ಮಂಡ್ಯದಲ್ಲಿ ಕಾವೇರಿ ಹೋರಾಟ:"ದೇವೇಗೌಡರು, ಎಸ್ಎಂಕೃಷ್ಣ ಬರಬೇಕು" ನಿರ್ಮಲಾನಂದನಾಥ ಸ್ವಾಮಿ, ಅಭಿಷೇಕ್ ಬೆಂಬಲ
ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವ ವಿಚಾರಕ್ಕೆ ಮಂಡ್ಯ-ಮೈಸೂರು ಭಾಗದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಮಂಡ್ಯದಲ್ಲಿ ರೈತರು ಹೋರಾಟಕ್ಕೆ ಇಳಿದಿದ್ದಾರೆ. ಇದು ದಿನದಿಂದ ದಿನಕ್ಕೆ ತೀವ್ರತೆಯನ್ನು ಪಡೆದುಕೊಳ್ಳುತ್ತಲೇ ಇದೆ. ಹೀಗಾಗಿ ಪ್ರತಿಭಟನೆಗೆ ನಿರತರಾಗಿರುವ ರೈತರ ಪರವಾಗಿ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಹಾಗೂ ನಟ ಅಭಿಷೇಕ್ ಅಂಬರೀಶ್ ಸ್ಥಳಕ್ಕೆ ತೆರಳಿ ಬೆಂಬಲ ನೀಡಿದ್ದಾರೆ.
ನಿರ್ಮಲಾನಂದನಾಥ ಸ್ವಾಮೀಜಿ ಹಾಗೂ ನಟ ಅಭಿಷೇಕ್ ಅಂಬರೀಶ್ ಇಬ್ಬರೂ ಪ್ರತಿಭಟನಾ ನಿರತ ರೈತರ ಸ್ಥಳಗಳಿಗೆ ತೆರಳಿ ಬೆಂಬಲ ಸೂಚಿಸಿದ್ದಾರೆ. ಇದೇ ವೇಳೆ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಕ್ಕೆ ಆದಷ್ಟು ಬೇಗ ಕಾವೇರಿ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಒತ್ತಾಯಿಸಿದ್ದಾರೆ.

ಮಂಡ್ಯದಲ್ಲಿ ನಿರ್ಮಲಾನಂದ ಸ್ವಾಮೀಜಿ ಹೇಳಿಕೆ ನೀಡಿದ್ದು, "ಹಲವಾರು ದಶಕಗಳಿಂದ ಈ ಕಾವೇರಿ ಸಮಸ್ಯೆ ಹಾಗೇ ಉಳಿದಿದೆ. ಆದ್ಯತೆಯ ಮೇರೆಗೆ ಕುಡಿಯುವ ನೀರನ್ನು ನೀಡಬೇಕು. ಆ ಬಳಿ ವ್ಯವಸಾಯ, ಕೈಗಾರಿಕಾ ಇತರೆ ಬಳಕೆಗೆ ನೀಡಬೇಕು. ತಮಿಳುನಾಡಿಗೆ 419TMC ನೀರು ಪ್ರತಿವರ್ಷ ನೀಡಲಾಗುತ್ತಿದೆ. ಅದೇ ಕರ್ನಾಟಕಕ್ಕೆ ಪ್ರತಿವರ್ಷ 270TMC ನಿಗದಿ ಮಾಡಲಾಗಿದೆ. ಈ ವರ್ಷ ಮಳೆಯಾಗಿಲ್ಲ. ಇಂತಹ ಸಂದರ್ಭದಲ್ಲಿ ಸಂಕಷ್ಟ ಸೂತ್ರ ರಚಿಸಬೇಕಿತ್ತು." ಎಂದು ನಿರ್ಮಲಾನಂದನಾಥ ಸ್ವಾಮೀಜಿ ಅಭಿಪ್ರಾಯ ಪಟ್ಟಿದ್ದಾರೆ.
"ಬೆಳೆ ಅಲ್ಲ ಮನುಷ್ಯನೇ ಒಣಗಿ ಹೋಗ್ತಾನೆ"
ನ್ಯಾಯಾಧೀಶರು ಆದೇಶ ನೀಡುವ ಮುನ್ನ ನಮ್ಮ ನೋವನ್ನು ಕೇಳಬೇಕಿತ್ತು ಎಂದು ನಿರ್ಮಾಲಾನಂದನಾಥ ಅಭಿಪ್ರಾಯ ಪಟ್ಟಿದ್ದಾರೆ. "ಈ ಭಾಗದಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಇದೆ. ಡ್ಯಾಂಮ್ನಲ್ಲಿ ನೀರಿನ ಸಂಗ್ರಹ ತುಂಬಾ ಕಡಿಮೆ ಇರುವಾಗ, ಬೆಳೆ ಒಣಗುವುದು ಒಂದ್ಕಡೆಯಾದರೆ, ಇನ್ನೊಂದು ಕಡೆ ಮನುಷ್ಯನೇ ಒಣಗಿ ಹೋಗ್ತಾನೆ. ನ್ಯಾಯಾಧೀಶರು ಆದೇಶ ನೀಡುವ ಮುನ್ನ ನಮ್ಮ ನೋವನ್ನು ಕೇಳಬೇಕಿತ್ತು. ಆದೇಶದಂತೆ ಕಾವೇರಿ ನೀರು ಹರಿದರೆ ಡ್ಯಾಂನಲ್ಲಿ ನೀರು ಉಳಿಯುವುದಿಲ್ಲ. ರಾಜ್ಯ ಹಾಗೂ ಕೇಂದ್ರ ಸರ್ಕಾರದ ನ್ಯಾಯಾಲಯದಲ್ಲಿ ಸರಿಯಾಗಿ ಮನವರಿಕೆ ಮಾಡಬೇಕು.ನಮ್ಮ ರೈತರ ಹಿತ ಕಾಯಬೇಕು." ಎಂದು ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದ್ದಾರೆ.

ರೈತರ ಪ್ರತಿಭಟನೆಯಲ್ಲಿ ಅಭಿಷೇಕ್ ಭಾಗಿ
ಮಂಡ್ಯದ ರೈತರ ಪ್ರತಿಭಟನೆಯಲ್ಲಿ ಅಭಿಷೇಕ್ ಅಂಬರೀಶ್ ಭಾಗಿಯಾಗಿದ್ದರು. ಪ್ರತಿಭಟನೆಯಲ್ಲಿ ಭಾಗಿಯಾಗುವುದಕ್ಕೂ ಮುನ್ನ ನಿರ್ಮಲಾನಂದನಾಥ ಶ್ರೀಗಳ ಆಶೀರ್ವಾದ ಪಡೆದಿದ್ದರು. "ನಾನು ಯುವಕನಾಗಿದ್ದೀನಿ. ಯಾವುದೇ ರಾಜಕೀಯ ದೃಷ್ಟಿಯಿಂದ ಇಲ್ಲಿ ಬಂದಿಲ್ಲ. ನಾನು ಹುಟ್ಟುವುದಕ್ಕಿಂತ ಮುನ್ನವೇ ಶುರುವಾಗಿದ್ದ ಪ್ರತಿಭಟನೆಯಿದು. ಅಪ್ಪಾಜಿ, ಅಮ್ಮ ಎಲ್ಲರೂ ಕಾವೇರಿ ಪರ ಹೋರಾಟ ಮಾಡಿದ್ದಾರೆ. ನಮ್ಮ ಪಾಲಿನ ನೀರು ಬಿಟ್ರೆ ಮುಂದೆ ಕುಡಿಯುವ ನೀರಿಗೂ ತೊಂದರೆ ಆಗುತ್ತೆ. ನಮ್ಮ ನೀರು, ಜನಕ್ಕೆ ನ್ಯಾಯ ಸಿಗಬೇಕು." ಎಂದು ಅಭಿಷೇಕ್ ಅಂಬರೀಶ್ ಪ್ರತಿಭಟನೆ ವೇಳೆ ಆಗ್ರಹಿಸಿದ್ದಾರೆ.
"ನಮ್ಮ ಬಳಿ ಇದ್ದರೆ ನೀರು ಕೇಳಲಿ"
ಇದೇ ವೇಳೆ " ಕನ್ನಡ ಚಿತ್ರರಂಗದವರು ಬರುತ್ತಿಲ್ಲ ಅಂತ ಹೇಳುತ್ತಿದ್ದಾರೆ. ಈ ವಿಚಾರದಲ್ಲಿ ಯಾವಾಗಲೂ ಚಿತ್ರರಂಗ ಇದ್ದೇ ಇರುತ್ತೆ. ಶೀಘ್ರದಲ್ಲೇ ಅದಕ್ಕೆ ಒಂದು ವೇದಿಕೆ ಸಿದ್ದವಾಗಲಿದೆ. ಆಗ ಎಲ್ಲರೂ ಬರುತ್ತಾರೆ ಅನ್ನೋ ನಂಬಿಕೆಯಿದೆ. ನಮ್ಮ ಬಳಿ ನೀರು ಇದ್ರೆ ತಮಿಳುನಾಡಿನವ್ರು ನೀರು ಕೇಳಲಿ. ನಮ್ಮ ಬಳಿಯೇ ನೀರು ಇಲ್ಲದಿದ್ದಾಗ ಅವರಿಗೆ ನೀರು ಕೋಡುವುದಾದರೂ ಹೇಗೆ.? ಎರಡೂ ರಾಜ್ಯ ಸರ್ಕಾರಗಳಿಗೆ ಕೇಳಿಕೊಳ್ಳುವುದು ಇಷ್ಟೇ. ಕಾವೇರಿ ವಿವಾದಕ್ಕೆ ಶಾಶ್ವತ ಪರಿಹಾರ ಸಿಗಬೇಕು." ಎಂದು ಅಭಿಷೇಕ್ ಅಂಬರೀಶ್ ಹೇಳಿದ್ದಾರೆ.
"ಹಳೆ ಸಮಸ್ಯೆಗೆ ಹೊಸ ಪರಿಹಾರ ಬೇಕು"
"ನಮ್ಮ ತುಂಬಿದ್ರೆ ಅರ್ಥ ನೀನು ತಗೊಳ್ಳಣ್ಣ, ಅರ್ಥ ನಾನು ತಗೋತಿನಿ. ನಂದೇ ಅರ್ಧ ಇದೆ. ಅದನ್ನು ನಿನಗೆ ಕೊಟ್ಟು ನಾನು ಏನನ್ನು ಕುಡಿಯಲಿ. ಎಲ್ಲಿಂದ ಹೊಟ್ಟೆ ತುಂಬಿಸಿಕೊಳ್ಳಲಿ. ಬರೀ ಬರ ಬಂದಾಗ ಅಷ್ಟೇ ಅಲ್ಲ. ಎಲ್ಲಾ ಸಂದರ್ಭದಲ್ಲಿಯೂ ಒಂದು ಪರ್ಮನೆಂಟ್ ಪರಿಹಾರ ಸಿಗಬೇಕು. ನಮ್ಮ ರೈತರಿಗೆ ಯಾವುದೇ ಸಂದರ್ಭದಲ್ಲಿ ಅನ್ಯಾಯ ಆಗಬಾರದು. ಈ ವರ್ಷ ಹೇಗಾದರೂ ಮಾಡಿ ಒಂದು ಪರಿಹಾರ ತರಲೇಬೇಕು. ಹಳೆ ಸಮಸ್ಯೆಗೆ ಹೊಸ ರೀತಿಯ ಪರಿಹಾರ ಕಂಡುಕೊಳ್ಳಲೇಬೇಕು" ಎಂದು ಅಭಿಷೇಕ್ ಅಂಬರೀಶ್ ಹೇಳಿದ್ದಾರೆ.
"ದೇವೇಗೌಡರು, ಎಸ್ಎಂಕೃಷ್ಣ ಬರಬೇಕು"
"ನಮ್ಮ ರೈತರು ಸುಖಾಸಮ್ಮನೆ ರಸ್ತೆಗೆ ಬರಲ್ಲ. ಬೀದಿಗೆ ಇಳಿದಿದ್ದಾನೆ ಎಂದರೆ ಆತನಿಗೆ ಕಷ್ಟ ಇದೆ ಎಂದರ್ಥ. ಇವತ್ತಿನ ಕ್ಯಾಬಿನೆಟ್ ರೈತರ ಪರ ನಿರ್ಧಾರವಾಗಲಿ. ರೈತರ ಪರವಾಗಿ ಶ್ರೀ ಹಾಗೂ ಮಠ ಯಾವಾಗಲೂ ಇರುತ್ತದೆ. ನಮ್ಮನ್ನು ಯಾರು ಕರೆಯದೆ ಇದ್ದರೂ ಬಂದಿದ್ದೇವೆ. ಇದು ನಮ್ಮ ಕರ್ತವ್ಯ. ಇಂತಹ ಸಂಧರ್ಭದಲ್ಲಿ ದೇವೇಗೌಡರು, ಎಸ್ಎಂ ಕೃಷ್ಣ ಬರಬೇಕು. ರಾಜ್ಯ ಸರ್ಕಾರ ನಮ್ಮವರಿಗೆ ತೊಂದರೆ ಕೊಟ್ಟು ನೀರು ಹರಿಸಬಾರದು. ಕಾನೂನಾತ್ಮಕವಾಗಿ ಯಾವೆಲ್ಲಾ ಕ್ರಮ ತೆಗೆದುಕೊಳ್ಳಬಹುದು ಅದನ್ನ ಮಾಡಬೇಕು." ಎಂದು ನಿರ್ಮಲಾನಂದ ಸ್ವಾಮೀಜಿ ಸಲಹೆ ನೀಡಿದ್ದಾರೆ.


Click it and Unblock the Notifications











