ದರ್ಶನ್ ಸಾರಥಿ ಚಿತ್ರಕ್ಕೆ ಡಬ್ಬಿಯಲ್ಲೇ ಬಂಧನ!
ಸುದೀರ್ಘ ಸಮಯದ ಚಿತ್ರೀಕರಣ, ನಂತರ ಚಿತ್ರದ ನಾಯಕ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ಮತ್ತು ಆತನಿಗೆ ಕೋರ್ಟ್ ನಲ್ಲಿ ಬೇಲ್ ಸಿಗದೇ ಇರುವುದು. ಈ ರೀತಿ ಚಿತ್ರ ಬಿಡುಗಡೆಗೆ ಒಂದಲ್ಲಾ ಒಂದು ವಿಘ್ನ ಎದುರಿಸುತ್ತಿರುವ ಬಹು ನಿರೀಕ್ಷಿತ ಸಾರಥಿ ಚಿತ್ರ ಬಿಡುಗಡೆ ಇನ್ನೂ ಮುಂದೂಡಲ್ಪಟ್ಟಿದೆ.
ಖಚಿತವಾಗಿ ಯಾವ ದಿನಾಂಕದಂದು ಚಿತ್ರ ಬಿಡುಗಡೆಗೊಳ್ಳುತ್ತದೆ ಎಂದು ಸ್ವತಃ ನಿರ್ದೇಶಕ ದಿನಕರ್ ತೂಗುದೀಪ್ ಬಳಿ ಕೂಡ ಉತ್ತರವಿಲ್ಲ. ಚಿತ್ರವನ್ನು ಸೆನ್ಸಾರ್ ಮಂಡಳಿ ವೀಕ್ಷಿಸಿ ಪ್ರಮಾಣಪತ್ರ ನೀಡಿದ ನಂತರ ಚಿತ್ರದ ಬಿಡುಗಡೆ ದಿನಾಂಕ ಪ್ರಕಟವಾಗಬಹುದೆಂದು ನಿರೀಕ್ಷಿಸಲಾಗಿದೆ.
ಗುರುವಾರ (ಸೆ.22) ಹೈಕೋರ್ಟ್ ನೀಡುವ ತೀರ್ಪಿನ ಮೇಲೆ ಭರವಸೆ ಇಟ್ಟಿದ್ದ ಚಿತ್ರತಂಡಕ್ಕೆ ಆಘಾತವಾಗಿದ್ದಂತೂ ನಿಜ. ಸದ್ಯಕ್ಕೆ ದರ್ಶನ್ ಬಿಡುಗಡೆ ದೂರದ ಮಾತಾಗಿರುವುದರಿಂದ ನಿರ್ದೇಶಕ ಮತ್ತು ನಿರ್ಮಾಪಕರು ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ. ದರ್ಶನ್ ಜೈಲಿನಲ್ಲಿ ಇರುವಾಗ ಚಿತ್ರ ರಿಲೀಸ್ ಮಾಡಿದರೆ ಜನ ಯಾವ ರೀತಿ ಪ್ರತಿಕ್ರಯಿಸುತ್ತಾರೆ ಎನ್ನುವುದು ಇವರನ್ನು ಕಾಡುತ್ತಿರುವ ಸಮಸ್ಯೆ.
ದರ್ಶನ್ ಅಭಿಮಾನಿಗಳಂತೂ ಸಾರಥಿ ಚಿತ್ರ ಬಿಡುಗಡೆಯನ್ನು ದೊಡ್ಡ ಹಬ್ಬವನ್ನಾಗಿ ಆಚರಿಸಲು ತಯಾರಿ ಮಾಡಿಕೊಂಡಿದ್ದಾರೆ. ದೇವಾಲಯದಲ್ಲಿ ಪೂಜೆ, ಪುನಸ್ಕಾರ, ಮೆರವಣಿಗೆ, ಕಟ್ಔಟ್ಗೆ ಹೂವಿನ ಮಾಲೆ, ಅಭಿಷೇಕ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿ ಕೊಂಡಿದ್ದಾರೆ. ರೂಪಾಯಿಗೆ ನಾಲ್ಕಾಣೆಯಂತಾಗಿರುವ ದರ್ಶನ್ ಇಮೇಜ್ ಅನ್ನು ಬದಲಾಯಿಸುವ ತವಕದಲ್ಲಿದ್ದಾರೆ ದರ್ಶನ್ ಅಭಿಮಾನಿಗಳು. (ದಟ್ಸ್ಕನ್ನಡ ಸಿನಿವಾರ್ತೆ)


Click it and Unblock the Notifications











