ಆರರ ಪೋರನಿಗೆ ಹೊಸ ದುನಿಯಾ ಕೊಟ್ಟ ವಿಜಯ್
ತನ್ನ ತಂದೆ ತಾಯಿ ಮಾಡಿದ ತಪ್ಪಿಗೆ ಜೈಲುವಾಸ ಅನುಭವಿಸುತ್ತಿದ್ದ ಆರು ವರ್ಷದ ಬಾಲಕನ ಪಾಲಿಗೆ ದುನಿಯಾ ವಿಜಯ್ ಹೀರೋ ಆಗಿದ್ದಾರೆ. ಈ ಆರು ವರ್ಷದ ಪುಟ್ಟ ಬಾಲಕ ಐದು ತಿಂಗಳ ಮಗುವಿನಿಂದ ಜೈಲು ಶಿಕ್ಷೆ ಅನುಭವಿಸುತ್ತಿದ್ದ.ಈ ಹುಡುಗನ ತಂದೆತಾಯಿ ವಿನೋದ್ ಶರ್ಮ ಮತ್ತು ಕಲ್ಯಾಣಿ.
ಮಗುವಿನ ತಂದೆತಾಯಿ ಗೋವಾದಿಂದ ಬೆಂಗಳೂರಿಗೆ ಬಂದು ನೆಲೆಸಿದ್ದರು. ಮೋಸ ಮತ್ತು ವಂಚನೆ ಪ್ರಕರಣಕ್ಕಾಗಿ ಪೊಲೀಸರು ಐದು ವರ್ಷಗಳ ಹಿಂದೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ದಂಪತಿಗಳನ್ನು ಬಂಧಿಸಿದ್ದರು. ಈ ಬಾಲಕ ಆಗ ಐದು ತಿಂಗಳ ಹಸುಗೂಸು. ಹಾಗಾಗಿ ತಾಯಿ ಜೊತೆ ಇರಲು ಪೊಲೀಸರು ಅವಕಾಶ ನೀಡಿದ್ದರು. ಈ ದಂಪತಿಗಳಿಗೆ ಇನ್ನು ಎರಡು ಮಕ್ಕಳಿದ್ದು ಅವು ಎನ್ ಜಿ ಓ ಒಂದರಲ್ಲಿ ಆಶ್ರಯ ಪಡೆದಿವೆ.
ಮಗುವಿನ ತಾಯಿ ಮತ್ತು ಮಗುವನ್ನು ಪರಪ್ಪನ ಅಗ್ರಹಾರ ಜೈಲಿನಿಂದ ಬಿಡಿಸಲು ರು. 93,000 ಸಾವಿರ ಭದ್ರತೆ ಹಣ ಕಟ್ಟ ಬೇಕಾಗಿತ್ತು. ಮಗು ಮತ್ತು ತಾಯಿಯ ಹಿನ್ನಲೆ ಅರಿತ ವಿಜಯ್ ಬುಧವಾರ (ಸೆ .7) ಜೈಲಿಗೆ ತೆರಳಿ ಭದ್ರತೆ ಹಣ ಕಟ್ಟಿ ತಾಯಿ ಮತ್ತು ಮಗುವನ್ನು ಬಂಧಮುಕ್ತ ಗೊಳಿಸಿದ್ದಾರೆ.
ದೇವರು ನನಗೆ ಸ್ವಲ್ಪ ಮಟ್ಟಿನ ಸಹಾಯ ಮಾಡಲು ಶಕ್ತಿ ನೀಡಿದ್ದಾನೆ. ಮಗುವಿನ ಆರೋಗ್ಯ ಸರಿಯಿಲ್ಲ, ಯಾವುದೇ ತಪ್ಪು ಮಾಡದ ಮಗು ಜೈಲು ಶಿಕ್ಷೆ ಅನುಭವಿಸುತ್ತಿರುವುದು ಕೇಳಲ್ಪಟ್ಟೆ. ಅದಕ್ಕಾಗಿ ಈ ಕಿರು ಸಹಾಯ ಮಾಡುತ್ತಿದ್ದೇನೆ ಎಂದು ಭಾವೋದ್ವೇಗಕ್ಕೆ ಒಳಗಾಗಿ ವಿಜಯ್ ಹೇಳಿದ್ದಾರೆ.
ವಿಜಯ್ ಈ ರೀತಿ ಮಾನವೀಯತೆ ಮೆರೆಯುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಶೂಟಿಂಗ್ ಸಮಯದಲ್ಲಿ ಉತ್ತರಕರ್ನಾಟಕದ ಭಾಗದ ಹಳ್ಳಿಯೊಂದಕ್ಕೆ ತೆರಳಿ ಸಾಲದಿಂದ ಬಳಲುತ್ತಿದ್ದ ರೈತ ಕುಟುಂಬವೊಂದಕ್ಕೆ ಸಹಾಯ ಮಾಡಿದ್ದರು. (ದಟ್ಸ್ಕನ್ನಡ ಸಿನಿವಾರ್ತೆ)


Click it and Unblock the Notifications











