ದರ್ಶನ್ ಗೆ ಜೈಲು ದರ್ಶನ: ಜನರಿಗೆ ಬೀದಿ ಪ್ರದರ್ಶನ

2011 ರಲ್ಲಿ ಪ್ರಜ್ವಲಿಸಿದ ಮೂರು ನಕ್ಷತ್ರಗಳು: 1.ದರ್ಶನ್
ದರ್ಶನ್ ಗೆ ಜೈಲು ದರ್ಶನ: ಜನರಿಗೆ ಬೀದಿ ಪ್ರದರ್ಶನ
ನಮ್ಮಿಂದ ದೂರ ಸರಿಯುತ್ತಿರುವ ವರ್ಷ 2011ರಲ್ಲಿ ಚಿತ್ರರಂಗದಲ್ಲಿ ಬಹುಚರ್ಚೆಗೆ ಕಾರಣರಾದ ತಾರೆಗಳಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುವುದು ನಿಸ್ಸಂದೇಹವಾಗಿ ದರ್ಶನ್. ಚಾಲೆಂಜಿಂಗ್ ಸ್ಟಾರ್ ಬಿರುದಾಂಕಿತ ದರ್ಶನ್, ಕನ್ನಡ ನಾಡಿನಲ್ಲಿ ಅಲ್ಲದೇ ನಾಡಿನಾಚೆಗೂ ಸುದ್ದಿಯಾದರು. ಹೆಂಡತಿಗೆ ಹೊಡೆದ ಆರೋಪದ ಮೇಲೆ ಸ್ವತಃ ಹೆಂಡತಿಯಂದಲೇ ಜೈಲು ಸೇರುವಂತಾದ ದರ್ಶನ್, ಸೆಪ್ಟೆಂಬರ್ 10ರ ಮುಂಜಾನೆ ಜೈಲು ಸೇರಿ, ಅಕ್ಟೋಬರ್ 7 ರ ಸಾಯಂಕಾಲ 5 ಕ್ಕೆ ಬಿಡುಗಡೆ ಹೊಂದುವುದರ ಮೂಲಕ ಬರೋಬ್ಬರಿ 28 ದಿನಗಳ ಸೆರೆಮನೆವಾಸಿ ಆಗಿ ಈಚೆ ಬಂದದ್ದಾಯಿತು. ಸಮಸ್ಯೆ ವೈಯಕ್ತಿಕ, ಆದರೆ ಸುದ್ದಿ ಸಾರ್ವತ್ರಿಕ ಆದದ್ದು ವಿಪರ್ಯಾಸ ಅನ್ನುವುದಕ್ಕಿಂತ ಸಹಜ ಎನ್ನುವುದೇ ಸರಿ.
ನಿಖಿತಾ "ನನಗೂ ದರ್ಶನ್ ಗೂ ಬೇರೆ ಯಾವ ಸಂಬಂಧವಿಲ್ಲ, ಕೇವಲ ಸ್ನೇಹಿತರು" ಎಂದಿದ್ದಾಯಿತು. ನಿಖಿತಾಗೆ ಕನ್ನಡ ಚಿತ್ರಗಳಲ್ಲಿ ನಟಿಸದಂತೆ ನಿರ್ಮಾಪಕರ ಸಂಘದ ಅಧ್ಯಕ್ಷ ಹಾಗೂ ದರ್ಶನ್ ಚಿತ್ರಗಳ ನಿರ್ಮಾಪಕ ಮುನಿರತ್ನ ನಿಷೇಧ ಹೇರಿ ನಂತರ ಪಾರ್ವತಮ್ಮ ರಾಜ್ ಕುಮಾರ್ ಮಾತಿನಂತೆ ನಿಷೇಧ ವಾಪಸ್ ತೆಗೆದುಕೊಂಡ 'ಪ್ರಹಸನ' ನಡೆಯಿತು. ದರ್ಶನ್-ವಿಜಯಲಕ್ಷ್ಮೀ ಅಭಿಪ್ರಾಯ ಕೇಳದೇ ನಿಷೇಧ ಹೇರಿ ವಾಪಸ್ ಪಡೆದ ಮುನಿರತ್ನ, ಮಹಾಪೆದ್ದ ಅನ್ನಿಸಿಕೊಂಡಂತಾಯ್ತು.
ನಿಷೇಧ ದರ್ಶನ್ ಜೈಲು ಪಾಲಾದ ವೇಳೆ ಚಿತ್ರರಂಗದ ಅತಿರಥ ಮಹಾರಥರಾದ ಅಂಬರೀಷ್, ದುನಿಯಾ ವಿಜಯ್ ಮುಂತಾದವರ ಮಾತುಗಳು, ನಡವಳಿಕೆಗಳು ಚಿತ್ರವಿಚಿತ್ರವಾಗಿದ್ದು ಸಮಾಜ ಹಾಗೂ ಸಿನಿಪ್ರೇಕ್ಷಕರಿಂದ ಅಪಾರ ಚರ್ಚೆಗೆ ಕಾರಣವಾಯ್ತು. ಯಾರದೋ (!) ಮಾತು ಕೇಳಿ, ಗಂಡನಿಗೆ ಬುದ್ಧಿ ಬರಲೆಂದು ಪೊಲೀಸ್ ಕಂಪ್ಲೇಂಟ್ ಕೊಟ್ಟು, ನಂತರ ಸಮಾಜದ ಪ್ರತಿಕ್ರಿಯೆಗಳಿಗೆ ಹೆದರಿ(?) ಅವರಿಗೇ ಬುದ್ಧಿ ಬಂದು ಜೈಲಿಂದ ಗಂಡನನ್ನು ಬಿಡಿಸಿಕೊಳ್ಳುವುದಕ್ಕೆ ಹೋರಾಡಿದ ಸತಿ ಸಾವಿತ್ರಿ ವಿಜಯಲಕ್ಷ್ಮೀ, ಎಲ್ಲರಿಗೂ ಮಾದರಿ ಎನಿಸಿಕೊಳ್ಳುವ ಬದಲು (ಅಪ)ಪ್ರಚಾರ ಪಡೆದಂತಾಗಿದ್ದು ವಿಪರ್ಯಾಸ.
ಸಮಾಜಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಿರುವ ಅಥವಾ ಹಾಗೆ ಅಂದುಕೊಂಡಿರುವವರು ವೈಯಕ್ತಿಕ ಜೀವನದಲ್ಲಿ ಕೂಡ ಕೆಲವು ನೀತಿ-ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಜನ ಸೆಲೆಬ್ರಿಟಿಗಳನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿರುತ್ತಾರೆ, ಅವರೂ ಅದನ್ನೇ ಬಯಸುತ್ತಿರುತ್ತಾರೆ ಎಂಬುದು ಎಲ್ಲರಿಗೂ ತಿಳಿದ ಸಂಗತಿ. ಅಷ್ಟಾದ ಮೇಲೆ ಸೆಲೆಬ್ರಿಟಿಗಳು ನಡೆ-ನುಡಿಯಲ್ಲಿ ಸಾಮಾನ್ಯರಿಗಿಂತ ವಿಭಿನ್ನವಾಗಿ ಹಾಗೂ ನಾಗರೀಕವಾಗಿ ನಡೆದುಕೊಳ್ಳುವುದು ಅವಶ್ಯಕ, ಅನಿವಾರ್ಯ.
ತೆರೆಯ ಮೇಲೆ ಒಳ್ಳೊಳ್ಳೆಯ ಪಾತ್ರಗಳನ್ನು ಮಾಡಿ ಜನರ ಮನಸ್ಸನ್ನು ಗೆದ್ದು ಅಭಿಮಾನವನ್ನು ಸಂಪಾದಿಸಿದ ಒಬ್ಬ ಸೆಲೆಬ್ರಿಟಿ, ತೆರೆಯ ಹಿಂದೆ, ಅಂದರೆ ವೈಯಕ್ತಿಕವಾಗಿ ಸ್ವಂತ ಹೆಂಡತಿಗೆ ಹೊಡೆಯುವುದನ್ನು ಜನ ಸಹಿಸಿಕೊಳ್ಳುವುದು ಹೇಗೆ? ಆದರೆ ಕೇಸ್ ಹಾಕಿದ ಹೆಂಡತಿಯೇ ವಾಪಸ್ ತೆಗೆದುಕೊಂಡಾಗ ಸಮಾಜದ ಪ್ರತಿಕ್ರಿಯೆ ಏನು? ಎಂಬುದಕ್ಕೆ 'ದರ್ಶನ್ ಜೈಲು' ರಾದ್ಧಾಂತ ಕನ್ನಡಿಯಾಗಿದೆ.
ಸಿನಿಮಾ ತಾರೆಯರನ್ನು ಆಕಾಶದಲ್ಲಿರುವ ತಾರೆಗಳಿಗಿಂತ ಹೆಚ್ಚು ಮೇಲಿಟ್ಟು ನೋಡಿ, ಅವರ ಹಾವ-ಭಾವ, ವೇಷ-ಭೂಷಣಗಳನ್ನು ಅನುಕರಿಸಿ, ಅನುಸರಿಸುವ ಜನರಿಗೆ ಈ ಘಟನೆಯಿಂದ ದಿಕ್ಕು ತಪ್ಪಿದಂತಾಗಿ ದೇವರಿಗೆ ಮೊರೆ ಇಡುವಂತಾಗಿದ್ದು ದರ್ಶನರಾಣೆಗೂ ಸತ್ಯ. ಸಿನಿಮಾ ನೋಡಿ ಪ್ರಭಾವಿತರಾಗುತ್ತಾರೋ ಇಲ್ಲವೋ ಅದು ವಿವಾದಾಸ್ಪದ ವಿಷಯವಾದರೂ ಸೆಲೆಬ್ರಿಟಿಗಳನ್ನು ನೋಡಿ ಅನುಕರಿಸುವುದು ನಿತ್ಯ ಕಾಣುವ ಸತ್ಯ ಸಂಗತಿ.
ಇವೆಲ್ಲಾ ವಿಷಯ ಜೈಲು ದರ್ಶನದ ನಂತರ ಸ್ವತಃ ದರ್ಶನ್ ಗೇ ಮನವರಿಕೆಯಾಗಿ ಜನರೆದುರು ಹಾಗೂ ಮಾಧ್ಯಮದೆದುರು ಪ್ರತ್ಯಕ್ಷರಾಗಿ ಕ್ಷಮೆ ಕೇಳಿ ಮನಸ್ಸು ಹಾಗೂ ಯಶಸ್ಸು ಎರಡನ್ನೂ 'ವಿಶಾಲ' ಮಾಡಿಕೊಂಡರು. ದುರಂತ ಸುಖಾಂತ್ಯವಾಗಿ ಅವರ ಜೈಲಿನಲ್ಲಿದ್ದಾಗಲೇ ಬಿಡುಗಡೆ ಆಗಿದ್ದ ದರ್ಶನ್ ಅಭಿನಯದ ಚಿತ್ರ 'ಸಾರಥಿ' ಯಶಸ್ವಿಯಾಗಿ ಈ ವರ್ಷದ ಸೂಪರ್ ಹಿಟ್ ಚಿತ್ರವಾಗಿ ಹೊರಹೊಮ್ಮಿದೆ. ಜೈಲಿನಿಂದ ಮರಳಿದ ದರ್ಶನ್ ಸಾಕಷ್ಟು ಮಾಗಿದ್ದಾರೆ, ಜವಾಬ್ದಾರಿ ಅರಿತಿದ್ದಾರೆ. ನಂತರದ ಇಲ್ಲಿಯವರೆಗಿನ ನಡೆ-ನುಡಿ ಸಮಾಧಾನಕರವಾಗಿದೆ. ಮುಂದಿನದು ದರ್ಶನ್ ನಡೆಯಂತೆ ನಡೆಯಲಿದೆ...ಮುಂದಿನ ಪುಟ ನೋಡಿ...


Click it and Unblock the Notifications











