1991ರ ಕಾವೇರಿ ಗಲಾಟೆಯಲ್ಲೇ ಚಿಗುರಿತ್ತು ಪ್ರೀತಿ: ಮಂಡ್ಯ ಹುಡುಗ, ತಮಿಳು ಹುಡುಗಿ ಕಹಾನಿಯೇ 'ಕಾಳಿ'!
ಸಿನಿಮಾದಲ್ಲಿ ಕಂಟೆಂಟ್ ಇದ್ದರೆ ಜನ ಥಿಯೇಟರ್ ನುಗ್ಗುತ್ತಾರೆ ಅನ್ನೋದು ಪದೇ ಪದೆ ಸಾಬೀತಾಗಿದೆ. ಕನ್ನಡದ ಸಾಲು ಸಾಲು ಸಿನಿಮಾಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಹೆಸರು ಮಾಡುತ್ತಲೇ ಇದೆ. ಸ್ಯಾಂಡಲ್ವುಡ್ನಲ್ಲಿ ಹೊಸ ಸಿನಿಮಾ ಶುರುವಾಗುತ್ತಿದೆ ಅಂದ್ರೆ ಕಥೆ ಏನು? ಅಂತ ಕುತೂಹಲದಿಂದ ಕೇಳುವಂತಾಗಿದೆ.
'ಕಾಳಿ' ಈ ಟೈಟಲ್ ಪವರ್ಫುಲ್. ಶೀರ್ಷಿಕೆಯಿಂದಲೇ ಗಮನ ಸೆಳೆಯುತ್ತಿರುವ ಕನ್ನಡ ಸಿನಿಮಾ ಕಥೆಯೇ ರೋಚಕವಾಗಿದೆ. ಅಭಿಷೇಕ್ ಅಂಬರೀಶ್, ಸಪ್ತಮಿಗೌಡ ಜೋಡಿಯಾಗಿ ನಟಿಸುತ್ತಿರುವ ಸಿನಿಮಾ ಈಗಾಗಲೇ ಸೆಟ್ಟೇರಿದ್ದು ಕಥೆಯ ಬಗ್ಗೆನೇ ಜೋರಾಗಿ ಚರ್ಚೆಯಾಗುತ್ತಿದೆ.
ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳ ನಡುವೆ ಕಾವೇರಿ ನದಿ ನೀರು ಹಂಚಿಕೆ ವಿಚಾರಕ್ಕೆ ಕಿತ್ತಾಟಗಳು ನಡೆಯುತ್ತಲೇ ಇರುತ್ತೆ. ಹಲವು ವರ್ಷಗಳಿಂದ ಈ ಹೋರಾಟ ನಡೆದುಕೊಂಡು ಬರುತ್ತಲೇ ಇದೆ. ಅದರಲ್ಲೂ 1990ರಲ್ಲಿ ನಡೆದ ಘಟನೆಯನ್ನು ಮರೆಯುವಂತೆಯೇ ಇಲ್ಲ. ಈ ವೇಳೆಯೇ 'ಕಾಳಿ'ಯ ಪ್ರೇಮ್ ಕಹಾನಿ ಹುಟ್ಟಿಕೊಂಡಿತ್ತು. ಆ ಕಥೆಯನ್ನೇ ಆಧರಿಸಿ ಸಿನಿಮಾ ಮಾಡಲಾಗುತ್ತಿದೆ.

ಕಾವೇರಿ ಗಲಭೆಯಲ್ಲಿ ನಡೆದ ಪ್ರೇಮಕಥೆ
ಅಭಿಷೇಕ್ ಅಂಬರೀಶ್, ಸಪ್ತಮಿ ಗೌಡ ಕಾಂಬಿನೇಷನ್ನ ಮೊದಲ ಸಿನಿಮಾ 'ಕಾಳಿ' ನಿನ್ನೆ(ನವೆಂಬರ್ 28) ಮುಹೂರ್ತ ಆಗಿದೆ. ಈ ಜೋಡಿಯನ್ನು ತೆರೆಮೇಲೆ ನೋಡುವುದಕ್ಕೆ ಸಿನಿಪ್ರಿಯರು ತುದಿಗಾಲಲ್ಲಿ ನಿಂತಿದ್ದಾರೆ. ಅದಕ್ಕೆ ಕಾರಣ ಸಿನಿಮಾ ಕಥೆ. 1991ರಲ್ಲಿ ಕಾವೇರಿ ನದಿ ನೀರು ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರು, ಮಂಡ್ಯ, ಮೈಸೂರು ವಿಭಾಗಗಳಲ್ಲಿ ದೊಡ್ಡ ಗಲಭೆ ಶುರುವಾಗಿತ್ತು. ಆ ವೇಳೆ ನಡೆಯೋ ಪ್ರೇಮ ಕಥೆಯನ್ನು ತೆರೆಮೇಲೆ ತರುವುದಕ್ಕೆ ನಿರ್ದೇಶಕ ಕೃಷ್ಣ ಮುಂದಾಗಿದ್ದಾರೆ.

ಮಂಡ್ಯ ಹುಡುಗ.. ತಮಿಳು ಹುಡುಗಿ ಪ್ರೇಮಕಥೆ!
1991ರ ಕಾವೇರಿ ಗಲಾಟೆ ಮಂಡ್ಯ, ಮೈಸೂರು ಭಾಗಗಳಲ್ಲಿ ಜೋರಾಗಿತ್ತು. ತಮಿಳುನಾಡಿನ ಜನರನ್ನು ಕಂಡರೆ ದ್ವೇಷ ಕಾರುತ್ತಿದ್ದಂತೆ ಕಾಲ. ಈ ವೇಳೆ ಮಂಡ್ಯದ ಹುಡುಗ ಹಾಗೂ ತಮಿಳು ಹುಡುಗಿ ನಡುವೆ ಪ್ರೇಮ್ ಕಹಾನಿ ಆರಂಭ ಆಗುತ್ತೆ. ಇಲ್ಲಿ ಮಂಡ್ಯದ ಹುಡುಗನಾಗಿ ಯಂಗ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಹಾಗೂ ತಮಿಳು ಹುಡುಗಿಯಾಗಿ ಸಪ್ತಮಿ ಗೌಡ ಕಾಣಿಸಿಕೊಳ್ಳಲಿದ್ದಾರಂತೆ. ಇವರಿಬ್ಬರು ಪ್ರೇಮಕಥೆಯನ್ನೇ ತೆರೆಮೇಲೆ ತರೋಕೆ ಹೊರಟಿದ್ದಾರೆ 'ಗಜಕೇಸರಿ', 'ಪೈಲ್ವಾನ್' ಖ್ಯಾತಿಯ ಕೃಷ್ಣ.

90 ದಶಕದ ರಿಯಲ್ ಸ್ಟೋರಿನಾ?
90ರ ದಶಕದ ಕಾವೇರಿ ಗಲಭೆಯ ಹಿನ್ನೆಲೆಯಲ್ಲಿ ನಡೆಯುವ 'ಕಾಳಿ' ಸಿನಿಮಾವನ್ನು ಕೃಷ್ಣ ಹಾಗೂ ಅವರ ಪತ್ನಿ ಸ್ವಪ್ನಾ ಕೃಷ್ಣ ನಿರ್ಮಾಣ ಮಾಡುತ್ತಿದ್ದಾರೆ. ಈಗ RRR ಮೋಷನ್ ಪಿಕ್ಚರ್ಸ್ ಸಂಸ್ಥೆಯಡಿ 'ಕಾಳಿ' ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಇದು ಈ ಸಂಸ್ಥೆಯ ಮೂರನೆಯ ಸಿನಿಮಾ. ಕಿಚ್ಚ ಸುದೀಪ್ ಅಭಿನಯದ 'ಪೈಲ್ವಾನ್' RRR ಮೋಷನ್ ಪಿಕ್ಚರ್ಸ್ ಸಂಸ್ಥೆಯಿಂದ ಆರಂಭವಾದ ಮೊದಲ ಸಿನಿಮಾ. ಸದ್ಯ 90ರ ದಶಕದ ಕಾವೇರಿ ಗಲಭೆ ಹಿನ್ನೆಲೆಯುಳ್ಳ ಕಥೆ ಎಂದು ಹೇಳಲಾಗಿದೆ. ಆದರೆ, ಇದು ರೀಲ್ ಸ್ಟೋರಿನಾ? ರಿಯಲ್ ಸ್ಟೋರಿನಾ? ಅನ್ನೋದು ಮಾತ್ರ ಚಿತ್ರತಂಡ ಇನ್ನೂ ಬಿಟ್ಟುಕೊಟ್ಟಿಲ್ಲ.

ಎರಡನೇ ಸಿನಿಮಾ ಅಪ್ಪುಗೆ ಅರ್ಪಣೆ
ಕೃಷ್ಣ ಹಾಗೂ ಸ್ವಪ್ನಾ ಕೃಷ್ಣ ತಮ್ಮ ಸಂಸ್ಥೆಯ ಎರಡನೇ ಸಿನಿಮಾವನ್ನು ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಅವರಿಗೆ ನಿರ್ಮಾಣ ಮಾಡಬೇಕಿತ್ತು. ಆದರೆ, ಅಪ್ಪು ಅಗಲಿಕೆಯ ಹಿನ್ನೆಲೆಯಲ್ಲಿ ಎರಡನೇ ಸಿನಿಮಾವನ್ನು ಅವರಿಗಾಗಿಯೇ ಮೀಸಲಿಡಲಾಗಿದೆ. ಹೀಗಾಗಿ 'ಕಾಳಿ' ಸಿನಿಮಾವನ್ನು RRR ಮೋಷನ್ ಪಿಕ್ಚರ್ಸ್ ಸಂಸ್ಥೆಯ ಮೂರನೇ ಸಿನಿಮಾ ಎಂದು ಹೇಳಿಕೊಂಡಿದೆ. ಅಲ್ಲದೆ ಕಳೆದ 8 ವರ್ಷಗಳಿಂದ ಕನ್ನಡ ಕಿರುತೆರೆಯಲ್ಲಿ ಯಶಸ್ವಿ ಧಾರಾವಾಹಿಗಳನ್ನು ನಿರ್ಮಿಸಿದ್ದಾರೆ. ಸದ್ಯ ಪ್ರಸಾರವಾಗುತ್ತಿರುವ 'ಸತ್ಯ' ಮತ್ತು 'ಸೀತಾರಾಮ' ಧಾರಾವಾಹಿಗಳು ಕೃಷ್ಣ ಹಾಗೂ ಅವರ ಪತ್ನಿ ನಿರ್ಮಾಣ ಮಾಡುತ್ತಿದ್ದಾರೆ.


Click it and Unblock the Notifications











