ರವಿಚಂದ್ರನ್-ಹಂಸಲೇಖ ರೀ-ಯೂನಿಯನ್;'ಕ್ರೇಜಿ-ಬ್ರಹ್ಮ'ನಿಗಾಗಿ 80 ಅಡಿ ಕಟೌಟ್
ಕನ್ನಡ ಚಿತ್ರರಂಗಕ್ಕೆ ಹೊಸ ಮೆರುಗು ನೀಡಿದ ಜೋಡಿ ರವಿಚಂದ್ರನ್-ಹಂಸಲೇಖ. ಹಂಸಲೇಖ ಇಲ್ಲದೇ ಹೋಗಿದ್ದರೆ, ರವಿಚಂದ್ರನ್ ಕ್ರೇಜಿಸ್ಟಾರ್ ಆಗ್ತಿದ್ರೋ ಇಲ್ವೋ.. ರವಿಚಂದ್ರನ್ ಸಿಗದೇ ಹೋಗಿದ್ದರೆ ಗಂಗರಾಜು ಹಂಸಲೇಖ ಆಗ್ತಿದ್ರೋ ಇಲ್ಲವೋ.. ಇಬ್ಬರ ಜೋಡಿ ಕನ್ನಡ ಚಿತ್ರರಂಗಕ್ಕೆ ಹೊಸ ಇಮೇಜ್ ಅನ್ನು ತಂದು ಕೊಟ್ಟಿದೆ. ಇಂದಿನ ಪೀಳಿಗೆಗೂ ಇವರ ಸಿನಿಮಾ ಹಾಡುಗಳು, ಸಿನಿಮಾಗಳು ಅಂದರೆ ಇಂದಿಗೂ ಬಲು ಇಷ್ಟ.
ಈ ಜೋಡಿ ಒಂದೆರಡು ದಶಕಗಳ ಹಿಂದೆ ಒಂದಿಷ್ಟು ಕಾರಣಕ್ಕೆ ಬೇರೆಯಾಗಿತ್ತು. ಆಗ ಸಿನಿಮಾ ಪ್ರಿಯರಿಗೆ ಆದ ಸಂಕಟ ಅಷ್ಟಿಷ್ಟಲ್ಲ. ಅಲ್ಲಿಂದ ಇಲ್ಲಿವರೆಗೂ ಇಬ್ಬರನ್ನೂ ಸೇರಿಸೋಕೆ ಒಂದಷ್ಟು ಮಂದಿ ಪ್ರಯತ್ನ ಮಾಡಿದ್ದರು. ಆದರೆ, ಅದು ಸಾಧ್ಯವಾಗಿರಲಿಲ್ಲ. ಕೊನೆಗೂ ಈಗ ರವಿಚಂದ್ರನ್ ಹಾಗೂ ಹಂಸಲೇಖ ಜೋಡಿಯನ್ನು ಒಟ್ಟಿಗೆ ಸೇರಿಸಲಾಗಿದೆ. ವೇದಿಕೆ ಮೇಲೆ ಈ ಜೋಡಿ ಮೋಡಿ ಮಾಡುವುದಕ್ಕೆ ಪ್ಲಾಟ್ಫಾರ್ಮ್ ಕೂಡ ರೆಡಿಯಾಗಿದೆ.

ಸ್ಯಾಂಡಲ್ವುಡ್ನ ಈ ಎವರ್ಗ್ರೀನ್ ಜೋಡಿ ಮತ್ತೆ ಒಂದಾಗ್ತಿದೆ ಅಂದ್ರೆ ಸುಮ್ನೆನಾ? ಹಾಗೇ ಸುಮ್ನೆ ಎಂಟ್ರಿ ಕೊಡಿಸೋಕೆ ಆಗುತ್ತಾ? ಈ ರಿಯೂನಿಯನ್ ವೇದಿಕೆಗೆ ಅದ್ದೂರಿ ಸ್ವಾಗತ ಕೊಡುವುದಕ್ಕೆ ಒಂದು ಬೃಹತ್ ಕಟೌಟ್ ಈಗಾಗಲೇ ಎದ್ದು ನಿಂತಿದ್ದೆ. ಅದರ ಎತ್ತರ ಬರೋಬ್ಬರಿ 80 ಅಡಿ. ಇಬ್ಬರ ಇವೆಂಟ್ ನಡೆಯುವ ಸ್ಥಳದಲ್ಲಿ ಈಗಾಗಲೇ ಈ ಕಟೌಟ್ ಎದ್ದು ನಿಂತಿದೆ.
80-90ರ ದಶಕದಲ್ಲಿ ರವಿಚಂದ್ರನ್ ಮತ್ತು ಹಂಸಲೇಖ ಜೋಡಿ ಮಾಡಿದ ಮೋಡಿ ಗೊತ್ತಿರೋ ವಿಷಯವೇ. ಇವರಿಬ್ಬರು ಒಟ್ಟಿಗೆ ಸೇರಿದ ಸಿನಿಮಾಗಳು ದೊಡ್ಡ ಮಟ್ಟಿಗೆ ಯಶಸ್ಸು ಕಂಡಿವೆ. ಸುಮಾರು ಹದಿನಾರು ವರ್ಷಗಳ ಕಾಲ ಒಟ್ಟಾಗಿ ಕನ್ನಡ ಸಿನಿರಸಿಕರನ್ನು ರಂಜಿಸಿದ ಜೋಡಿಯಿದು. ಈ ಜೋಡಿಯನ್ನು ಮತ್ತೆ ಸಂಭ್ರಮಿಸುವುದಕ್ಕೆ ವೇದಿಕೆ ರೆಡಿಯಾಗಿದೆ. ರವಿಚಂದ್ರನ್ ಅವರ ಹುಟ್ಟುಹಬ್ಬದ ಪ್ರಯುಕ್ತ, ಅಂದರೆ, ಮೇ 30ರಂದು ಕೆಂಗೇರಿ ಬಳಿಯ ಜೆ.ಕೆ.ಗ್ರಾಂಡ್ ಅರೆನಾದಲ್ಲಿ 'ಕ್ರೇಜಿ - ಬ್ರಹ್ಮ' ರೀಯೂನಿಯನ್ ಮೆಗಾ ಇವೆಂಟ್ ನಡೆಯುತ್ತಿದೆ.
ಈ ಕಾರ್ಯಕ್ರಮವನ್ನು ನ.ವಿನಯ್ ಹಾಗೂ ಡಾ.ಚೇತನಾ ಆರ್.ಎಸ್ ಆಯೋಜನೆ ಮಾಡಿದ್ದು, ರವಿಚಂದ್ರನ್ ಮತ್ತು ಹಂಸಲೇಖ ಜೋಡಿ ಹದಿನಾರು ವರ್ಷಗಳ ಕಾಲ ಒಟ್ಟಾಗಿ ರಂಜಿಸಿದ ನೆನಪುಗಳನ್ನು ಮೆಲುಕು ಹಾಕಲಿದ್ದಾರೆ. ಹಾಗೇ ಈ ಜೋಡಿಯನ್ನು ಗೌರವಿಸುವ ಸಮಾರಂಭವೇ 'ಕ್ರೇಜಿ-ಬ್ರಹ್ಮ'. ಮೇ.30ರ ಸಂಜೆ 6 ಗಂಟೆಗೆ ಈ ಕಾರ್ಯಕ್ರಮ ನಡೆಯುತ್ತಿದೆ. ಸುಮಾರು 8000ಕ್ಕೂ ಅಧಿಕ ಜನರು ಸೇರುವ ನಿರೀಕ್ಷೆ ಇದೆ. ಕನ್ನಡದ ಜನಪ್ರಿಯ ಕಲಾವಿದರು ಈ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ.

'ಕ್ರೇಜಿ-ಬ್ರಹ್ಮ' ನಾಲ್ಕು ಗಂಟೆಗಳ ವಿಶೇಷ ಕಾರ್ಯಕ್ರಮ. ರವಿಚಂದ್ರನ್ ಹಾಗೂ ಹಂಸಲೇಖ ಈ ಸಂಜೆಗೆ ವಿಶೇಷ ಮೆರುಗು ನೀಡಲಿದ್ದಾರೆ. "ವಿನಯ್ ಹಾಗೂ ಡಾ.ಚೇತನಾ ಸೇರಿ ಒಂದೊಳ್ಳೆ ಕಾರ್ಯಕ್ರಮ ಮಾಡುತ್ತಿದ್ದಾರೆ. ಇದು ಎಲ್ಲರಿಗೂ ಒಂದು ಇವೆಂಟ್. ನಮ್ಮಿಬ್ಬರಿಗೆ ಇದು ವಿದ್ಯಮಾನ. ನಮ್ಮ ಯಜಮಾನರು ಆಗ ಕನಸುಗಾರರಾಗಿದ್ದರು. ಈಗ ಒಳ್ಳೆಯ ಮಾತುಗಾರರಾಗಿದ್ದಾರೆ. ಅವರ ಕಟೌಟ್ ನೋಡಿ ನನಗೆ ಬಹಳ ಖುಷಿಯಾಯಿತು. ಪಕ್ಕದಲ್ಲೇ ನನ್ನ ಕಟೌಟ್ ಸಹ ಹಾಕಿದ್ದಾರೆ. ಅಷ್ಟೇ ಅಲ್ಲದೆ ಎರಡು ಸುಂದರವಾದ ಪ್ರೋಮೊಗಳನ್ನು ಸಹ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಿದ್ದಾರೆ. ಅದು ಬಹಳ ಚೆನ್ನಾಗಿದೆ. ಕಾರ್ಯಕ್ರಮ ಕೂಡ ಇನ್ನೂ ಚೆನ್ನಾಗಿರುತ್ತದೆ" ಎಂದು ನಾದಬ್ರಹ್ಮ ಹಂಸಲೇಖ ಭರವಸೆ ನೀಡಿದ್ದಾರೆ.
ಕ್ರೇಜಿಸ್ಟಾರ್ ಈ ವಿಶೇಷ ಕಾರ್ಯಕ್ರಮವನ್ನು ಎದುರು ನೋಡುತ್ತಿದ್ದಾರೆ. "ಕ್ರೇಜಿ ಬ್ರಹ್ಮ ಕಾರ್ಯಕ್ರಮದ ಬಗ್ಗೆ ಆಯೋಜಕರು ಹೇಳಿದಾಗ ಕೇಳಿ ಸಂತೋಷವಾಯಿತು. ನನ್ನ ಹಾಗೂ ಹಂಸಲೇಖ ಅವರ ಕಾಂಬಿನೇಶನ್ನಲ್ಲಿ ನೂರಾರು ಸೂಪರ್ ಹಿಟ್ ಹಾಡುಗಳು ಬಂದಿದೆ. ಪ್ರೇಮಲೋಕದಿಂದ ಹಿಡಿದು ಹದಿನಾರು ವರ್ಷಗಳ ಕಾಲ ನಮ್ಮಿಬ್ಬರ ಕಾಂಬಿನೇಶನ್ನಲ್ಲಿ ಬಂದ ಹಾಡುಗಳು ಅಂದು, ಇಂದು, ಮುಂದು ಜನಪ್ರಿಯವಾಗಿರುತ್ತದೆ. ಆನಂತರ ನಾವು ಒಟ್ಟಾಗಿ ಸಿನಿಮಾ ಮಾಡದೆ ಇರಬಹುದು. ನನ್ನ ಮನಸ್ಸಿನಲ್ಲಿ ಅವರು. ಅವರ ಮನಸ್ಸನಲ್ಲಿ ನಾನು ಸದಾ ಇರುತ್ತೇವೆ. ಒಂದೇ ದೇಹ ಎರಡು ಜೀವ ಇದ್ದ ಹಾಗೆ. ಇನ್ನೂ ಈ ಸಮಾರಂಭ ಯಾವುದೇ ತೊಂದರೆ ಇಲ್ಲದೆ ನಡೆಯುತ್ತದೆ ಎಂಬ ಭರವಸೆ ಇದೆ. ನಾನು ಅಭಿಮಾನಿಗಳನ್ನು ಕಾರ್ಯಕ್ರಮಕ್ಕೆ ಬನ್ನಿ ಎಂದು ಆಹ್ವಾನಿಸುವುದಿಲ್ಲ. ಅವರು ಬಂದೇ ಬರುತ್ತಾರೆ ಎಂಬ ನಂಬಿಕೆ ಇದೆ" ಎಂದು ಕ್ರೇಜಿಸ್ಟಾರ್ ರವಿಚಂದ್ರನ್ ಅಭಿಪ್ರಾಯ ಪಟ್ಟಿದ್ದಾರೆ.


Click it and Unblock the Notifications