಕ್ಕೆ ಶ್ರೇಯಾ ಘೋಷಾಲ್ ಅವರು ಬೇಕೇ ಬೇಕು ಅಂತ ಹೇಳಿದ್ದೆ. ಸಂಗೀತ ನಿರ್ದೇಶಕರು ನಾನು ಪ್ರಯತ್ನ ಮಾಡಿದ್ದು ಮುಗಿದಿದೆ. ನೀವು ಮಾಡಿ ಅಂತ ಹೇಳಿದ್ದರು. ಆಗ ನಾನು ಪ್ರಯತ್ನ ಮಾಡಿದ್ದು ಹೌದು." ಎಂದು ನಾಗಶೇಖರ್ ಹೇಳಿದ್ದಾರೆ.
ನಾಗಶೇಖರ್ ನಿರ್ದೇಶಿಸಿದ 'ಸಂಜು ವೆಡ್ಸ್ ಗೀತಾ' ಪಾರ್ಟ್ 1 ಗೂ ಶ್ರೇಯಾ ಘೋಷಾಲ್ ಹಾಡಿದ್ದರು. ಆ ಸಿನಿಮಾದ ಹಾಡುಗಳಿಗೆ ಅವಾರ್ಡ್ ಕೂಡ ಬಂದಿತ್ತು ಎಂದು ನಾಗಶೇಖರ್ ನೆನಪಿಸಿಕೊಳ್ಳುತ್ತಾರೆ. "ನಾಗಶೇಖರ್ ಸಿನಿಮಾದಿಂದ ಎಷ್ಟು ಅವಾರ್ಡ್ ಬಂದಿದೆ. ಗಗನವೇ ಬಾರೆ ಹಾಡಿಗೆ ಎಷ್ಟು ಅವಾರ್ಡ್ ಬಂದಿದೆ. ಅದೇ ಸಿನಿಮಾದಲ್ಲಿ ಪ್ರೇಮದ ಪೂಜಾರಿ ಅಂತ ಒಂದು ಸಾಂಗ್ ಹಾಡಿಸಿದ್ವಿ. ಅದೆಲ್ಲ ಕಳಿಸಿ, ತೆಲುಗಿನ ಗುರ್ತುಂದಾ ಸೀತಾಕಾಲ ಸಿನಿಮಾದ ಒಂದು ಹಾಡನ್ನು ಹಾಡಿದ್ದರು. ಅದನ್ನು ಕಳಿಸಿ, ನಮಗೆ ಇಷ್ಟು ಸಿನಿಮಾದಲ್ಲಿ ಹಾಡಿದ್ದಾರೆ. ಶ್ರೇಯಾ ಘೋಷಾಲ ಹಾಡುತ್ತಾರೆ ಅನ್ನೋದನ್ನು ಗಮನದಲ್ಲಿ ಇಟ್ಕೊಂಡು ಒಂದು ಮೆಲೋಡಿ ಹಾಡನ್ನು ಕಂಪೋಸ್ ಮಾಡಿದ್ದೇವೆ ಅಂದೆ. ಅದಕ್ಕೆ ಅವರ ಮ್ಯಾನೇಜರ್ ಕೇಳಿ ಕೇಳಿ ಸಾಕಾಗಿದೆ. ಅವರು ಕನ್ನಡ ಸಾಂಗ್ ಹಾಡುವುದಿಲ್ಲ ಅಂತಾರೆ ಅಂದರು." ಎಂದು ಪತ್ರಿಕಾಗೋಷ್ಠಿಯಲ್ಲಿ ಬಹಿರಂಗ ಪಡಿಸಿದ್ದರು.


Click it and Unblock the Notifications











