"ಚಾಮುಂಡಿ ತಾಯಿ ಮೇಲೆ ಆಣೆ.. ನಾನೀರೋವರೆಗೂ ಅಭಿಷೇಕ್ ರಾಜಕೀಯಕ್ಕೆ ಬರಲ್ಲ"–ಸುಮಲತಾ
ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಪ್ರತಿಕಾಗೋಷ್ಠಿ ಸಾಕಷ್ಟು ಕುತೂಹಲವನ್ನು ಕೆರಳಿಸಿತ್ತು. ಸುಮಲತಾ ಬಿಜೆಪಿ ಪಕ್ಷ ಸೇರುತ್ತಾರೆ. ಈ ಪತ್ರಿಕಾಗೋಷ್ಠಿಯಲ್ಲಿ ಘೋಷಣೆ ಮಾಡೇ ಬಿಡುತ್ತಾರೆ ಅನ್ನೋ ನಿರೀಕ್ಷೆಯಿತ್ತು. ಅದರಂತೆ ನರೇಂದ್ರ ಮೋದಿಗೆ ಬೆಂಬಲ ನೀಡುತ್ತೇನೆ ಎಂದು ಸುಮಲತಾ ಬಹಿರಂಗವಾಗಿಯೇ ಹೇಳಿದ್ದಾರೆ. ಇದೇ ವೇಳೆ ಮಗನ ರಾಜಕೀಯ ಪ್ರವೇಶದ ಬಗ್ಗೆನೂ ಮೌನ ಮುರಿದಿದ್ದಾರೆ.
ಕಳೆದ ಕೆಲವು ದಿನಗಳಿಂದ ಅಭಿಷೇಕ್ ಅಂಬರೀಶ್ ರಾಜಕೀಯಕ್ಕೆ ಎಂಟ್ರಿ ಕೊಡ್ತಾರೆ ಅನ್ನೋದ ಮಾತು ಕೇಳಿಬರುತ್ತಿತ್ತು. ಸುಮಲತಾ ಪುತ್ರನಿಗೆ ಟಿಕೆಟ್ ಕೇಳಿದ್ದಾರೆ ಅನ್ನೋ ಸುದ್ದಿ ಹಬ್ಬಿತ್ತು. ಅದಕ್ಕೂ ಈ ಪತ್ರಿಕಾಗೋಷ್ಠಿಯಲ್ಲಿ ಸುಮಲತಾ ಸ್ಪಷ್ಟತೆ ಕೊಟ್ಟಿದ್ದಾರೆ. ಅಭಿಷೇಕ್ ಅಂಬರೀಶ್ ಬಗ್ಗೆ ಸುಮಲತಾ ಮಾತುಗಳ ಝಲಕ್ ಇಲ್ಲಿದೆ. ಮುಂದೆ ಓದಿ..

"ಚಾಮುಂಡಿ ತಾಯಿ ಮೇಲೆ ಆಣೆ"
ಅಭಿಷೇಕ್ ಅಂಬರೀಶ್ಗೆ ಟಿಕೆಟ್ ಕೊಡುವಂತೆ ಯಾರಿಗೂ ಕೇಳಿಲ್ಲ ಅಂತ ಸುಮಲತಾ ಚಾಮುಂಡಿ ತಾಯಿ ಮೇಲೆ ಆಣೆ ಮಾಡಿದ್ದಾರೆ. "ಚಾಮುಂಡಿ ತಾಯಿ ಮೇಲೆ ಆಣೆಯಿಟ್ಟು, ಯಾರ ಹತ್ತಿರನೂ ಹೋಗಿ ನಾನು ಈವರೆಗೂ ಅಭಿಷೇಕ್ ಅಂಬರೀಶ್ಗೆ ಟಿಕೆಟ್ ಕೊಡಿ ಅನ್ನೋ ಮಾತನ್ನು ಕೇಳಿದ್ರೆ, ಆ ತಾಯಿ ಉತ್ತರ ಕೊಡುತ್ತಾಳೆ. ಯಾರ ಹತ್ತಿರನಾದ್ರೂ ಹೋಗಿ, ನಾನು ಅಭಿಷೇಕ್ ಅಂಬರೀಶ್ ಭವಿಷ್ಯಕ್ಕೆ ಏನು ಮಾಡಿಕೊಡುತ್ತೀರಾ ಅನ್ನೋ ಮಾತುಗಳನ್ನು ಆಡಿದ್ರೆ, ನಾನು ಅಂಬರೀಶ್ ಪತ್ನಿಯಾಗಿ ಇರುವುದಕ್ಕೆ ಲಾಯಕ್ಕೇ ಅಲ್ಲ." ಎಂದು ಸುಮಲತಾ ಖಡಕ್ ಆಗಿ ಹೇಳಿದ್ದಾರೆ.
"ನಾನೀರೋವರೆಗೂ ರಾಜಕೀಯಕ್ಕೆ ಬರಲ್ಲ"
"ನಮ್ಮೂರೇ ಅಲ್ವಾ.. ಮದ್ದೂರಿಗೆ ಹೋಗ್ತಾನೆ. ಇಲ್ಲಾ ನೀವೇ ಬರಬೇಕು ಅಂತ ಆಸೆ ಪಡುತ್ತಾರೆ. ಒಂದು ವಿಷಯ ಸ್ಪಷ್ಟವಾಗಿ ಹೇಳುವುದಕ್ಕೆ ಇಷ್ಟ ಪಡುತ್ತೇನೆ. ನಾನು ರಾಜಕಾರಣದಲ್ಲಿ ಇರುವವರೆಗೂ ಅಭಿಷೇಕ್ ಅಂಬರೀಶ್ ರಾಜಕಾರಣಕ್ಕೆ ಹೆಜ್ಜೆ ಇಡೋದಿಲ್ಲ. ಇಷ್ಟು ಸ್ಪಷ್ಟತೆ ಇರಲಿ." ಎಂದು ಅಭಿಷೇಕ್ ಅಂಬರೀಶ್ ರಾಜಕೀಯ ಪ್ರವೇಶದ ಬಗ್ಗೆ ಸುಮಲತಾ ಅಂಬರೀಶ್ ಸ್ಪಷ್ಟತೆ ಕೊಟ್ಟಿದ್ದಾರೆ.

"ಯಾವ ಪಕ್ಷದ ಮುಂದೂ ಬೇಡಿಕೆ ಇಟ್ಟಿಲ್ಲ"
ಅಭಿಷೇಕ್ ಅಂಬರೀಶ್ ರಾಜಕೀಯಕ್ಕೆ ಬರೋದಿಲ್ಲ ಅಂತ ಹೇಳಿದ ಕೂಡಲೇ ಡಿಮ್ಯಾಂಡ್ ಬಗ್ಗೆ ಮಾತಾಡುತ್ತಾರೆ. ಅದರೆ, ಯಾವ ಪಕ್ಷದ ಮುಂದೆನೂ ಅಭಿಷೇಕ್ ರಾಜಕೀಯ ಪಕ್ಷದ ಬಗ್ಗೆ ಮಾತಾಡಿಲ್ಲ ಎಂದು ಸುಮಲತಾ ಹೇಳಿದ್ದಾರೆ. "ಅಭಿಷೇಕ್ ಅಂಬರೀಶ್ ಸ್ಪರ್ಧೆ ಮಾಡಲ್ಲ ಅಂತಾಯ್ತು. ಓ ಅವರು ಕೇಳಿದ್ದು ಡಿಮ್ಯಾಂಡು ಅವರು ಕೊಡಲಿಲ್ಲಪ್ಪಾ ಅದಕ್ಕೆ ಹೀಗೆ ಮಾತಾಡುತ್ತಿದ್ದಾರೆ ಅಂತಾರೆ. ಅದನ್ನೂ ಮುಂಚಿತವಾಗಿ ನಾನು ಹೇಳುತ್ತಿದ್ದೇನೆ. ಆ ರೀತಿ ಯಾವ ಪಕ್ಷದಲ್ಲೂ ನಾನು ಕೇಳಿಲ್ಲ." ಎಂದಿದ್ದಾರೆ.
"ಎರಡು ಪಕ್ಷಗಳಿಂದ ಆಹ್ವಾನ ಬಂದಿತ್ತು"
ಅಭಿಷೇಕ್ ಅಂಬರೀಶ್ ರಾಜಕೀಯಕ್ಕೆ ಕರೆದುಕೊಂಡು ಬರುವಂತೆ ಎರಡು ಪಕ್ಷಗಳು ಆಹ್ವಾನ ಕೊಟ್ಟಿದ್ದವು ಎಂದಿದ್ದಾರೆ. ಅಲ್ಲದೆ ಮಂಡ್ಯ, ಮದ್ದೂರಿನಿಂದ ಟಿಕೆಟ್ ಕೊಡಿಸುವುದಾಗಿಯೂ ಹೇಳಿದ್ದರು ಎಂದು ಸುಮಲತಾ ಗುಟ್ಟು ಬಿಟ್ಟುಕೊಟ್ಟಿದ್ದಾರೆ. "ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಕೇಳುತ್ತೇನೆ. ಪಕ್ಷದಿಂದ ಆಹ್ವಾನ ಬಂದಿತ್ತು. ಅಭಿಷೇಕ್ಗೆ ಆಸಕ್ತಿ ಇದ್ದರೆ, ಮದ್ದೂರು,ಮಂಡ್ಯಗೆ ನಾವು ಸೀಟು ಕೊಡಿಸುತ್ತೇವೆ ಅಂತ. ಎರಡು ಪಕ್ಷಗಳಿಂದ ಬಂತು. ಅಭಿಷೇಕ್ ಈಗ ಬೇಡ. ನಮ್ಮ ತಾಯಿ ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ. ಹಾಗೆ ಬರೆಬೇಕು ಅಂದರೆ, ಒಂದು ಪಕ್ಷ ಸೇರಿ, ಕಾರ್ಯಕರ್ತನಾಗಿ ಗುರುತಿಸಿಕೊಂಡು ಆಮೇಲೆ ಸ್ಥಾನ ಕೊಟ್ಟರೆ ಕೊಡಲು ತಾಯಿ ಮಗ, ಅಪ್ಪನ ಮಗ ಅಂತ ಗುರುತಿಸಿಕೊಳ್ಳಲ್ಲ ಅಂದ್ರು." ಎಂದು ಸುಮಲತಾ ಸ್ಪಷ್ಟಪಡಿಸಿದ್ದಾರೆ.


Click it and Unblock the Notifications











