ಅಣ್ಣಾವ್ರ 'ಕಸ್ತೂರಿನಿವಾಸ' ಚಿತ್ರದ ಹಿಂದಿನ ಸತ್ಯಕಥೆ

1970 ರಲ್ಲಿ ತಮಿಳು ಕಥೆಗಾರ ಜಿ ಬಾಲಸುಬ್ರಮಣ್ಯಂ ಎನ್ನುವವರು ಈ ಕಥೆಯನ್ನು ಬರೆದು 25ಸಾವಿರ ರೂಪಾಯಿಗೆ ನೂರ್ ಸಾಹೇಬ್ ಅನ್ನುವವರಿಗೆ ಮಾರಾಟ ಮಾಡಿದ್ದರು. ನೂರ್ ಸಾಹೇಬ್ ಕೆ.ಶಂಕರ್ ನಿರ್ದೇಶನದಲ್ಲಿ ಶಿವಾಜಿ ಗಣೇಶನ್ ಅವರನ್ನು ಮುಖ್ಯ ಭೂಮಿಕೆಯಲ್ಲಿ ಹಾಕಿಕೊಂಡು ಚಿತ್ರ ನಿರ್ಮಿಸಲು ನಿರ್ಧರಿಸಿದರು. ಆದರೆ ಪ್ರೀತಿ, ತ್ಯಾಗದ ಕಥೆ ಇದಾಗಿರುವುದರಿಂದ ಹಾಗೂ ಅಭಿಮಾನಿಗಳು ನನ್ನನ್ನು ಈ ಪಾತ್ರದಲ್ಲಿ ನೋಡಲು ಬಯಸುವುದಿಲ್ಲ ಎಂದು ಶಿವಾಜಿ ಗಣೇಶನ್ ಈ ಪಾತ್ರ ಒಪ್ಪಿಕೊಳ್ಳಲು ನಿರಾಕರಿಸಿದರು.
1971ರಲ್ಲಿ ಚಿ. ಉದಯಶಂಕರ್ ಮತ್ತು ಅಣ್ಣಾವ್ರ ಸಹೋದರ ಎಸ್ ಪಿ ವರದರಾಜ್ ಈ ಕಥೆಯ ಬಗ್ಗೆ ಆಸಕ್ತಿ ತೋರಿದರು. ಕಥೆಯನ್ನು ದೊರೈ ಮತ್ತು ಭಗವಾನ್ ಅವರಿಗೆ ವಿವರಿಸಿದರು. 30 ಸಾವಿರ ರೂಪಾಯಿಗೆ ಕಥೆಯ ರೈಟ್ಸ್ ಪಡೆದ ದೊರೆ ಮತ್ತು ಭಗವಾನ್ ಕೆ ಸಿ ಎನ್ ಗೌಡ್ರು ಅವರಿಂದ ಚಿತ್ರ ನಿರ್ಮಿಸಿದರು. ಅಭಿಮಾನಿ ದೇವರುಗಳನ್ನು ರಂಜಿಸಲು ಯಾವುದೇ ಪಾತ್ರಕ್ಕೆ ಸಿದ್ದ ಎಂದ ನಮ್ಮ ವರನಟ ರಾಜಕುಮಾರ್ ನಟನೆಗೆ ಸವಾಲೆನಿಸುವಂತ ಈ ಚಿತ್ರದ ನಾಯಕನ ಪಾತ್ರದಲ್ಲಿ ನಟಿಸಿದರು.
ಇದು ಇಷ್ಟು ಚಿತ್ರದ ಹಿನ್ನೋಟ, ಚಿತ್ರ ಬಿಡುಗಡೆಯಾದ ನಂತರ ಚಿತ್ರ ಯಾವ ಮಟ್ಟಿಗೆ ಯಶಸ್ಸು ಪಡೆಯಿತು ಅಂದರೆ ಸ್ವತಃ ಶಿವಾಜಿ ಗಣೇಶನ್ ರಾಜಕುಮಾರ್ ಬಳಿ ಬಂದು ಅಭಿನಂದಿಸಿದರು. ಅಷ್ಟೇ ಅಲ್ಲ 'ಅವನದಾನ್ ಮನಿದಾನ್' ಎನ್ನುವ ಹೆಸರಿನಲ್ಲಿ ಈ ಚಿತ್ರವನ್ನು ತಮಿಳಿಗೆ ರಿಮೇಕ್ ಮಾಡಿದ್ರು.
ರಾಜಕುಮಾರ್ ಅವರ ಪರಮಭಕ್ತ ಎಂದೇ ಹೇಳಬಹುದಾದ ಕೆ ಸಿ ಎನ್ ಗೌಡ್ರು ಚಿತ್ರದ ನಿರ್ಮಾಪಕರು. ಈಗ ಮತ್ತೆ ಈ ಚಿತ್ರವನ್ನು ಬಣ್ಣ ಹಚ್ಚಿ ತೆರೆಗೆ ತರಲು ಗೌಡ್ರು ಸಜ್ಜಾಗಿದ್ದಾರೆ. ಡಾ. ರಾಜಕುಮಾರ್, ಜಯಂತಿ, ಆರತಿ, ಅಶ್ವಥ್ ಮುಖ್ಯ ತಾರಾಗಣದಲ್ಲಿರುವ ಈ ಚಿತ್ರವನ್ನು ದೊರೆ - ಭಗವಾನ್ ನಿರ್ದೇಶಿಸಿದ್ದರು. ರಾಜ್ ಅವರ 'ವೀರ ಕೇಸರಿ', 'ಕಸ್ತೂರಿ ನಿವಾಸ', 'ಬಬ್ರುವಾಹನ' ಹಾಗೂ 'ಕವಿರತ್ನ ಕಾಳಿದಾಸ' ಚಿತ್ರಗಳನ್ನು ಗೌಡ್ರು ತ್ರಿಡಿಯಲ್ಲಿ ತರಲು ಈ ಹಿಂದೆ ನಿರ್ಧರಿಸಿದ್ದರು, ಆದರೆ ಅದು ಏನಾಯಿತು ಎಂದು ಆಮೇಲೆ ಗೊತ್ತಾಗಲಿಲ್ಲ.
ನೀವು ಈ ಚಿತ್ರವನ್ನು ಥಿಯೇಟರ್ ನಲ್ಲಿ ಅಥವಾ ಟಿವಿಯಲ್ಲಿ ನೋಡಿಲ್ಲಾಂದ್ರೆ 'ನೋಡಲೇ ಬೇಕಾದ ಸಿನಿಮಾವಿದು'.


Click it and Unblock the Notifications











