17th BIFFES: 17ನೇ ಬೆಂಗಳೂರು ಫಿಲ್ಮ್ಫೆಸ್ಟಿವಲ್ ಮುಕ್ತಾಯ; ನಾದ ಬ್ರಹ್ಮ ಹಂಸಲೇಖಗೆ ಜೀವಮಾನ ಸಾಧನೆ ಪ್ರಶಸ್ತಿ
17ನೇ ಬೆಂಗಳೂರು ಅಂತರಾಷ್ಟ್ರೀಯ ಚಲನ ಚಿತ್ರೋತ್ಸವ ಜನವರಿ 29ರಂದು ಅದ್ಧೂರಿಯಾಗಿ ಆರಂಭಗೊಂಡಿತ್ತು. ಬೆಂಗಳೂರಿನ ಲುಲು ಮಾಲ್, ಚಾಮರಾಜಪೇಟೆಯ ಡಾ.ರಾಜ್ಕುಮಾರ್ ಭವನ ಹಾಗೂ ಸುಚಿತ್ರಾ ಫಿಲ್ಮ್ ಸೊಸೈಟಿಯಲ್ಲಿ ದೇಶ-ವಿದೇಶದ ಸಿನಿಮಾಗಳು ಪ್ರದರ್ಶನಗೊಂಡಿದ್ದವು. ಈ ಪ್ರತಿಷ್ಠಿತ ಚಿತ್ರೋತ್ಸವದಲ್ಲಿ 70 ದೇಶಗಳ ಸುಮಾರು 300ಕ್ಕೂ ಹೆಚ್ಚು ಅತ್ಯುತ್ತಮ ಸಿನಿಮಾಗಳನ್ನು ಪ್ರದರ್ಶನ ಕಂಡಿವೆ.
ಇಂದು (ಫೆಬ್ರವರಿ 6) 17ನೇ ಬೆಂಗಳೂರು ಅಂತರಾಷ್ಟ್ರೀಯ ಚಲನ ಚಿತ್ರೋತ್ಸವಕ್ಕೆ ತೆರೆ ಬಿದ್ದಿದೆ. ಪ್ರತಿ ವರ್ಷವೂ ಅರ್ಥಪೂರ್ಣವಾದ ಧ್ಯೇಯವಾಕ್ಯದೊಂದಿಗೆ ಫಿಲ್ಮ್ ಫೆಸ್ಟಿವಲ್ ಅನ್ನು ನಡೆಸಲಾಗುತ್ತಿದೆ. ಈ ಬಾರಿ ರಾಷ್ಟ್ರಕವಿ ಡಾ.ಜಿ.ಎಸ್.ಶಿವರುದ್ರಪ್ಪನವರ ಪ್ರಸಿದ್ಧ ಗೀತೆಯಾಗಿರುವ 'ಸ್ತ್ರೀ ಎಂದರೆ ಅಷ್ಟೇ ಸಾಕೆ' ಎಂಬ ಸಾಲಿನೊಂದಿಗೆ ʼಸ್ತ್ರೀ ಸಂವೇದನೆ', 'ಸಮಾನತೆಯ ದನಿʼ ಎಂಬ ಟ್ಯಾಗ್ ಲೈನ್ನೊಂದಿಗೆ ಫಿಲ್ಮ್ ಚೇಂಬರ್ ಅನ್ನು ನಡೆಸಲಾಯ್ತು.

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ 17ನೇ ಆವೃತ್ತಿಯಲ್ಲಿ ಜಪಾನ್ ದೇಶದ ʼಲಾಸ್ಟ್ ಲ್ಯಾಂಡ್ʼ, ಮರಾಠಿಯ ʼಸಬರ್ ಬೊಂಡಾʼ ಮತ್ತು ʼವನ್ಯಾʼ ಸಿನಿಮಾಗಳು ಫಿಲ್ಮ್ ಫೆಸ್ಟಿವಲ್ನಲ್ಲಿ ಏಷ್ಯಾ, ಭಾರತ ಹಾಗೂ ಕನ್ನಡ ವಿಭಾಗಗಳಲ್ಲಿ ಅತ್ಯುತ್ತಮ ಸಿನಿಮಾ ಪ್ರಶಸ್ತಿಗಳನ್ನು ಬಾಚಿಕೊಂಡಿವೆ. ಇದೇ ವೇಳೆ ನಾದಬ್ರಹ್ಮ ಹಂಸಲೇಖ ಅವರಿಗೆ ಸನ್ಮಾನ ಮಾಡಲಾಯ್ತು.
17ನೇ ಬೆಂಗಳೂರು ಫಿಲ್ಮ್ ಫೆಸ್ಟಿವಲ್ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಸಚಿವ ದಿನೇಶ್ ಗುಂಡೂರಾವ್ ಭಾಗವಹಿಸಿದ್ದರು. ಈ ಫಿಲ್ಮ್ ಫೆಸ್ಟಿವಲ್ನ ರಾಯಭಾರಿಯಾಗಿರುವ ಪ್ರಕಾಶ್ ರಾಜ್, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಡಾ.ಸಾಧು ಕೋಕಿಲ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಡಾ. ಜಯಮಾಲ ಸೇರಿದಂತೆ ಚಿತ್ರರಂಗದ ಗಣ್ಯರು ಭಾಗವಹಿಸಿದ್ದರು. ಕನ್ನಡ ಚಿತ್ರರಂಗದ ಸಂಗೀತ ನಿರ್ದೇಶಕ ಹಂಸಲೇಖಗೆ ಜೀವಮಾನದ ಶ್ರೇಷ್ಠ ಸಾಧನೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯ್ತು.
ಜೀವಮಾನ ಸಾಧನೆ ಪ್ರಶಸ್ತಿಯನ್ನು ಸ್ವೀಕರಿಸಿ ಬಳಿಕ ಹಂಸಲೇಖ ಪ್ರತಿಕ್ರಿಯೆ ನೀಡಿದ್ದಾರೆ. "ಕಲೆಗೆ ಸಂಬಂಧಿಸಿದ ಸಮಾರಂಭಕ್ಕೆ ಸಮಾರೋಪ ಇರುವುದಿಲ್ಲ. ಅದು ಆರಂಭ. ಸೃಷ್ಟಿ ಕಾರ್ಯ ನಿರಂತರ. ಅದು ಎಂದೂ ನಿಲ್ಲುವುದಿಲ್ಲ. ಕೃಷಿಕರು, ಕಾರ್ಮಿಕರು, ಸಿನಿಮಾದವರಿಗೆ ಯಾವುದೇ ವ್ಯತ್ಯಾಸ ಇಲ್ಲ. ಒಬ್ಬನಿಂದ ಸಿನಿಮಾ ಆಗುವುದಿಲ್ಲ. ಅದೊಂದು ಸಾಮೂಹಿಕ ಕೃಷಿ. ಜೀವಮಾನ ಪ್ರಶಸ್ತಿ ಸಿಕ್ಕಿದ್ದು ಖುಷಿಯ ವಿಷಯ. ನಾವು ಕನ್ನಡ ನಾಡಿಗೆ ಋಣಿಯಾಗಿರಬೇಕು. ಕನ್ನಡದಲ್ಲಿ ಬದುಕಿದ್ದೇವೆ. ಕಲೆ ಎನ್ನುವುದು ಆತ್ಮದ ಮೇವು. ಕಲೆಯ ಮೇವನ್ನು ಆರು ದಶಕಗಳ ಕಾಲ ಮೇದಿರುವೆ. ಇಲ್ಲಿನ ವೈಚಾರಿಕತೆ, ಆಧ್ಯಾತ್ಮಿಕತೆ ನನ್ನನ್ನು ಬೆಳೆಸಿದೆ. ಬೇಂದ್ರೆ ಅವರು ʼಉತ್ತರ ಧ್ರುವದಿಂದ ದಕ್ಷಿಣ ಧ್ರುವಕೂ ...ʼ ಎಂದು ಹೇಳಿದರೆ, 'ಕಾಂತಾರ' ಮತ್ತು 'ಕೆಜಿಎಫ್' ಸಿನಿಮಾಗಳು ಅದನ್ನು ದಕ್ಷಿಣದಿಂದ ಉತ್ತರದವರೆಗೂ ಎಂದು ಬದಲಾಯಿಸಿವೆ. ಪ್ರಜಾಪ್ರಭುತ್ವದ ಬೀಜ ಬಿತ್ತಿದ ಬಸವ ನಾಡಿನಲ್ಲಿ ಪ್ರಜಾಪ್ರಭುತ್ವ ರಕ್ಷಿಸುವ ಸಿನಿಮಾ ಮಾಡಬೇಕಿದೆ" ಎಂದು ಹಂಸಲೇಖ ಹೇಳಿದರು.

ಹಾಗೇ ಮುಖ್ಯ ಅತಿಥಿ ಸಚಿವ ದಿನೇಶ್ ಗುಂಡೂರಾವ್ ಮಾತಾಡಿ "ಫಿಲ್ಮ್ ಫೆಸ್ಟಿವಲ್ನಿಂದ ಬೇರೆ ಭಾಷೆಯ ಸಿನಿಮಾ ನೋಡಬಹುದಾಗಿದೆ. ಇದು ಕಲೆಯನ್ನು ಉತ್ಕೃಷ್ಟ ಮಟ್ಟಕ್ಕೆ ಒಯ್ಯುವ ಉದ್ದೇಶದಿಂದ ಮಾಡುವ ಚಿತ್ರೋತ್ಸವ. ಪ್ರಜಾಪ್ರಭುತ್ವ ಉಳಿಸುವ ಜವಾಬ್ದಾರಿ ಕಲೆ ಮೇಲಿದೆ ಎಂಬುವ ಮಾತು ಒಪ್ಪುತ್ತೇನೆ. ಎಲ್ಲ ರೀತಿಯ ಸಿನಿಮಾಗಳು ಬರಬೇಕು. ಕಮರ್ಷಿಯಲ್, ಕಲಾತ್ಮಕ ಸೇರಿ ಎಲ್ಲಾ ರೀತಿಯಲ್ಲಿ ಬರಬೇಕು. ಕಲೆಯಲ್ಲಿ ಭಯ, ಭೀತಿ ಇರಬಾರದು. ಅಭಿವ್ಯಕ್ತಿ ಇರಬೇಕು. ಸ್ವಾತಂತ್ರ್ಯ ಇರಬೇಕು. ಯಾರಿಗೇ ಆಗಲಿ, ಪ್ರಶ್ನೆ ಮಾಡುವ ಅವಕಾಶವಿದೆ. ಕನ್ನಡದಲ್ಲಿ ಯಾರ ಹಂಗೂ ಇಲ್ಲದೆ ಧೈರ್ಯದಿಂದ ಸಿನಿಮಾ ಮಾಡುವಂತಾಗಬೇಕು. ಕಲಾವಿದರು ಜವಾಬ್ದಾರಿ ಅರಿತು ಕೆಲಸ ಮಾಡಬೇಕು" ಎಂದು ಗುಂಡುರಾವ್ ಹೇಳಿದ್ದಾರೆ.
ಫಿಲ್ಮ್ ಫೆಸ್ಟಿವಲ್ ರಾಯಭಾರಿ ಪ್ರಕಾಶ್ ರಾಜ್ ಕೂಡ ಮಾತನಾಡಿ, "ಭಾಷೆ ಹಲವಾದರೂ, ಭಾವನೆ ಒಂದೇ. ಬೇರೆ ಬೇರೆ ವ್ಯಾಕರಣ ಇದ್ದರೂ, ಅದರ ಗರ್ಭದಲ್ಲಿ ಗ್ರಹಿಕೆ ಒಂದೇ. ಮನುಷ್ಯ ವಿಕಾಸದಲ್ಲಿ ಸಿನಿಮಾ ಹೊಸ ಭಾಷೆ. ಅದು ಅವನ ಸಂಸ್ಕೃತಿ, ನೋವು, ಅಳಲು ದಾಖಲಿಸುತ್ತದೆ. ಚಿತ್ರೋತ್ಸವವೆನ್ನುವುದು ಪ್ರಪಂಚದ ಬೇರೆ ಬೇರೆ ಮಾನವೀಯ ಗ್ರಹಿಕೆಗಳನ್ನು ಹಂಚಿಕೊಳ್ಳುವ ವೇದಿಕೆ. ದೇಶಕ್ಕೆ, ಸಮಾಜಕ್ಕೆ ಆದ ನೋವು ದೊಡ್ಡ ನೋವು. ಅಂತಹ ನೋವುಗಳನ್ನು ಸಿನಿಮಾಗಳು ದಾಖಲಿಸಬೇಕು. ಈ ನಿಟ್ಟಿನಲ್ಲಿ ಚಿತ್ರೋತ್ಸವ ಉತ್ಸವವಾಗಿದೆ. ಹಂಸಲೇಖ ಅವರನ್ನು ಸನ್ಮಾನಿಸಿ ಉತ್ಸವದ ಅರ್ಥವನ್ನು ಹೆಚ್ಚಿಸಿದೆ" ಎಂದಿದ್ದಾರೆ.
"ಭಾರತದ ಅತೀ ದೊಡ್ಡ ಚಿತ್ರೋತ್ಸವ ನಮ್ಮದಾಗಿದೆ. ಇದಕ್ಕೆ ಶ್ರಮಿಸಿದ ಸರ್ಕಾರ ಹಾಗೂ ಅಧಿಕಾರಿಗಳಿಗೆ ಧನ್ಯವಾದಗಳನ್ನು ತಿಳಿಸುವೆ. ಈ ಬಾರಿಯ ಹೊಸ ಯೋಜನೆಗಳು ಯಶಸ್ವಿಯಾಗಿವೆ. ಈ ಚಿತ್ರೋತ್ಸವದಲ್ಲಿ ಒಂದು ಲಕ್ಷಕ್ಕೂ ಅಧಿಕ ಹಿರಿಯ ನಾಗರಿಕರು ಭಾಗವಹಿಸಿದ್ದಾರೆ" ಎಂದು ಸಾಧು ಕೋಕಿಲಾ ಹೇಳಿದ್ದಾರೆ.


Click it and Unblock the Notifications











