"ವಿಷ್ಣು ಸರ್ ಪತ್ನಿಯನ್ನೇ 'ಮಾಯಿ' ಅಂತ ಕರೆಯೋರು";ನಟ ಅಭಿಜಿತ್ ಹೇಳಿದ ಇಂಟ್ರೆಸ್ಟಿಂಗ್ ಕಥೆಯೇನು?
ಇಂದು (ಸೆಪ್ಟೆಂಬರ್ 18) ಡಾ.ವಿಷ್ಣುವರ್ಧನ್ ಅವರ 75ನೇ ಹುಟ್ಟುಹಬ್ಬ. ಎಲ್ಲಾ ಸರಿಯಾಗಿ ಇದ್ದಿದ್ದರೆ, ಅಭಿಮಾನ್ ಸ್ಟುಡಿಯೋದಲ್ಲಿ ಅಭಿಮಾನಿಗಳು ಅದ್ಧೂರಿಯಾಗಿ ಹುಟ್ಟುಹಬ್ಬವನ್ನು ಆಚರಿಸಬೇಕಿತ್ತು. ಆದರೆ, ಅವರ ಅಂತ್ಯ ಸಂಸ್ಕಾರ ಆದ ಜಾಗವನ್ನೇ ನೆಲಸಮ ಮಾಡಲಾಗಿದೆ. ಕೋರ್ಟ್ ಕೂಡ ಅಭಿಮಾನಿಗಳ ಪ್ರವೇಶಕ್ಕೆ ಅನುಮತಿಯನ್ನು ನೀಡಿಲ್ಲ. ಹೀಗಾಗಿ ಅಭಿಮಾನಿಗಳು ಸಹಜವಾಗಿ ನಿರಾಶರಾಗಿದ್ದಾರೆ.
ಆದರೆ, ವಿಷ್ಣುದಾದನನ್ನು ನೆನಪಿಸಿಕೊಳ್ಳದ ತಾರೆಯರೇ ಇಲ್ಲ. ಅದರಲ್ಲೂ ಸಾಹಸ ಸಿಂಹ ಜೊತೆ ಆತ್ಮೀಯರಾಗಿದ್ದ ನಟ ಅಭಿಜಿತ್ ಕೆಲವು ಇಂಟ್ರೆಸ್ಟಿಂಗ್ ವಿಷಯಗಳನ್ನು ಫಿಲ್ಮಿಬೀಟ್ ಕನ್ನಡ ಜೊತೆ ಹಂಚಿಕೊಂಡಿದ್ದಾರೆ. ವಿಷ್ಣುವರ್ಧನ್ ಅವರ ಮನೆಯಲ್ಲಿ ಗಣೇಶ ಹಬ್ಬ ಆಚರಿಸುವುದರಿಂದ ಹಿಡಿದು, ಕೊನೆಯ ದಿನಗಳವರೆಗೂ ಮೆಲುಕು ಹಾಕಿದ್ದಾರೆ. ಶೂಟಿಂಗ್ ವೇಳೆ ಕಳೆದ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

ಇದರಲ್ಲಿ ಇಂಟ್ರೆಸ್ಟಿಂಗ್ ಅಂತ ಅನಿಸೋದು ಏನಂದ್ರೆ, ವಿಷ್ಣುವರ್ಧನ್ ಕೊನೆಯ ದಿನಗಳಲ್ಲಿ ಆಧ್ಯಾತ್ಮದ ಕಡೆಗೆ ಸಂಪೂರ್ಣವಾಗಿ ವಾಲಿದ್ದರು. ಅಭಿಜಿತ್ ಹೇಳುವ ಪ್ರಕಾರ, ಪತ್ನಿ ಭಾರತಿ ವಿಷ್ಣುವರ್ಧನ್ ಅವರನ್ನೇ 'ಮಾಯಿ' ಅಂತ ಕರೆಯುತ್ತಿದ್ದರು. 'ಮಾಯಿ' ಅಂದರೆ 'ಅಮ್ಮ' ಎಂದರ್ಥ. ಅಷ್ಟಕ್ಕೂ ಯಾಕೆ ಹೀಗೆ ಕರೆಯುತ್ತಿದ್ದರು ಅನ್ನೋದನ್ನು ಈ ಸಂದರ್ಶನದಲ್ಲಿ ಹೇಳಿದ್ದಾರೆ.
ಮನೆಗೆ ಬರೋತನ ಬಿಡುತ್ತಿರಲಿಲ್ಲ
ವಿಷ್ಣುವರ್ಧನ್ ಯಾರನ್ನಾದರೂ ಹಚ್ಚಿಕೊಂಡರೇ ಮುಗೀತು. ಅವರನ್ನು ಮನೆಗೆ ಕರೆಸಿಕೊಳ್ಳುತ್ತಿದ್ದರು. ಮನೆಗೆ ಬಂದ್ಮೇಲೆ ಅವರು ಹೋಗು ಅಂದಾಗಲೇ ಹೋಗಬೇಕು. ಅಷ್ಟು ಹಚ್ಚಿಕೊಳ್ಳುತ್ತಿದ್ದರು. ಇಂತಹದ್ದೇ ಒಂದು ಘಟನೆಯನ್ನು ನೆನಪಿಸಿಕೊಂಡಿದ್ದಾರೆ. "ಅವರು ಗಣಪತಿ ಹಬ್ಬಕ್ಕೆ ಕರೆದರು. ಹಬ್ಬಕ್ಕೆ ವಿಶ್ ಮಾಡಿದ ಕೂಡಲೇ ಮನೆಗೆ ಬನ್ನಿ ಅನ್ನೋರು. ಪೂಜೆ, ಊಟ ಮಾಡಿಕೊಂಡು ಅವರ ಮನೆಗೆ ಹೋದರೆ, ಇನ್ನೇನು ಹೊರಡಬೇಕು ಅನ್ನುವಾಗ 'ಯಾಕೆ?' ಅನ್ನೋರು. ಮನೆಯಲ್ಲಿ ಜನರು ಇದ್ದಾರೆ ಅಂದರೆ, ಇಲ್ಲೂ ಜನರು ಇದ್ದಾರೆ ಅಂತಿದ್ರು. ಇಲ್ಲ ಸರ್ ಮನೆಗೆ ಹೋಗುತ್ತೇನೆ ಅಂದರೆ, ಇದೂ ಮನೆನೇ ಅನ್ನೋರು. ಬರೋವರೆಗೂ ನಿಮ್ಮಿಷ್ಟ, ಬಂದ್ಮೇಲೆ ನಮ್ಮಿಷ್ಟ ಅನ್ನೋರು. ಈ ತರ ಪ್ರತಿ ವರ್ಷ ನಡೆಯುತ್ತಿತ್ತು." ಎಂದು ನಟ ಅಭಿಜಿತ್ ಹೇಳಿದ್ದಾರೆ.

"ಈ ಬಾರಿ ಡಲ್ ಆಗಿದ್ದರು"
"ಆ ವರ್ಷ ಗಣಪತಿ ಹಬ್ಬಕ್ಕೆ ಹೋದಾಗ ಆಪ್ತರಕ್ಷಕ ಫೋಟೊಗಳನ್ನು ತೋರಿಸಿದರು. ಆಗಿನ್ನೂ ಸಿನಿಮಾ ರಿಲೀಸ್ ಆಗಿರಲಿಲ್ಲ. ಅವತ್ತು ರಮೇಶ್ ಆಗತಾನೇ ಹೊರಗೆ ಹೋದರು. ನಾನು ಒಳಗೆ ಬಂದೆ. ಅವತ್ತು ತುಂಬಾ ಚೆನ್ನಾಗಿ ಮಾತುಕತೆ ಆಯ್ತು. ಅದೇ ಅವರು ತುಂಬಾ ಚೆನ್ನಾಗಿ ಮಾತಾಡಿದ್ದು. ಹಬ್ಬ ಆದ್ಮೇಲೆ ಎರಡು ತಿಂಗಳು ಆಗಿತ್ತು ಅನಿಸುತ್ತೆ. ಮೈಸೂರಿನಿಂದ ಬಂದಿದ್ದರು. ನನ್ನನ್ನು ಮನೆಗೆ ಕರೆಸಿಕೊಂಡರು. ಇಬ್ಬರೇ ಊಟ ಮಾಡಿದ್ವಿ. ಅವತ್ತು ತುಂಬಾನೇ ಡಲ್ ಆಗಿ ಇದ್ದರು. ನಾನು ಏನೋ ಆರೋಗ್ಯ ಸಮಸ್ಯೆ ಇರಬಹುದು, ಏನೋ ಸಮಸ್ಯೆ ಇರಬಹುದು ಅಂದುಕೊಂಡು ನಾನು ಹೊರಡುತ್ತೇನೆ ಅಂದೆ. ಅದಕ್ಕೆ ಹೊರಡುತ್ತೀರಾ? ಅಂದ್ಬಿಟ್ರು. ಹಾಗೆ ತಕ್ಷಣವೇ ಕಳಿಸಿಕೊಟ್ಟಿದ್ದು ಅದು ಮೊದಲನೇ ಸಾರಿ. ನಾನು ಹೊರಗೆ ಬಂದು ಅವರ ಮನೆ ಮುಂದೆ ಕಾರು ಹಾಕಿದ್ದೆ. ಟರ್ನ್ ಮಾಡಿಕೊಂಡು ಪಾಸ್ ಆಗುವಾಗ ಕೈ ಮಾಡಿದೆ. ಅವರು ಗೇಟ್ ಬಳಿ ಕೈ ಅಲ್ಲಾಡಿಸುತ್ತಲೇ ಇದ್ದರು. ಅದು ಇನ್ನೂ ಕಣ್ತುಂದೆ ಇದೆ." ಎಂದು ಭಾವುಕರಾಗಿದ್ದಾರೆ.
ಕಾಲಿಗೆ ಆಗಿದ್ದ ಪೆಟ್ಟು ವಾಸಿ ಆಗಲಿಲ್ಲ
ವಿಷ್ಣುವರ್ಧನ್ ಅವರು ಯಾವುದೋ ಫಂಡ್ ಕಲೆಕ್ಷನ್ ಇವೆಂಟ್ ಹೋಗಿದ್ದಾಗ ಕಾಲಿಗೆ ಪೆಟ್ಟಾಗಿತ್ತು. ಅದು ಕೊನೆವರೆಗೂ ಅವರನ್ನು ಬಾಧಿಸುತ್ತಲೇ ಇತ್ತು. ವಾಸಿ ಆಗಲೇ ಇಲ್ಲ ಎನ್ನುತ್ತಾರೆ ಅಭಿಜಿತ್. "ಅವರು ಫಂಡ್ ಕಲೆಕ್ಷನ್ಗೆ ಅಂತ ಹೋಗಿದ್ದಾಗ ಕಾಲಿಗೆ ಏಟಾಗಿತ್ತು. ಅದು ಬಿಟ್ಟರೆ ಬೇರೆ ಏನು ಸಮಸ್ಯೆ ಇರಲಿಲ್ಲ. ಅವರು ತೋರಿಸಿಕೊಳ್ಳುತ್ತಿರಲಿಲ್ಲ. ನಾವು ಏನು ಅಂದ್ಕೊಂಡ್ವಿ, ಅವರಿಗೇನು ಒಳ್ಳೊಳ್ಳೆ ವೈದ್ಯರು ಇದ್ದಾರೆ ಸರಿ ಹೋಗುತ್ತೆ ಅಂದುಕೊಂಡ್ವಿ. ಆದರೆ ಅದ್ಯಾಕೋ ಸರಿ ಹೋಗಲೇ ಇಲ್ಲ." ಎನ್ನುತ್ತಾರೆ.
ಪತ್ನಿಯನ್ನೇ 'ಮಾಯಿ' ಅನ್ನುತ್ತಿದ್ರು
"ಅವರು ಆಧ್ಯಾತ್ಮಕ ಕಡೆಗೆ ಹೋಗಿಬಿಟ್ಟರು. ಅವರು ತುಂಬಾನೇ ಆಳಕ್ಕೆ ಹೋಗಿಬಿಟ್ಟರು. ಒಂದೊಂದು ಮಾತು ಹೇಳುತ್ತಿದ್ದರೆ, ಮನಸ್ಸಿಗೆ ನಾಟುವಂತೆ ಹೇಳುತ್ತಿದ್ದರು. ಅವರು ಹೆಣ್ಣು ಮಕ್ಕಳಿಗೆ ಕೊಡುತ್ತಿದ್ದಂತಹ ಗೌರವ ಮಾತ್ರ ಅಸಾಧ್ಯ. ಅವರ ಸ್ವಂತ ಪತ್ನಿಯನ್ನೇ 'ಮಾಯಿ' ಅಂತ ಕರೆಯೋರು. ನಾವು ಏನೇ ಬಾರೆ ಅಂತಿವಲ್ಲ. ಅವರು ಹಾಗೆ ಕರೆಯುತ್ತಲೇ ಇರಲಿಲ್ಲ. ನೀವು ನಿಮ್ಮ ಹೆಂಡ್ತಿ ಬಳಿ ಕ್ಷಮೆ ಕೇಳಿದ್ದೀರಾ? ಅನ್ನೋರು. ಇಲ್ಲ ಸರ್ ಅಂದರೆ, ಹೋಗಿ ಕೇಳಿ ಆ ಮೇಲೆ ನನಗೆ ಹೇಳಿ ಅನ್ನೋರು." ಎಂದು ವಿಷ್ಣುವರ್ಧನ್ ಹೆಣ್ಣಿನ ಮೇಲೆ ಇಟ್ಟಿರುವ ಗೌರವ ಎಂತಹದ್ದು ಅನ್ನೋದನ್ನು ಹೇಳಿದ್ದಾರೆ.


Click it and Unblock the Notifications











