ಸಮಾಜಕ್ಕೆ ಡಾ. ರಾಜ್ ಕುಟುಂಬ ನೀಡಿದ ಮತ್ತೊಂದು ಮಹತ್ವದ ಕೊಡುಗೆ ಇದು...
ಡಾ. ರಾಜ್ ಕುಮಾರ್ ಕುಟುಂಬ ಒಂದಿಲ್ಲೊಂದು ರೀತಿ ಸಮಾಜಕ್ಕೆ ಸೇವೆ ಸಲ್ಲಿಸುತ್ತಲೇ ಬಂದಿದೆ. ಚಿತ್ರರಂಗ ಮತ್ತು ಅದರಾಚೆಗಿನ ಅನೇಕರ ಸಂಕಷ್ಟಗಳಿಗೆ ಕುಟುಂಬದವರು ಮಿಡಿದಿದ್ದಾರೆ. ಅವುಗಳಲ್ಲಿ ಕೆಲವು ಹೊರಜಗತ್ತಿಗೆ ಗೊತ್ತಾಗುತ್ತದೆ. ಇನ್ನು ಕೆಲವು ಯಾರಿಗೂ ತಿಳಿಯುವುದಿಲ್ಲ. ಚಿತ್ರರಂಗದ ಅನೇಕ ಕಲಾವಿದರು ಈ ನೀತಿ ಅನುಸರಿಸಿಕೊಂಡು ಬಂದಿದ್ದಾರೆ. ಬಲಗೈಲಿ ಕೊಟ್ಟಿದ್ದು ಎಡಗೈಗೆ ತಿಳಿಯಬಾರದು ಎನ್ನುವುದನ್ನು ನಟ ಶಿವರಾಜ್ ಕುಮಾರ್ ಹಲವು ಬಾರಿ ಹೇಳಿದ್ದರು.
Recommended Video
ಈಗ ದೊಡ್ಮನೆಯಿಂದ ಮತ್ತೊಂದು ಮಹತ್ವದ ಕಾಣಿಕೆ ದೊರತಿದೆ. ಸಮಾಜಕ್ಕೆ ಸೇವೆ ಸಲ್ಲಿಸಲು ಸಜ್ಜಾಗಿರುವ ಕೆಲವು ಮಹತ್ವಾಕಾಂಕ್ಷಿ ಪ್ರತಿಭೆಗಳನ್ನು ಡಾ. ರಾಜ್ ಕುಮಾರ್ ಅಕಾಡೆಮಿ ಆಫ್ ಸಿವಿಲ್ ಸರ್ವೀಸಸ್ ತಯಾರಿಸಿದೆ. ಬಡವರು ಮತ್ತು ಆರ್ಥಿಕವಾಗಿ ಹಿಂದುಳಿದ ಅಕಾಂಕ್ಷಿಗಳಿಗೆ ಸಿವಿಲ್ ಪರೀಕ್ಷೆಗಳಿಗೆ ಉಚಿತವಾಗಿ ತರಬೇತಿ ನೀಡಲು ರಾಜ್ ಕುಮಾರ್ ಕುಟುಂಬ ಮೂರು ವರ್ಷಗಳ ಹಿಂದೆ ಈ ಅಕಾಡೆಮಿಯನ್ನು ಆರಂಭಿಸಿತ್ತು. ಈ ಬಾರಿಯ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ರಾಜ್ಯದ 37 ಜನರಲ್ಲಿ 19 ಮಂದಿ ಡಾ. ರಾಜ್ ಅಕಾಡೆಮಿಯಲ್ಲಿ ಕಲಿತವರು ಎನ್ನುವುದು ವಿಶೇಷ. ಮುಂದೆ ಓದಿ.

ರಾಜ್ ಕುಟುಂಬ ಸಂತಸ
2019ರ ಯುಪಿಎಸ್ಸಿ ಪರೀಕ್ಷೆಯಲ್ಲಿ ಡಾ. ರಾಜ್ ಕುಮಾರ್ ಅಕಾಡೆಮಿಯಿಂದ 19 ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಎಲ್ಲ ಅಭ್ಯರ್ಥಿಗಳಿಗೆ ಪುನೀತ್ ರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಯುವ ರಾಜ್ ಕುಮಾರ್ ಸೇರಿದಂತೆ ರಾಜ್ ಕುಟುಂಬದ ಅನೇಕರು ಶುಭ ಹಾರೈಸಿದ್ದಾರೆ.

ಜನಮನ ಗೆದ್ದ ಮೇಘನಾ
ತಮ್ಮಲ್ಲಿ ತರಬೇತಿ ಪಡೆದು ಯುಪಿಎಸ್ಸಿಯಲ್ಲಿ ಅರ್ಹತೆ ಗಿಟ್ಟಿಸಿದ ಎಲ್ಲ ಅಭ್ಯರ್ಥಿಗಳು ಮತ್ತು ಅವರು ಪಡೆದ ಶ್ರೇಣಿಯನ್ನು ಅಕಾಡೆಮಿ ಪ್ರಕಟಿಸಿದೆ. ಅದರಲ್ಲಿ ಎಸ್ಎಸ್ಎಲ್ಸಿ ಓದುವಾಗ ತನ್ನ ದೃಷ್ಟಿ ಸಾಮರ್ಥ್ಯವನ್ನು ಕಳೆದುಕೊಂಡ ಮೇಘನಾ ಕೂಡ ಸೇರಿದ್ದಾರೆ. ಯುಪಿಎಸ್ಸಿ ಪರೀಕ್ಷೆಯಲ್ಲಿ ಮೇಘನಾ 465ನೇ ಶ್ರೇಣಿ ಪಡೆದು ಪ್ರಶಂಸೆಗೆ ಒಳಗಾಗಿದ್ದಾರೆ.

ಬಾಲ ನಟಿ ಕೀರ್ತನಾ
ಮತ್ತೊಂದು ವಿಶೇಷವೆಂದರೆ ಈ ಅಕಾಡೆಮಿಯಿಂದ ಚಿತ್ರ ನಟಿಯೂ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ದೊರೆ, ಗಂಗಾ ಯಮುನಾ, ಎ, ಮೇಘ ಬಂತು ಮೇಘ, ಓ ಮಲ್ಲಿಗೆ ಸೇರಿದಂತೆ ಹತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ಬಾಲನಟಿಯಾಗಿ ನಟಿಸಿದ್ದ ಕೀರ್ತನಾ, ಸುಮಾರು ಆರು ಪ್ರಯತ್ನಗಳ ಬಳಿಕ 167ನೇ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ರಾಜ್ ಅಕಾಡೆಮಿಯ ಈ ಪಟ್ಟಿಯಲ್ಲಿ ಕೀರ್ತನಾ ಮೊದಲ ಸ್ಥಾನದಲ್ಲಿದ್ದಾರೆ.

ಉತ್ತೀರ್ಣರಾದ ಅಭ್ಯರ್ಥಿಗಳು
ಉಳಿದಂತೆ ಅಭಿಷೇಕ್, ಕೃತಿ, ವೆಂಕಟಕೃಷ್ಣ, ಮಿಥುನ್, ವೆಂಕಟರಮಣ್, ಕೌಶಿಕ್ ಎಚ್ ಆರ್, ಆನಂದ್ ಕಲದಗಿ, ವಿವೇಕ್ ರೆಡ್ಡಿ, ವರುಣ್ ಕೆ ಗೌಡ, ಪ್ರಫುಲ್ ದೇಸಾಯಿ, ಭರತ್ ಕೆ ಆರ್, ಹರ್ಷಿಲ್ ಮೀನಾ ಮುಂತಾದವರು ಡಾ. ರಾಜ್ ಕುಮಾರ್ ಅಕಾಡೆಮಿಯಿಂದ ಉತ್ತೀರ್ಣರಾಗಿ ನಾಡಿಗೆ ಹೆಮ್ಮೆ ತಂದಿದ್ದಾರೆ.

ದುಬಾರಿಯಾದ ಪರೀಕ್ಷಾ ತರಬೇತಿ
ನಾಗರಿಕ ಸೇವಾ ಪರೀಕ್ಷೆಗಳಿಗೆ ತಯಾರಿ ನಡೆಸಲು ಮತ್ತು ತರಬೇತಿ ಪಡೆಯಲು ಅನೇಕರು ದೆಹಲಿ ಅಥವಾ ಹೈದರಾಬಾದ್ಗೆ ತೆರಳಿ ಅಲ್ಲಿನ ಪ್ರತಿಷ್ಠಿತ ಅಕಾಡೆಮಿಗಳಲ್ಲಿ ಸೇರಿಕೊಳ್ಳುತ್ತಾರೆ. ಆದರೆ ಪ್ರತಿಭೆ ಇದ್ದರೂ ಆರ್ಥಿಕವಾಗಿ ಹಿಂದುಳಿದ ಆಕಾಂಕ್ಷಿಗಳಿಗೆ ಇದು ಸಾಧ್ಯವಾಗುವುದಿಲ್ಲ. ಈ ತರಬೇತಿಗಾಗಿಯೇ ಅವರು ಲಕ್ಷಾಂತರ ರೂಪಾಯಿ ವ್ಯಯಿಸಬೇಕಾಗುತ್ತದೆ. ಅಷ್ಟು ಹಣ ಇಲ್ಲದ ಕಾರಣ ಅವರು ತಮ್ಮ ಆಸೆಗಳನ್ನು ಹತ್ತಿಕ್ಕಬೇಕಾಗುತ್ತದೆ.

ಸಿವಿಲ್ ಸರ್ವಿಸ್ ಹಬ್
ಇದನ್ನು ತಿಳಿದ ಡಾ ರಾಜ್ ಕುಮಾರ್ ಕುಟುಂಬ ಸಿವಿಲ್ ಸರ್ವಿಸ್ ಪರೀಕ್ಷೆಗಳಿಗೆ ಅಭ್ಯರ್ಥಿಗಳನ್ನು ತಯಾರಿಸುವ ಉದ್ದೇಶದಿಂದ 2017ರಲ್ಲಿ ಬೆಂಗಳೂರಿನಲ್ಲಿ ಈ ಅಕಾಡೆಮಿ ಆರಂಭಿಸಿದೆ. ಬಡ ವಿದ್ಯಾರ್ಥಿಗಳಿಗೆ ಪರಿಣತರ ಮೂಲಕ ಉಚಿತವಾಗಿ ತರಬೇತಿ ನೀಡುತ್ತಿದೆ. ಐಟಿ ಹಬ್ ಆದಂತೆ, ಕರ್ನಾಟಕವನ್ನು ಸಿವಿಲ್ ಸರ್ವಿಸ್ ಹಬ್ ಮಾಡುವ ಮಹತ್ವಾಕಾಂಕ್ಷೆಯನ್ನು ಈ ಅಕಾಡೆಮಿ ವ್ಯಕ್ತಪಡಿಸಿದೆ.


Click it and Unblock the Notifications











