ರೈಲು ನಿಲ್ದಾಣದಿಂದ ಫ್ರೀಡಂ ಪಾರ್ಕ್ವರೆಗೆ ಹಂಸಲೇಖ ಬೆಂಬಲಿಸಿ ಬೃಹತ್ ಜಾಥಾ
ದಿವಂಗತ ಪೇಜಾವರ ಶ್ರೀಗಳ ವಿರುದ್ಧ ಹೇಳಿಕೆ ನೀಡಿದ್ದ ಹಂಸಲೇಖ ವಿವಾದಕ್ಕೆ ಸಿಲುಕ್ಕಿದ್ದರು. ದಿವಂಗತ ಪೇಜಾವರ ಶ್ರೀಗಳ ಭಕ್ತಗಳ ಹಂಸಲೇಖ ಹೇಳಿಕೆಯನ್ನು ಖಂಡಿಸಿ, ಬಸವನಗುಡಿ ಪೊಲೀಸ್ ಠಾಣೆಗೆ ದೂರನ್ನೂ ಸಲ್ಲಿಸಿತ್ತು. ಈ ಸಂಬಂಧ ನಿನ್ನೆ( ನವೆಂಬರ್ 25) ಬಸವನಗುಡಿ ಪೊಲೀಸ್ ಠಾಣೆಗೆ ವಿಚಾರಣೆಗೂ ಆಗಮಿಸಿದ್ದರು. ಈ ವೇಳೆ ಪೊಲೀಸ್ ಠಾಣೆಯ ಮುಂದೆನೇ ಹಂಸಲೇಖ ಪರ ಹಾಗೂ ವಿರುದ್ಧ ಪ್ರತಿಭಟನೆ ಕೂಡ ನಡೆದಿತ್ತು.
ಇಂದು (ನವೆಂಬರ್ 25) ಸಂಗೀತ ನಿರ್ದೇಶಕ, ನಾದ ಬ್ರಹ್ಮ ಹಂಸಲೇಖ ಅವರನ್ನು ಬೆಂಬಲಿಸಿ, ಅವರ ಮೇಲಾಗುತ್ತಿರುವ ವಾಗ್ದಾಳಿಯನ್ನು ಖಂಡಿಸಿ ಬೆಂಗಳೂರಿನಲ್ಲಿ ಬೃಹತ್ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ. ಈ ಮೂಲಕ ಹಂಸಲೇಖ ಬೆಂಬಲಕ್ಕೆ ಸಂಘಟನೆಗಳು ಬೆಂಬಲ ಸೂಚಿಸುವುದರೊಂದಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಉಳಿವಿನ ಕರೆ ಕೂಡ ನೀಡಿದೆ. ಹಾಗಿದ್ದರೆ. ಬೃಹತ್ ಜಾಥಾಕ್ಕೆ ಕರೆದ ಸಂಘಟನೆ ಯಾವುದು? ಎಲ್ಲಿಂದ ಎಲ್ಲಿಯವರೆಗೆ ಜಾಥಾ? ಅನ್ನುವ ಮಾಹಿತಿಗಾಗಿ ಮುಂದೆ ಓದಿ.

ಹಂಸಲೇಖ ಬೆಂಬಲಿ ಬೃಹತ್ ರ್ಯಾಲಿ
ನಾದ ಬ್ರಹ್ಮ ಹಂಸಲೇಖ ದಿವಂಗತ ಪೇಜಾವರ ಶ್ರೀಗಳ ವಿರುದ್ಧ ನೀಡಿದ ಹೇಳಿಕೆಗಳು ದೊಡ್ಡ ಸಂಚಲವನ್ನೇ ಸೃಷ್ಟಿಸಿದ್ದವು. ಶ್ರೀಗಳ ಭಕ್ತಗಣ ತೀವ್ರವಾಗಿ ವಿರೋಧಿಸಿದ್ದವು. ತಕ್ಷಣವೇ ಹಂಸಲೇಖ ಕ್ಷಮೆಯಾಚಿಸಿದ್ದರು. ಆದರೂ, ಸಮಾಧಾನಗೊಳ್ಳದ ಶ್ರೀಗಳ ಅನುಯಾಯಿಗಳು ಕೆಂಡಾಮಂಡಲಾಗಿದ್ದರು. ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದರು. ಹೀಗಾಗಿ ಹಂಸಲೇಖರನ್ನು ಬೆಂಬಲಿಸಿ ಕರ್ನಾಟಕದ ಸಂವಿಧಾನ ಸಂರಕ್ಷಣಾ ಐಕ್ಯತಾ ಸಮಿತಿ ಬೃಹತ್ ಜಾಥಾಕ್ಕೆ ಕರೆ ನೀಡಿದೆ. ನವೆಂಬರ್ 26ರಂದು ಬೆಳಗ್ಗೆ 11 ಗಂಟೆಗೆ ಮೆಜೆಸ್ಟಿಕ್ ರೈಲು ನಿಲ್ದಾಣದಿಂದ ಫ್ರೀಡಂ ಪಾರ್ಕಿನವರೆಗೆ ಜಾಥಾ ನಡೆಯಲಿದೆ.

ಹಂಸಲೇಖ ಬೆಂಬಲಿಸಿ ಸಂವಿಧಾನ ಜಾಗೃತಿ ಜಾಥಾ
ಕರ್ನಾಟಕದ ಸಂವಿಧಾನ ಸಂರಕ್ಷಣಾ ಐಕ್ಯತಾ ಸಮಿತಿ ಸಂವಿಧಾನ ಸಮರ್ಪಣಾ ದಿನ ಮತ್ತು ಕಾನೂನು ದಿನದ ಈ ಸಂದರ್ಭದಲ್ಲಿ ಸಂವಿಧಾನ ಜಾಗೃತಿ ಜಾಥಾ ಮತ್ತು ಸಮಾವೇಶ ಹಮ್ಮಿಕೊಂಡಿದೆ. ಈ ವೇಳೆ ವಾಕ್ ಮತ್ತು ಅಭಿವೃಕ್ತಿ ಸ್ವಾತಂತ್ರ್ಯದ ಹಲ್ಲೆಯನ್ನು ಖಂಡಿಸುವುದರೊಂದಿಗೆ ಹಾಗೂ ಹಂಸಲೇಖರನ್ನು ಬೆಂಬಲಿಸಿ ಈ ಬೃಹತ್ ಜಾಥಾವನ್ನು ನಡೆಸಲಾಗುತ್ತಿದೆ ಎಂದು ಸಂಘಟನೆ ಹೇಳಿಕೊಂಡಿದೆ.

ಹಂಸಲೇಖ ಬೆಂಬಲಿಸಲು ಜಾಥಾಗೆ ಬರಲು ಕರೆ
ಸಂಗೀತ ನಿರ್ದೇಶಕ ಹಂಸಲೇಖ ಕ್ಷಮೆ ಕೇಳಿದ ಮೇಲೂ ಅವರ ವಿರುದ್ಧ ಮಾತಿನ ದಾಳಿ ನಡೆಯುತ್ತಿದೆ. ಹೀಗಾಗಿ ದೇಶದಲ್ಲಿ ವ್ಯಕ್ತಿ ಸ್ವಾತಂತ್ರ್ಯಕ್ಕೆ ಅಪಾಯವಿದೆ ಎಂಬುವ ಕಾರಣದಿಂದ ಈ ಈ ಜಾಥಾ ನಡೆಸಲಾಗಿದೆ. ಹೀಗಾಗಿ ಹಂಸಲೇಖ ಅವರನ್ನು ಬೆಂಬಲಿಸುವವರು ರಾಜಧಾನಿಗೆ ಬನ್ನಿ ಎಂದು ಸಂಘಟನೆ ಕೇಳಿಕೊಂಡಿದೆ. ರಾಜ್ಯದ ಮೂಲೆ ಮೂಲೆಯಿಂದ ಹಂಸಲೇಖರನ್ನು ಬೆಂಬಲಿಸುವವರು ಈ ಜಾಥಾದಲ್ಲಿ ಭಾಗವಹಿಸುವ ಸಾಧ್ಯತೆ ಹೆಚ್ಚಿದೆ.

ಮನೆಯಿಂದಲೇ ಬುತ್ತಿ ತನ್ನಿ
ಹಂಸಲೇಖ ಬೆಂಬಲಿಸಿ ನಡೆಯಲಿರುವ ಈ ಬೃಹತ್ ಜಾಥಾದಲ್ಲಿ ಸಾವಿರಾರು ಜನರು ಭಾಗವಹಿಸುವ ಸಾಧ್ಯತೆ ಇದೆ. ಹೀಗಾಗಿ ನಿಮ್ಮ ಮನೆಯಿಂದಲೇ ಊಟ ತೆಗೆದುಕೊಂಡು ಬನ್ನಿ. ಬಾಡೂಟವಾದರೆ ಉತ್ತಮ. ಅಂಬೇಡ್ಕರ್, ಬುದ್ಧ, ಬಸವ, ಗಾಂಧಿ, ಕುವೆಂಪು ಮುಂತಾದವರ ಆಶಯಗಳನ್ನು ಮುಂದಿನ ಪೀಳಿಗೆಗೂ ತಲುಪಿಸೋಣ ಎಂದು ಕರ್ನಾಟಕದ ಸಂವಿಧಾನ ಸಂರಕ್ಷಣಾ ಐಕ್ಯತಾ ಸಮಿತಿ ಕರೆ ನೀಡಿದೆ.


Click it and Unblock the Notifications











