ಆಸ್ತಿ ಘೋಷಣೆ ಬೆನ್ನಲ್ಲೆ ವಿಜಯ್ ವಿರುದ್ಧ ದೂರು ದಾಖಲು; ಕಾರಣ ಆಂಬುಲೆನ್ಸ್.. ನೀತಿ ಸಂಹಿತೆ ಉಲ್ಲಂಘನೆ
ತಮಿಳುನಾಡು ವಿಧಾನಸಭಾ ಚುನಾವಣೆ ಹತ್ತಿರದಲ್ಲಿದೆ. ಎಲ್ಲಾ ಪಕ್ಷಗಳು ಮುಗಿಬಿದ್ದು ಪ್ರಚಾರ ಮಾಡುತ್ತಿವೆ. ಜನರನ್ನು ತನ್ನತ್ತ ಸೆಳೆಯುವುದಕ್ಕೆ ವಿವಿಧ ರೀತಿಯ ಆಫರ್ಗಳನ್ನು ಕೊಡುತ್ತಿದೆ. ಹಾಗೇ ಪಕ್ಷಗಳು ಬೀದಿಗಿಳಿದು ಪ್ರಚಾರವನ್ನು ಮಾಡುತ್ತಿವೆ. ಈ ಬಾರಿ ನಟ ವಿಜಯ್ ಪಕ್ಷ ಇದೇ ಮೊದಲ ಬಾರಿಗೆ ಚುನಾವಣಾ ಅಖಾಡಕ್ಕೆ ಇಳಿದಿರುವುದರಿಂದ ಎಲ್ಲರ ಕುತೂಹಲ ತಮಿಳುನಾಡಿ ಚುನಾವಣೆ ಮೇಲೆ ನೆಟ್ಟಿದೆ.
ನಿನ್ನೆಯಷ್ಟೇ (ಮಾರ್ಚ್ 30) ತಮಿಳಗ ವೆಟ್ರಿ ಕಳಗಂ (TVK) ಪಕ್ಷದ ಮುಖ್ಯಸ್ಥ ಹಾಗೂ ನಟ ವಿಜಯ್ ಪೆರಂಬೂರಿನಿಂದ ನಾಮಪತ್ರವನ್ನು ಸಲ್ಲಿಸಿದ್ದರು. ಇದೇ ವೇಳೆ ವಿಜಯ್ ಘೋಷಣೆ ಮಾಡಿಕೊಂಡಿರುವ ಆಸ್ತಿಯ ಬಗ್ಗೆ ನ್ಯಾಷನಲ್ ಲೆವೆಲ್ನಲ್ಲಿ ಚರ್ಚೆಯಾಗಿತ್ತು. ಹೆಚ್ಚು ಕಡಿಮೆ 700 ಕೋಟಿ ರೂಪಾಯಿ ಆಸ್ತಿ ಹೊಂದಿರುವ ವಿಜಯ್ ತಮಿಳರಷ್ಟೇ ಅಲ್ಲ, ದೇಶದ ಜನರ ಗಮನ ಸೆಳೆದಿದ್ದರು. ಈ ಬೆನ್ನಲ್ಲೇ ಅವರ ವಿರುದ್ಧ ದೂರು ದಾಖಲಾಗಿದೆ.

ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ ವಿಜಯ್ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ (MCC) ಆರೋಪದ ಅಡಿಯಲ್ಲಿ ಚೆನ್ನೈನ ಪೆರಾವಲ್ಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗಿರುವ ವಿಜಯ್ ವಿರುದ್ಧ ಇಂದು (ಮಾರ್ಚ್ 31) ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಅಷ್ಟಕ್ಕೂ ಅಂತಹದ್ದೇನಾಯ್ತು? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.
ಪೊಲೀಸರು ದಾಖಲಿಸಿದ ಈ ದೂರಿನಲ್ಲಿ ನಟ-ಟಿವಿಕೆ ಮುಖ್ಯಸ್ಥ ವಿಜಯ್ ಹಾಗೂ ಅವರ ಪಕ್ಷದ 5 ಸಾವಿರ ಕಾರ್ಯಕರ್ತರ ಹೆಸರನ್ನು ಸೇರಿಸಲಾಗಿದೆ. ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿ ಕುಮಾರ್ ಎಂಬುವವರು ದೂರು ನೀಡಿದ ಬೆನ್ನಲ್ಲಿ ಸಾರ್ವಜನಿಕರಿಗೆ ಕಿರಿಕಿರಿ, ಸಾರ್ವಜನಿಕ ಮಾರ್ಗಕ್ಕೆ ಅಡ್ಡಿ, ಕಾನೂನುಬಾಹಿರ ಸಭೆ ಸೇರಿದಂತೆ ಸುಮಾರು ಐದಕ್ಕೂ ಹೆಚ್ಚಿನ ವಿಭಾಗದಲ್ಲಿ ಆರೋಪ ಮಾಡಿ ದೂರನ್ನು ದಾಖಲಿಸಲಾಗಿದೆ ಎಂದು ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ.

ವಿಜಯ್ ಹಾಗೂ ಅವರ ಕಾರ್ಯಕರ್ತರ ವಿರುದ್ಧ ಮಾಡಿದ ದೂರಿನಲ್ಲಿ ಸಾರ್ವಜನಿಕ ಸಭೆಯಲ್ಲಿ ಸುಮಾರು 30 ಧ್ವನಿವರ್ಧಕಗಳನ್ನು ಬಳಸಲಾಗಿದೆ. 5,000 ಕ್ಕೂ ಹೆಚ್ಚು ಜನರನ್ನು ಸೇರಿಸಿ, ಪಬ್ಲಿಕ್ಗೆ ಅನಾನುಕೂಲತೆಯನ್ನು ಸೃಷ್ಟಿಸಲಾಗಿದೆ ಎಂದು ಆರೋಪಿಸಲಾಗಿದೆ. ಇಷ್ಟೇ ಅಲ್ಲದೆ, ಒಂದು ಅಂಬುಲೆನ್ಸ್ಗೆ ತಡೆಯೊಡ್ಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಸಾರ್ವಜನಿಕ ಸುರಕ್ಷತೆ ಬಗ್ಗೆ ಆತಂಕ ವ್ಯಕ್ತಪಡಿಸಿ, ಚುನಾವಣಾ ಪ್ರಚಾರ ಕಾರ್ಯಕ್ರಮದ ವಿಡಿಯೋ ದಾಖಲೆಗಳನ್ನು ಪುರಾವೆಯಾಗಿ ಸಲ್ಲಿಸಲಾಗಿದೆ. ತಮ್ಮ ವಿರುದ್ಧ ದೂರು ದಾಖಲಾಗುತ್ತಿದ್ದಂತೆ "ತಮ್ಮ ಪಕ್ಷ ಕಾನೂನು ಪ್ರಕ್ರಿಯೆಗೆ ಸಂಪೂರ್ಣ ಸಹಕಾರ ನೀಡಲಿದೆ" ಎಂದು ವಿಜಯ್ ಹೇಳಿರುವುದಾಗಿ ವರದಿ ಮಾಡಲಾಗಿದೆ.


Click it and Unblock the Notifications











