'777 ಚಾರ್ಲಿ' ಬ್ಯುಸಿನೆಸ್ ₹150 ಕೋಟಿ: ಇದರಲ್ಲಿ ನಿರ್ಮಾಪಕರಿಗೆಷ್ಟು? ಚಾರ್ಲಿಗೆಷ್ಟು?
ಕಿರಿಕ್ ಪಾರ್ಟಿ ರಕ್ಷಿತ್ ಶೆಟ್ಟಿ ಮತ್ತೆ ಟ್ರ್ಯಾಕ್ಗೆ ಮರಳಿದ್ದಾರೆ. 'ಅವನೇ ಶ್ರೀಮನ್ನಾರಾಯಣ' ಸಿನಿಮಾದ ಸೋಲಿನ ಬಳಿಕ ಗ್ರ್ಯಾಂಡ್ ಕಮ್ ಬ್ಯಾಕ್ ಮಾಡಿದ್ದಾರೆ. ಇದಕ್ಕೆ ಸಾಕ್ಷಿ '777 ಚಾರ್ಲಿ' ಸಿನಿಮಾ ಸಕ್ಸಸ್. ಇಂದಿಗೆ (ಜುಲೈ 04) '777 ಚಾರ್ಲಿ' ಸಿನಿಮಾ 25 ದಿನಗಳನ್ನು ಪೂರೈಸಿದೆ.
ಐದು ಭಾಷೆಯಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಿದ್ದ ಸಿನಿಮಾ ಬಾಕ್ಸಾಫೀಸ್ನಲ್ಲಿ ಸಿಕ್ಕಾಪಟ್ಟೆ ಕಲೆಕ್ಷನ್ ಮಾಡಿದೆ ಅನ್ನೋದು ರಹಸ್ಯವಾಗಿ ಉಳಿದಿಲ್ಲ. ಇಲ್ಲಿವರೆಗೂ ಕೇವಲ ಟ್ರೇಡ್ ಅನಲಿಸ್ಟ್ಗಳೇ ಈ ಸಿನಿಮಾ ಕಲೆಕ್ಷನ್ ರಿವೀಲ್ ಮಾಡಿದ್ದರು. ಆದರೂ ಚಾರ್ಲಿ ತಂಡ ಮಾತ್ರ ಕಲೆಕ್ಷನ್ ಬಗ್ಗೆ ಬಾಯಿ ಬಿಟ್ಟಿರಲಿಲ್ಲ.
ಈಗ ಸ್ವತ: ಸಿನಿಮಾದ ನಿರ್ಮಾಪಕ ರಕ್ಷಿತ್ ಶೆಟ್ಟಿಯೇ ಸಿನಿಮಾದ ಒಟ್ಟು ಬ್ಯುಸಿನೆಸ್ ಅನ್ನು ರಿವೀಲ್ ಮಾಡಿದ್ದಾರೆ. ಸುಮಾರು ₹150 ಕೋಟಿ ಬ್ಯುಸಿನೆಸ್ ಮಾಡಿದ್ದಾಗಿ ಮಾಹಿತಿ ನೀಡಿದ್ದಾರೆ. ಹಾಗೂ ಇಷ್ಟರಲ್ಲಿ ರಕ್ಷಿತ್ ಶೆಟ್ಟಿ ಕೈ ಸೇರಿದ್ದೆಷ್ಟು? ಸಿನಿಮಾ ₹150 ಕೋಟಿ ಬ್ಯುಸಿನೆಸ್ ಮಾಡಿದ್ದೇಗೆ? ಇವೆಲ್ಲವನ್ನು ತಿಳಿಯಲು ಮುಂದೆ ಓದಿ.

ಚಾರ್ಲಿಗೆ ₹150 ಕೋಟಿ ಬ್ಯುಸಿನೆಸ್
ಎಲ್ಲಾ ರಾಜ್ಯಗಳಲ್ಲಿಯೂ '777 ಚಾರ್ಲಿ' ಸಿನಿಮಾ ಸಖತ್ ರೆಸ್ಪಾನ್ಸ್ ಸಿಕ್ಕಿದೆ. ಐದು ಭಾಷೆಗಳಲ್ಲೂ ಸಿನಿಮಾ ಮೆಚ್ಚಿಕೊಂಡಿದ್ದಾರೆ. ಹೀಗಾಗಿ ಒಟಿಟಿ ಹಾಗೂ ಥಿಯೇಟರ್ ಎರಡೂ ಸೇರಿಸಿ ಆದ ಒಟ್ಟು ಬ್ಯುಸಿನೆಸ್ ಸುಮಾರು ₹150 ಕೋಟಿ ಎನ್ನಲಾಗಿದೆ. 25 ದಿನದ ಸಂಭ್ರಮದಲ್ಲಿ ರಕ್ಷಿತ್ ಒಟ್ಟು ಬ್ಯುಸಿನೆಸ್ ಅನ್ನು ರಿವೀಲ್ ಮಾಡಿದ್ದಾರೆ. " ಪ್ರತಿಯೊಂದು ರಾಜ್ಯದಲ್ಲೂ ಒಳ್ಳೆ ನಂಬರ್ ಸಿಕ್ಕಿದೆ. ನಮ್ಮೆಲ್ಲರಿಗೂ ಅದನ್ನು ನೋಡಿದಾಗ ಖುಷಿಯಾಗುತ್ತೆ. ಬೇರೆ ಭಾಷೆಗಳ ಬಗ್ಗೆ ಒಟಿಟಿಯಲ್ಲಿ ಇನ್ನೂ ಒಳ್ಳೆ ಆಫರ್ಗಳು ಬರುತ್ತಿವೆ. ನಾನು ಪ್ರತ್ಯೇಕವಾಗಿ ಸಿನಿಮಾದ ಬ್ಯುಸಿನೆಸ್ ಹೇಳಲು ಹೋಗುವುದಿಲ್ಲ. ಓವರ್ ಆಲ್ ಚಾರ್ಲಿ ಸಿನಿಮಾ 150 ಕೋಟಿ ರೂ. ಹತ್ತಿರ ಬ್ಯುಸಿನೆಸ್ ಆಗಿದೆ." ಎಂದು ರಕ್ಷಿತ್ ಶೆಟ್ಟಿ ಹೇಳಿದ್ದಾರೆ.

ಚಾರ್ಲಿಗೆಷ್ಟು, ರಕ್ಷಿತ್ಗೆ ಎಷ್ಟು?
"ಈ 150 ಕೋಟಿ ರೂ.ಯಲ್ಲಿ ಹತ್ತಿರ ಹತ್ತಿರ 90 ರಿಂದ 150 ಕೋಟಿ ರೂ. ನಿರ್ಮಾಪಕರ ಕೈ ಸೇರುತ್ತೆ." ಎಂದು ರಕ್ಷಿತ್ ಶೆಟ್ಟಿ ಹೇಳಿದ್ದಾರೆ. ಇದರಲ್ಲಿ ಶೇ.5ರಷ್ಟು ಹಣವನ್ನು ಚಾರ್ಲಿಗೆ ಸಲ್ಲುತ್ತದೆ. ಅಂದರೆ, ಸುಮಾರು 4-5 ಕೋಟಿ ಚಾರ್ಲಿಗೆ ಸೇರಲಿದೆ. ಇನ್ನು ಶೇ.10ರಷ್ಟು ಹಣವನ್ನು ತಂತ್ರಜ್ಞರಿಗೆ ಹಾಗೂ ಈ ಸಿನಿಮಾದಲ್ಲಿ ಕೆಲಸ ಮಾಡಿದವರಿಗೆ ಹಂಚಲಾಗುತ್ತಿದೆ.

ಚಾರ್ಲಿ ಹೆಸರಲ್ಲಿ NGO ನಿರ್ಮಾಣ
" ಈ ಸಿನಿಮಾದ ಮೂಲ ಉದ್ದೇಶವೇನಿದೆ. ನಮ್ಮ ಸಿನಿಮಾದ ಎಂಡ್ನಲ್ಲಿ ಕಿರಣ್ ರಾಜ್ ಅವರು ಒಂದು ಮೆಸೇಜ್ ಕೊಟ್ಟಿದ್ದಾರೆ. ಚಾರ್ಲಿಯಂತಹ ಸುಮಾರು ಜೀವಗಳು ನಿಮಗೋಸ್ಕರ ಕಾಯುತ್ತಿವೆ. ನೀವು ಕಲಿಯುಗದಲ್ಲಿ ಧರ್ಮರಾಯರಾಗಬಹುದು ಅಂತ. ಈ ಉದ್ದೇಶದಲ್ಲಿ ಸಿನಿಮಾ ಮಾಡಿದ ಮೇಲೆ ಇದರಲ್ಲಿ ಬಂದಿರುವ ಸಂಪೂರ್ಣ ಪ್ರಾಫಿಟ್ ಏನಿದೆ? ಅದರಲ್ಲಿ ಶೇ.5ರಷ್ಟು ಚಾರ್ಲಿಗೆ ಸಲ್ಲುತ್ತೆ. ಇವಳ ಹೆಸರಲ್ಲಿ ಭಾರತದಾದ್ಯಂತ ಎನ್ಜಿಓಗಳಿಗೆ ಹಾಗೂ ರೆಸ್ಕ್ಯೂ ಸೆಂಟರ್ಗಳಿಗೆ ಸಹಾಯ ಹಸ್ತ ಚಾಚುತ್ತೇವೆ." ಎಂದಿದ್ದಾರೆ ರಕ್ಷಿತ್.

ಹೊಸ ಪ್ರೇಕ್ಷಕರು ಬಂದಿದ್ದಾರೆ.
" ಈ ಸಿನಿಮಾ ಆಡಿಯನ್ಸ್ ಏನಿದ್ದಾರೆ. ಇವರು ಹೊಸ ಆಡಿಯನ್ಸ್. ಇವರನ್ನು ಹೊಸದಾಗಿ ಥಿಯೇಟರ್ಗೆ ಕರೆದುಕೊಂಡು ಬರುವಂತೆ ಆಡಿಯನ್ಸ್. ಈ ಹಿಂದೆ ಬಂದಂತಹ ಸಿನಿಮಾಗಳೆಲ್ಲಾ ಒಂದು ಮೈಂಡ್ ಸೆಟ್ ಅನ್ನು ಕ್ರಿಯೇಟ್ ಮಾಡಿತ್ತು. ದಕ್ಷಿಣದಿಂದ ಬಂದಂತಹ ಸಿನಿಮಾಗಳೆಲ್ಲಾ ಒಳ್ಳೆ ಸಿನಿಮಾಗಳು. ಈ ಸಿನಿಮಾಗಳನ್ನು ನೋಡಬಹುದು ಎಂದು ಅಭಿಪ್ರಾಯ ಕ್ರಿಯೇಟ್ ಮಾಡಿತ್ತು. ಇಂತಹ ಸಿನಿಮಾಗಳು ಬಂದರೂ ಸಿನಿಮಾ ನೋಡಬಹುದು ಎಂಬ ಹೊಸ ಅಲೆ ಕ್ರಿಯೇಟ್ ಆಯ್ತು ಅಂತ ನಾನು ಅಂದುಕೊಂಡಿದ್ದೇನೆ." ಎನ್ನುತ್ತಾರೆ ರಕ್ಷಿತ್ ಶೆಟ್ಟಿ.


Click it and Unblock the Notifications











