ಹಾಡಿಗೆ ಅಣಿಯಾದ ಮಳೆಯಲಿ ಜೊತೆಯಲಿ
ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದಲ್ಲಿ ಮೂಡಿ ಬರುತ್ತಿರುವ 'ಮಳೆಯಲಿ ಜೊತೆಯಲಿ' ಚಿತ್ರಕ್ಕೆ ಸಕಲೇಶಪುರ ಹಾಗೂ ಮೈಸೂರು ನಗರಗಳಲ್ಲಿ ಮಾತಿನ ಭಾಗದ ಚಿತ್ರೀಕರಣ ಮುಕ್ತಾಯವಾಗಿದೆ ಎಂದು ನಿರ್ಮಾಪಕಿ ಶಿಲ್ಪಾಗಣೇಶ್ ತಿಳಿಸಿದ್ದಾರೆ. ಈ ತಿಂಗಳ 16ರಂದು ಬೆಂಗಳೂರು ನಗರದಲ್ಲಿ ಹಾಡಿನ ಚಿತ್ರೀಕರಣಕ್ಕೆ ಚಾಲನೆ ದೊರಕಲಿದೆ.
ನಟನೆಗೆ ಮೀಸಲಾಗಿದ್ದ ನಾಯಕ ಗಣೇಶ್ ಈ ಚಿತ್ರದ ಗೀತೆಯೊಂದಕ್ಕೆ ಧ್ವನಿ ನೀಡುವುದರೊಂದಿಗೆ ಗಾಯಕನಾಗೂ ಪರಿಚಯವಾಗುತ್ತಿದ್ದಾರೆ. ರಮಣೀಯ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಿರುವ ನಿರ್ದೇಶಕ ಪ್ರೀತಂಗುಬ್ಬಿ, ಮಾತಿನ ಭಾಗದ ಚಿತ್ರೀಕರಣ ಕಲಾವಿದ ಹಾಗೂ ತಂತ್ರಜ್ಞರ ಸಹಕಾರದಿಂದ ನಿಗದಿತ ಯೋಜನೆಯಂತೆ ಪೂರ್ಣವಾಗಿದೆ ಎಂದಿದ್ದಾರೆ.
ಗೋಲ್ಡನ್ ಮೂವೀಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ನಿರ್ದೇಶಕರೇ ಕಥೆ, ಚಿತ್ರಕಥೆ ಬರೆದಿದ್ದಾರೆ. ಕೃಷ್ಣ ಛಾಯಾಗ್ರಹಣ, ವಿ.ಹರಿಕೃಷ್ಣ ಸಂಗೀತ, ದೀಪು ಎಸ್ ಕುಮಾರ್ ಸಂಕಲನ, ದೇವಶೆಟ್ಟಿ ಮಹೇಶ್ ಸಂಭಾಷಣೆ, ಕವಿರಾಜ್, ಜಯಂತ್ ಕಾಯ್ಕಿಣಿ ಗೀತರಚನೆ ಹಾಗೂ ಮೋಹನ್ ಕಲಾ ನಿರ್ದೇಶನವಿರುವ ಚಿತ್ರದ ತಾರಾಬಳಗದಲ್ಲಿ ಗಣೇಶ್, ಅಂಜನಾ ಸುಖಾನಿ, ಯುವಿಕಾ ಚೌಧರಿ, ಸಿಹಿಕಹಿಚಂದ್ರು, ಸಿಹಿಕಹಿಗೀತಾ, ರಂಗಾಯಣ ರಘು, ಶರಣ್, ದತ್ತಣ್ಣ ಮುಂತಾದವರಿದ್ದಾರೆ.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications











